ಜಲ ಪ್ರಳಯಕ್ಕೆ ತತ್ತರಿಸಿದ ದ್ವೀಪರಾಷ್ಟ್ರ ಶ್ರೀಲಂಕಾ
ಕೊಲಂಬೋ, ಜೂನ್ 07: ಶ್ರೀಲಂಕಾದ ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಾವಿರಾರು ಮಂದಿ ಮನೆ ತೊರೆಯುವಂತೆ ಮಾಡಿದೆ. ಕನಿಷ್ಠ 17 ಮಂದಿ ಮೃತಪಟ್ಟಿರುವ ವರದಿ ಬಂದಿದೆ.
ಕೊರೊನಾವೈರಸ್ ದೆಸೆಯಿಂದ ದ್ವೀಪರಾಷ್ಟ್ರ ಶ್ರೀಲಂಕಾದ ಪ್ರವಾಸೋದ್ಯಮಕ್ಕೆ ಭಾರಿ ಕುತ್ತುಂಟಾಗಿದೆ. ಈ ನಡುವೆ ಹವಾಮಾನ ವೈಪರೀತ್ಯದಿಂದಾಗಿ ಪ್ರವಾಸಿ ಕೇಂದ್ರಗಳು ಬಂದ್ ಆಗಿವೆ. ಕಳೆದ ವಾರಾಂತ್ಯದಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಸೋಮವಾರದಂದು ಭಾರಿ ಅನಾಹುತ ಸೃಷ್ಟಿಸಿದೆ.
ಕೊಲಂಬೋದಿಂದ 85 ಕಿ.ಮೀ ದೂರದಲ್ಲಿರುವ ಕೆಗಾಲ್ಲೆ ಜಿಲ್ಲೆಯಲ್ಲಿ ಶನಿವಾರದಂದು ಸಂಭವಿಸಿದ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಭಾರಿ ಮಳೆಗೆ ಮನೆ ಕುಸಿದಿದ್ದು, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುಮಾರು 2,70, 000ಕ್ಕೂ ಅಧಿಕ ಮಂದಿ ನೇರವಾಗಿ ಪ್ರವಾಹದಿಂದ ತತ್ತರಿಸುತ್ತಿದ್ದಾರೆ, ಸುಮಾರು 1,00,000 ಕಟ್ಟಡಗಳ ವಿದ್ಯುತ್ ಕಡಿತಗೊಂಡಿದೆ, ಹಲವು ಕಟ್ಟಡಗಳು ಭಾಗಶಃ ಜಖಂಗೊಂಡಿವೆ ಎಂದು ಶ್ರೀಲಂಕಾದ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
ಹವಾಮಾನ ಇಲಾಖೆಯ ಪ್ರಕಾರ, ನಿರೀಕ್ಷೆಗೂ ಮುನ್ನವೇ ಭಾರಿ ಮಳೆ ಸುರಿದಿದ್ದು ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳು ಕೈಗೊಳ್ಳುವ ಮೊದಲೆ ಮಳೆ ಹೊಡೆತ ಸಿಲುಕಿಕೊಂಡ ಪರಿಸ್ಥಿತಿ ಎದುರಾಗಿದೆ. 25 ಟನ್ ಗಳಷ್ಟು ನೈಟ್ರಿಕ್ ಆಮ್ಲ ಹಾಗೂ ಪ್ಲಾಸ್ಟಿಕ್ ಹೊತ್ತೊಯ್ಯುತ್ತಿದ್ದ ಹಡಗೊಂದು ಇತ್ತೀಚೆಗೆ ಬೆಂಕಿಗೆ ಆಹುತಿಯಾಗಿ, ಮುಳುಗಿದ ಘಟನೆ ನಡೆದಿತ್ತು. ಇದಾದ ಬಳಿಕ ಭಾರಿ ಮಳೆ, ಜಲ ಪ್ರಳಯದ ಭೀತಿ ಎದುರಾಗಿದೆ. (Reuters, AP)