ಶಿಕ್ಷಣ: 2014ರಲ್ಲಿ ಎಬೋಲಾ ಕೆಲಸವನ್ನೇ 2020ರಲ್ಲಿ ಕೊರೊನಾ ಮಾಡುತ್ತಾ?
ನವದೆಹಲಿ, ಮೇ.19: ನೊವೆಲ್ ಕೊರೊನಾ ವೈರಸ್ ಸೋಂಕು ಇಡೀ ಜಗತ್ತಿಗೆ ವ್ಯಾಪಿಸಿದೆ. ಭಾರತದಲ್ಲಿ ಸದ್ಯದ ಮಟ್ಟಿಗೆ ಮೇ.31ರವರೆಗೂ ಲಾಕ್ ಡೌನ್ ವಿಸ್ತರಿಸಲಾಗಿದೆ. ಶಾಲಾ-ಕಾಲೇಜುಗಳೆಲ್ಲ ಬಂದ್ ಆಗಿರುವುದು, ಮುಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಹೊಡೆತ ಕೊಡುತ್ತದೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ.
ಭಾರತದಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. 1,02,046 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ದೇಶದಲ್ಲಿ ಇದುವರೆಗೂ 3,167 ಮಂದಿ ಬಲಿಯಾಗಿದ್ದಾರೆ. 59,279 ಸಕ್ರಿಯ ಸೋಂಕಿತ ಪ್ರಕರಣಗಳಿದ್ದರೆ 39,576 ಮಂದಿ ಗುಣಮುಖರಾಗಿದ್ದಾರೆ.
ಕೊರೊನಾ ಕಥೆ ಹೀಗಾದ್ರೆ, ಎಬೋಲಾಗೆ ವೈದ್ಯರ ಚಿಕಿತ್ಸೆ ಹೇಗಿತ್ತು?
ಇದರ ನಡುವೆ 2014ರಲ್ಲಿ ಎಬೋಲಾ ಮಹಾಮಾರಿಯಿಂದ ಪಶ್ಚಿಮ ಆಫ್ರಿಕನ್ ರಾಷ್ಟ್ರಗಳು ಎದುರಿಸಿದಂತಾ ಸಮಸ್ಯೆಯನ್ನೇ ಭಾರತ ಎದುರಿಸಬೇಕಾಗುತ್ತದೆಯೇ ಎಂಬ ಆತಂಕ ಹೆಚ್ಚಿದೆ. ಕೊರೊನಾ ವೈರಸ್ ಹಾವಳಿ ವಿದ್ಯಾರ್ಥಿಗಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತದೆಯೇ ಎಂಬ ಭೀತಿ ಮೂಡುತ್ತಿದೆ.
ಶೈಕ್ಷಣಿಕ ವಲಯಕ್ಕೆ ಭಾರಿ ಹೊಡೆತ ಕೊಟ್ಟ ಎಬೋಲಾ ಸೋಂಕು
ಆಫ್ರಿಕಾದ ಕೇಂದ್ರ ಭಾಗದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಪ್ರದೇಶದಲ್ಲಿ 1976ರಲ್ಲಿ ಮೊದಲು ವ್ಯಕ್ತಿಯೊಬ್ಬರಲ್ಲಿ ಎಬೋಲಾ ಸೋಂಕು ಪತ್ತೆಯಾಗಿತ್ತು. ಆರಂಭದಲ್ಲಿ ಎಬೋಲಾ ಸಾಮಾನ್ಯ ವೈರಸ್ ಗಳಂತೆ ಗೋಚರಿಸಿದ್ದು, ಬಾವಲಿ ಅಥವಾ ಸಸ್ತನಿಗಳಲ್ಲಿ ಹುಟ್ಟಿಕೊಂಡಿದ್ದು, ಮನುಷ್ಯರಿಗೆ ಹರಡಿದೆ ಎಂದು ನಂಬಲಾಗಿತ್ತು. ಮಾರಕ ಸೋಂಕು ಹರಡುವಿಕೆ ಕಡಿವಾಣಕ್ಕೆ ಅಂದು ಕೂಡಾ ಸಾಮಾಜಿಕ ಅಂತರ ಮತ್ತು ಕ್ವಾರೆಂಟೈನ್ ಪದ್ಧತಿಯನ್ನೇ ಅಳವಡಿಸಿಕೊಳ್ಳಲಾಗಿತ್ತು.
ಶಿಕ್ಷಣ ವಲಯಕ್ಕೆ ಹೊಡೆತ ಕೊಡುತ್ತಾ ಕೊರೊನಾ ವೈರಸ್?
ಪಶ್ಚಿಮ ಆಫ್ರಿಕಾದಲ್ಲಿ 2014ರಲ್ಲಿ ಕಾಣಿಸಿಕೊಂಡು ಎಬೋಲಾ ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಶಾಲಾ-ಕಾಲೇಜ್ ಗಳನ್ನೆಲ್ಲ ಬಂದ್ ಮಾಡಲಾಯಿತು. ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳನ್ನು ಹೊರಗಟ್ಟಲಾಯಿತು. ಸಿಯಿರ್ರಾ ಲಿಯಾನ್, ಜೀನಿಯಾ ಮತ್ತು ಲಿಬೆರಿಯಾ ನಡುವಿನ ಸಂಪರ್ಕ ಕೊಂಡಿಯೇ ಕಳಚಿತು. ಕನಿಷ್ಠ 50 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಿ ಬೀದಿಯಲ್ಲಿ ನಿಲ್ಲುವಂತಾ ಪರಿಸ್ಥಿತಿ ನಿರ್ಮಾಣವಾಯಿತು. ಭಾರತವೂ ಸಹ ಅಂಥದ್ದೇ ಪರಿಸ್ಥಿತಿಯನ್ನು ಎದುರಿಸುವಂತಾಗುತ್ತದೆಯೇ ಎಂಬ ಆತಂಕ ವ್ಯಕ್ತವಾಗುತ್ತಿದೆ. ಏಕೆಂದರೆ ಕಳೆದ ಮಾರ್ಚ್.24ರಿಂದ ದೇಶಾದ್ಯಂತ ಶಾಲಾ-ಕಾಲೇಜುಗಳೆಲ್ಲ ಬಂದ್ ಆಗಿವೆ.
ಕೊರೊನಾಗಿಂತಲೂ ಮೊದಲು ವೈದ್ಯಕೀಯ ಲೋಕಕ್ಕೆ ಎಬೋಲಾ ಸವಾಲು
ಶಾಲಾ-ಕಾಲೇಜ್ ಗಳು ತಿಂಗಳುಗಟ್ಟಲೇ ತೆರೆಯಲಿಲ್ಲ
ಪಶ್ಚಿಮ ಆಫ್ರಿಕಾದಲ್ಲಿ 2014ರಲ್ಲಿ ಎಬೋಲಾ ಕಾಣಿಸಿಕೊಂಡ ಬಳಿಕ 50 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಸರಿದರು. ಆದರೆ ಶಿಕ್ಷಣ ವಂಚಿತರಾಗಲು ಎಬೋಲಾ ಒಂದೇ ಕಾರಣ ಆಗಿರಲಿಲ್ಲ. ಸಿಯಿರ್ರಾ ಲಿಯಾನ್ ಪ್ರದೇಶದಲ್ಲಿ ಶಾಲಾ-ಕಾಲೇಜುಗಳನ್ನು ಕನಿಷ್ಠ 9 ತಿಂಗಳು ಬಂದ್ ಮಾಡಲಾಗಿದ್ದು, ಜೀನಿಯಾ ಮತ್ತು ಲಿಬೆರಿಯಾನಲ್ಲಿ ಆರು ತಿಂಗಳು ಶಾಲಾ-ಕಾಲೇಜುಗಳ ಬಾಗಿಲನ್ನೇ ತೆರೆಯಲಿಲ್ಲ. ಇದರಿಂದ ಕನಿಷ್ಠ ವಿದ್ಯಾರ್ಥಿಗಳು 1,848 ಗಂಟೆಗಳ ತರಗತಿಗಳನ್ನು ಕೇಳುವುದರಿಂದ ವಂಚಿತರಾದರು.
ವಿದ್ಯಾರ್ಥಿಗಳ ಪಾಲಿಗೆ ಎಂಬೋಲಾ ಒಂದು ಮುಳುವಲ್ಲ
ಎಬೋಲಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಣ ಬಂದಾಗ ಶಾಲಾ-ಕಾಲೇಜುಗಳನ್ನು ತೆರೆದರೂ ವಿದ್ಯಾರ್ಥಿಗಳು ಮರಳಿ ಶಾಲೆಗೆ ತೆರಳಲು ಮನಸ್ಸು ಮಾಡಲಿಲ್ಲ. ವಿಶ್ವಬ್ಯಾಂಕ್ ನೀಡಿದ ಸಮೀಕ್ಷಾ ವರದಿ ಪ್ರಕಾರ ಲಿಬೇರಿಯಾದ ಶೇ.25ರಷ್ಟು ವಿದ್ಯಾರ್ಥಿಗಳು, ಸಿಯಿರ್ರಾ ಲಿಯಾನ್ ಪ್ರದೇಶದ ಶೇ.13ರಷ್ಟು ವಿದ್ಯಾರ್ಥಿಗಳು ಶಾಲೆಗಳಿಗೆ ವಾಪಸ್ ತೆರಳಲಿಲ್ಲ. ಅದಕ್ಕೆ ಆರ್ಥಿಕ ದುಸ್ಥಿತಿ ಪ್ರಮುಖ ಕಾರಣವಾಗಿತ್ತು. ಬಡತನದಿಂದಾಗಿ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸುವ ಸಾಮರ್ಥ್ಯ ಪೋಷಕರಲ್ಲಿ ಇರಲಿಲ್ಲ. ಮಧ್ಯಮ ವರ್ಗ ಮತ್ತು ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಂತೂ ಶಾಲೆಗಳ ಕಡೆಗೆ ಮತ್ತೆ ಮುಖ ಮಾಡಲಿಲ್ಲ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಕ್ಕಳ ಶಿಕ್ಷಣಕ್ಕೆ ಹೊಡತ ಕೊಟ್ಟ ನಿರುದ್ಯೋಗ ಸಮಸ್ಯೆ
ಎಬೋಲಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ವ್ಯಾಪಾರ ವಹಿವಾಟುಗಳೆಲ್ಲ ಬಂದ್ ಆಗಿದ್ದವು. ಅನೇಕ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದವು. ಇದರಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟ ಅನುಭವಿಸಿದರು. ಪೋಷಕರ ನಿರುದ್ಯೋಗದಿಂದ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಕ್ಕೆ ಬಿತ್ತು.
ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಳ
ಎಬೋಲಾ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಶಾಲಾ-ಕಾಲೇಜುಗಳು ಆರಂಭಿಸಲಾಯಿತಾದರೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಮರಳಿ ಶಾಲೆಗಳಿಗೆ ಬರಲಿಲ್ಲ. ಏಕೆಂದರೆ ಈ ಅವಧಿಯಲ್ಲಿ ವಿದ್ಯಾರ್ಥಿನಯರ ಮೇಲೆ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದವು. ಸಿಯಿರ್ರಾ ಪ್ರದೇಶದಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದಿಂದಾಗಿ ಗರ್ಭ ಧರಿಸಿದ ಪ್ರಕರಣವು ಬೆಳಕಿಗೆ ಬಂದಿತ್ತು.
ಭಾರತದಲ್ಲಿ ತಂತ್ರಜ್ಞಾನದ ಬಳಕೆಯೇ ವರವಾಗುತ್ತದೆಯೇ?
ಪಶ್ಚಿಮ ಆಫ್ರಿಕಾದಲ್ಲಿ ಎಬೋಲಾ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾದರು. ಅದೇ ರೀತಿ ಕೊರೊನಾ ವೈರಸ್ ಕಾಣಿಸಿಕೊಂಡ ಭಾರತದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಾ ಬಂದ್ ಆಗಿವೆ. ಆದರೆ ಭಾರತದಲ್ಲಿನ ಈಗಿನ ಪರಿಸ್ಥಿತಿ ಅಂದಿನ ಪಶ್ಚಿಮ ಆಫ್ರಿಕಾದಂತೆ ಇಲ್ಲ. ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದಕ್ಕೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ದೇಶದಲ್ಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸ್ಥಿತಿಯೇನು?
ಕೊರೊನಾ ವೈರಸ್ ಹಾಗೂ ಭಾರತ ಲಾಕ್ ಡೌನ್ ನಡುವೆಯೂ ಆನ್ ಲೈನ್ ಕ್ಲಾಸ್ ಗಳ ಮೂಲಕ ಶಿಕ್ಷಣವನ್ನು ನೀಡುವಂತೆ ಕೇಂದ್ರ ಸರ್ಕಾರವು ತಿಳಿಸಿದೆ. ಹಲವು ಶಿಕ್ಷಣ ಸಂಸ್ಥೆಗಳು ಅದೇ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ನೆಟ್ ವರ್ಕ್ ಸಮಸ್ಯೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಆರ್ಥಿಕ ಸಾಮರ್ಥ್ಯ ಇದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.