ಶ್ರೀಲಂಕಾ: ಆಹಾರ ಪದಾರ್ಥಗಳ ಸಂಗ್ರಹಕ್ಕೆ ಸೂಚನೆ
ಕೊಲೊಂಬೊ, ಜೂನ್ 3: ಆಹಾರ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸುವಂತೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅಧಿಕಾರಿಗಳಿಗೆ ಶುಕ್ರವಾರ ಸೂಚಿಸಿದ್ದಾರೆ. ಇದೇ ವೇಳೆ ಆಹಾರ ಪದಾರ್ಥಗಳ ಕೃತಕ ಅಭಾವ ಸೃಷ್ಟಿಸಲು ಯತ್ನಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಶ್ರೀಲಂಕಾದಲ್ಲಿ ಪೆಟ್ರೋಲ್, ಗ್ಯಾಸ್ ಸಿಲಿಂಡರ್, ಆಹಾರ ಸಾಮಾಗ್ರಿಗಳಿಗೆ ದೊಡ್ಡ ಕೊರತೆ ಉಂಟಾಗಿದ್ದು, ಪೆಟ್ರೋಲ್ ಬಂಕ್ಗಳು, ದಿನಸಿ ಅಂಗಡಿಗಳ ಎದುರು ಕಿಲೋ ಮೀಟರ್ ಗಟ್ಟಲೇ ನಾಗರಿಕರ ಸರತಿ ಸಾಲುಗಳು ಕಂಡುಬಂದಿದೆ. ಪರಿಸ್ಥಿತಿಯ ಲಾಭ ಪಡೆಯಲು ತವಕಿಸುತ್ತಿರುವ ಪಟ್ಟಭದ್ರರು, ಅಗತ್ಯ ವಸ್ತುಗಳ ದಾಸ್ತುನು ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ಆಹಾರ ಪದಾರ್ಥಗಳ ಕೃತಕ ಅಭಾವ ಸೃಷ್ಟಿಯಾಗಿದೆ.
ನೀರಿನಿಂದ ಜಿಗಿದು ಮೀನುಗಾರನ ಗಂಟಲಿಗೆ ಸಿಲುಕಿಕೊಂಡ ಮೀನು: ಮುಂದೇನಾಯ್ತು?
ಶ್ರೀಲಂಕಾದಲ್ಲಿ ಸೆಪ್ಟೆಂಬರ್ ವೇಳೆಗೆ ಅಕ್ಕಿ ಹಾಗೂ ಇತರ ಆಹಾರ ಸಾಮಗ್ರಿಗಳ ಕೊರತೆ ಉಂಟಾಗಲಿದೆ ಎಂದು ತಜ್ಞರು ಇತ್ತೀಚಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಈ ಬಗ್ಗೆ ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕೂಡ ಎಚ್ಚರಿಸಿದ್ದರು. ಹಾಗಾಗಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಈ ಸೂಚನೆ ನೀಡಿದ್ದಾರೆ.
ಶ್ರೀಲಂಕಾದಲ್ಲಿ ಪೆಟ್ರೋಲ್ ಖರೀದಿಗೆ ಸಾಲುಗಟ್ಟಿ ನಿಂತ ಸಾವಿರಾರು ಮಂದಿ!
ಕಠಿಣ ಕ್ರಮಕ್ಕೆ ಸೂಚನೆ
"ದೇಶದಲ್ಲಿ ಆಹಾರದ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪೂರೈಕೆಯಲ್ಲಿ ವ್ಯತ್ಯಯದ ಕಾರಣ ನೀಡಿ ಅಗತ್ಯ ವಸ್ತುಗಳ ದರಗಳನ್ನು ಹೆಚ್ಚಿಸಲು ಕೆಲ ವರ್ತಕರು ಪ್ರಯತ್ನಿಸುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಗೊಟಬಯ ರಾಜಪಕ್ಸ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಕಚೇರಿ ಪ್ರಕಟಣೆ ತಿಳಿಸಿದೆ.
ರಸಗೊಬ್ಬರ ಕೊರತೆ
ಇನ್ನೊಂದೆಡೆ ದವಸ-ಧಾನ್ಯ ಬೆಳೆಯಲು ಶ್ರೀಲಂಕಾ ರೈತರಿಗೆ ರಸಗೊಬ್ಬರದ ಕೊರತೆ ಎದುರಾಗಿದೆ. ಈ ಕೊರತೆ ನೀಗಿಸಲು ವಿದೇಶದಿಂದ ರಸಗೊಬ್ಬರ ಆಮದು ಮಾಡಿಕೊಳ್ಳುವ ಅಗತ್ಯವಿದೆ. ಇದಕ್ಕೆ ಕನಿಷ್ಠ 600 ಮಿಲಿಯನ್ ಡಾಲರ್ ಬೇಕಾಗುತ್ತದೆ. ಆದರೆ ಆರ್ಥಿಕ ದುಸ್ಥಿತಿ ಎದುರಿಸುತ್ತಿರುವ ಶ್ರೀಲಂಕಾಗೆ ರಸಗೊಬ್ಬರ ಆಮದು ಮಾಡಿಕೊಳ್ಳಲು ಸಹ ಕಷ್ಟವಾಗಿದೆ.
ಭಾರತದಿಂದ 3.3 ಟನ್ ಔಷಧ ಸಾಮಗ್ರಿ ಪೂರೈಕೆ
"ಶ್ರೀಲಂಕಾದಲ್ಲಿ ಆಹಾರ ಬಿಕ್ಕಟ್ಟು ಎದುರಾಗಿದೆ. ರೈತರು ಆಹಾರ ಉತ್ಪಾದನೆಯನ್ನು ಹೆಚ್ಚಿಸಬೇಕು. ಆ ಮೂಲದ ದೇಶದ 22 ದಶಲಕ್ಷ ಜನರಿಗೆ ಆಹಾರವನ್ನು ಪೂರೈಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು,'' ಎಂದು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಮನವಿ ಮಾಡಿದ್ದಾರೆ. ಇದೇ ವೇಳೆ ಶ್ರೀಲಂಕಾಗೆ 3.3 ಟನ್ ಔಷಧ ಸಾಮಗ್ರಿಗಳನ್ನು ಪೂರೈಸಲಾಗಿದೆ ಎಂದು ಶ್ರೀಲಂಕಾದಲ್ಲಿನ ಭಾರತದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಬಿತ್ತನೆ ವೇಳೆಗೆ ಗೊಬ್ಬರ ಪೂರೈಕೆ
ಮುಂದಿನ ಬಿತ್ತನೆ ವೇಳೆಗೆ ಹೆಚ್ಚಿನ ಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಲಾಗಿದೆ.
ಕಳೆದ ವರ್ಷ ಏಪ್ರಿಲ್ನಲ್ಲಿ ಶ್ರೀಲಂಕಾ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಎಲ್ಲಾ ರೀತಿಯ ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸುವ ನಿರ್ಧಾರ ಪ್ರಕಟಿಸಿದರು. ಇದು ಕೂಡ ಇಳುವರಿ ತೀವ್ರವಾಗಿ ಕಡಿಮೆಯಾಗಲು ಕಾರಣವಾಯಿತು. ಸದ್ಯ ಶ್ರೀಲಂಕಾ ಸರಕಾರ ಈ ನಿಷೇಧವನ್ನು ಹಿಂಪಡೆದಿದ್ದರೂ ಸಹ ಯಾವುದೇ ರಸಗೊಬ್ಬರ ಆಮದು ಮಾಡಿಕೊಂಡಿಲ್ಲ.