ಧನದಾಹಕ್ಕೆ ಬಲಿಯಾಯಿತಾ ಲೆಬನಾನ್ ರಾಜಧಾನಿ..?
200ಕ್ಕೂ ಹೆಚ್ಚು ಜನರನ್ನು ಬಲಿಪಡೆದಿರುವ ಬೈರುತ್ ಬ್ಲಾಸ್ಟ್ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿಯೊಂದು ಹೊರಬಿದ್ದಿದೆ. 2,750 ಟನ್ನಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟಕ್ಕೆ ಹಡಗು ಮಾಲೀಕನ ದುರಾಸೆ ಕಾರಣ ಎಂಬುದು ಬಯಲಾಗಿದೆ. ಜಾರ್ಜಿಯಾ ರಾಜಧಾನಿ ಬಟುಮಿ ನಗರದಿಂದ ಮೊಜಾಂಬಿಕ್ಗೆ ಅಮೋನಿಯಂ ನೈಟ್ರೇಟ್ ಸಾಗಿಸುತ್ತಿದ್ದ ಹಡಗು ಹಲವು ಬಂದರುಗಳನ್ನು ದಾಟಿ ಬೈರುತ್ಗೆ ಬಂದಿತ್ತು. ಆದರೆ ಲೆಬನಾನ್ ರಾಜಧಾನಿ ಬೈರುತ್ಗೆ ಈ ಡೆಡ್ಲಿ ಹಡಗು ಬರಲು ಬಲವಾದ ಕಾರಣವೊಂದಿತ್ತು. ಅದೇ ಹಡಗು ಮಾಲೀಕನ ದುರಾಸೆ.
ಕೊರೊನಾವೈರಸ್ ಇನ್ನಿತರ ಕಾರಣದಿಂದ ಹಣದ ಅಭಾವದಿಂದ ಕಂಗಾಲಾಗಿದ್ದ ರಷ್ಯಾ ಮೂಲದ ಈ ಹಡಗಿನ ಮಾಲೀಕ, ಬೈರುತ್ನಲ್ಲಿ ಮತ್ತಷ್ಟು ಸರಕು ತುಂಬಿಸಿಕೊಳ್ಳಲು ಪ್ಲಾನ್ ಮಾಡಿದ್ದನಂತೆ. ಲೆಬನಾನ್ ರಾಜಧಾನಿ ಬೈರುತ್ ಬಂದರಿನಲ್ಲಿ ದೊಡ್ಡ ಗಾತ್ರದ ಯಂತ್ರಗಳನ್ನು ಸದ್ಯ ಸ್ಫೋಟಗೊಂಡಿರುವ ಹಡಗಿಗೆ ತುಂಬಿಸಲು ಯತ್ನಿಸಲಾಗಿತ್ತು.
ಬೈರುತ್ ಬ್ಲಾಸ್ಟ್: ಲೆಬನಾನ್ ಪ್ರಧಾನಿ ಹಸನ್ ತಲೆದಂಡ..!
ಆದರೆ ಹಡಗು ಆಗಲೇ ತುಕ್ಕುಹಿಡಿದಿದ್ದ ಹಿನ್ನೆಲೆ ಅದು ಸಾಧ್ಯವಾಗಿರಲಿಲ್ಲ. ಕಡೆಗೆ ಹಡಗಿನ ಕ್ಯಾಪ್ಟನ್ ಬೈರುತ್ ಬಂದರಿನಿಂದ ಜಾಗ ಖಾಲಿ ಮಾಡುವ ವೇಳೆ ಶುಲ್ಕ ಕಟ್ಟುವಂತೆ ಬೈರುತ್ ಪೋರ್ಟ್ ಅಧಿಕಾರಿಗಳು ಬೆನ್ನುಬಿದ್ದಿದ್ದರು ಎನ್ನಲಾಗಿದೆ. ಆದರೆ ದುಡ್ಡು ಕಟ್ಟಲು ಸಾಧ್ಯವಾಗದ ಹಿನ್ನೆಲೆ 2,750 ಟನ್ನಷ್ಟು ಅಮೋನಿಯಂ ನೈಟ್ರೇಟ್ ಇದ್ದ ಹಡಗು ಅಲ್ಲೇ ಸೀಜ್ ಆಗಿತ್ತು ಎಂಬ ಸತ್ಯಾಂಶ ಈಗ ಬಹಿರಂಗವಾಗಿದೆ.
ಬೇಡಿಕೊಂಡರೂ ಬಿಡಲಿಲ್ಲ ಬೈರುತ್ ಅಧಿಕಾರಿಗಳು..!
ಇದು ಬೈರುತ್ ಗ್ರಹಚಾರವೋ ಅಥವಾ ಅಧಿಕಾರಿಗಳು ಮಾಡಿದ ದೊಡ್ಡ ಎಡವಟ್ಟೋ ಗೊತ್ತಿಲ್ಲ. ಬಂದರಿನ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಅಮೋನಿಯಂ ನೈಟ್ರೇಟ್ ಇದ್ದ ಹಡಗನ್ನು ಅಧಿಕಾರಿಗಳು ಜಪ್ತಿ ಮಾಡಿ ಬೈರುತ್ ಬಂದರಿನಲ್ಲೇ ಬೀಗ ಹಾಕಿಸಿದ್ದರು. ಹಡಗಿನ ಕ್ಯಾಪ್ಟನ್ ಹಾಗೂ ಸಿಬ್ಬಂದಿ ಎಷ್ಟೇ ಮನವಿ ಮಾಡಿದರೂ ಹಡಗನ್ನು ರಿಲೀಸ್ ಮಾಡಲಿಲ್ಲ ಎನ್ನಲಾಗಿದೆ. ಕಡೆಗೆ ಹಡಗಿನ ಕ್ಯಾಪ್ಟನ್ ಬೈರುತ್ ಕೋರ್ಟ್ ಮೂಲಕ ಜಾಮೀನು ಪಡೆದು ಅಲ್ಲಿಂದ ಜಾಗ ಖಾಲಿ ಮಾಡಿದ್ದ. ಆದರೆ ಹಡಗಿನ ಶುಲ್ಕ ಪಾವತಿಸಲು ಆಗದ ಹಿನ್ನೆಲೆಯಲ್ಲಿ ಹಡಗು ಬೈರುತ್ ಬಂದರಿನಲ್ಲೇ ಉಳಿದಿತ್ತು. ಇದೇ ಹಡಗು ಸ್ಫೋಟಗೊಂಡು ಪ್ರಳಯವನ್ನೇ ಸೃಷ್ಟಿಸಿದೆ.
ಬ್ಲಾಸ್ಟ್ ವಿಷಯ ಕೇಳಿ ಮಾಜಿ ಕ್ಯಾಪ್ಟನ್ಗೆ ಆಘಾತ..!
ಅಮೋನಿಯಂ ನೈಟ್ರೇಟ್ ಸ್ಫೋಟಗೊಡಿರುವ ಎಂ.ವಿ. ರೋಸಸ್ ಹೆಸರಿನ ಹಡಗಿನ ಮಾಜಿ ಕ್ಯಾಪ್ಟನ್ ಹಲವು ಶಾಕಿಂಗ್ ಸಂಗತಿಗಳನ್ನ ಹೊರಹಾಕಿದ್ದಾರೆ. ರಷ್ಯಾ ರಾಜಧಾನಿ ಮಾಸ್ಕೋ ಸಮೀಪದ ಊರಲ್ಲಿ ವಾಸವಿರುವ ಬೋರಿಸ್ ಪ್ರೊಕೊಶೆವ್ ಸ್ಫೋಟಗೊಂಡಿರುವ ಹಡಗಿನ ಮಾಜಿ ನಾವಿಕ. ಬೋರಿಸ್ ಪ್ರೊಕೊಶೆವ್ 2013ರಲ್ಲಿ ಈ ಹಡಗಿನ ಮೂಲಕ ಮೊಜಾಂಬಿಕ್ಗೆ ಹೋರಟಿದ್ದರು. ಆದರೆ ಹಡಗು ಅನಿವಾರ್ಯವಾಗಿ ಬೈರುತ್ ಬಂದರಿನಲ್ಲಿ ಲಾಕ್ ಆದಾಗ ಬೋರಿಸ್ ಪ್ರೊಕೊಶೆವ್ ಹಡಗಿನ ಅಪಾಯದ ಬಗ್ಗೆ ತಿಳಿಸಿದ್ದರಂತೆ. ಆದರೆ ಪ್ರೊಕೊಶೆವ್ ಮಾತು ಕೇಳದೆ ಕೇವಲ ದುಡ್ಡಿಗಾಗಿ ಹಡಗನ್ನು ಬೈರುತ್ ಪೋರ್ಟ್ನಲ್ಲಿ ನಿಲ್ಲಿಸಲಾಗಿತ್ತು. ಅಲ್ಲದೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಎಂಬುದು ಪ್ರೊಕೊಶೆವ್ ಆರೋಪವಾಗಿದೆ.
ಮತ್ತೆ ಮೊಳಗಲಿದೆಯಾ ಹೋರಾಟ ಕಿಚ್ಚು..?
ಬೋರಿಸ್ ಪ್ರೊಕೊಶೆವ್ ಹೇಳಿಕೆ ಗಮನಿಸಿದರೆ ಅಮೋನಿಯಂ ನೈಟ್ರೇಟ್ ಸಾಗಿಸುತ್ತಿದ್ದ ಹಡಗಿನ ಮಾಲೀಕ ಧನದಾಹಿ ಎಂಬುದು ಸ್ಪಷ್ಟವಾಗುತ್ತದೆ. ಹಾಗೇ ಬೈರುತ್ ಪೋರ್ಟ್ ಅಧಿಕಾರಿಗಳು ದುಡ್ಡಿಗಾಗಿ ಪೀಡಿಸಿ, ಕಡೆಗೆ 200ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದಾರೆ. ಇನ್ನೊಂದು ಕಡೆ ಲಕ್ಷಾಂತರ ಜನ ಸೂರು ಕಳೆದುಕೊಂಡು ಬೈರುತ್ನ ಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಲೆಬನಾನ್ ಪ್ರಧಾನಿ ಇದೇ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಇಷ್ಟೆಲ್ಲದರ ಮಧ್ಯೆ ಬೋರಿಸ್ ಪ್ರೊಕೊಶೆವ್ ಹೊರಹಾಕಿರುವ ಸ್ಫೋಟಕ ಸಂಗತಿಗಳಿಂದ ಪ್ರಕರಣ ಮತ್ತೆ ಹೇಗೆಲ್ಲಾ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಆಹಾರ ಪದಾರ್ಥಕ್ಕೂ ತಾತ್ವರ..!
ಬೈರುತ್ ಬಂದರಿನಲ್ಲಿಯೇ ಲೆಬನಾನ್ ತನ್ನ ರಾಷ್ಟ್ರಕ್ಕೆ ಅಗತ್ಯವಿದ್ದಷ್ಟು ಆಹಾರ ಸಂಗ್ರಹಣೆ ಮಾಡಿತ್ತು. ಆದರೆ ಸ್ಫೋಟದ ನಂತರ ಆಹಾರ ಪದಾರ್ಥವೆಲ್ಲಾ ಮಣ್ಣುಪಾಲಾಗಿ, ಜನರ ಹೊಟ್ಟೆಗೆ ತಣ್ಣೀರಿನ ಬಟ್ಟೆಯೇ ಗತಿ ಎಂಬಂತಾಗಿದೆ. ಒಂದ್ಕಡೆ ಸೂರು ಇಲ್ಲ, ಮತ್ತೊಂದ್ಕಡೆ ಹೊಟ್ಟೆಗೆ ಹಿಟ್ಟು ಸಿಗುತ್ತಿಲ್ಲ. ಆದರೆ ಇದೆಲ್ಲವನ್ನೂ ನಿಭಾಯಿಸುವಲ್ಲಿ ದಿಯಾಬ್ ಫ್ಲಾಪ್ ಆಗಿದ್ದಾರೆ. ಜನರ ಕಷ್ಟ ಕೇಳದೆ ಪ್ರಜೆಗಳ ಮೇಲೆಯೇ ದೌರ್ಜನ್ಯ ನಡೆಸಲು ಹೋಗಿ ದಿಯಾಬ್ ಈಗ ತಮ್ಮ ಸರ್ಕಾರವನ್ನೇ ವಿಸರ್ಜಿಸಿದ್ದಾರೆ.