Fact Check: ಕೊರೊನಾ ಓಡಿಸಲು ಸಿಂಹಗಳನ್ನು ರಸ್ತೆಗಿಳಿಸಿದ ಪುಟಿನ್!
ಮಾಸ್ಕೋ ಮಾರ್ಚ್ 23: ಕಳೆದ ನಾಲ್ಕು ತಿಂಗಳಿನಿಂದ ಜಗತ್ತಿನ ನಿದ್ದೆಗೆಡಿಸಿದೆ ಮಾರಕ ಕೊರೊನಾ ವೈರಸ್ (ಕೋವಿಡ್ 19).
ಕೊರೊನಾ ಹತ್ತಿಕ್ಕಬೇಕು ಎಂದು ಜಗತ್ತಿನ ಅನೇಕ ರಾಷ್ಟ್ರಗಳು ಪರದಾಡುತ್ತಿವೆ. ಆದರೆ, ಕೆಲವು ರಾಷ್ಟ್ರಗಳು ತಡವಾಗಿ ಎಚ್ಚೆತ್ತುಕೊಂಡು ಈಗ ಪರದಾಡುತ್ತಿವೆ. ಸೋಂಕು ಪಸರಿಸದಂತೆ ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ.
ಕುಖ್ಯಾತ ಸ್ಮಗ್ಲರ್ಗೆ ಕೊರೊನಾ ಅಟ್ಯಾಕ್; ಟ್ರಾವೆಲ್ ಹಿಸ್ಟರಿ ಬಾಯಿ ಬಿಡದ ಕಿಲಾಡಿ!
ಜಗತ್ತಿನ ಬಲಿಷ್ಠ ರಾಷ್ಟ್ರ ಎನಿಸಿಕೊಂಡಿರುವ ರಷ್ಯಾಕ್ಕೂ ಕೂಡ ಮಾರಕ ಕೊರೊನಾ ಎಂಟ್ರಿ ಕೊಟ್ಟಿದೆ. ಕೊರೊನಾ ಹತ್ತಿಕ್ಕಲು ರಷ್ಯಾ ಕೂಡ ಪರದಾಡುತ್ತಿದೆ. ಕೆಲವು ದಿನಗಳ ಹಿಂದೆ ಕೊರೊನಾ ತಡೆಯಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ದೇಶದ ಜನರಿಗೆ ಮನೆಯಲ್ಲೇ ಇರಿ, ಇಲ್ಲ 15 ದಿನ ಜೈಲಲ್ಲಿ ಇರಿ ಎಂದು ಹೇಳಿದ್ದರು ಎಂದು ವೈರಲ್ ಆಗಿತ್ತು. ಆದರೆ, ಈಗ ಜನ ಬೀದಿಗಿಳಿಯದಂತೆ ತಡೆಯಲು ಪುಟಿನ್ ಸಿಂಹಗಳನ್ನು ಬೀದಿಗಿಳಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
1500 ಸಿಂಹಗಳನ್ನು ಬಿಟ್ಟರಾ ಪುಟಿನ್?
ಕೊರೊನಾ ಸೋಂಕು ಹರಡದಂತೆ ತಡೆಯಲು ರಷ್ಯಾದಲ್ಲಿ ಜನರನ್ನು ಬೀದಿಗಿಳಿಯದಂತೆ ತಡೆಯಲು ಪುಟಿನ್ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ, ಇದಕ್ಕೆ ಜನ ಸೊಪ್ಪು ಹಾಕುತ್ತಿಲ್ಲವಾಗಿರುವುದರಿಂದ ಪುಟಿನ್ ಸುಮಾರು 1500 ಸಿಂಹಗಳನ್ನು ರಸ್ತೆಯಲ್ಲಿ ಬಿಟ್ಟಿದ್ದಾರೆ ಎಂಬ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಶುದ್ದ ಸುಳ್ಳು ಎಂದು Fact Cheak ನಲ್ಲಿ ಬಯಲಾಗಿದೆ.
ಸಿಂಹ ಎಲ್ಲಿಯದು?
ಜನರನ್ನು ಹೆದರಿಸಲು ಸಿಂಹಗಳನ್ನು ಪುಟಿನ್ ರಸ್ತೆಗೆ ಬಿಟ್ಟಿದ್ದಾರೆ ಎಂಬ ಫೋಟೊ ರಷ್ಯಾದ್ದು ಅಲ್ಲವೇ ಅಲ್ಲ. ರಸ್ತೆಯಲ್ಲಿ ಸಿಂಹವೊಂದು ಅಡ್ಡಾಡುತ್ತಿರುವ ಫೋಟೊ ಇದಾಗಿತ್ತು. ಈ ಫೋಟೊ ದಕ್ಷಿಣ ಆಫ್ರಿಕಾದ್ದಾಗಿದೆ. 2016 ರಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಸಿಂಹ ಕಾಡಂಚಿನ ನಗರದಲ್ಲಿ ತಿರುಗಾಡಿತ್ತು.
15 ದಿನ ಜೈಲು ವಾಸವೂ ಸುಳ್ಳು
ಕೊರೊನಾ ತಡೆಯಲು ಪುಟಿನ್ ರಷ್ಯಾ ಜನರು 15 ದಿನ ಮನೆಯಲ್ಲೇ ಕಡ್ಡಾಯವಾಗಿ ಇರಿ, ಇಲ್ಲ 15 ದಿನ ಜೈಲು ವಾಸ ಅನುಭವಿಸಿ ಎಂದು ಹೇಳಿದ್ದರು ಎಂಬುದು ಕೂಡ ವೈರಲ್ ಆಗಿತ್ತು. ಆದರೆ, ಇದೂ ಕೂಡ ಸುಳ್ಳು ಎಂದು ಸಾಬೀತಾಗಿದೆ. ಪುಟಿನ್ ಆ ರೀತಿ ಹೇಳಿಕೆ ಕೊಟ್ಟಿಲ್ಲ ಎಂದು ರಷ್ಯಾ ಟುಡೇ ವರದಿ ಮಾಡಿದೆ. ಪುಟಿನ್ ಸೋಂಕು ಹರಡದಂತೆ ತಡೆಯಲು ಜನಕ್ಕೆ ತೊಂದರೆಯಾಗದಿರುವ ಕ್ರಮಗಳನ್ನು ಹೆಚ್ಚು ಕೈಗೊಂಡಿದ್ದಾರೆ ಎಂದು ವಾಹಿನಿ ಹೇಳಿದೆ.
ರಷ್ಯಾದಲ್ಲಿ ಎಷ್ಟು ಪ್ರಕರಣಗಳು?
ರಷ್ಯಾದಲ್ಲಿಯೂ ಕೊರೊನಾ ಉಪಟಳ ನೀಡಿದೆ. ಅಲ್ಲಿ ಸೋಮವಾರದ ವರದಿಗಳ ಪ್ರಕಾರ 623 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇಲ್ಲಿಯವರೆಗೆ 8 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ. ಕೊರೊನಾ ಹತ್ತಿಕ್ಕಲು ಪುಟಿನ್ ಕೈಗೊಂಡಿರುವ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಚೀನಾದಲ್ಲಿ ಕೊರೊನಾ ತಲ್ಲಣ ಸೃಷ್ಟಿಸಿದ ತರುವಾಯವೇ ಅವರು ಚೀನಾದೊಂದಿಗಿನ 2600 ಮೈಲಿ ಗಡಿಯನ್ನು ಸಂಪೂರ್ಣ ಮುಚ್ಚಲು ಆದೇಶಿಸಿದ್ದರು.