ದಿನಬಳಕೆ ವಸ್ತುಗಳು ಮತ್ತಷ್ಟು ದುಬಾರಿ..? ಹಡಗು ತೇಲಿದರೂ ಮತ್ತಷ್ಟು ದಿನ ಟ್ರಾಫಿಕ್..!
ಸೂಯೆಜ್ ಕಾಲುವೆಯಲ್ಲಿ ಮುಳುಗುತ್ತಿದ್ದ ಹಡಗನ್ನು ಹೇಗೋ ಮಾಡಿ ತೇಲಿಸಲಾಗಿದೆ. ಆದರೆ ಅದು ಯಾವ ಘಳಿಗೆಯಲ್ಲಿ 'ಎವರ್ ಗ್ರೀನ್' ಹಡಗು ಸೂಯೆಜ್ ಕಾಲುವೆಗೆ ಎಂಟ್ರಿ ಕೊಟ್ಟಿತ್ತೋ ಗೊತ್ತಿಲ್ಲ. ಒಂದು ವಾರದಿಂದ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದೆ. ಇದೀಗ 'ಎವರ್ ಗ್ರೀನ್' ಹಡಗು ಸೂಯೆಜ್ ಕಾಲುವೆಯಿಂದ ಹೊರಟಿದ್ದರೂ, ಕಾಲುವೆಯಲ್ಲಿ ಟ್ರಾಫಿಕ್ ಜಾಮ್ ಕ್ಲಿಯರ್ ಆಗಿಲ್ಲ.
ಸುಮಾರು 400ರಿಂದ 450 ಹಡಗುಗಳು ಸಾಲಿನಲ್ಲಿ ಕಾಯುತ್ತಿದ್ದು, ಎಲ್ಲಾ ಸಂಕಷ್ಟ ಬಗೆಹರಿಯಲು ಮಿನಿಮಮ್ 1 ತಿಂಗಳಾದರೂ ಬೇಕು ಅಂತಿದ್ದಾರೆ ತಜ್ಞರು.
ಸುಯೆಜ್ ಕಾಲುವೆ: 6 ದಿನಗಳ ಬಳಿಕ ಕೊನೆಗೂ ತೇಲಿದ ಹಡಗು
ಏಕೆಂದರೆ ತುಂಬಾ ಕಿರಿದಾದ ಸೂಯೆಜ್ ಕಾಲುವೆಯಲ್ಲಿ 450 ಹಡಗುಗಳನ್ನು ಒಂದೇ ಕಾಲಕ್ಕೆ ತಳ್ಳಿ ಹಾಕಲು ಆಗುವುದಿಲ್ಲ. ಹೀಗಾಗಿ ಸಾಕಷ್ಟು ಸಮಯ ಅಗತ್ಯವಾಗಿದೆ, ಇಷ್ಟರೊಳಗೆ ಏಷ್ಯಾ ರಾಷ್ಟ್ರಗಳಲ್ಲಿ ಸರಕು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಂಭವ ಇದೆ ಎನ್ನಲಾಗುತ್ತಿದೆ.
ಪ್ರಮುಖವಾಗಿ ಕಚ್ಚಾ ತೈಲದ ಬೆಲೆ ಏರಿಳಿತ ಆತಂಕ ಹುಟ್ಟಿಸಿದೆ. ಜೊತೆಗೆ ಕಾಫಿ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದೆ ಹಾಗೂ ಯುರೋಪ್ನ ಸರಕುಗಳ ಬೆಲೆ ದುಪ್ಪಟ್ಟಾದರೂ ಅಚ್ಚರಿ ಪಡಬೇಕಿಲ್ಲ.
ಸಾವಿರಾರು ಲೋಡ್ ಮರಳು ಹೊರಕ್ಕೆ..!
ಸೂಯೆಜ್ ಕಾಲುವೆಯಲ್ಲಿ ಸಿಲುಕಿ ಪರದಾಡುತ್ತಿದ್ದ 'ಎವರ್ ಗ್ರೀನ್' ಹಡಗು ತೇಲುವಂತೆ ಮಾಡಲು ತಜ್ಞರ ಗಂಡ ಸಿಕ್ಕಾಪಟ್ಟೆ ಸರ್ಕಸ್ ಮಾಡಿದ್ದಾರೆ. ಸಾವಿರಾರು ಲೋಡ್ ಮರಳನ್ನ ಹೊರಗಡೆ ತೆಗೆದಿದ್ದಾರೆ. ಅಂದ್ರೆ 18 ಮೀಟರ್ ಆಳಕ್ಕೆ ಅಗೆದು ಮರಳು ಹೊರ ತೆಗೆದು ಹಡಗು ಚಲಿಸಲು ಅನುಕೂಲ ಮಾಡಲಾಗಿದೆ. ಈಗಾಗಲೇ ಹಡಗು ಭಾಗಶಃ ಸೂಯೆಜ್ ಕಾಲುವೆಯನ್ನ ದಾಟಿದ್ದು 1 ವಾರದಿಂದ ನಿಂತಲ್ಲೇ ನಿಂತಿದ್ದ ಬೇರೆ ಹಡಗುಗಳನ್ನ ಹೊರಗೆ ಬಿಡಲಾಗುತ್ತಿದೆ. ಕೊರೊನಾ ನಡುವೆ ಸಂಕಷ್ಟದಲ್ಲಿ ಸಿಲುಕಿದ್ದ ಉದ್ಯಮಗಳಿಗೆ ಈಗಾಗಲೇ ಸೂಯೆಜ್ ಕಾಲುವೆ ಘಟನೆಯಿಂದ ಲಕ್ಷಾಂತರ ಕೋಟಿ ನಷ್ಟವಾಗಿದೆ.
ಪೆಟ್ರೋಲ್, ಡೀಸೆಲ್ ದುಬಾರಿ..?
ಹೌದು ಈಗಾಗಲೇ ತೈಲ ಬೆಲೆ ಗಗನಕ್ಕೇರಿ ವಾಹನ ಸವಾರರು ಪರಿತಪಿಸುತ್ತಿದ್ದಾರೆ. ಇಂಥ ಹೊತ್ತಲ್ಲೇ ಕಾಲುವೆ 1 ವಾರಗಳ ಕಾಲ ಬಂದ್ ಆಗಿದ್ದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಗೆ ನಾಂದಿ ಹಾಡಿದೆ. ಏಕೆಂದರೆ ಭಾರತಕ್ಕೆ ಹಡಗಿನ ಮೂಲಕವೂ ಕಚ್ಚಾತೈಲ ಆಮದು ಆಗುತ್ತದೆ. ಆದರೆ ಸೂಯೆಜ್ನಲ್ಲಿ ಟ್ರಾಫಿಕ್ ಉಂಟಾಗಿ ಕಚ್ಚಾ ತೈಲ ಆಮದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಹಜವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ಒಂದು ಕಾಲುವೆ ಇಷ್ಟೆಲ್ಲಾ ಸಮಸ್ಯೆಗೆ ನಾಂದಿ ಹಾಡಿದೆ. ಈ ಘಟನೆಯ ಬಗ್ಗೆ ಈಜಿಪ್ಟ್ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದು, ಈಜಿಪ್ಟ್ ಸರ್ಕಾರಕ್ಕೂ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ.
‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು
ನಿಮಗೆಲ್ಲಾ ತಿಳಿದಿರುವಂತೆ ದೇಶ ದೇಶಗಳ ನಡುವೆ ಹೆಚ್ಚಿನ ವ್ಯಾಪಾರ ಮತ್ತು ವಹಿವಾಟು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಇದು ಪುರಾತನ ವಿಧಾನ ಕೂಡ ಆಗಿದೆ. ಹೀಗೆ ಯುರೋಪ್ ಹಾಗೂ ಏಷ್ಯಾದ ನಡುವೆ ವ್ಯಾಪಾರ ಮತ್ತು ವಹಿವಾಟು ನಡೆಯಲು ಸೂಯೆಜ್ ಕಾಲುವೆ ಅತ್ಯಗತ್ಯವಾಗಿತ್ತು. ಮೊದಲಿಗೆ ಇದರ ಕನಸು ಕಂಡವನು ಯುರೋಪಿಯನ್ನರ ಪಾಲಿಗೆ ಅನಭಿಶಕ್ತ ದೊರೆಯಾದ ನೆಪೋಲಿಯನ್ ಬೋನಾಪಾರ್ಟೆ. ಮೆಡಿಟೆರಿಯನ್ ಮತ್ತು ಕೆಂಪು ಸಮುದ್ರ ಬೆಸೆಯುವ ಕಾಲುವೆ ಎರಡು ಖಂಡಗಳನ್ನು ಒಗ್ಗೂಡಿಸುತ್ತದೆ. ಅಲ್ಲಿನ ವ್ಯಾಪಾರ ಮತ್ತು ವಹಿವಾಟಿನ ಅಗತ್ಯತೆಗಾಗಿ ಕಾಲುವೆ ನಿರ್ಮಿಸಲಾಗಿತ್ತು. ಇದೀಗ ಈಜಿಪ್ಟ್ ಸರ್ಕಾರಕ್ಕೆ ಒಟ್ಟು ವಾರ್ಷಿಕ ಆದಾಯದ ಶೇಕಡಾ 25ರಷ್ಟು ಭಾಗವನ್ನು ಇದೇ ಕಾಲುವೆ ತಂದುಕೊಡುತ್ತದೆ.
1869ರಲ್ಲಿ ಕಾಲುವೆ ನಿರ್ಮಾಣ..!
ಇಡೀ ಜಗತ್ತು ನೆಪೋಲಿಯನ್ನ ನೆನಪಿನಲ್ಲಿ ಇಡುವುದು ಕೇವಲ ಆತನ ಯುದ್ಧಗಳಿಂದ ಅಲ್ಲ. ಬದಲಾಗಿ ಆತ ತಂದ ಕ್ರಾಂತಿಕಾರಿ ಬದಲಾವಣೆಗಳಿಂದ. ಯುರೋಪ್ ಹಾಗೂ ಆಫ್ರಿಕಾ ಅಭಿವೃದ್ಧಿಗೆ ನೆಪೋಲಿಯನ್ ನೀಡಿದ ಕೊಡುಗೆ ಮಹತ್ವದ್ದಾಗಿದೆ. 1799ರಲ್ಲಿ ಈಜಿಪ್ಟ್ ವಶಪಡಿಸಿಕೊಂಡ ನೆಪೋಲಿಯನ್ ಸೂಯೆಜ್ ಕಾಲುವೆಯ ಅಧ್ಯಯನಕ್ಕೆ ಆದೇಶ ನೀಡಿದ್ದ. ಆದರೆ ಅತಿಯಾದ ವೆಚ್ಚದ ಹಿನ್ನೆಲೆ ಯೋಜನೆ ಕೈಬಿಡಲಾಯಿತು. 1840ರಲ್ಲಿ 2ನೇ ಬಾರಿ ಸಮೀಕ್ಷೆ ನಡೆಸಲಾಯಿತು. ಮೊದಲಿಗೆ ಕೈಗೊಂಡಿದ್ದ ಸಮೀಕ್ಷೆ ತಪ್ಪಾಗಿರುವುದನ್ನು ಅರಿತುಕೊಂಡು, ಮೆಡಿಟೆರಿಯನ್-ಕೆಂಪು ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸಲು ಸಾಧ್ಯ ಎಂಬ ತೀರ್ಮಾನಕ್ಕೆ ಬರಲಾಯಿತು. ಸೆಪ್ಟೆಂಬರ್ 25, 1859ರಲ್ಲಿ ಕಾಲುವೆ ನಿರ್ಮಾಣ ಆರಂಭವಾಗಿ-ನವೆಂಬರ್ 17, 1869ರಲ್ಲಿ ಕಾಲುವೆ ಕೆಲಸ ಪೂರ್ಣವಾಯಿತು. ಅಂದಿನಿಂದಲೂ ಈ ಕಾಲುವೆ ಅಸ್ತಿತ್ವದಲ್ಲಿ ಇದೆ.
‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!
ಜಗತ್ತಿನಲ್ಲಿ ಜಾಗದ ಮೇಲಿನ ಹಿಡಿತಕ್ಕಾಗಿ ಎಷ್ಟೋ ಯುದ್ಧಗಳು ನಡೆದಿವೆ. ಆದರೆ ಒಂದು ಕಾಲುವೆ ವಿಚಾರಕ್ಕೆ ನಡೆದ ಹೊಡೆದಾಟವನ್ನು 'ಸೂಯೆಜ್ ಕಾಲುವೆ' ಮೊದಲ ಸ್ಥಾನದಲ್ಲಿ ಪ್ರತಿನಿಧಿಸುತ್ತದೆ. 20 ಮೇ 1882ರಲ್ಲಿ ಈಜಿಪ್ಟ್ ಮೇಲೆ ಬ್ರಿಟನ್ ದಾಳಿ ನಡೆಸಿದ್ದು ಸೇರಿದಂತೆ ಅನೇಕ ಯುದ್ಧಗಳನ್ನು ಈ ಕಾಲುವೆ ಕಂಡಿದೆ. ಹಲವು ಸಂದರ್ಭದಲ್ಲಿ ಈ ಕಾಲುವೆಯನ್ನು ಬಂದ್ ಮಾಡಲಾಗಿದೆ. ಆದರೆ ಇದೀಗ ಹಡಗು ಅಡ್ಡನಿಂತ ಪರಿಣಾಮ ಈ ಕಾಲುವೆ ಬಂದ್ ಆಗಿದೆ. ಸಾವಿರಾರು ಕೋಟಿ ವ್ಯಾಪಾರ, ವಹಿವಾಟಿಗೆ ದೊಡ್ಡ ಕಂಟಕ ಇದೀಗ ಎದುರಾಗಿದೆ.