ಕೋರ್ಟ್ಗೆ ಹಾಜರಾದ ಮಾಜಿ ಪ್ರಧಾನಿ! 4 ತಿಂಗಳ ಬಳಿಕ ಜನರೆದುರು ಪ್ರತ್ಯಕ್ಷ!
ಒಂದ್ಕಡೆ ಇಡೀ ದೇಶವೇ ಧಗಧಗಿಸುತ್ತಿದೆ, ಮತ್ತೊಂದ್ಕಡೆ ಉಚ್ಚಾಟಿತ ಪ್ರಧಾನಿಯ ವಿಚಾರಣೆ ನಡೆಯುತ್ತಿದೆ. ಹೌದು, ಮ್ಯಾನ್ಮಾರ್ನ ಉಚ್ಚಾಟಿತ ಪ್ರಧಾನಿ ಆಂಗ್ ಸಾನ್ ಸೂಕಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ. ಫೆಬ್ರವರಿ 1ರಂದು ಆಂಗ್ ಸಾನ್ ಸೂಕಿಯಿಂದ ಅಧಿಕಾರ ವಶಪಡಿಸಿಕೊಂಡಿದ್ದ ಮ್ಯಾನ್ಮಾರ್ ಸೇನೆ, ಸೂಕಿ ಸೇರಿದಂತೆ ಅವರ ಸಂಪುಟದ ಸಹೋದ್ಯೋಗಿಗಳನ್ನು ಜೈಲಿಗೆ ತಳ್ಳಿತ್ತು.
ಹೀಗೆ ಸುಮಾರು 4 ತಿಂಗಳ ವನವಾಸ ಅನುಭವಿಸಿದ ಬಳಿಕ ಮ್ಯಾನ್ಮಾರ್ ಮಾಜಿ ಪಿಎಂ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸೂಕಿ ವಿರುದ್ಧ ಒಟ್ಟು 6 ಆರೋಪಗಳಿದ್ದು, ಇದರಲ್ಲಿ ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿದ್ದ ಗಂಭೀರ ಆರೋಪವೂ ಸೇರಿದೆ. ಇದರ ಜೊತೆಗೆ ಸೂಕಿ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೂಡ ಸೇರಿದ್ದು, ನ್ಯಾಯಾಲಯದ ವಿಚಾರಣೆ ಎದುರಿಸಿದ್ದಾರೆ ಆಂಗ್ ಸಾನ್ ಸೂಕಿ.
ಒಂದು ಕಡೆ ಸೂಕಿ ವಿಚಾರಣೆಗೆ ಹಾಜರಾದರೆ ಮತ್ತೊಂದು ಕಡೆ ಇಡೀ ಮ್ಯಾನ್ಮಾರ್ ಹೊತ್ತಿ ಉರಿಯುತ್ತಿದೆ. ರೊಹಿಂಗ್ಯಾ ಹತ್ಯಾಕಾಂಡ ನಡೆದು ಕೆಲವೇ ವರ್ಷದಲ್ಲಿ ಮ್ಯಾನ್ಮಾರ್ ಮತ್ತೆ ಧಗಧಗಿಸುತ್ತಿದೆ. ಇದೆಲ್ಲಾ ಯಾವಾಗ ತಣ್ಣಗಾಗುತ್ತೋ ಗೊತ್ತಾಗುತ್ತಿಲ್ಲ.
ಅಮಾಯಕ ಪ್ರಜೆಗಳ ಕಗ್ಗೊಲೆ
ಈವರೆಗೂ 800ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಮ್ಯಾನ್ಮಾರ್ ಸೇನೆ ಕೊಂದು ಹಾಕಿದ್ದು, ಇದೇ ರಿವೇಂಜ್ಗೆ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಬೆಂಕಿ ಇಟ್ಟು 13 ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ. ಇತ್ತೀಚೆಗೆ ಸಾವಿರಾರು ಪೊಲೀಸರು ಮ್ಯಾನ್ಮಾರ್ನಿಂದ ಓಡಿ ಹೋಗಿದ್ದರು, ಬಳಿಕ 1 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನ ಸಸ್ಪೆಂಡ್ ಮಾಡಿತ್ತು ಮ್ಯಾನ್ಮಾರ್ ಸೇನಾ ಸರ್ಕಾರ. ಪ್ರತ್ಯುತ್ತರವಾಗಿ ಪ್ರತಿಭಟನಾಕಾರರು 13 ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದು, ಮತ್ತೊಮ್ಮೆ ಹಿಂಸೆಯ ಬೆಂಕಿ ಧಗಧಗಿಸುತ್ತಿದೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ಸಿಗುವ ಲಕ್ಷಣಗಳೇ ಕಾಣ್ತಿಲ್ಲ. ಇದು ಜನರನ್ನ ಮತ್ತಷ್ಟು ಚಿಂತೆಗೀಡು ಮಾಡಿದೆ.
ಮಿಲಿಟರಿ ಹಿಡಿತದಲ್ಲಿ ಮ್ಯಾನ್ಮಾರ್
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ. ಕಂಡಲ್ಲಿ ಗುಂಡಿಟ್ಟು ಜನರನ್ನ ಕೊಲೆ ಮಾಡುತ್ತಿದೆ ಸೇನೆ.
ಗಲ್ಲಿಗೂ ನುಗ್ಗಿದೆ ಮ್ಯಾನ್ಮಾರ್ ಸೇನೆ..!
ಸೇನಾ ಕ್ರಾಂತಿ ಪರ ಹಾಗೂ ವಿರುದ್ಧವಾಗಿ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್ನ ತತ್ತರಿಸುವಂತೆ ಮಾಡಿದೆ. ಆದರೆ ಇದನ್ನ ನೋಡಿ ತಣ್ಣಗೆ ಕೂರೋಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಸೇನಾಧಿಕಾರಿಗಳು ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ಹೋರಾಟ ಹತ್ತಿಕ್ಕಲು ಮ್ಯಾನ್ಮಾರ್ನ ಸೇನೆ ಗಲ್ಲಿ ಗಲ್ಲಿಗಳಿಗೂ ಎಂಟ್ರಿ ಕೊಟ್ಟಿದೆ. ಭಾರಿ ಪ್ರಮಾಣದ ಯುದ್ಧ ಪರಿಕರಗಳನ್ನ ತೋರಿಸಿ ಜನರನ್ನ ಬೆದರಿಸುವ ತಂತ್ರ ಅನುಸರಿಸುತ್ತಿದೆ. ಆದರೂ ಜನ ಭಯಪಡದೆ ಹೋರಾಟಕ್ಕೆ ಸಾಥ್ ನೀಡುತ್ತಿದ್ದಾರೆ.
ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.