ಜಾಗತಿಕ ಉಗ್ರರ ಪಟ್ಟಿಯಲ್ಲಿ ಇಬ್ಬರು ಭಾರತೀಯರು: ಪಾಕ್ ನಡೆಗೆ ಐದು ದೇಶಗಳಿಂದ ತಡೆ
ವಿಶ್ವಸಂಸ್ಥೆ, ಸೆಪ್ಟೆಂಬರ್ 3: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧ ಸಮಿತಿಯ ಎದುರು ಇಬ್ಬರು ಭಾರತೀಯ ಪ್ರಜೆಗಳನ್ನು ಜಾಗತಿಕ ಉಗ್ರರು ಎಂದು ಹೆಸರಿಸುವ ಪಾಕಿಸ್ತಾನದ ನಡೆಗೆ ತಡೆಯೊಡ್ಡರು ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ದೇಶಗಳು ಬುಧವಾರ ನಿರ್ಧರಿಸಿವೆ.
ಈ ಪಟ್ಟಿಯಲ್ಲಿ ಭಾರತೀಯರನ್ನು ಹೆಸರಿಸಲು ಸೂಕ್ತ ಸಾಕ್ಷ್ಯಗಳನ್ನು ಒದಗಿಸಲು ಕಾಲಾವಕಾಶ ನೀಡಿ ಅಮಾನತ್ತಿನಲ್ಲಿ ಇರಿಸಲಾಗಿತ್ತು. ಆದರೆ ಪಾಕಿಸ್ತಾನ ಯಾವುದೇ ಪುರಾವೆಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಪಾಕ್ನ ಪ್ರಸ್ತಾವವನ್ನು ನಿರ್ಬಂಧಿಸಲು ಈ ಐದು ದೇಶಗಳು ನಿರ್ಧರಿಸಿವೆ.
ಕಪ್ಪು ಪಟ್ಟಿ ಭೀತಿಯಲ್ಲಿ ಪಾಕಿಸ್ತಾನ: ಇಮ್ರಾನ್ ಖಾನ್ ಹೇಳಿದ್ದೇನು?
ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ದೇಶಗಳಾಗಿದ್ದರೆ, ಜರ್ಮನಿ ಮತ್ತು ಬೆಲ್ಜಿಯಂ ಕಾಯಂ ಸದಸ್ಯ ರಾಷ್ಟ್ರಗಳಾಗಿಲ್ಲ. ಗೋವಿಂದ ಪಟ್ನಾಯಕ್ ದುಗ್ಗಿವಾಲಸಾ ಮತ್ತು ಅಪ್ಪಾಜಿ ಅಂಗಾರ ಅವರನ್ನು ಜಾಗತಿಕ ಉಗ್ರರೆಂದು ಘೋಷಿಸುವಂತೆ ಮಾಡಲು ಪಾಕಿಸ್ತಾನ ಪ್ರಯತ್ನ ನಡೆಸಿದೆ.
ಪಾಕಿಸ್ತಾನವು ಇದುವರೆಗೂ ನಾಲ್ವರು ಭಾರತೀಯರನ್ನು ಜಾಗತಿಕ ಉಗ್ರರೆಂದು ಬಿಂಬಿಸಲು ಪ್ರಯತ್ನಿಸಿದೆ. ಇವರೆಲ್ಲರೂ ಅಫ್ಘಾನಿಸ್ತಾನದಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದು, ಈಗ ಭಾರತಕ್ಕೆ ಮರಳಿದ್ದಾರೆ. ಬಲೂಚಿಸ್ತಾನ ಮತ್ತು ಪೇಶಾವರಗಳಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತೀಯರ ಕೈವಾಡ ಇದೆ ಎಂದು ಆರೋಪಿಸಿರುವ ಪಾಕಿಸ್ತಾನ, ಚೀನಾ ಬೆಂಬಲದೊಂದಿಗೆ ಇಬ್ಬರನ್ನು ಜಾಗತಿಕ ಉಗ್ರರೆಂದು ಘೋಷಿಸುವಂತೆ ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದೆ.
ಅಂಗಾರ ಅವರು ಕಾಬೂಲ್ನ ಬ್ಯಾಂಕ್ ಒಂದರಲ್ಲಿ ಸಾಫ್ಟ್ವೇರ್ ಡೆವಲಪರ್ಆಗಿದ್ದರು. 2017ರ ಫೆ. 13ರಂದು ಲಾಹೋರ್ನ ಮಾಲ್ ರೋಡ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಜಮಾತ್ ಉಲ್ ಅಹ್ರಾರ್ ಉಗ್ರ ಸಂಘಟನೆ ಜತೆ ಸೇರಿಕೊಂಡಿದ್ದರು ಎಂದು ಅಂಗಾರ ವಿರುದ್ಧ ಪಾಕಿಸ್ತಾನ ಆರೋಪ ಮಾಡಿದೆ. 1267 ನಿರ್ಬಂಧ ಸಮಿತಿ ಮುಂದೆ ಇರಿಸಿರುವ ತನ್ನ ವರದಿಯಲ್ಲಿ ಪಾಕಿಸ್ತಾನವು, 2014ರ ಡಿ. 16ರಂದು ಪೇಶಾವರದ ಸೇನಾ ಶಾಲೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿಯೂ ಅಂಗಾರ ಅವರನ್ನು ಆರೋಪಿಯನ್ನಾಗಿಸಿದೆ.
ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಪಾಕ್ಗೆ ಭಾರತ ಆಗ್ರಹ
ಅಫ್ಘಾನಿಸ್ತಾನದಲ್ಲಿ ಸಾಮರ್ಥ್ಯ ವೃದ್ಧಿ ಯೋಜನೆಗಳ ಕಂಪೆನಿಯೊಂದರ ಮುಖ್ಯಸ್ಥರಾಗಿದ್ದ ದುಗ್ಗಿವಾಲಸ, 2018ರ ಜುಲೈ 13ರಂದು ಬಲೂಚಿಸ್ತಾನದ ಮಾಸ್ತುಂಗ್ನಲ್ಲಿ ರಾಜಕಾರಣಿ ಸಿರಾಜ್ ರೈಸಾನಿ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಭಾಗಿಯಾಗಿದ್ದರೆಂದು ಪಾಕಿಸ್ತಾನ ಆರೋಪಿಸಿದೆ. ಈ ಘಟನೆಯಲ್ಲಿ ಸುಮಾರು 160 ಮಂದಿ ಮೃತಪಟ್ಟಿದ್ದರು.