Explained Story: ದೂರದ ಚೀನಾ ಭಾರತದ ಗಡಿಗೆ ಹೊಂದಿಕೊಂಡಿದ್ದು ಹೇಗೆ?
ನವದೆಹಲಿ, ಜೂನ್.19: ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದ ಜೊತೆಗೆ ಚೀನಾ ಕಾಲ್ಕೆರೆದು ನಿಂತಿರುವುದು ಜಗತ್ಜಾಹೀರಾಗಿದೆ. ಕಲ್ಲು-ದೊಣ್ಣೆ, ರಾಡ್ ಗಳನ್ನು ಹಿಡಿದು ಆ ದೇಶದ ಸೈನಿಕರು ರೌಡಿಗಳಂತೆ ವರ್ತಿಸಿರುವುದಕ್ಕೆ ಸಾಕ್ಷ್ಯಗಳೂ ಸಿಕ್ಕಿವೆ.
Recommended Video
ಭಾರತ-ಚೀನಾ ಗಡಿಯಲ್ಲಿ ಗುಂಡಿನ ಸದ್ದು ಮೊಳಗಬಾರದು ಎಂಬ ಒಂದೇ ಒಂದು ಕಾರಣಕ್ಕೆ ವಿಚಿತ್ರ ಆಯುಧಗಳನ್ನು ಬಳಸಿಕೊಂಡು ಚೀನಾ ಕ್ರೌರ್ಯ ಮೆರೆಯುತ್ತಿದೆ. ಕೊರೊನಾವೈರಸ್ ಹರಡುವಿಕೆ ಹಿಂದಿನ ಅಸಲಿ ಮರ್ಮ, ದೇಶದ ಆರ್ಥಿಕತೆಗೆ ಬಿದ್ದ ಹೊಡೆತವನ್ನು ಮರೆಮಾಚಲು ಕಮ್ಯೂನಿಸ್ಟ್ ರಾಷ್ಟ್ರವು ನರಿಬುದ್ಧಿಯನ್ನು ಪ್ರದರ್ಶಿಸುತ್ತಿದೆ.
ಇಲ್ಲಿದೆ ಸಾಕ್ಷ್ಯ; ಗಾಲ್ವಾನ್ ಗಡಿಯಲ್ಲಿ ಬುಲ್ಡೋಜರ್ ನಿಲ್ಲಿಸಿದ ಚೀನಾ!
ಗಲ್ವಾನ್ ನದಿ ಕಣಿವೆ ಕಾರಣವನ್ನೇ ಇಟ್ಟುಕೊಂಡು ಚೀನಾ ಕಾಲ್ಕೆರೆದು ನಿಲ್ಲುತ್ತಿದೆ. ಆದರೆ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಭಾರತದ ಜೊತೆಗೆ ಚೀನಾ ಯಾವುದೇ ರೀತಿ ಗಡಿಯನ್ನು ಹಂಚಿಕೊಂಡಿರಲಿಲ್ಲ. ಆಕ್ರಮಣಶೀಲತೆಯಿಂದ ವರ್ತಿಸಿರುವ ಡ್ರ್ಯಾಗನ್ ರಾಷ್ಟ್ರದ ಅಸಲಿ ಕಥೆಯನ್ನು ಕಿರಣ್ ಕುಮಾರ್ ಎಸ್ ಎಂಬುವವರು ಸರಣಿ ಟ್ವೀಟ್ ಗಳಲ್ಲಿ ಚಿತ್ರಗಳ ಸಮೇತ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಗಡಿರೇಖೆಗೆ ಸಂಬಂಧಿಸಿದ ಮ್ಯಾಪ್ ಗಳು ಹಾಗೂ ಪೋಸ್ಟ್ ಗಳ ಕುರಿತು ವಿಸ್ತೃತ ವರದಿ ನಿಮಗಾಗಿ.
|
ಭಾರತದ ಜೊತೆ ಚೀನಾ ಗಡಿ ಸಂಪರ್ಕವೇ ಇರಲಿಲ್ಲ!
ಈಗ ಗಲ್ವಾನ್ ನದಿ ಕಣಿವೆಗೆ ನುಗ್ಗಿ ತಮ್ಮದೆಂದು ಪಟ್ಟು ಹಿಡಿದಿರುವ ಚೀನಾ ರಾಷ್ಟ್ರವು ಭಾರತದ ಜೊತೆಗೆ ಯಾವುದೇ ಗಡಿ ಸಂಪರ್ಕವನ್ನೂ ಹೊಂದಿರಲಿಲ್ಲ. 1949ರ ವೇಳೆಯಲ್ಲಿ ಚೀನಾದ ಗಡಿ ವಿಸ್ತೀರ್ಣ ಇಂದಿನಂತೆ ಇರಲಿಲ್ಲ. ಅಂದು ಭಾರತ-ಚೀನಾ ನಡುವೆ ಯಾವುದೇ ಗಡಿ ಹಂಚಿಕೆಯಾಗಿರಲಿಲ್ಲ. ಭಾರತವು ಟಿಬೆಟ್ ಹಾಗೂ ಮಧ್ಯ ಏಷ್ಯಾದ ಟರ್ಕಿಸ್ತಾನ್ ರಾಷ್ಟ್ರದ ಜೊತೆಗೆ ಸ್ವಲ್ಪಮಟ್ಟಿನ ಗಡಿಯನ್ನು ಹಂಚಿಕೊಂಡಿತ್ತು ಎನ್ನುವುದು ನಕ್ಷೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. 1949ರಲ್ಲಿ ಕಮ್ಯೂನಿಷ್ಟ್ ಚೀನಾ ಪ್ರದೇಶದಿಂದ ಸಮಾಜವಾದಿಗಳನ್ನು ತೈವಾನ್ ಗೆ ಓಡಿಸಲಾಯಿತು.
|
ಚೀನಾ ಆಕ್ರಮಣಶೀಲತೆಗೆ ನಕ್ಷೆಯ ಸಾಕ್ಷ್ಯ
1949ಕ್ಕಿಂತ ಮೊದಲ ಚೀನಾದ ನಕ್ಷೆಯಿದ್ದ ಸ್ವರೂಪವೇ ಬೇರೆಯಾಗಿತ್ತು. ಹೈಹೆ ಮತ್ತು ತೆಂಗ್ ಚಾಂಗ್ ಎಂಬ ಎರಡು ಪ್ರದೇಶಗಳ ನಡುವೆ ಹಾದುಹೋಗುವ ಮಾರ್ಗವು ಚೀನಾವನ್ನು ಸರಿಯಾಗಿ ಎರಡು ಭಾಗಗಳನ್ನಾಗಿ ವಿಂಗಡಿಸುತ್ತಿದೆ. ಪೂರ್ವಭಾಗದ ಪ್ರದೇಶವು ಇತಿಹಾಸ ಕಾಲದಿಂದಲೂ ಚೀನಾ ಹೊಂದಿರುವ ಮೂಲಸ್ವರೂಪವಾಗಿದ್ದು, ಈ ಪ್ರದೇಶದಲ್ಲಿ ದೇಶದ ಜನಸಂಖ್ಯೆಯ ಶೇ.94ರಷ್ಟು ಜನರು ಕಂಡು ಬರುತ್ತಾರೆ. ಪಶ್ಚಿಮ ಭಾಗವನ್ನು ಚೀನಾ ತನ್ನ ಆಕ್ರಮಣಕಾರಿ ನೀತಿಯಿಂದ ವಶಕ್ಕೆ ಪಡೆದಿದ್ದು, ಈ ಪ್ರದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇ.6ರಷ್ಟು ಜನರು ಮಾತ್ರ ವಾಸಿಸುತ್ತಾರೆ ಎಂದು ಈ ಚಿತ್ರವು ಹೇಳುತ್ತಿದೆ.
ಭಾರತದೊಂದಿಗೆ ಬಡಿದಾಟ: ಚೀನಾ ಬಣ್ಣ ಬಯಲು ಮಾಡುತ್ತೆ ಈ ವರದಿ!
|
ಭಾರತದ ಗಡಿಪ್ರದೇಶದ ಮೇಲೆ ಚೀನಾ ಪ್ರಾಬಲ್ಯ
ವಿಸ್ತರಣಾವಾದ ಮತ್ತು ಆಕ್ರಮಣಕಾರಿ ನೀತಿಯನ್ನು ಪಾಲಿಸುತ್ತಿರುವ ಚೀನಾ ಭಾರತದ ಗಡಿ ಪ್ರದೇಶಗಳ ಮೇಲೆ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿದೆ. ಭಾರತೀಯ ಭೂಪ್ರದೇಶದ ಗಡಿಯಲ್ಲಿರುವ ಅಕ್ಸಾಯ್ ಚಿನ್, ಲಡಾಖ್ ಪ್ರದೇಶ, ಶಕ್ಸಗಮ್ ಕಣಿವೆ, ಉತ್ತರಾಖಂಡ್ ಕೆಲವು ಭಾಗಗಳು ಮತ್ತು ಸಂಪೂರ್ಣ ಅರುಣಾಚಲ ಪ್ರದೇಶವನ್ನು ಚೀನಾ ತಮ್ಮದು ಎಂದು ಹೇಳಿಕೊಳ್ಳುತ್ತದೆ. ಈ ಪ್ರದೇಶಗಳ ಮೇಲೆ ಹಿಡಿತ ಸಾಧಿಸುವುದಕ್ಕೆ ಹವಣಿಸುತ್ತಿದೆ.
|
ಭಾರತದ ಮಟ್ಟಿಗೆ 20ನೇ ಶತಮಾನದ ದೊಡ್ಡ ದುರಂತ
ಬಹುಸಂಖ್ಯಾತ ಬೌದ್ಧರನ್ನು ಹೊಂದಿರುವ ಟಿಬೆಟ್ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡು ವಶಕ್ಕೆ ಪಡೆದಿದ್ದು 20ನೇ ಶತಮಾನದ ದೊಡ್ಡ ದುರಂತವೇ ಆಗಿ ಹೋಯಿತು. ಭಾರತದೊಂದಿಗೆ 1,000ಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದ್ದ ಟಿಬೆಟ್ ನಲ್ಲಿ ಬಹುತೇಕ ಭಾರತೀಯ ಸಂಸ್ಕೃತಿ-ಸಂಪ್ರದಾಯ, ಆಚಾರ-ವಿಚಾರಗಳೇ ಆಚರಣೆಯಲ್ಲಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಏಷ್ಯಾದ ಒಂಬತ್ತು ಪ್ರಮುಖ ನದಿಗಳಿಗೆ ಟಿಬೆಟ್ ಮೂಲವಾಗಿದ್ದು, ಚೀನಾದ ಕಮ್ಯುನಿಸ್ಟರು ಈ ನೀರಿನ ನಿಯಂತ್ರಣವನ್ನು ವಹಿಸಿಕೊಂಡರು.
|
ಭಾರತದೊಂದಿಗೆ ಜಗಳಕ್ಕೆ ಈ ಗಡಿಪ್ರದೇಶಗಳೂ ಆಹಾರ
ಟಿಬೆಟ್ ನ್ನು ವಶಕ್ಕೆ ಪಡೆದಿರುವ ಕಮ್ಯುನಿಸ್ಟ್ ರಾಷ್ಟ್ರವು ಗಡಿಯಲ್ಲಿರುವ ಪ್ರದೇಶಗಳನ್ನೆಲ್ಲ ಆಕ್ರಮಿಸಲು ಹುನ್ನಾರ ನಡೆಸುತ್ತಿದೆ. ಭಾರತದ ಜೊತೆಗೆ ಚೀನಾ ಜಗಳಕ್ಕೆ ನಿಲ್ಲಲು ಗಲ್ವಾನ್ ನದಿ ಕಣಿವೆ ಇಂದಿಗೆ ಕಾರಣವಾಗಿದೆ. ಅದೇ ರೀತಿ ಮುಂದೊಂದು ದಿನ ಭಾರತದೊಂದಿಗೆ ಚೀನಾ ಯುದ್ಧ ನಡೆಸಬೇಕಾದರೆ ಪೂರ್ವದಿಂದ ಪಶ್ಚಿಮ ಭಾಗದವರೆಗೂ ಯಾವ ಪ್ರದೇಶಗಳು ಕಾರಣವಾಗಬಹುದು ಎಂಬ ಪಟ್ಟಿ ಇಲ್ಲಿದೆ ನೋಡಿ.
ಭಾರತ-ಚೀನಾ ಗಡಿ ಗುದ್ದಾಟಕ್ಕೆ ಕಾರಣವಾಗಬಲ್ಲ ಪ್ರದೇಶಗಳು:
- ದೌಲತ್ ಬೇಗ್ ಒಲ್ದಿ(DBO) ಮತ್ತು ಗಾಲ್ವಾನ್ ನದಿ ಕಣಿವೆ
- ಪ್ಯಾಂಗೊಂಗ್ ನದಿ
- ಸಿಂಧೂ ನದಿಯ ಮೂಲ ಪ್ರದೇಶ
- ಉತ್ತರಾಖಂಡ್ ದ ಉತ್ತರ ಭಾಗದ ಕೇದಾರನಾಥ
- ಸಿಕ್ಕಿಂ-ಭೂತಾನ್ ಪ್ರದೇಶ
- ಅರುಣಾಚಲ ಪ್ರದೇಶದ ತವಾಂಗ್
- ಅರುಣಾಚಲ ಪ್ರದೇಶದ ಸಿಯಾಂಗ್ ಕಣಿವೆ
- ಅರುಣಾಚಲ ಪ್ರದೇಶದ ವಲಾಂಗ್
ಗಡಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಬೆದರಿದ ಚೀನಾ
ಚೀನಾ ಮತ್ತು ಭಾರತದ ನಡುವೆ ಗಡಿ ರಸ್ತೆ ಸಂಸ್ಥೆ(BRO)ಯು ದಶಕದ ಹಿಂದೆ ದೌಲತ್ ಬೇಗ್ ಓಲ್ದಿಯಿಂದ ದರಬುಕ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಶಿಯಾಕ್ ನದಿ ಪ್ರದೇಶದಲ್ಲಿ ಈ ರಸ್ತೆ ನಿರ್ಮಾಣ ಕಾಮಗಾರಿ ಯೋಜನೆಯನ್ನು ಗಡಿ ರಸ್ತೆ ಸಂಸ್ಥೆಯೇ ಹಾಕಿಕೊಂಡಿತ್ತು. ಆದರೆ ಶಿಯಾಕ್ ನದಿ ಪಶ್ಚಿಮ ದಂಡೆ ಉದ್ದಕ್ಕೂ ಬೇಸಿಗೆಯಲ್ಲಿ ಹಿಮನದಿಗಳು ಕರಗಿದಾಗ ನದಿ ನೀರಿನ ಹರಿವಿನಲ್ಲಿ ಹಲವು ಪ್ರದೇಶಗಳು ಮುಳುಗಿ ಹೋಗುತ್ತವೆ. ಹೀಗಾಗಿ ಗಡಿ ರಸ್ತೆ ಸಂಸ್ಥೆ(BRO)ಯು ತನ್ನ ತಂತ್ರಗಳನ್ನೇ ಬದಲಾಯಿಸಿತು. ನದಿಯ ಪಶ್ಚಿಮ ದಂಡೆಯಲ್ಲಿರುವ ದುರ್ಬಲ ಪರ್ವತ ಗೋಡೆಗಳನ್ನು ಸ್ಫೋಟಿಸಿ ಆ ಗೋಡೆಗಳಿರುವ ಪ್ರದೇಶದ ಉದ್ದಕ್ಕೂ ರಸ್ತೆ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಯಿತು.
|
ಗಾಲ್ವಾನ್ ನದಿ ಕಣಿವೆ ಮೇಲೇಕೆ ಚೀನಾ ಕಣ್ಣು?
ಭಾರತ ಮತ್ತು ಚೀನಾ ಗಡಿಯಲ್ಲಿ ಒಟ್ಟು 3,417 ಕಿಲೋ ಮೀಟರ್ ಉದ್ದದ 61 ರಸ್ತೆಗಳ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಈ ಪೈಕಿ 35 ರಸ್ತೆಗಳ ಕಾಮಗಾರಿಯನ್ನು ಗಡಿ ರಸ್ತೆ ಸಂಸ್ಥೆಯೇ ವಹಿಸಿಕೊಂಡಿದೆ. ಬಹುತೇಕ ರಸ್ತೆಗಳು ಮುಕ್ತಾಯದ ಹಂತದಲ್ಲಿದ್ದು, 2022ರ ವೇಳೆಗೆ ಎಲ್ಲ 61 ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಪ್ಯಾಂಗೊಂಗ್ ನದಿಯ ಪಶ್ಚಿಮ ಭಾಗದಲ್ಲಿ ಲಡಾಖ್ ಬಳಿ ಅತ್ಯಂತ ದೊಡ್ಡ ಸೇತುವೆಯನ್ನು ನಿರ್ಮಾಣ ಮಾಡುತ್ತಿದೆ. ಇದೊಂದು ಕಾರಣಕ್ಕೆ ಗಾಲ್ವಾನ್ ನದಿ ಕಣಿವೆಯನ್ನು ಅತಿಕ್ರಮಿಸಿಕೊಳ್ಳುವುದಕ್ಕೆ ಚೀನಾ ಹಾತೊರೆಯುತ್ತಿದೆ.
ಯುದ್ಧ ಸಾರಿದರೆ ಭಾರತಕ್ಕೇನು ಅನುಕೂಲ?
1962ರಲ್ಲಿದ್ದ ಭಾರತವು ಇಂದಿಲ್ಲ. ಮೊದಲಿಗಿಂತಲೂ ದೇಶವು ಪ್ರಬಲವಾಗಿದೆ. ಒಂದೊಮ್ಮೆ ಲಡಾನ್ ಗಡಿಪ್ರದೇಶದಲ್ಲಿ ಯುದ್ಧವನ್ನು ಸಾರಿದರೆ ಚೀನಾಗಿಂತ ಭಾರತೀಯ ಸೇನೆಗೆ ಅನುಕೂಲಗಳು ಹೆಚ್ಚಾಗಿವೆ. ಯುದ್ಧ ಸಾರಿದ್ದೇ ಆದಲ್ಲಿ ಭಾರತೀಯ ಸೇನೆಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಲು 200 ರಿಂದ 400 ಕಿಲೋ ಮೀಟರ್ ಗಳಷ್ಟೇ ಸಾಕು. ಆದರೆ ಚೀನಾ ಗಡಿಗೆ ಶಸ್ತ್ರಾಸ್ತ್ರಗಳನ್ನು ಸಾಗಿಸಬೇಕಾದಲ್ಲಿ 1500 ರಿಂದ 2500 ಕಿಲೋ ಮೀಟರ್ ಸಾಗಿಸಬೇಕಾಗುತ್ತದೆ. ಶಸ್ತ್ರಾಸ್ತ್ರಗಳನ್ನು ಸಾಗಿಸುವುದೇ ಚೀನಾದ ಪಾಲಿಗೆ ದೊಡ್ಡ ಸವಾಲು ಆಗಲಿದೆ. ಆದರೆ ಭಾರತೀಯ ಸೇನೆಗೆ ಅಷ್ಟೊಂದು ಸಮಸ್ಯೆ ಆಗಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಚೀನಾ ಮತ್ತು ಭಾರತದ ನಡುವಿನ ಸಾಮರ್ಥ್ಯ
ಲಡಾಖ್ ಗಡಿ ಪ್ರದೇಶದಲ್ಲಿ ಕಾಲ್ಕೆರೆದು ನಿಂತಿರುವ ಚೀನಾದ ಜೊತೆಗೆ ಯುದ್ಧವನ್ನು ಸಾರಿದರೆ ಎರಡು ರಾಷ್ಟ್ರಗಳ ನಡುವಿನ ಸೇನಾ ಸಾಮರ್ಥ್ಯವು ಎಷ್ಟಿದೆ. ಭಾರತ-ಚೀನಾ ಸೇನಾ ಸುರಕ್ಷತೆಗೆ ಹೂಡಿಕೆ ಮಾಡುವ ಒಟ್ಟು ಹಣವೆಷ್ಟು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
|
ಭೂತಾನ್ ಮತ್ತು ನೇಪಾಳ ರಾಷ್ಟ್ರಕ್ಕೂ ಇದು ಪಾಠ
ಲಡಾಖ್ ಗಡಿಯ ಗಾಲ್ವಾನ್ ನದಿ ಕಣಿವೆಯ ವಿಚಾರಕ್ಕೆ ಭಾರತದ ಜೊತೆಗೆ ಚೀನಾ ಇಂದು ಕಾಲ್ಕೆರೆದು ನಿಂತುಕೊಂಡಿದೆ. ಇದು ಭೂತಾನ್ ಹಾಗೂ ನೇಪಾಳ ರಾಷ್ಟ್ರಗಳಿಗೂ ಎಚ್ಚರಿಕೆಯ ಪಾಠವಾಗಬೇಕು. ಇಲ್ಲದಿದ್ದರೆ ಮುಂದೊಂದು ದಿನ ಚೀನಾದ ಆಕ್ರಮಣಕಾರಿ ನೀತಿಯ ಪ್ರಭಾವ ಈ ರಾಷ್ಟ್ರಗಳ ಮೇಲೂ ಬೀರಬಹುದು. ವಿಶೇಷವಾಗಿ ನೇಪಾಳಿ ಕಮ್ಯುನಿಸ್ಟರು ಕಮ್ಯುನಿಸ್ಟ್ ಸರ್ವಾಧಿಕಾರಿ ಮಾವೋ ಜೆಡಾಂಗ್ ಅವರು "ಐದು ಬೆರಳುಗಳ" ಬಗ್ಗೆ ಹೇಳಿದ್ದನ್ನು ಓದಬೇಕು. ನೇಪಾಳ ಈಗ ಆ ಹಂತದಲ್ಲಿದೆ.