ರಾಜಧಾನಿ ತಲುಪಿದ ಇಮ್ರಾನ್ ವಿರುದ್ದದ 'ಆಜಾದಿ ಮಾರ್ಚ್': ಅರಾಜಕತೆಯತ್ತ ಪಾಕಿಸ್ತಾನ
ಇಸ್ಲಾಮಾಬಾದ್, ನ 2: ತೆಹ್ರಿಕ್ - ಇ -ಇನ್ಸಾಫ್ ಪಕ್ಷದ ಮುಖ್ಯಸ್ಥ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ದದ ಹೋರಾಟ, ನಿರ್ಣಾಯಕ ಹಂತ ಬಂದು ತಲುಪಿದೆ.
"ಅವರಾಗಿಯೇ ರಾಜೀನಾಮೆ ನೀಡಿದರೆ ಸೂಕ್ತ, ಇಲ್ಲದಿದ್ದರೆ, ದೇಶದಲ್ಲಿ ಉಂಟಾಗುವ ಅರಾಜಕತೆ, ಅವ್ಯವಸ್ಥೆಗೆ ನಾವು ಹೊಣೆಗಾರರಲ್ಲ" ಎನ್ನುವ ಸಂದೇಶವನ್ನು ಮೌಲಾನ ಫಹ್ಲೂರ್ ರೆಹಮಾನ್ ನೀಡಿದ್ದಾರೆ.
"ಭ್ರಷ್ಟಾಚಾರ ಎನ್ನುವುದು ಇಮ್ರಾನ್ ಖಾನ್ ಸರಕಾರದಲ್ಲಿ ತಾಂಡವಾಡುತ್ತಿದೆ. ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆ ಇಮ್ರಾನ್ ಖಾನ್ ಗೆ ಇಲ್ಲ" ಎಂದು ಮೌಲಾನಾ ಹೇಳಿದ್ದಾರೆಂದು ಡಾನ್ ವರದಿ ಮಾಡಿದೆ.
ಆಜಾದಿ ಮಾರ್ಚ್ಗೆ ಹೆದರಿ ರಾಜೀನಾಮೆ ನೀಡುವಂಥ ಹೇಡಿಯಲ್ಲ: ಇಮ್ರಾನ್ ಖಾನ್
ಇಮ್ರಾನ್ ಖಾನ್ ಸರಕಾರವನ್ನು ಕಿತ್ತೊಗೆಯಲು ಸ್ವಾತಂತ್ರ್ಯ ಮೆರವಣಿಗೆ (ಆಜಾದಿ ಮಾರ್ಚ್) ರಾಜಧಾನಿ ಇಸ್ಲಾಮಾಬಾದ್ ಗೆ ಒಂದು ದಿನದ ಹಿಂದೆ ತಲುಪಿದ್ದು, ಇದು ಬೇರೆ ಬೇರೆ ಆಯಾಮಗಳಲ್ಲಿ ತಿರುವು ಪಡೆಯುವ ಸಾಧ್ಯತೆಯಿದೆ. ಏನಿದು ಸ್ವಾತಂತ್ರ್ಯ ಮೆರವಣಿಗೆ? ಮುಂದೆ ಓದಿ
ಮೌಲಾನ ಫಹ್ಲೂರ್ ರೆಹಮಾನ್
ಪಾಕಿಸ್ತಾನದ ಬಲಪಂಥೀಯ ಸಂಘಟನೆಯಾದ ಜಮಾತ್-ಉಲೆಮಾ-ಇ-ಇಸ್ಲಾಂ ಫಜಲ್ ಮುಖ್ಯಸ್ಥ ಮೌಲಾನ ಫಹ್ಲೂರ್ ರೆಹಮಾನ್, ದೇಶದಲ್ಲಿನ ಪ್ರಭಾವೀ ವ್ಯಕ್ತಿಗಳಲೂಬ್ಬರು. ಇವರು, ಅಕ್ಟೋಬರ್ 27ರಂದು ಸಿಂಧ್ ದಕ್ಷಿಣ ಪ್ರಾಂತ್ಯದಿಂದ, ಆಜಾದಿ ಮಾರ್ಚ್ ಗೆ (ಸ್ವಾತಂತ್ರ್ಯ ಮೆರವಣಿಗೆ) ಚಾಲನೆ ನೀಡಿದ್ದರು.
ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನಿಯತ್ತಾಗಿ ಗೆದ್ದಿಲ್ಲ
"2018ರ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನಿಯತ್ತಾಗಿ ಗೆದ್ದಿಲ್ಲ. ವ್ಯಾಪಕ ಅಕ್ರಮ ಚುನಾವಣೆಯಲ್ಲಿ ನಡೆದಿದೆ. ಹಾಗಾಗಿ, ಇಮ್ರಾನ್ ಖಾನ್ ಈ ಕೂಡಲೇ ರಾಜೀನಾಮೆ ನೀಡಬೇಕೆನ್ನುವ" ಏಕಮೇವ ಆಗ್ರಹದೊಂದಿಗೆ ಈ ಆಜಾದಿ ಮಾರ್ಚ್ ಗೆ ಮೌಲಾನ ಚಾಲನೆ ನೀಡಿದ್ದರು.
ಆಜಾದಿ ಮಾರ್ಚ್ ಗೆ ಪಾಕಿಸ್ತಾನದಾದ್ಯಂತ ವ್ಯಾಪಕ ಬೆಂಬಲ
ಗಮನಿಸಬೇಕಾದ ವಿಚಾರವೇನಂದರೆ, ಆಜಾದಿ ಮಾರ್ಚ್ ಗೆ ಪಾಕಿಸ್ತಾನದಾದ್ಯಂತ ವ್ಯಾಪಕ ಬೆಂಬಲ ವ್ಯಕವಾಗುತ್ತಿದೆ. ಸುಕ್ಕೂರು, ಮುಲ್ತಾನ್, ಲಾಹೋರ್, ಗುಜ್ರನವಾಲಾ ಮೂಲಕ, ಈ ಮೆರವಣಿಗೆ ರಾಜಧಾನಿ ಇಸ್ಲಾಮಾಬಾದ್ ಗೆ ತಲುಪಿದೆ. ರಾಜಧಾನಿಗೆ ಬರುತ್ತಿದ್ದಂತೆಯೇ, ಇಮ್ರಾನ್ ರಾಜೀನಾಮೆ ನೀಡದಿದ್ದರೆ, ದೇಶದಲ್ಲಿ ಮುಂದಾಗುವ ಅರಾಜಕತೆಗೆ ನಾವು ಕಾರಣರಲ್ಲ ಎನ್ನುವ ಎಚ್ಚರಿಕೆಯನ್ನು ಮೌಲಾನ ರೆಹಮಾನ್ ನೀಡಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್, ಪಾಕಿಸ್ತಾನ ಪೀಪಲ್ಸ್ ಪಾರ್ಟಿ
ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್ ಷರೀಫ್) ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಬಿಲಾವಲ್ ಜರ್ದಾರಿ) ಈ ಆಜಾದಿ ಮಾರ್ಚ್ ಗೆ ಬೆಂಬಲ ನೀಡಿರುವುದರಿಂದ, ಮೌಲಾನ ರೆಹಮಾನ್ ಹೋರಾಟಕ್ಕೆ ಆನೆಬಲ ಬಂದಂತಾಗಿದೆ. ಈ ಮೆರವಣಿಗೆಯ ಸಮಾರೋಪಕ್ಕೆ, ಪೇಷಾವರದ ಬಳಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಬೆಂಬಲಿಗರು ಜಮಾಯಿಸುತ್ತಿದ್ದಾರೆಂದು, ಆಜ್ ಮತ್ತು ಡಾನ್ ವಾಹಿನಿಗಳು ವರದಿ ಮಾಡಿದೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್, ರಾಜಧಾನಿ ಇಸ್ಲಾಮಾಬಾದ್ ನಗರವನ್ನು ರೆಡ್ ಝೋನ್ ಎಂದು ಘೋಷಿಸಿದೆ. ಪಾರ್ಲಿಮೆಂಟ್, ಸುಪ್ರೀಂಕೋರ್ಟ್, ವಿದೇಶಾಂಗ ಸಚಿವಾಲಯ, ಪಾಕಿಸ್ತಾನ ಸರಕಾರ ಸ್ವಾಮ್ಯದ ಟಿವಿ, ರೆಡಿಯೋ ಕಚೇರಿಗಳಿಗೆ ಭಾರೀ ಭದ್ರತೆಯನ್ನು ಒದಗಿಸಿದೆ. "ಆಜಾದಿ ಮಾರ್ಚ್ ಗೆ ಹೆದರಿ ರಾಜೀನಾಮೆ ನೀಡುವ ಹೇಡಿ ನಾನಲ್ಲ" ಎಂದು ಇಮ್ರಾನ್ ಖಾನ್ ಈಗಾಗಲೇ ಹೇಳಿಯಾಗಿದೆ.