ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ಗೆ ನೀಡಿದ್ದ ಗಡುವು ಅಂತ್ಯ, ಖಾನ್ ಏನಂತಾರೆ?
Recommended Video
ಇಸ್ಲಾಮಾಬಾದ್, ನವೆಂಬರ್ 5: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರತಿಭಟನೆ ಮುಂದುವರೆದಿದ್ದು, ಅವರಿಗೆ ಕೊಟ್ಟಿದ್ದ ಗಡುವು ಕೂಡ ಮುಕ್ತಾಯಗೊಂಡಿದೆ.
ಇಮ್ರಾನ್ ಖಾನ್ ರಾಜೀನಾಮೆ ನೀಡಲು ಮೌಲಾನಾ ಪಜ್ಲೂರ್ ರಜಮಾನ್ ನೀಡಿದ್ದ ಗಡುವು ಭಾನುವಾರಕ್ಕೇ ಮುಗಿದಿದೆ. ಮುಂದಿನ ಯೋಜನೆ ರೂಪಿಸಲು ಸರ್ವ ಪಕ್ಷ ಸಭೆ ಕರೆದಿದ್ದಾರೆ.
ರಾಜಧಾನಿ ತಲುಪಿದ ಇಮ್ರಾನ್ ವಿರುದ್ದದ 'ಆಜಾದಿ ಮಾರ್ಚ್': ಅರಾಜಕತೆಯತ್ತ ಪಾಕಿಸ್ತಾನ
ಇಸ್ಲಾಮಾಬಾದ್ನಲ್ಲಿ ಆಜಾದಿ ಮಾರ್ಚ್ ಮುನ್ನಡೆಸುತ್ತಿರುವ ಜೆಯುಐ-ಎಫ್ ನಾಯಕ, ಮೌಲಾನಾ ಫಜ್ಲೂರ್ ರಹಮಾನ್ , ಇಮ್ರಾನ್ ಖಾನ್ ಸರ್ಕಾರವನ್ನು ಉಚ್ಛಾಟಿಸುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ರಹಮಾನ್ ಸರ್ವ ಪಕ್ಷ ಸಭೆ
ವಿರೋಧ ಪಕ್ಷಗಳ ಮುಖಂಡರೊಂದಿಗೆ ಭವಿಷ್ಯದ ಕ್ರಮಗಳ ಬಗ್ಗೆ ಚರ್ಚಿಸಲು ಜಿಯುಐ-ಎಫ್ ಸರ್ವಪಕ್ಷ ಸಭೆ ಕರೆದಿದೆ. ರಹಮಾನ್ ಅವರ ಈ ಪ್ರತಿಭಟನೆಗೆ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ , ಪಾಕಿಸ್ತಾನ ಪೀಪಲ್ಸ್ ಪಾರ್ಟಿ , ಕೌಮಿ ವತನ್ ಪಾರ್ಟಿ , ನ್ಯಾಷನಲ್ ಪಾರ್ಟಿ ಬೆಂಬಲ ನೀಡಿವೆ. ಆದರೆ ಪಿಪಿಪಿ ಮುಖ್ಯಸ್ಥ ಬಿಲಾವಾಲ್ ಬುಟ್ಟೋ ಜರ್ದಾರಿ, ಮತ್ತು ಪಿಎಂಎಲ್ -ಎನ್ ಮುಖ್ಯಸ್ಥ ಶಹಬಾಸ್ ಷರೀಫ್ ಅವರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂಟರ್ ಪೋಲ್ ಮುಂದೆ ಅವಮಾನ
ಇಮ್ರಾನ್ ಖಾನ್ ಸರ್ಕಾರವು ಈಗ ಇಂಟರ್ಪೋಲ್ ಮುಂದೆಯೇ ಮುಜುಗರ ಎದುರಿಸಬೇಕಾಗಿದೆ. ಮಾಜಿ ಹಣಕಾಸು ಸಚಿವ ಐಸಾಕ್ ದಾರ್ ವಿರುದ್ಧ ಪಾಕಿಸ್ತಾನ ರೆಡ್ ಕಾರ್ನರ್ ನೋಟಿಸ್ ನೀಡಿತ್ತು. ಆದರೆ ಇಂಟರ್ ಪೋಲ್ ಅದನ್ನು ತಿರಸ್ಕರಿಸಿದೆ. ಲಂಡನ್ ಮೂಲದ ದಾರ್ ಅವರನ್ನು ಮತ್ತೆ ಪಾಕಿಸ್ತಾನಕ್ಕೆ ಕರೆತರಲು ಸೂಚಿಸಿದ್ದರು.
ಡೇಂಜರ್ ಜೋನ್ಗೆ ಭದ್ರತೆ
ಪ್ರಧಾನಮಂತ್ರಿ ರಾಜೀನಾಮೆ ಹೊರತುಪಡಿಸಿ , ಇಮ್ರಾನ್ ಖಾನ್ ಸರ್ಕಾರವು ವಿರೋಧ ಪಕ್ಷಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಹಾಗೆ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಮುಳ್ಳುತಂತಿಗಳನ್ನು ಹಾಕುವ ಮೂಲಕ ಮುಖ್ಯರಸ್ತೆಗಳ ಮೂಲಕ ಸಂಚಾರವನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಪ್ರವೇಶ ಕೇಂದ್ರಗಳನ್ನು ನಿರ್ಬಂಧಿಸುವ ಮೂಲಕ ಡೇಂಜರ್ ಜೋನ್ನಲ್ಲಿ ಪ್ರಮುಖ ಕಟ್ಟಡಗಳು ಮತ್ತು ರಾಜತಾಂತ್ರಿಕ ಕಚೇರಿಗಳನ್ನು ಭದ್ರಪಡಿಸಲಾಗಿದೆ.
ರಾಜೀನಾಮೆ ಬಗ್ಗೆ ಇಮ್ರಾನ್ ಖಾನ್ ಏನಂತಾರೆ?
ನಾನು ಯಾವುದೇ ಕಾರಣಕ್ಕೂ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಇದು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿನಲ್ಲಿರುವ ಪಿಎಂಎಲ್-ಎನ್ ಮತ್ತು ಪಿಪಿಪಿ ನಾಯಕರ ಬಿಡುಗಡೆ ಮಾಡಿಕೊಳ್ಳಲು ನಡೆಸುತ್ತಿರುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.