ಪಂಜ್ಶೀರ್ನಲ್ಲಿ ಘರ್ಷಣೆ: ರೆಸಿಸ್ಟೆನ್ಸ್ ಫೋರ್ಸ್ನ ವಕ್ತಾರ ಸಾವು
ಕಾಬೂಲ್, ಸೆಪ್ಟೆಂಬರ್ 06: ಅಫ್ಘಾನಿಸ್ತಾನದ ಪಂಜ್ಶೀರ್ನಲ್ಲಿ ತಾಲಿಬಾನಿಗಳು ಹಾಗೂ ರೆಸಿಸ್ಟೆನ್ಸ್ ಫೋರ್ಸ್ ನಡುವೆ ನಡೆದ ಘರ್ಷಣೆಯಲ್ಲಿ ರೆಸಿಸ್ಟೆನ್ಸ್ ಫೋರ್ಸ್ ವಕ್ತಾರ ಸಾವನ್ನಪ್ಪಿದ್ದಾರೆ. ಪ್ರತಿರೋಧ ವಕ್ತಾರರ ಸಾವನ್ನು ಅಫ್ಘಾನ್ ಸುದ್ದಿ ಸಂಸ್ಥೆ ಖಾಮಾ ಪ್ರೆಸ್ ಇಂದು ವರದಿ ಮಾಡಿದ್ದು, "ಪಂಜ್ಶೀರ್ ಪ್ರತಿರೋಧದ ವಕ್ತಾರ ಫಾಹೀಮ್ ದುಷ್ಟಿಯು ತಾಲಿಬಾನ್ ಜೊತೆಗಿನ ಯುದ್ಧದಲ್ಲಿ ಗಳಲ್ಲಿ ನಿಧನರಾದರು" ಎಂದು ಹೇಳಲಾಗಿದೆ.
"ದಬ್ಬಾಳಿಕೆ ಮತ್ತು ಆಕ್ರಮಣಶೀಲತೆಯ ವಿರುದ್ಧದ ಪವಿತ್ರ ಪ್ರತಿರೋಧದಲ್ಲಿ ಇಬ್ಬರು ಸಹಚರರನ್ನು ಕಳೆದುಕೊಳ್ಳಲಾಗಿದೆ. ಫಾಹಿಮ್ ದಷ್ಟಿ, ಎನ್ ಆರ್ ಎಫ್ ವಕ್ತಾರ ಮತ್ತು ಜನರಲ್ ಅಬ್ದುಲ್ ವೂಡೋಡ್ ಜಾರಾ ಹುತಾತ್ಮರಾದರು. ಅವರ ಸ್ಮರಣೆ ಶಾಶ್ವತವಾಗಿರಲಿ!" ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಟ್ವೀಟ್ ತಿಳಿಸಿದೆ.
ಅಫ್ಘಾನಿಸ್ತಾನದ ಪಂಜ್ಶೀರ್ನಲ್ಲಿ 700 ತಾಲಿಬಾನಿಗಳ ಹತ್ಯೆ?
ಅತ್ತ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ವಕ್ತಾರ ಫಾಹೀಮ್ ದಷ್ಟಿ ಸಾವಿನ ಬೆನ್ನಲ್ಲೇ ಪಂಜಶೀರ್ ತೊರೆದರೆ ತಾಲಿಬಾನ್ ಜತೆ ಮಾತುಕತೆಗೆ ಸಿದ್ಧ ಎಂದು ಪ್ರತಿರೋಧ ಪಡೆಗಳ ನಾಯಕ ಅಹ್ಮದ್ ಮಸೂದ್ ಹೇಳಿದ್ದಾರೆ.
ತಾಲಿಬಾನ್ ಸಂಘಟನೆಯು ಪಂಜಶೀರ್ ಪ್ರಾಂತ್ಯವನ್ನು ತೊರೆದರೆ ಹೋರಾಟವನ್ನು ನಿಲ್ಲಿಸಲು ಮತ್ತು ಮಾತುಕತೆ ಆರಂಭಿಸಲು ಸಿದ್ಧ. ಪಂಜಶೀರ್ ಮತ್ತು ಅಂದರಬ್ ನಲ್ಲಿ ತಾಲಿಬಾನ್ ತಮ್ಮ ದಾಳಿ ಮತ್ತು ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಿದರೆ ಶಾಶ್ವತ ಶಾಂತಿಯನ್ನು ಸಾಧಿಸಲು ಯುದ್ಧವನ್ನು ತಕ್ಷಣವೇ ನಿಲ್ಲಿಸಲು ರಾಷ್ಟ್ರೀಯ ಪ್ರತಿರೋಧ ಪಡೆಗಳು ಸಿದ್ಧವಾಗಿವೆ, ಮತ್ತು ತಜ್ಞರು ಹಾಗೂ ಸುಧಾರಕರೊಂದಿಗೆ ಬೃಹತ್ ಸಭೆ ನಡೆಸಲು, ಮಾತುಕತೆಗಳನ್ನು ಮುಂದುವರಿಸಲು ಆಶಿಸುತ್ತೇವೆ," ಎಂದು ಭಾನುವಾರ ಮಸೂದ್ ಫೇಸ್ಬುಕ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಂಜ್ಶೀರ್ ಪ್ರತಿರೋಧ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ವಕ್ತಾರ ಫಾಹೀಮ್ ದಷ್ಟಿ ಭಾನುವಾರ ತಾಲಿಬಾನ್ ಜೊತೆಗಿನ ಘರ್ಷಣೆಯಲ್ಲಿ ನಿಧನರಾಗಿದ್ದಾರೆ ಎಂದು ಪ್ರತಿರೋಧ ಪಡೆಗಳ ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ಪಂಜ್ಶೀರ್ನಲ್ಲಿ 700ಕ್ಕೂ ಅಧಿಕ ತಾಲಿಬಾನಿಗಳ ಹತ್ಯೆ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಅಫ್ಘಾನಿಸ್ತಾನದ ಎಲ್ಲಾ ಪ್ರಾಂತ್ಯಗಳನ್ನೂ ತಾನು ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಹೇಳಿದ್ದರೂ, ಪಂಜ್ಶೀರ್ನಲ್ಲಿ ಇನ್ನೂ ಉಗ್ರರು ಹಾಗೂ ಸ್ಥಳೀಯರ ಪ್ರತಿರೋಧ ಪಡೆಯ ನಡುವೆ ಭಾರಿ ಕಾಳಗ ನಡೆಯುತ್ತಿದೆ.
ಸಂಘರ್ಷದಲ್ಲಿ ತಾನು ಗೆದ್ದಿರುವುದಾಗಿ ತಾಲಿಬಾನ್ ಹೇಳಿಕೊಂಡಿದ್ದರೆ, ತಾವು 700ಕ್ಕೂ ಹೆಚ್ಚು ಉಗ್ರರನ್ನು ಕೊಂದಿರುವುದಾಗಿ ಸ್ಥಳೀಯ ಹೋರಾಟಗಾರರ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಹೇಳಿಕೊಂಡಿದೆ.
ತಾಲಿಬಾನ್ ಉಗ್ರರು ತಾವು ಪಂಜ್ಶೀರ್ ರಾಜಧಾನಿ ಬಜರಾಕ್ಗೆ ಪ್ರವೇಶಿಸಿದ್ದು, ಗವರ್ನರ್ ಕಚೇರಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ ಪಂಜ್ಶೀರ್ ಹೋರಾಟಗಾರರು, ತಾವು ತಾಲಿಬಾನ್ ಪಡೆಗಳನ್ನು ಗಡಿಯಿಂದ ಹೊರಹಾಕಿದ್ದೇವೆ, 700 ಉಗ್ರರನ್ನು ಕೊಂದಿದ್ದೇವೆ. 600ಕ್ಕೂ ಅಧಿಕ ಮಂದಿಯನ್ನು ಸೆರೆಯಲ್ಲಿರಿಸಿದ್ದೇವೆ ಎಂದು ಹೇಳಿದ್ದಾರೆ.