ಕೊರೊನಾ ಬಗ್ಗೆ ಕ್ರಮ: ಎಲ್ಲೆಲ್ಲೂ ವೈರಲ್ ಆದ ಕೆನಡಾ ಪ್ರಧಾನಿ ಭಾಷಣ!
ಕೋವಿಡ್-19 ಅನ್ನು ಕಟ್ಟಿಹಾಕಲು ಜಗತ್ತಿನ ವಿವಿಧ ರಾಷ್ಟ್ರಗಳು, ವಿವಿಧ ಪ್ರಯತ್ನ ಮಾಡುತ್ತಿವೆ. ದೇಶದ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬೀಳದಂತೆ ತಡೆಯಲು ಹತ್ತಾರು ಯೋಜನೆಗಳನ್ನು ರೂಪಿಸಿಕೊಳ್ಳುತ್ತಿವೆ.
ಮನೆಯಲ್ಲೇ ಇರಿ, ಮನೆಯಿಂದಲೇ ಕೆಲಸ ಮಾಡಿ ಎಂಬ ಮಂತ್ರವನ್ನು ಹಲವು ರಾಷ್ಟ್ರಗಳು ಜಪಿಸುತ್ತಿವೆ. ಆದ್ರೆ, ಬದುಕಿನ ಅನಿವಾರ್ಯತೆಗಾಗಿ ಮೈಬಗ್ಗಿಸಿ ದುಡಿದು ಹೊಟ್ಟೆ ತುಂಬಿಸಿಕೊಳ್ಳಬೇಕಾದ ಬಡ ಜನ ಕೊರೊನಾ ವೈರಸ್ ನಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಎಲ್ಲರ ಸಂಕಷ್ಟಕ್ಕೆ ಸ್ಪಂದಿಸಲು ಜನನಾಯಕರು ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ.
ಚೀನಾ ಎಸಗಿದ ಒಂದು ಮಹಾ ಪ್ರಮಾದಕ್ಕೆ ಇಂದು ಜಗತ್ತಿಗೆ ಘೋರ ಶಿಕ್ಷೆ!
ಈ ನಡುವೆ ಸಂಕಷ್ಟ ಸಮಯದಲ್ಲಿ ನಾಗರೀಕರಿಗೆ ಸರ್ಕಾರ ಹೇಗೆ ಸ್ಪಂದಿಸಬೇಕು ಎಂಬುದಕ್ಕೆ ಕೆನಡಾ ಸರ್ಕಾರ ಜಗತ್ತಿಗೆ ಮಾದರಿಯಾಗಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋವ್ ಕೈಗೊಂಡಿರುವ ಹಲವು ಕ್ರಮಗಳು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಕೋವಿಡ್-19 ವಿಚಾರದಲ್ಲಿ ಮೊನ್ನೆಯಷ್ಟೇ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋವ್ ಮಾಡಿದ್ದ ಭಾಷಣ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಿಮ್ಮ ಸಹಾಯಕ್ಕೆ ನಾವಿದ್ದೇವೆ
''ಕೋವಿಡ್-19 ನಿಂದಾಗಿ ಒಂದಲ್ಲಾ ಒಂದು ರೀತಿಯಲ್ಲಿ ನಾವು ನಮ್ಮ ದೈನಂದಿನ ಚಟುವಟಿಕೆಗಳನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಮನೆಯಿಂದ ಕೆಲಸ ಮಾಡುವುದು ಇರಬಹುದು ಅಥವಾ ತಾತ್ಕಾಲಿಕವಾಗಿ ನಮ್ಮ ವ್ಯವಹಾರವನ್ನು ಸ್ಥಗಿತಗೊಳಿಸುವುದು ಆಗಿರಬಹುದು. ಕೆಲಸದ ಭದ್ರತೆ, ಬಿಲ್ ಪೇಮೆಂಟ್, ಮಕ್ಕಳ ಆರೈಕೆ ಬಗ್ಗೆ ನಿಮಗೆಲ್ಲಾ ಆತಂಕ ಉಂಟಾಗಿರಬಹುದು. ಆದ್ರೆ, ನಿಮ್ಮೆಲ್ಲರ ಸಹಾಯಕ್ಕಾಗಿ ನಾವಿದ್ದೇವೆ'' ಎಂದು ತಮ್ಮ ಭಾಷಣದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋವ್ ತಿಳಿಸಿದ್ದಾರೆ.
27 ಬಿಲಿಯನ್ ಡಾಲರ್ ಮೀಸಲು
''ಆರ್ಥಿಕ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ನಾವೀಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. Employment Insurance ಇಂದ ಹಿಡಿದು ಬಿಸಿನೆಸ್ ಗೆ ಫೈನಾನ್ಸ್ ಮಾಡುವುದರವರೆಗೂ ಹೊಸ ನಿಯಮಗಳನ್ನು ನಾವು ಜಾರಿಗೆ ತಂದಿದ್ದೇವೆ. ಇಂತಹ ತುರ್ತು ಸಂದರ್ಭದಲ್ಲಿ ಎಲ್ಲಾ ಕೆನಡಿಯನ್ನರಿಗೆ ಸಹಾಯ ಮಾಡಲು 27 ಬಿಲಿಯನ್ ಡಾಲರ್ ಕಾರ್ಯಕ್ರಮವನ್ನು ಘೋಷಿಸಿದ್ದೇವೆ'' - ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋವ್
ಮನೆಯಲ್ಲೇ ಇರಿ, ನಾವು ದುಡ್ಡು ಕೊಡ್ತೇವೆ!
''ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಅಥವಾ ಪ್ರತ್ಯೇಕವಾಗಿ ಇರಬೇಕು ಎಂಬ ಸನ್ನಿವೇಶ ಉದ್ಭವವಾದಾಗ ನಿಮ್ಮಲ್ಲಿ ರಜೆ ಇಲ್ಲದೇ ಇದ್ದರೆ ನಿಮಗೆ ಪ್ರತಿ ಎರಡು ವಾರಕ್ಕೊಮ್ಮೆ ನಾವು ಹಣ ಕೊಡುತ್ತೇವೆ. ನಿಮಗೆ ಮಕ್ಕಳಿದ್ದರೆ, ಕೆನಡಾ ಚೈಲ್ಡ್ ಬೆನಿಫಿಟ್ ನಿಂದ ನಿಮಗೆ ಸಹಾಯ ಸಿಗುತ್ತದೆ'' - ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋವ್
ಜನರ ಹಿತ ಕಾಪಾಡುವುದು ನಮ್ಮ ಕರ್ತವ್ಯ
''ನೀವು ಉದ್ಯಮಿ ಆಗಿದ್ದರೆ, ನೌಕರರಿಗೆ ಹೇಗೆ ಸಂಬಳ ಕೊಡುವುದು ಎಂದು ಚಿಂತಿಸುತ್ತಿದ್ದರೆ, ತಾತ್ಕಾಲಿಕ ಸಬ್ಸಿಡಿಯನ್ನು ನಾವು ಕೊಡುತ್ತೇವೆ. ರೈತರಿಗೆ, ಯುವ ಕೆಲಸಗಾರರಿಗೆ, ಸೂರು ಇಲ್ಲದವರಿಗೂ ನಾವು ಸಹಾಯ ಹಸ್ತ ಚಾಚಲು ಸಿದ್ಧ. ಜನರ ಹಿತ ರಕ್ಷಣೆ ಕಾಪಾಡುವುದು ನಮ್ಮ ಕರ್ತವ್ಯ. ಈಗಿರುವುದು ಕಷ್ಟದ ಕಾಲ. ಪರಿಸ್ಥಿತಿ ಖಂಡಿತ ಸುಧಾರಿಸಲಿದೆ. ಅಲ್ಲಿಯವರೆಗೂ ಸುರಕ್ಷತಾ ಕ್ರಮಗಳ ಬಗ್ಗೆ ಗಮನ ಹರಿಸಿ. ಮನೆಯಲ್ಲಿರಿ, ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಿ'' ಎಂದು ಹೇಳಿದ್ದಾರೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋವ್.
ಕೆನಡಾದ ಅಂಕಿ-ಅಂಶ
ಕೆನಡಾದಲ್ಲಿ ಇಲ್ಲಿಯವರೆಗೂ 1087 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದರಲ್ಲಿ 12 ಮಂದಿ ಸಾವನ್ನಪ್ಪಿದ್ದು, 14 ಮಂದಿ ಮಾತ್ರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.