ತೈವಾನ್ ಯುವಕನ ದಂತದಲ್ಲಿ ಕಂಡುಬಂದಿದ್ದೇನು?
ತೈಪೆ, ಜೂ. 30: ಹಲ್ಲು ನೋವು ಯಾಕೆ ಬರುತ್ತದೆ? ಸರಳ ಉತ್ತರ ಹೇಳುವುದು ಕಷ್ಟ. ಹಲ್ಲಿನಲ್ಲಿ ಹುಳುಕು ಬಿದ್ದರೆಂತೂ ಯಮಯಾತನೆ ಅನುಭವಿಸಿದವರಿಗೆ ಅದರ ಸಂಕಷ್ಟ ಗೊತ್ತು. ಶೆ. 95 ರಷ್ಟು ಜನ ಜೀವನದಲ್ಲಿ ಒಮ್ಮೆಯಾದರೂ ದಂತ ಸಮಸ್ಯೆಗೆ ಗುರಿಯಾಗುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತವೆ.
ಹಲ್ಲು ನೋವು ತಾಳಲಾರದೇ ರೋಗಿಯೊಬ್ಬ ದಂತ ವೈದ್ಯರ ಬಳಿ ಬರುತ್ತಾನೆ. ಆತನ ದವಡೆಯನ್ನು ಪರೀಕ್ಷಿಸದಾಗ ವೈದ್ಯ ನಿಜಕ್ಕೂ ದಿಗಿಲು ಬೀಳುತ್ತಾನೆ. ಕೆಟ್ಟು ಹೋಗಿದ್ದ ದವಡೆಯ ಹಲ್ಲಿನ ಒಳಗೆ ಸೀಬೆ ಹಣ್ಣಿನ ಮೊಳಕೆಯೊಂದು ಒಡೆದಿದ್ದು ಅಲ್ಲೇ ಸಸ್ಯವಾಗಿ ಬೆಳೆಯಲು ತಯಾರಿ ನಡೆಸಿದ್ದು ಕಂಡುಬರುತ್ತದೆ.[ಖಾಸಗಿ ಆಸ್ಪತ್ರೆ ಪ್ರಯೋಗಕ್ಕೆ ಸಿಲುಕಿದ ಮಗುವಿನ ಕತೆ]
ಇದು ನಡೆದಿದ್ದು ತೈಪೆಯಲ್ಲಿ. ಮೇಲಿನ ದವಡೆಯ ಬುದ್ಧಿ ಹಲ್ಲಿನ ಒಳಗಡೆ ಸೀಬೆ ಬೀಜ ಮೊಳಕೆ ಒಡೆದಿತ್ತು. ಕೆಳಗಿನ ದವಡೆಯಲ್ಲಿ ಬುದ್ಧಿ ಹಲ್ಲು ಇಲ್ಲವಾದ್ದರಿಂದ ಸೀಬೆ ಬೀಜ ಹುಲುಸಾಗಿ ಮೊಳಕೆ ಒಡೆಯಲು ಸಾಧ್ಯವಾಯಿತು ಎಂದು ದಂತ ವೈದ್ಯರು ತಿಳಿಸಿದ್ದಾರೆ.
2011 ರಲ್ಲೇ ನಡೆದ ಪ್ರಕರಣ ಇದೀಗ ಮಾಧ್ಯಮಗಳ ಗಮನಕ್ಕೆ ಬಂದಿದೆ. ಮೊಳಕೆಯನ್ನು ಗಮನಿಸಿದ ವೈದ್ಯರು ತಮ್ಮ ಸಹೋದ್ಯೋಗಿಗಳನ್ನು ಕರೆದು ತೋರಿಸುತ್ತಾರೆ, ಇದರಿಂದ ಅವಮಾನಕ್ಕೆ ಸಿಕ್ಕಂತಾದ ವ್ಯಕ್ತಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಹಲ್ಲಿನ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಸಹ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದ್ದು 85 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.