ರೈತರ ಪ್ರತಿಭಟನೆ: ಭಾರತದ ವಿರುದ್ಧ ವಿಶ್ವಸಂಸ್ಥೆ ಮಾನವಹಕ್ಕು ಕಮಿಷನರ್ ಟೀಕೆ
ವಿಶ್ವಸಂಸ್ಥೆ, ಫೆಬ್ರವರಿ 27: ರೈತರ ಪ್ರತಿಭಟನೆ ಕುರಿತು ವರದಿ ಮಾಡಿದ ಅಥವಾ ಹೇಳಿಕೆ ನೀಡಿದ ಪತ್ರಕರ್ತರು ಹಾಗೂ ಕಾರ್ಯಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅಂತಹ ಪ್ರಯತ್ನಗಳು ಅಗತ್ಯ ಮಾನವ ಹಕ್ಕುಗಳ ತತ್ವಗಳ ಕಳವಳಕಾರಿ ದಮನನೀತಿಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಮಿಷೆಲ್ ಬ್ಯಾಚೆಲೆಟ್ ಭಾರತವನ್ನು ಟೀಕಿಸಿದ್ದಾರೆ.
ಭಾರತದಲ್ಲಿನ ಮಾನವಹಕ್ಕುಗಳ ಕುರಿತು ಈ ಹಿಂದೆಯೂ ಬ್ಯಾಚೆಲೆಟ್ ಅವರು ವಾಗ್ದಾಳಿ ನಡೆಸಿದ್ದರು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮಾನವ ಹಕ್ಕು ಸಮರ್ಥಕರ ಮೇಲೆ ನಡೆದ ದಾಳಿಗಳು ನಾಗರಿಕ ಸಮಾಜದಲ್ಲಿನ ನಿರ್ಬಂಧಗಳ ಮುಂದುವರಿಕೆಗೆ ಉದಾಹರಣೆಯಾಗಿದೆ. ಇದು ಕಾಶ್ಮೀರದ ಜನತೆಯ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.
ಬ್ಯಾಚೆಲೆಟ್ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ಅವರಿಗೆ ಸಮರ್ಪಕ ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆಯ ಕೊರತೆ ಇದೆ ಎಂದು ಭಾರತ ಹೇಳಿದೆ.
ಕೃಷಿ ಕಾಯ್ದೆಗಳು ಸಣ್ಣ ರೈತರ ಪ್ರಯೋಜನಕ್ಕಾಗಿದೆ. ಅಲ್ಲದೆ ಅಂತಹ ರೈತರಿಗೆ ಅನೇಕ ಆಯ್ಕೆಯ ಅವಕಾಶಗಳನ್ನು ನೀಡುತ್ತವೆ. ರೈತರ ಪ್ರತಿಭಟನೆಗೆ ಸರ್ಕಾರರ ಅಪಾರ ಗೌರವ ನೀಡಿದೆ. ಅವರ ಕಳವಳಗಳನ್ನು ಪರಿಹರಿಸಲು ಅನೇಕ ಬಾರಿ ಮಾತುಕತೆಗಳನ್ನ ನಡೆಸಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಭಾರತದ ಕಾಯಂ ಪ್ರತಿನಿಧಿ ಇಂದ್ರಾ ಮಣಿ ಪಾಂಡೆ ಹೇಳಿದ್ದಾರೆ.
'ಈ ಬೆಳವಣಿಗೆಗಳಾಚೆ ಕೆಲವು ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ರೈತರ ಹಕ್ಕುಗಳ ಹೆಸರಿನಲ್ಲಿ ಗಣರಾಜ್ಯದಿನದಂದು ನಡೆದ ಅಪ್ರಚೋದಿತ ಹಿಂಸಾಚಾರದ ಬಗ್ಗೆ ಅವರು ಮಾತನಾಡಿಲ್ಲ. ಯಾವುದೇ ಮಾನವಹಕ್ಕು ಮೌಲ್ಯ ಮಾಪನದಲ್ಲಿ ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆ ಮುಖ್ಯವಾಗಿರುತ್ತದೆ. ಆದರೆ ಹೈ ಕಮಿಷನರ್ಅವರ ಮೌಖಿಕ ಹೇಳಿಕೆಯು ಈ ಎರಡರ ಕೊರತೆಯನ್ನೂ ತೋರಿಸುತ್ತದೆ' ಎಂದು ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.