'ನಾವು ಮಾಡಿದ ಮೂರ್ಖತನವನ್ನು ನೀವು ಮಾಡ್ಬೇಡಿ'-ಇಟಲಿ ಪ್ರಜೆಯ ಭಾವುಕ ಪತ್ರ
ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ದಿನೇ ದಿನೇ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್-19 ಕೇಂದ್ರ ಸ್ಥಾನ ಆಗಿರುವ ಯೂರೋಪ್ ನಲ್ಲಿ 5000 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಂತೂ ಡೆಡ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಲೇ ಇದೆ.
Recommended Video
ಕಳೆದ ಒಂದು ವಾರದಿಂದ ಇಟಲಿಯಲ್ಲಿ ಸಾವಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಇಟಲಿಯೊಂದಲ್ಲೇ ಇಲ್ಲಿಯವರೆಗೆ 4,032 ಮಂದಿ ಜೀವ ಕಳೆದುಕೊಂಡಿದ್ದಾರೆ.
ಕೊರೊನಾ ರೌದ್ರನರ್ತನ: ಸಾವಿನ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಇಟಲಿ!
ಸ್ಮಶಾನದಂತಾಗಿರುವ ಇಟಲಿಯ ಪರಿಸ್ಥಿತಿ ಬಗ್ಗೆ ಇಟಲಿಯ ಪ್ರಜೆ ಬರೆದಿರುವ ಬಹಿರಂಗ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಟಲಿಯ ಪ್ರಜೆ ಬರೆದಿರುವ ಪತ್ರವನ್ನು ಕನ್ನಡಕ್ಕೆ ನೌಫಲ್ ಸಾಲ್ಮರ ಅನುವಾದಿಸಿದ್ದಾರೆ.
ಪತ್ರದಲ್ಲಿ ಇಟಲಿಯ ಪ್ರಜೆ ಏನೆಲ್ಲಾ ಬರೆದಿದ್ದಾರೆ ಅಂತ ನೀವೇ ಓದಿರಿ...
ಇದು ಪ್ರಪಂಚದ ಅಂತ್ಯ
ಎಲ್ಲರಿಗೂ ಶಾಂತಿ...
ನಾನು ಇಟಲಿಯ ಮಿಲನ್ ಎಂಬ ನಗರದಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ಈ ಕಷ್ಟದ ದಿನಗಳಲ್ಲಿ ಜೀವನ ಹೇಗಿದೆ ಎಂದು ನಾನು ನಿಮಗೆ ಹೇಳುತ್ತೇನೆ. ಏಕೆಂದರೆ ನಮ್ಮ ತಪ್ಪುಗಳಿಂದ ನೀವು ಕಲಿಯಬೇಕು ಎಂದು ನಾನು ಭಾವಿಸುತ್ತೇನೆ. ನಾವು ಮನೆಯಲ್ಲಿದ್ದೇವೆ, ಬೀದಿಗಿಳಿಯಲು ನಮಗೆ ಅನುಮತಿ ಇಲ್ಲ. ಯಾರಾದರೂ ಮನೆಯಿಂದ ಹೊರಗೆ ಹೋದರೆ ಅವರನ್ನು ಪೊಲೀಸರು ಬಂಧಿಸುತ್ತಾರೆ. ವ್ಯಾಪಾರಗಳು, ಮಾಲ್ ಗಳು ಇತ್ಯಾದಿಗಳನ್ನು ಮುಚ್ಚಲಾಗಿದೆ, ಬೀದಿಗಳು ನಿರ್ಜನವಾಗಿದೆ. ಇದು ಪ್ರಪಂಚದ ಅಂತ್ಯ ಎಂಬ ಭಾವನೆಯಾಗುತ್ತಿದೆ.
ಕರಾಳ ದೇಶವಾದ ಇಟಲಿ
ಜೀವಿಸುತ್ತಿದ್ದ ದೇಶವಾದ ಇಟಲಿ ಕೆಲವೇ ಸೆಕೆಂಡುಗಳಲ್ಲಿ ಕರಾಳ ದೇಶದಂತೆ ಮಾರ್ಪಟ್ಟಿದೆ. ಇಲ್ಲಿನ ಜನರು ದುಃಖ, ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ. ಈ ದುಃಸ್ವಪ್ನವು ಯಾವಾಗ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ. ನಾವು ಮಾಡಿದ ತಪ್ಪು ಏನೆಂದರೆ, ಇಲ್ಲಿ ರೋಗ ಪ್ರಾರಂಭವಾದಾಗ ಜನರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಅವರು ಎಂದಿನಂತೆ ಕೆಲಸಕ್ಕೆ ಹೋದರು, ಅವರು ನಗರಗಳು ಮತ್ತು ಮನರಂಜನಾ ಸ್ಥಳಗಳಿಗೆ ಪ್ರಯಾಣಿಸಿದರು. ನಾವು ರಜಾ ದಿನದಂತೆ ಆಚರಿಸಿದೆವು. ಎಲ್ಲರೂ ಅದೇ ತಪ್ಪನ್ನು ಮಾಡುತ್ತಿದ್ದರು.
ಆಸ್ಪತ್ರೆಯಲ್ಲಿ ಎಲ್ಲರಿಗೂ ಸ್ಥಳ ಇಲ್ಲ
ಅದಕ್ಕಾಗಿಯೇ ನಾನು ನಿಮಗೆ ಮನವಿ ಮಾಡುತ್ತೇನೆ. ನಿಮ್ಮ ಪ್ರೀತಿಪಾತ್ರರನ್ನು, ಪೋಷಕರು, ಅಜ್ಜ-ಅಜ್ಜಿಯರನ್ನು ರಕ್ಷಿಸಿ. ಏಕೆಂದರೆ ಈ ಅನಾರೋಗ್ಯವು ಅವರಿಗೆ ಅಪಾಯವನ್ನುಂಟು ಮಾಡುತ್ತದೆ. ಪ್ರತಿದಿನ ಜನರು ಇಲ್ಲಿ ಸಾಯುತ್ತಿದ್ದಾರೆ. ಉತ್ತಮ ಔಷಧವಿಲ್ಲದ ಕಾರಣ ಅಲ್ಲ (ಮಿಲನ್ನಲ್ಲಿರುವ ಆಸ್ಪತ್ರೆ ವಿಶ್ವದ ಉತ್ತಮ ವೈದ್ಯಕೀಯ ಕೇಂದ್ರವಾಗಿದೆ) ಆದರೆ ಎಲ್ಲರಿಗೂ ಸ್ಥಳವಿಲ್ಲ.
ನಾವು ಮಾಡಿದ ಮೂರ್ಖತನವನ್ನು ನೀವು ಮಾಡಬೇಡಿ
ನಾವು ಮಾಡಿದ ತಪ್ಪನ್ನು ನೀವು ಮಾಡಬೇಡಿ. ನಾವು ಮಾಡಿದ ಮೂರ್ಖತನವನ್ನು ನೀವು ಪುನರಾವರ್ತಿಸಬೇಡಿ. ನಾವು ಹೇಳುವುದನ್ನು ಪಾಲಿಸಿ. ದಯವಿಟ್ಟು ಜನದಟ್ಟಣೆ ಇರುವ ಸ್ಥಳಗಳಿಗೆ ಹೋಗಬೇಡಿ. ಹೊರಗೆ ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವುದನ್ನು ತಪ್ಪಿಸಿ, ಮನೆಯೊಳಗೆ ಹೆಚ್ಚಾಗಿ ಇರಿ, ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ, ಜನರಿಂದ ಒಂದು ಮೀಟರ್ ದೂರವಿದ್ದು ಮಾತನಾಡಿ, ಹತ್ತಿರ ಹೋಗಬೇಡಿ, ಮುದ್ದಾಡಬೇಡಿ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಸೇವಿಸಿ. ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಅಧಿಕಾರಿಗಳಿಗೆ ಸಹಾಯ ಮಾಡಿ. ನಮ್ಮ ಪುಟ್ಟ ಇಟಲಿ ದೇಶವು ಅದರ ಕೆಟ್ಟ ಸ್ಥಿತಿಗೆ ಹೋಗಬಹುದು. ಇಟಲಿ ಇಂದು ಸಂಪೂರ್ಣವಾಗಿ ಪ್ರತ್ಯೇಕವಾಗಿರುವ ದೇಶವಾಗಿದೆ. ಆರು ಕೋಟಿಗೂ ಹೆಚ್ಚು ಜನರು ಮನೆಗಳಿಗೆ ಸೀಮಿತರಾಗಿದ್ದಾರೆ. ನಾವು ಆರಂಭದಲ್ಲೇ ಮುನ್ನೆಚ್ಚರಿಕೆಯ ಸೂಚನೆಗಳನ್ನು ಅನುಸರಿಸಿದ್ದರೆ ಇದನ್ನು ತಡೆಯಬಹುದಿತ್ತು. ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ'' ಎಂದು ಪತ್ರದಲ್ಲಿ ಇಟಲಿಯ ಪ್ರಜೆ ಉಲ್ಲೇಖಿಸಿದ್ದಾರೆ.