ಮಾಟ-ಮಂತ್ರದಿಂದ ಕೊರೊನಾವೈರಸ್ ತೊಲಗಿಸಿ ಎಂದ ಸಚಿವೆಯ ಖಾತೆ ಬದಲು!
ಕೊಲಂಬೋ, ಆಗಸ್ಟ್ 17: ಕೊರೊನಾವೈರಸ್ ಸೋಂಕಿನಿಂದ ಮುಕ್ತವಾಗಲು ಇಡೀ ಜಗತ್ತು ಎದುರು ನೋಡುತ್ತಿದೆ. ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕಾಗಿ ಔಷಧಿ, ಲಸಿಕೆ, ವೈದ್ಯಕೀಯ ವ್ಯವಸ್ಥೆಗಳ ಸುಧಾರಣೆಗಳ ಜೊತೆಗೆ ಸಂಶೋಧನೆ ಮತ್ತು ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಆದರೆ ಶ್ರೀಲಂಕಾದ ಆರೋಗ್ಯ ಸಚಿವರು ಮಾತ್ರ ಇದೆಲ್ಲಕ್ಕಿಂತ ಭಿನ್ನವಾಗಿ ಯೋಚಿಸಿದ್ದಾರೆ.
ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಶ್ರೀಲಂಕಾದಲ್ಲಿ ಕೊರೊನಾವೈರಸ್ ಸೋಂಕಿನ ಹಾವಳಿ ಅಷ್ಟಾಗಿಲ್ಲ. ದೇಶದಲ್ಲಿ ಈವರೆಗೂ 3,62,074 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ 6,263 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 3,12,057 ಸೋಂಕಿತರು ಗುಣಮುಖರಾಗಿದ್ದು, 43,754 ಸಕ್ರಿಯ ಪ್ರಕರಣಗಳಿವೆ ಎಂದು ಗೊತ್ತಾಗಿದೆ. ಈ ಪಿಡುಗಿನ ನಡುವೆ ಶ್ರೀಲಂಕಾದಲ್ಲಿ ಆರೋಗ್ಯ ಸಚಿವರು ಮಾಡಿರುವ ಎಡವಟ್ಟಿಗೆ ಅಚ್ಚರಿ ಮೂಡಿಸುವಂತಾ ರಾಜಕೀಯ ಬೆಳವಣಿಗೆಯೊಂದು ನಡೆದಿದೆ.
ಡೆಲ್ಟಾ ಉಲ್ಬಣ: ಚೀನಾ ಸೇರಿ ವಿದೇಶಗಳಲ್ಲಿ ಹೇಗಿದೆ ಕೋವಿಡ್ ಪರಿಸ್ಥಿತಿ?
ಶ್ರೀಲಂಕಾದಲ್ಲಿ ಕೊವಿಡ್-19 ಸೋಂಕಿನಿಂದ ಮುಕ್ತರಾಗಲು ವಾಮಾಚಾರ, ಮಾಟ-ಮಂತ್ರಗಳಿಗೆ ಅನುಮೋದನೆ ನೀಡಿದ ಆರೋಗ್ಯ ಸಚಿವೆ ಪವಿತ್ರಾ ವನ್ನಿಅರಾಚ್ಚಿ ಅವರನ್ನು ಸೋಮವಾರ ಶ್ರೀಲಂಕಾದ ಅಧ್ಯಕ್ಷ ಗೋತಬಯಾ ರಾಜಪಕ್ಸೆ ಅಧಿಕಾರದಿಂದ ಅಮಾನತುಗೊಳಿಸಿದ್ದಾರೆ. ಆರೋಗ್ಯ ಸಚಿವರಾಗಿದ್ದ ಪವಿತ್ರಾ ವನ್ನಿಅರಾಚ್ಛಿ ವಾಮಾಚಾರ ಮತ್ತು ಮಾಟ-ಮಂತ್ರಗಳಿಗೆ ಅನುಮೋದನೆ ನೀಡಿದ ವೈಖರಿ ಹೇಗಿದೆ?, ಅಸಲಿಗೆ ಶ್ರೀಲಂಕಾದಲ್ಲಿ ಕೊವಿಡ್-19 ಪರಿಸ್ಥಿತಿ ಅಷ್ಟು ಕೆಟ್ಟದಾಗಿದೆಯಾ?, ಆರೋಗ್ಯ ಸಚಿವ ಸ್ಥಾನವನ್ನು ಕಳೆದುಕೊಳ್ಳುವಂತಾ ನಿರ್ಧಾರವನ್ನು ಮಾಡಿದ್ದಾದರೂ ಏಕೆ?, ಪವಿತ್ರ ವನ್ನಿಅರಾಚ್ಛಿ ಆದೇಶದ ಬಗ್ಗೆ ಶ್ರೀಲಂಕಾ ಅಧ್ಯಕ್ಷರು ಹೇಳುವುದೇನು? ಹಾಗೂ ಶ್ರೀಲಂಕಾದ ಹೊಸ ಆರೋಗ್ಯ ಸಚಿವರು ಯಾರು? ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.
ಮ್ಯಾಜಿಕ್ ಮದ್ದು ಸೇವಿಸಿದ ಆರೋಗ್ಯ ಸಚಿವೆ
ಶ್ರೀಲಂಕಾದಲ್ಲಿ ಕೊರೊನಾವೈರಸ್ ಸೋಂಕಿನಿಂದ ಸುರಕ್ಷಿತವಾಗಿರಲು ಮಾಂತ್ರಿಕನು ತಯಾರಿಸಿದ 'ಮ್ಯಾಜಿಕ್ ಮದ್ದು' ಸೇವಿಸುವುದಕ್ಕೆ ಸಾರ್ವಜನಿಕವಾಗಿ ಆರೋಗ್ಯ ಸಚಿವೆ ಪವಿತ್ರಾ ವನ್ನಿಅರಾಚ್ಛಿ ಅನುಮೋದನೆ ನೀಡಿದ್ದರು. ವಿಪರ್ಯಾಸ ಎಂದರೆ ಅದೇ ಮ್ಯಾಜಿಕ್ ಮದ್ದು ಸೇವಿಸಿದ ಆರೋಗ್ಯ ಸಚಿವೆ ಕಳೆದ ಜನವರಿ ತಿಂಗಳಿನಲ್ಲಿ ಕೊವಿಡ್-19 ಸೋಂಕಿನಿಂದಾಗಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಶ್ರೀಲಂಕಾದ ನದಿಗೆ ಆಶೀರ್ವಾದದ ನೀರು ಸುರಿದ ಸಚಿವೆ
21 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ದ್ವೀಪರಾಷ್ಟ್ರವನ್ನು ಕೊರೊನಾವೈರಸ್ ಸೋಂಕಿನಿಂದ ಪಾರು ಮಾಡುವುದಕ್ಕೆ ಆರೋಗ್ಯ ಸಚಿವೆ ಪವಿತ್ರಾ ವನ್ನಿಅರಾಚ್ಛಿ ತೆಗೆದುಕೊಂಡ ವಿಭಿನ್ನ ಹಾಗೂ ವಿಚಿತ್ರ ಕ್ರಮಗಳು ಒಂದು ಎರಡಲ್ಲ. ಮಾಟ-ಮಂತ್ರಗಳಿಂದ ನೀಡಿದ ಔಷಧಿ ತೆಗೆದುಕೊಳ್ಳುವುದಕ್ಕೆ ಒಂದು ಕಡೆಯಲ್ಲಿ ಅನುಮೋದನೆ ನೀಡಿದ್ದರು. ಇನ್ನೊಂದು ಕಡೆಯಲ್ಲಿ ಸ್ವಯಂ-ಘೋಷಿತ ದೇವಮಾನವ ನೀಡಿದ ಮಂತ್ರದ ನೀರನ್ನು ಸ್ವತಃ ಆರೋಗ್ಯ ಸಚಿವೆಯೇ ನದಿಗೆ ಸುರಿದು ಸುದ್ದಿ ಆಗಿದ್ದರು.
ಆರೋಗ್ಯದ ಬಗ್ಗೆ ಅರ್ಥ ಮಾಡಿಕೊಳ್ಳದ ಸಚಿವೆಗೆ ಸಾರಿಗೆ ಖಾತೆ
ಶ್ರೀಲಂಕಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳದ ಆರೋಗ್ಯ ಸಚಿವೆ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಆರೋಗ್ಯ ಸಚಿವರಾಗಿ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಹಾಗೂ ಮಾಟ-ಮಂತ್ರಗಳ ಪರಿಕಲ್ಪನೆಯನ್ನು ಹುಟ್ಟುಹಾಕಿದ ಹೊರತಾಗಿಯೂ ಪವಿತ್ರಾ ವನ್ನಿಅರಾಚ್ಛಿ ಅವರನ್ನು ಸಂಪುಟದಲ್ಲೇ ಉಳಿಸಿಕೊಳ್ಳಲಾಗಿದೆ. ಆರೋಗ್ಯ ಸಚಿವ ಸ್ಥಾನದ ಬದಲಿಗೆ ಸಾರಿಗೆ ಖಾತೆಯನ್ನು ನೀಡಲಾಗಿದೆ. ಆರೋಗ್ಯ ಖಾತೆ ಹೊಣೆಯನ್ನು ಸಚಿವ ಕೆಹೆಲಿಯಾ ರಂಬುಕ್ ವೆಲ್ಲಾರಿಗೆ ವಹಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಜವಾಬ್ದಾರಿಯನ್ನು ಪ್ರಧಾನಮಂತ್ರಿ ರಾಜಪಕ್ಸೆ ಪುತ್ರ ಹಾಗೂ ಕ್ರೀಡಾ ಸಚಿವರಾದ ನಮಲ್ ರಾಜಪಕ್ಸಾರಿಗೆ ನೀಡಲಾಗಿದೆ.
ದ್ವೀಪರಾಷ್ಟ್ರದಲ್ಲಿ ಕೊರೊನಾವೈರಸ್ ಪರಿಸ್ಥಿತಿ ಹೇಗಿದೆ?
ಜಗತ್ತಿನಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ರೂಪಾಂತರ ಅಲೆಗಳ ಆಟ ಶುರುವಾಗಿದೆ. ಇದರ ಬೆನ್ನಲ್ಲೇ ಶ್ರೀಲಂಕಾದಲ್ಲೂ ಪರಿಸ್ಥಿತಿ ಹದಗೆಡುತ್ತಿದೆ. ಕಳೆದ ಒಂದು ವಾರದಲ್ಲಿ ಪ್ರತಿನಿತ್ಯ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಡುತ್ತಿರುವವರ ಸಂಖ್ಯೆ 150ಕ್ಕಿಂತ ಹೆಚ್ಚುತ್ತಿದೆ. ಪ್ರತಿನಿತ್ಯ 3,000ಕ್ಕಿಂತ ಹೆಚ್ಚು ಹೊಸ ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದು, ಪ್ರಕರಣಗಳ ಸಂಖ್ಯೆಯು ಮೂರುಪಟ್ಟು ಹೆಚ್ಚಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ತಿಳಿಸಿದ್ದಾರೆ.
ಲಂಕಾದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸಲು ಶ್ರೀಲಂಕಾದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಕ್ರಮವನ್ನು ಸರ್ಕಾರ ತಿರಸ್ಕರಿಸಿದೆ. ಕಳೆದ ವಾರದಿಂದ ದೇಶದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ರಾತ್ರಿ ನಿಷೇಧಾಜ್ಞೆ ಘೋಷಿಸಲಾಗುತ್ತಿದೆ. ರಾತ್ರಿ 10 ಗಂಟೆ ವೇಳೆಗೆ ಎಲ್ಲ ಅಂಗಡಿ, ಕಚೇರಿ ಮತ್ತು ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಮಂಗಳವಾರದಿಂದ ಸಪ್ಟೆಂಬರ್ 1ರವರೆಗೂ ಮದುವೆ, ಪಾರ್ಟಿ ಮತ್ತು ಸಭೆ ಸಮಾರಂಭಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.