ಸಿಂಗಾಪುರಕ್ಕೆ ತೆರಳಿ ರಾಜೀನಾಮೆ ನೀಡಿದ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ
ಕೊಲಂಬೊ, ಜುಲೈ 14: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಶ್ರೀಲಂಕಾದಿಂದ ಪಲಾಯನ ಮಾಡಿ ಸಿಂಗಾಪುರಕ್ಕೆ ಬಂದಿಳಿದ ನಂತರ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡಿದ್ದಾರೆ ಎಂದು ಕೇಳಿ ಕೊಲಂಬೊದಲ್ಲಿ ಜನರು ಪಟಾಕಿ ಸಿಡಿಸಿದರು. ರಾಜೀನಾಮೆ ಪತ್ರ ಸಿಕ್ಕಿರುವುದನ್ನು ಸಂಸತ್ತಿನ ಸ್ಪೀಕರ್ ಖಚಿತಪಡಿಸಿದ್ದಾರೆ.
ರಾಷ್ಟ್ರಪತಿ ಭವನ, ಅಧ್ಯಕ್ಷೀಯ ಸೆಕ್ರೆಟರಿಯೇಟ್ ಮತ್ತು ಪ್ರಧಾನಿ ಕಚೇರಿ ಸೇರಿದಂತೆ ಅಧಿಕೃತ ಕಟ್ಟಡಗಳನ್ನು ವಶಪಡಿಸಿಕೊಳ್ಳುವುದನ್ನು ಕೊನೆಗೊಳಿಸುವುದಾಗಿ ಪ್ರತಿಭಟನಾಕಾರರು ಘೋಷಿಸಿದ ದಿನವೇ ಅಧ್ಯಕ್ಷ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ.
ಶ್ರೀಲಂಕಾ ಸರ್ವಪಕ್ಷ ಸಭೆಯಲ್ಲಿ ಆಗಿದ್ದೇನು; 10 ಅಂಶಗಳನ್ನು ಓದಿ ತಿಳಿಯಿರಿ
ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸ ಖಾಸಗಿ ಭೇಟಿಗಾಗಿ ಬಂದಿದ್ದಾರೆ, ಆಶ್ರಯಕ್ಕಾಗಿ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ಸಿಂಗಾಪುರ ಸರ್ಕಾರ ಹೇಳಿದೆ.
ಗೋಟಬಯ ರಾಜಪಕ್ಸ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದಾಗ ಬಂಧನದಿಂದ ವಿನಾಯಿತಿ ಸಿಗುತ್ತದೆ, ಆದ್ದರಿಂದ ಶ್ರೀಲಂಕಾವನ್ನು ತೊರೆದು ಹೋದ ನಂತರವೇ ರಾಜೀನಾಮೆ ನೀಡಿದ್ದಾರೆ. ಇದರಿಂದ ಬಂಧನದ ಭೀತಿಯನ್ನು ತಪ್ಪಿಸಿಕೊಂಡಿದ್ದಾರೆ. ಒಂದು ವೇಳೆ ಶ್ರೀಲಂಕಾದಲ್ಲಿ ಇದ್ದು ರಾಜೀನಾಮೆ ನೀಡಿದ್ದರೆ ಬಂಧಿಸುವ ಸಾಧ್ಯತೆ ಕೂಡ ಇರುತ್ತಿತ್ತು.
ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ, ಪರಿಸ್ಥಿತಿ ನಿಯಂತ್ರಿಸಲು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಅಧ್ಯಕ್ಷರ ನಿವಾಸ ತೆರೆದ ಪ್ರತಿಭಟನಾಕಾರರು
ಸಶಸ್ತ್ರ ಪೊಲೀಸರು ಮತ್ತು ಭದ್ರತಾ ಪಡೆಗಳು ತೆರಳುತ್ತಿದ್ದಂತೆಯೇ ವಿಕ್ರಮಸಿಂಘೆ ಅವರ ಕಚೇರಿಯಿಂದ ಪ್ರತಿಭಟನಾಕಾರರು ಹೊರಹೋಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ. "ನಾವು ತಕ್ಷಣದಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ಭವನ, ಅಧ್ಯಕ್ಷೀಯ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಯನ್ನು ಶಾಂತಿಯುತವಾಗಿ ತೊರೆಯುತ್ತಿದ್ದೇವೆ, ಆದರೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ" ಎಂದು ಪ್ರತಿಭಟನಾಕಾರರ ವಕ್ತಾರರು ತಿಳಿಸಿದ್ದಾರೆ.
ಅಧ್ಯಕ್ಷರ ನಿವಾಸಕ್ಕೆ ಸಶಸ್ತ್ರಪಡೆ ಕಾವಲು
ಗೋಟಬಯ ರಾಜಪಕ್ಸ ಪಲಾಯನ ಮಾಡಿದ ನಂತರ ಮತ್ತು ಅವರ ಭದ್ರತಾ ಸಿಬ್ಬಂದಿ ಹಿಂದೆ ಸರಿದ ನಂತರ ಅಧ್ಯಕ್ಷರ ನಿವಾಸ, ಕಚೇರಿಗೆ ಲಕ್ಷಾಂತರ ಜನರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಗೋಟಬಯ ರಾಜಪಕ್ಸ ರಾಜೀನಾಮೆ ನೀಡುವ ವೇಳೆಗೆ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸ, ಕಚೇರಿಯನ್ನು ತೆರವು ಮಾಡಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಗೆ, ನಿವಾಸದ ಒಳಗೆ ಮತ್ತು ಹೊರಗೆ ಸಶಸ್ತ್ರ ಕಾವಲುಗಾರರನ್ನು ನೇಮಿಸಿದ್ದು, ಎಲ್ಲಾ ಗೇಟ್ಗಳನ್ನು ಮುಚ್ಚಲಾಗಿದೆ.
ದುಬೈಗೆ ತೆರಳಲಿರುವ ಗೋಟಬಯ ರಾಜಪಕ್ಸ
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮೊದಲು 2019 ರಲ್ಲಿ ರಾಜಪಕ್ಸ ತಮ್ಮ ಯುಎಸ್ ಪೌರತ್ವವನ್ನು ತ್ಯಜಿಸಿದ್ದರಿಂದ ಯುನೈಟೆಡ್ ಸ್ಟೇಟ್ಸ್ಗೆ ವೀಸಾ ಪಡೆಯಲು ರಾಜಪಕ್ಸ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಶ್ರೀಲಂಕಾದ ಭದ್ರತಾ ಮೂಲಗಳ ಪ್ರಕಾರ ಗೋಟಬಯ ರಾಜಪಕ್ಸ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ತೆರಳುವ ಮೊದಲು ಸ್ವಲ್ಪ ಸಮಯದವರೆಗೆ ಸಿಂಗಾಪುರದಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ಎಎಫ್ಪಿ ವರದಿ ಮಾಡಿದೆ.
ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ ಶ್ರೀಲಂಕಾ
ಅಧ್ಯಕ್ಷ ಗೋಟಬಯ ರಾಜಪಕ್ಸ ತಪ್ಪಾದ ಆರ್ಥಿಕ ನೀತಿಯಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಲಾಗಿದೆ. ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಶ್ರೀಲಂಕಾಗೆ ಡಾಲರ್ ಕೊರತೆ ಎದುರಾಗಿದೆ. 2.2 ಕೋಟಿ ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆಗೊಳಗಾಗಿದ್ದಾರೆ.
ಶ್ರೀಲಂಕಾ ತನ್ನ 51 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ಏಪ್ರಿಲ್ನಲ್ಲಿ ಡೀಫಾಲ್ಟ್ ಮಾಡಿದೆ ಮತ್ತು ಸಂಭಾವ್ಯ ಬೇಲ್ಔಟ್ಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಮಾತುಕತೆ ನಡೆಸುತ್ತಿದೆ.
ಪ್ರಯಾಣವನ್ನು ಕಡಿಮೆ ಮಾಡಲು ಮತ್ತು ಇಂಧನವನ್ನು ಉಳಿಸಲು ಸರ್ಕಾರವು ಅನಿವಾರ್ಯವಲ್ಲದ ಕಚೇರಿಗಳು ಮತ್ತು ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ದೇಶದಲ್ಲಿ ಈಗಾಗಲೇ ಪೆಟ್ರೋಲ್ ಬಹುತೇಕ ಖಾಲಿಯಾಗಿದೆ.