19 ದಿನಗಳ ಚಿಕಿತ್ಸೆಯಿಂದ ಕೊರೊನಾ ವೈರಸ್ ಮಂಗಮಾಯ!
ಕಠ್ಮಂಡು, ಮೇ.06: ನೊವೆಲ್ ಕೊರೊನಾ ವೈರಸ್ ಸೋಂಕಿಗೆ ವ್ಯಾಕ್ಸಿನ್ ಯಾವಾಗ ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ವಿಶ್ವವೇ ಎದುರು ನೋಡುತ್ತಿದೆ. ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 49,552ರ ಗಡಿ ದಾಟಿದೆ. ದೇಶದಲ್ಲಿ 1,697ಕ್ಕೂ ಅಧಿಕ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇದರ ಮಧ್ಯೆ ನೇಪಾಳದಲ್ಲಿದ್ದ ಆರು ಮಂದಿ ಭಾರತೀಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಬೀರತ್ ನಗರ್ ನಲ್ಲಿರುವ ಕೋಶಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರು ಗುಣಮುಖರಾಗಿದ್ದು, ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮೊದಲ ದಿನವೇ ದಾಖಲೆ ಮದ್ಯ ಮಾರಾಟ, ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬಿದ ಮದ್ಯ ವ್ಯಸನಿಗಳು
ಬೀರತ್ ನಗರದ ರಾಣಿ ಮರ್ಕಜ್ ನಲ್ಲಿ ಕ್ವಾರೆಂಟೈನ್ ಕೇಂದ್ರವನ್ನು ತೆರೆಯಲಾಗಿದ್ದು ಪ್ರಾಥಮಿಕ ಸೋಂಕಿತ ಲಕ್ಷಣಗಳು ಕಂಡು ಬಂದವರನ್ನು ಅಲ್ಲಿ ಇರಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಡಾ.ಸಂಗೀತ್ ಮಿಶ್ರಾ ತಿಳಿಸಿದ್ದಾರೆ.
19 ದಿನದಲ್ಲೇ ಕೊರೊನಾ ವೈರಸ್ ಸೋಂಕು ಮಾಯ!
ಕೊರೊನಾ ವೈರಸ್ ಕಾಣಿಸಿಕೊಂಡ ಆರು ಮಂದಿ ಭಾರತೀಯರನ್ನು 19 ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಿಸಿಕೊಂಡು ಚಿಕಿತ್ಸೆ ನೀಡಲಾಯಿತು. ವೈದ್ಯರು ನೀಡಿರುವ ಚಿಕಿತ್ಸೆ ಫಲಿಸಿದ್ದು ಎರಡು ಬಾರಿ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಕೊರೊನಾ ವೈರಸ್ ನೆಗೆಟಿವ್ ಎಂದು ಬಂದಿದೆ. ಈ ಹಿನ್ನೆಲೆ ಆರು ಮಂದಿ ಭಾರತೀಯರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಉದಯ್ ಪುರ್ ಮೂಲದಿಂದ ಕೊರೊನಾ ಪಾಸಿಟಿವ್
ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುವ ಮುನ್ನ ವ್ಯಕ್ತಿಯು ನವದೆಹಲಿ ಉದಯ್ ಪುರ್ ಜಿಲ್ಲೆಯ ಮಸೀದಿಗೆ ತೆರಳಿದ್ದನು ಎಂದು ತಿಳಿದು ಬಂದಿದೆ. ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆ ಸಾಮಾಜಿಕ ಅಭಿವೃದ್ಧಿ ಸಚಿವ ಜೀವನ್ ಘಿಮಿರೆ ಆಸ್ಪತ್ರೆಯ ನಿಯಮಗಳ ಅನ್ವಯ ಸೋಂಕಿತರನ್ನು ಬಿಡುಗಡೆಗೊಳಿಸಿದರು.
ಏಳು ಭಾರತೀಯರಿಗೆ ನೇಪಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ
ಬುಧವಾರ ಆರು ಮಂದಿ ಭಾರತೀಯರು ಕೊರೊನಾ ವೈರಸ್ ನಿಂದ ಗುಣಮುಖರಾಗಿದ್ದಾರೆ. ಬಾಕಿ ಉಳಿದ ಏಳು ಮಂದಿಯ ಮತ್ತೊಂದು ಭಾರತೀಯ ತಂಡಕ್ಕೆ ನೇಪಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಡಾ. ಸಂಗೀತ್ ಮಿಶ್ರಾ ತಿಳಿಸಿದ್ದಾರೆ.
ಕೊರೊನಾ ವೈರಸ್ ನಿಂದ ನಲುಗಿಲ್ಲ ನೇಪಾಳ
ಭಾರತದ ಪಕ್ಕದಲ್ಲೇ ಇರುವ ನೇಪಾಳದಲ್ಲಿ ಕೊರೊನಾ ವೈರಸ್ ಸೋಂಕಿನ ಅಟ್ಟಹಾಸ ನಡೆದಿಲ್ಲ. ದೇಶದಲ್ಲಿ ಇದುವರೆಗೂ 82 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಈವರೆಗೂ ಒಬ್ಬರೇ ಒಬ್ಬರು ಕೊರೊನಾಗೆ ಬಲಿಯಾಗಿಲ್ಲ. ಬದಲಿಗೆ 22 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದ 60 ಜನ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.