ಪಾಕ್ ಸರ್ಕಾರದ ವಿರುದ್ಧ ಮತ್ತೊಂದು ಆಡಳಿತ ವಿರೋಧಿ ರ್ಯಾಲಿಗೆ ಕರೆ ನೀಡಿದ ಇಮ್ರಾನ್ ಖಾನ್
ಇಸ್ಲಾಮಾಬಾದ್, ಅ.04: ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಇಸ್ಲಾಮಾಬಾದ್ನಲ್ಲಿ 'ಹಖೀಕಿ ಆಜಾದಿ ಮಾರ್ಚ್'ಗೆ ಸಿದ್ಧರಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವಾದ ಅಕ್ಟೋಬರ್ 9 ರ ನಂತರ ಯಾವುದೇ ಸಮಯದಲ್ಲಿಯಾದರೂ ಪಕ್ಷದ ಕಾರ್ಯಕರ್ತರಿಗೆ ದೊಡ್ಡ ರ್ಯಾಲಿಗೆ ಕರೆ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಅಮಿತ್ ಶಾ ಭೇಟಿ ಮುನ್ನ ನಡೆದ ಅವಳಿ ಸ್ಫೋಟದ ಹಿಂದೆ ಲಷ್ಕರ್-ಎ-ತೊಯ್ಬಾ ಕೈವಾಡ!
ರಾಜಧಾನಿಯಲ್ಲಿನ ಬನಿ ಗಾಲಾ ನಿವಾಸದಲ್ಲಿ ನಡೆದ ಪಕ್ಷದ ಸಭೆಯಲ್ಲಿ, ಇಮ್ರಾನ್ ಖಾನ್, ಖೈಬರ್-ಪಖ್ತುಂಕ್ವಾ ಮತ್ತು ಪಂಜಾಬ್ ಪ್ರಾಂತ್ಯದ ಪಕ್ಷದ ಕಾರ್ಯಕರ್ತರಿಗೆ ಸರ್ಕಾರಿ ವಿರೋಧಿ ಪ್ರತಿಭಟನೆಗೆ ಸಿದ್ಧರಾಗುವಂತೆ ಒತ್ತಾಯಿಸಿದ್ದಾರೆ. "ಈ ಬಾರಿಯ ಸ್ವಾತಂತ್ರ್ಯ ಮೆರವಣಿಗೆಯನ್ನು ಸಂಪೂರ್ಣ ಸಿದ್ಧತೆಯೊಂದಿಗೆ ನಡೆಸಲಾಗುವುದು" ಎಂದು ಮಾಜಿ ಪ್ರಧಾನಿ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕಟಣೆಯ ಪ್ರಕಾರ, ಸಭೆಯಲ್ಲಿ ಶಾ ಮಹಮೂದ್ ಖುರೇಷಿ, ಪರ್ವೇಜ್ ಖಟ್ಟಕ್ ಮತ್ತು ಯಾಸ್ಮಿನ್ ರಶೀದ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.
ದೇಶದಲ್ಲಿ ಅವಧಿಪೂರ್ವ ಚುನಾವಣೆ ನಡೆಸುವಂತೆ ಒತ್ತಾಯಿಸಿ ಅಧಿಕಾರದಲ್ಲಿರುವ ಸರ್ಕಾರದ ವಿರುದ್ಧ ಕಿಡಿಕಾರಲು ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪ್ರಯತ್ನಿಸುತ್ತಿದೆ.
ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್, "ಮುಂಚಿನ ಚುನಾವಣೆಯಿಂದ ಮಾತ್ರ ಪಾಕಿಸ್ತಾನದಲ್ಲಿ ಆರ್ಥಿಕ, ರಾಜಕೀಯ ಬಿಕ್ಕಟ್ಟುಗಳನ್ನು ಕೊನೆಗೊಳಿಸಬಹುದು" ಎಂದು ಪದೇ ಪದೇ ಹೇಳುತ್ತಿದ್ದಾರೆ.
ಕಳೆದ ತಿಂಗಳು ಪಂಜಾಬ್ನ ರಹಿಮ್ಯಾರ್ ಖಾನ್ ಜಿಲ್ಲೆಯಲ್ಲಿ ನಡೆದ ಮೆಗಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖಾನ್, ಸರಿಯಾದ ಸಮಯ ನೋಡಿಕೊಂಡು ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಅಂತಿಮ ಕರೆ ನೀಡುವುದಾಗಿ ಹೇಳಿದ್ದರು. ರ್ಯಾಲಿ ಘೋಷಣೆಯಾಗುವ ಸುದ್ದಿ ಹಿನ್ನೆಲೆ ರಾಜಧಾನಿಯಲ್ಲಿ ಜನರ ಭದ್ರತೆಗಾಗಿ 1,400 ಪೊಲೀಸರನ್ನು ನಿಯೋಜಿಸಲಾಗಿದೆ.
ಏಪ್ರಿಲ್ನಲ್ಲಿ ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದಾಗಿನಿಂದ, ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯವು "ವಿದೇಶಿ ಪಿತೂರಿ"ಯ ಫಲಿತಾಂಶ ಎಂದು ಅವರು ಪದೇ ಪದೇ ಆರೋಪಿಸಿದ್ದಾರೆ.
ಇತ್ತ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಅವರು ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ನಿಗದಿತ ಸಮಯದಲ್ಲಿ ನಡೆಸಲು ಒಪ್ಪಿಕೊಂಡಿದ್ದಾರೆ.