ಕೊರೊನಾ ವೈರಸ್ ಭಯದಿಂದ ಮೆಕ್ಕಾದಲ್ಲಿ ಪ್ರಾರ್ಥನೆಯೇ ಬಂದ್
ತೆರ್ಹಾನ್, ಮಾರ್ಚ್.04: ಕೊರೊನಾ ವೈರಸ್ ಭೀತಿಗೆ ಇಡೀ ವಿಶ್ವವೇ ನಲುಗಿ ಹೋಗಿದೆ. ಮಾರಕ ಸೋಂಕಿನಿಂದ ಪಾರಾಗಲು ಸೌದಿ ಅರೇಬಿಯಾ ವಿದೇಶಿ ಪ್ರವಾಸಿಗರ ಭೇಟಿಗೆ ಕಡಿವಾಣ ಹಾಕುವುದರ ಜೊತೆಗೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.
ಬುಧವಾರ ಸೌದಿ ಅರೆಬಿಯಾ ಸರ್ಕಾರವು ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಮೆಕ್ಕಾದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ ನಿರ್ಬಂಧಿಸಿ ಆದೇಶ ಹೊರಡಿಸಿದೆ.
10,000 ಹಜ್ ಯಾತ್ರಾರ್ಥಿಗಳ ಪ್ರವಾಸಕ್ಕೆ ಅಡ್ಡಿಯಾದ ಕೊರೊನಾ ವೈರಸ್
ಕಳೆದ ವಾರವಷ್ಟೇ ಮೆಕ್ಕಾ ಪ್ರವಾಸಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಸೌದಿ ಅರೆಬಿಯಾ ಸರ್ಕಾರವು ನಿರ್ಬಂಧ ವಿಧಿಸಿತ್ತು. ವಿದೇಶಗಳಿಂದ ಹಜ್ ಯಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ವೀಸಾ ನೀಡಲು ನಿರಾಕರಿಸಿತ್ತು.
ಶುಕ್ರವಾರ ನಡೆಸುವ ಪ್ರಾರ್ಥನೆಗೂ ಇರಾನ್ ನಲ್ಲಿ ನಿರ್ಬಂಧ
ಕೊರೊನಾ ವೈರಸ್ ಭೀತಿಯಿಂದ ಪ್ರತಿ ಶುಕ್ರವಾರ ಮಸೀದಿಗಳಲ್ಲಿ ನಡೆಸುವ ಸಾಮೂಹಿಕ ಪ್ರಾರ್ಥನೆಗೂ ನಿರ್ಬಂಧ ವಿಧಿಸಲಾಗಿದೆ. ಇರಾನ್ ರಾಜಧಾನಿ ಸೇರಿದಂತೆ ಹಲವು ಪ್ರದೇಶಗಳಲ್ಲಿನ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಸೂಚನೆ ನೀಡಲಾಗಿದೆ. ಇನ್ನು, ತೆರ್ಹಾನ್ ನ ಮಸೀದಿಗಳಲ್ಲಿ ಕಳೆದ ವಾರವೇ ಶುಕ್ರವಾರದ ಪ್ರಾರ್ಥನೆಯನ್ನು ಬಂದ್ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕೊರೊನಾ ವೈರಸ್ ಗೆ ಇರಾನ್ ನಲ್ಲಿ 92 ಮಂದಿ ಸಾವು
ಚೀನಾ ಹೊರತುಪಡಿಸಿದರೆ ಮಾರಣಾಂತಿಕ ಕೊರೊನಾ ವೈರಸ್ ನಿಂದ ಇರಾನ್ ನಲ್ಲಿ ಅತಿಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈವರೆಗೂ 92 ಮಂದಿ ಮಾರಕ ಸೋಂಕಿಗೆ ಬಲಿಯಾಗಿದ್ದರೆ, 2,922 ಜನರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ಇರಾನ್ ಸ್ಪಷ್ಟಪಡಿಸಿದೆ.
ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?
ಹಜ್ ಯಾತ್ರೆ ನಿರೀಕ್ಷೆಯಲ್ಲಿ 10 ಸಾವಿರ ಯಾತ್ರಾರ್ಥಿಗಳು
ಕೊರೊನಾ ವೈರಸ್ ಇದೀಗ ಕೇರಳದ 10 ಸಾವಿರ ಹಜ್ ಯಾತ್ರಾರ್ಥಿಗಳ ಪ್ರವಾಸಕ್ಕೂ ಅಡ್ಡಿಯಾಗಿದೆ. ಈ ವರ್ಷ ಹಜ್ ಯಾತ್ರೆಗೆ ತೆರಳಲು ಆಗುತ್ತೋ ಇಲ್ಲವೋ ಎಂಬ ಚಿಂತೆ ಯಾತ್ರಾರ್ಥಿಗಳನ್ನು ಕಾಡುತ್ತಿದೆ. ಕೇರಳದಿಂದ ಪವಿತ್ರ ಹಜ್ ಯಾತ್ರೆಗೆ ತೆರಳುವ 10 ಯಾತ್ರಾರ್ಥಿಗಳ ಪಟ್ಟಿ ಅಂತಿಮಗೊಂಡಿದೆ ಎಂದು ರಾಜ್ಯದ ಹಜ್ ಕಮಿಟಿ ಚೇರ್ ಮನ್ ಸಿ. ಮೊಹಮ್ಮದ್ ತಿಳಿಸಿದ್ದಾರೆ. ಆದರೆ, ಮುಸ್ಲೀಮರ ಪವಿತ್ರ ಕ್ಷೇತ್ರ ಮೆಕ್ಕಾ-ಮದೀನಾ ಭೇಟಿಗೆ ಸೌದಿ ಅರೆಬಿಯಾ ತಾತ್ಕಾಲಿಕವಾಗಿ ರದ್ದು ಪಡಿಸಿದೆ. ವಿದೇಶಾಂಗ ಇಲಾಖೆ ಈ ಆದೇಶ ಹೊರಡಿಸಿದ್ದು, ಪ್ರವಾಸಿಗರು ಮೆಕ್ಕಾ-ಮದೀನಾ ಭೇಟಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಉಮ್ರಾಹ್ ವೀಸಾ ರದ್ದುಗೊಳಿಸಿದ ಸೌದಿ ಸರ್ಕಾರ
ಪ್ರವಾಸಿ ವೀಸಾ ಹಾಗೂ 'ಉಮ್ರಾಹ್ ವೀಸಾ'ವನ್ನು ಸೌದಿ ವಿದೇಶಾಂಗ ಇಲಾಖೆ ರದ್ದು ಮಾಡಿದೆ. ಸೌದಿ ರಾಷ್ಟ್ರಗಳಾದ ಬಹ್ರೇನ್, ಕುವೈತ್, ಓಮನ್, ಲೆಬನಾನ್, ಇರಾಖ್ ಮುಂತಾದ ದೇಶಗಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಉಮ್ರಾಹ್ ಪ್ರಾರ್ಥನೆಗೆ ನೀಡುವ ವೀಸಾವನ್ನು ಕೂಡಾ ನೀಡದಿರಲು ಸರ್ಕಾರ ತಿರ್ಮಾನಿಸಿದೆ.