ಈಜಿಪ್ಟ್ ಹಠಮಾರಿ ಧೋರಣೆ, ಭಾರತೀಯರಿಗೆ ಎದುರಾಯ್ತು ಭಾರಿ ಸಂಕಷ್ಟ
ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ ಅನ್ನೋ ಹಾಗೆ, ಸುಯೆಜ್ ಕಾಲುವೆಯಲ್ಲಿ ಸಿಲುಕಿ ಒದ್ದಾಡಿ ಹೊರಗೆ ಬಂದರೂ ಎವರ್ ಗಿವನ್ ಹಡಗಿನ ಗ್ರಹಚಾರ ನೆಟ್ಟಗಾಗಿಲ್ಲ. ಹೌದು ಸುಮಾರು 6 ದಿನಗಳ ಕಾಲ ಸೂಯೆಜ್ ಕಾಲುವೆ ಓಡಾಟವನ್ನೇ ಬಂದ್ ಮಾಡಿದ್ದ ತಪ್ಪಿಗೆ 'ಎವರ್ ಗಿವನ್'ಗೆ 7 ಸಾವಿರ ಕೋಟಿ ದಂಡ ಕಟ್ಟಲು 'ಸೂಯೆಜ್ ಕಾಲುವೆ ಪ್ರಾಧಿಕಾರ' ಆದೇಶ ನೀಡಿತ್ತು. ಆದರೆ ದಂಡದ ಮೊತ್ತ ಇನ್ನೂ ಕಟ್ಟಿಲ್ಲ ಎಂಬ ಕಾರಣಕ್ಕೆ ಎವರ್ ಗಿವನ್ ಹಡಗನ್ನು ತನ್ನ ವಶದಲ್ಲಿ ಇಟ್ಟುಕೊಂಡಿದೆ ಈಜಿಪ್ಟ್ ಸರ್ಕಾರ.
2 ಲಕ್ಷ 24 ಸಾವಿರ ಟನ್ ಭಾರ ಹೊತ್ತಿದ್ದ ಎವರ್ ಗಿವನ್ ಹಡಗು, ಸೂಯೆಜ್ ಕಾಲುವೆ ಮೇಲೆ ಸಂಚರಿಸುವಾಗ ಭೀಕರ ಮರಳು ಮಿಶ್ರಿತ ಬಿರುಗಾಳಿ ಎದ್ದಿತ್ತು. ಮರಳಿನ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ನಾವಿಕ ನೇರವಾಗಿ ಹಡಗನ್ನ ಕಾಲುವೆಯ ಬದಿಗೆ ಹೊರಳಿಸಿದ್ದ.
ಅಂತೂ ಕ್ಲಿಯರ್ ಆಯ್ತು ಟ್ರಾಫಿಕ್..! 500 ಹಡಗುಗಳಿಗೆ ಬಿಡುಗಡೆ ಭಾಗ್ಯ..!
ಹಡಗು ಮರಳಿನ ಮೇಲೆ ನಿಂತುಬಿಟ್ಟಿತ್ತು ಹೀಗಾಗಿ 1 ವಾರ 400ಕ್ಕೂ ಹೆಚ್ಚು ಹಡಗುಗಳು ಸೂಯೆಜ್ ಕಾಲುವೆಯ ಒಳಗೆ ಮತ್ತು ಹೊರಗೆ ಕಾಯುತ್ತಾ ನಿಂತಿದ್ದವು. ಇದರಿಂದ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗಿದ್ದು, 'ಎವರ್ ಗಿವನ್'ಗೆ 7 ಸಾವಿರ ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಆದರೆ ಈವರೆಗೂ ದಂಡ ಕಟ್ಟಿಲ್ಲ ಎಂದು ಹಡಗನ್ನೇ ವಶಕ್ಕೆ ಪಡೆಯಲಾಗಿದೆ.
ಭಾರತೀಯರಿಗೆ ಎದುರಾಯ್ತು ಸಂಕಷ್ಟ
ಸದ್ಯದ ಮಟ್ಟಿಗೆ ಈಜಿಪ್ಟ್ನ ಗ್ರೇಟ್ ಬಿಟ್ಟರ್ ಲೇಕ್ನಲ್ಲಿ 'ಎವರ್ ಗಿವನ್' ಠಿಕಾಣಿ ಹೂಡಿದೆ. ಮತ್ತೊಂದು ಆಘಾತಕಾರಿ ವಿಚಾರ ಎಂದರೆ ಈ ಹಡಗಿನಲ್ಲಿ 25ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿ ಇದ್ದಾರೆ. ಹೀಗಾಗಿಯೇ ಅವರಿಗೆ ಭಾರಿ ಸಂಕಷ್ಟ ಎದುರಾಗಿದೆ. ಮತ್ತೊಂದ್ಕಡೆ ತನಿಖೆ ಪೂರ್ಣಗೊಂಡು, ಪರಿಹಾರ ಕೊಡುವವರೆಗೂ ಹಡಗನ್ನ ಬಿಡಲ್ಲ ಎಂದು ಸೂಯೆಜ್ ಕಾಲುವೆ ಪ್ರಾಧಿಕಾರ ಖಡಕ್ ಸಂದೇಶ ರವಾನಿಸಿದೆ. ಹಾಗೇ ಜಪಾನ್ ಮೂಲದ ಹಡಗಿನ ಮಾಲೀಕರು, ಸೂಯೆಜ್ ಕಾಲುವೆ ಪ್ರಾಧಿಕಾರದ ಮನವೊಲಿಸಲು ಯತ್ನಿಸುತ್ತಿದ್ದಾರೆ.
ಈಗಲೂ ಟ್ರಾಫಿಕ್, ಟ್ರಾಫಿಕ್..!
'ಎವರ್ ಗಿವನ್' ಮಾಡಿದ ಅವಾಂತರದ ಬಳಿಕ ಉಂಟಾದ ಟ್ರಾಫಿಕ್ ಜಾಮ್ ಕ್ಲಿಯರ್ ಆಗಿಲ್ಲ. ಈಗಲೂ ನೂರಾರು ಹಡಗುಗಳು ಸೂಯೆಜ್ ಕಾಲುವೆಯಲ್ಲಿ ಕಾಯುತ್ತಿವೆ. ಹೀಗಾಗಿ ಅಗತ್ಯ ವಸ್ತುಗಳು ಏಷ್ಯಾ ಹಾಗೂ ಮತ್ತಿತರ ಭಾಗಗಳಿಗೆ ತಲುಪುತ್ತಿಲ್ಲ. ಸುತ್ತಿ ಬಳಸಿ ಹೋಗಬೇಕಾದರೆ ಸುಮಾರು 10 ಸಾವಿರ ಕಿಲೋ ಮೀಟರ್ ಹೆಚ್ಚು ದೂರ ಕ್ರಮಿಸಬೇಕು. ಅನಿವಾರ್ಯವಾಗಿ ಸರಕು ಸಾಗಾಣಿಕೆ ಹಡಗುಗಳು ಕಾಯುತ್ತಾ ನಿಂತಿವೆ. ಆದರೆ ಸದ್ಯಕ್ಕೆ ಟ್ರಾಫಿಕ್ ಪೂರ್ತಿ ಕ್ಲಿಯರ್ ಆಗುವ ಸಾಧ್ಯತೆ ಕಡಿಮೆ ಇದ್ದು, ಇನ್ನೂ ಒಂದು ವಾರ ಅಗತ್ಯ ಎನ್ನುತ್ತಾರೆ ಕಾಲುವೆ ಪ್ರಾಧಿಕಾರದ ಅಧಿಕಾರಿಗಳು.
‘ಸೂಯೆಜ್ ಕಾಲುವೆ’ ನೆಪೋಲಿಯನ್ ಕನಸು
ನಿಮಗೆಲ್ಲಾ ತಿಳಿದಿರುವಂತೆ ದೇಶ ದೇಶಗಳ ನಡುವೆ ಹೆಚ್ಚಿನ ವ್ಯಾಪಾರ ಮತ್ತು ವಹಿವಾಟು ಸಮುದ್ರ ಮಾರ್ಗದ ಮೂಲಕವೇ ನಡೆಯುತ್ತದೆ. ಇದು ಪುರಾತನ ವಿಧಾನ ಕೂಡ ಆಗಿದೆ. ಹೀಗೆ ಯುರೋಪ್ ಹಾಗೂ ಏಷ್ಯಾದ ನಡುವೆ ವ್ಯಾಪಾರ ಮತ್ತು ವಹಿವಾಟು ನಡೆಯಲು ಸೂಯೆಜ್ ಕಾಲುವೆ ಅತ್ಯಗತ್ಯವಾಗಿತ್ತು. ಮೊದಲಿಗೆ ಇದರ ಕನಸು ಕಂಡವನು ಯುರೋಪಿಯನ್ನರ ಪಾಲಿಗೆ ಅನಭಿಶಕ್ತ ದೊರೆಯಾದ ನೆಪೋಲಿಯನ್ ಬೋನಾಪಾರ್ಟೆ. ಮೆಡಿಟೆರಿಯನ್ ಮತ್ತು ಕೆಂಪು ಸಮುದ್ರ ಬೆಸೆಯುವ ಕಾಲುವೆ ಎರಡು ಖಂಡಗಳನ್ನು ಒಗ್ಗೂಡಿಸುತ್ತದೆ. ಅಲ್ಲಿನ ವ್ಯಾಪಾರ ಮತ್ತು ವಹಿವಾಟಿನ ಅಗತ್ಯತೆಗಾಗಿ ಕಾಲುವೆ ನಿರ್ಮಿಸಲಾಗಿತ್ತು. ಇದೀಗ ಈಜಿಪ್ಟ್ ಸರ್ಕಾರಕ್ಕೆ ಒಟ್ಟು ವಾರ್ಷಿಕ ಆದಾಯದ ಶೇಕಡಾ 25ರಷ್ಟು ಭಾಗವನ್ನು ಇದೇ ಕಾಲುವೆ ತಂದುಕೊಡುತ್ತದೆ.
‘ಸೂಯೆಜ್ ಕಾಲುವೆ’ಗಾಗಿ ಫೈಟಿಂಗ್..!
ಜಗತ್ತಿನಲ್ಲಿ ಜಾಗದ ಮೇಲಿನ ಹಿಡಿತಕ್ಕಾಗಿ ಎಷ್ಟೋ ಯುದ್ಧಗಳು ನಡೆದಿವೆ. ಆದರೆ ಒಂದು ಕಾಲುವೆ ವಿಚಾರಕ್ಕೆ ನಡೆದ ಹೊಡೆದಾಟವನ್ನು 'ಸೂಯೆಜ್ ಕಾಲುವೆ' ಮೊದಲ ಸ್ಥಾನದಲ್ಲಿ ಪ್ರತಿನಿಧಿಸುತ್ತದೆ. 20 ಮೇ 1882ರಲ್ಲಿ ಈಜಿಪ್ಟ್ ಮೇಲೆ ಬ್ರಿಟನ್ ದಾಳಿ ನಡೆಸಿದ್ದು ಸೇರಿದಂತೆ ಅನೇಕ ಯುದ್ಧಗಳನ್ನ ಈ ಕಾಲುವೆ ಕಂಡಿದೆ. ಹಲವು ಸಂದರ್ಭದಲ್ಲಿ ಈ ಕಾಲುವೆಯನ್ನ ಬಂದ್ ಮಾಡಲಾಗಿದೆ. ಆದರೆ ಇದೀಗ ಹಡಗು ಅಡ್ಡನಿಂತ ಪರಿಣಾಮ ಈ ಕಾಲುವೆ ಬಂದ್ ಆಗಿದೆ. ಸಾವಿರಾರು ಕೋಟಿ ವ್ಯಾಪಾರ, ವಹಿವಾಟಿಗೆ ದೊಡ್ಡ ಕಂಟಕ ಇದೀಗ ಎದುರಾಗಿದೆ.