ಕೊರೊನಾ ಇನ್ನೂ ದೀರ್ಘಕಾಲ ನಮ್ಮೊಂದಿಗೆ ಇರಲಿದೆ; WHO ಅಧಿಕಾರಿ
ವಾಷಿಂಗ್ಟನ್, ಸೆಪ್ಟೆಂಬರ್ 28: ಕೊರೊನಾ ಸೋಂಕು ಇನ್ನೂ ದೀರ್ಘ ಕಾಲ ನಮ್ಮೊಂದಿಗೆ ಇರಲಿದೆ ಹಾಗೂ ಸೋಂಕಿನ ಹರಡುವಿಕೆ ಮುಂದುವರೆಯುತ್ತಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿ ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
ಆದರೆ ಸಮುದಾಯದಲ್ಲಿ ರೋಗನಿರೋಧಕ ಶಕ್ತಿಯ ಮಟ್ಟ, ಕೊರೊನಾ ಲಸಿಕೆ ಪಡೆದವರ ಸಂಖ್ಯೆ ಹಾಗೂ ಸೋಂಕಿಗೆ ತುತ್ತಾಗಿರುವ ಹಿನ್ನೆಲೆ ಕೊರೊನಾ ಸೋಂಕು ದೀರ್ಘಾವಧಿಯಲ್ಲಿ ಸ್ಥಳೀಯವಾಗಿರುತ್ತದೆಯೇ ಎಂಬುದನ್ನು ನಿರ್ಧರಿಸುವ ಅಂಶಗಳಾಗಿವೆ ಎಂದಿದ್ದಾರೆ.
ಕೊರೊನಾ ತೀವ್ರತರ ರೋಗಿಗಳಿಗೆ ಪ್ರತಿಕಾಯ ಚಿಕಿತ್ಸೆ ನೀಡಲು WHO ಶಿಫಾರಸು
ವಿಶ್ವ ಆರೋಗ್ಯ ಸಂಸ್ಥೆ ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕರಾದ ಪೂನಂ, 'ನಾವು ಸೋಂಕನ್ನು ಸಂಪೂರ್ಣ ನಿಯಂತ್ರಿಸಬೇಕು. ಸೋಂಕು ನಮ್ಮನ್ನು ನಿಯಂತ್ರಿಸುವುದಿಲ್ಲ ಎಂಬ ಪರಿಸ್ಥಿತಿಯನ್ನು ನಾವು ಸೃಷ್ಟಿಸುವ ಅಗತ್ಯವಿದೆ' ಎಂಬುದನ್ನು ಒತ್ತಿ ಹೇಳಿದ್ದಾರೆ.
ಜನರು ಸೋಂಕಿನೊಂದಿಗೆ ಬದುಕಲು ಕಲಿಯುವ ಹಂತವನ್ನು ಸ್ಥಳೀಯ ಹಂತ ಎಂದು ಕರೆಯಲಾಗುತ್ತದೆ; ಸೋಂಕು ಜನಸಂಖ್ಯೆಯನ್ನು ಆವರಿಸುವುದನ್ನು ಸಾಂಕ್ರಾಮಿಕ ಹಂತ ಎಂದು ಕರೆಯಲಾಗುತ್ತದೆ. ಇದು ಒಂದಕ್ಕಿಂತ ಒಂದು ಭಿನ್ನವಾಗಿದೆ ಎಂದು ವಿವರಣೆ ನೀಡಿದ್ದಾರೆ.
ಹೆಚ್ಚು ಜನರು ಸೋಂಕಿಗೆ ತುತ್ತಾದ ಹಾಗೂ ಲಸಿಕಾ ವ್ಯಾಪ್ತಿಯು ಅಧಿಕವಾಗಿರುವ ಜನಸಂಖ್ಯೆಯಲ್ಲಿ ಸೋಂಕಿನ ಪರಿಣಾಮವೂ ಕಡಿಮೆಯಿರುತ್ತದೆ. ಸೋಂಕು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಅತಿ ಕ್ಷೀಣವಾಗಿದೆ ಎಂದು ಸಿಂಗ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೊರೊನಾ ಲಸಿಕೆ; ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆಗೆ ನೋವಾವ್ಯಾಕ್ಸ್ ಅರ್ಜಿ
ಕೊರೊನಾ ಸೋಂಕು ಬಹಳ ಸಮಯದವರೆಗೆ ಹರಡುವಿಕೆಯನ್ನು ಮುಂದುವರೆಸಲಿದೆ. ದೀರ್ಘಾವಧಿಯಲ್ಲಿ ಸೋಂಕು ಸ್ಥಳೀಯವಾಗುವುದನ್ನು ಬಹು ಅಂಶಗಳು ನಿರ್ಧರಿಸುತ್ತವೆ. ಅವುಗಳಲ್ಲಿ ಬಹು ಮುಖ್ಯವಾದದ್ದು ಸಮುದಾಯದಲ್ಲಿ ರೋಗನಿರೋಧಕ ಶಕ್ತಿಯ ಮಟ್ಟ, ಎರಡು ಡೋಸ್ ಲಸಿಕೆ ಹಾಗೂ ಈ ಹಿಂದೆ ಸೋಂಕಿಗೆ ಒಳಗಾದವರ ಸಂಖ್ಯೆ ಎಂದು ವಿವರಿಸಿದ್ದಾರೆ.
ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ತುರ್ತು ಬಳಕೆ ಅನುಮೋದನೆ ಕುರಿತು ಮಾತನಾಡಿದ ಅವರು, ಭಾರತ್ ಬಯೋಟೆಕ್ನ ದಾಖಲೆಗಳನ್ನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕ್ರಿಯೆ ಪೂರ್ಣಗೊಂಡಾಗ ನಾವು ಈ ಕುರಿತು ನಿರ್ಧಾರವನ್ನು ನಿರೀಕ್ಷಿಸಬಹುದು ಎಂದು ಉತ್ತರಿಸಿದ್ದಾರೆ.
ಜನರಲ್ಲಿ ಕ್ಷೀಣಿಸುತ್ತಿರುವ ರೋಗನಿರೋಧಕ ಶಕ್ತಿಯನ್ನು ನಿಭಾಯಿಸಲು ಬೂಸ್ಟರ್ ಡೋಸ್ ಲಸಿಕೆಯ ಪಾತ್ರದ ಕುರಿತು ಚರ್ಚಿಸಿದ ಅವರು, 'ಎಲ್ಲಾ ದೇಶಗಳಲ್ಲಿಯೂ ಕೊರೊನಾ ಲಸಿಕೆ ಪಡೆಯದವರಲ್ಲಿ ಹೆಚ್ಚಿನ ಮಟ್ಟದಲ್ಲಿ ಸೋಂಕು ಪತ್ತೆಯಾಗಿದೆ. ಮರಣ ಪ್ರಮಾಣವೂ ಲಸಿಕೆ ಪಡೆಯದವರಲ್ಲೇ ಹೆಚ್ಚಿದೆ' ಎಂದು ತಿಳಿಸಿದರು.
ಆದರೆ ಮೊದಲ ಡೋಸ್ ಲಸಿಕೆಗಾಗಿಯೇ ಹಲವು ದೇಶಗಳು ಪರಿತಪಿಸುತ್ತಿರುವ ಈ ಹೊತ್ತಿನಲ್ಲಿ ಬೂಸ್ಟರ್ ಡೋಸ್ ಲಸಿಕೆ ಬಳಸುವುದರಿಂದ ಲಕ್ಷಾಂತರ ಜನರು ಲಸಿಕೆಯಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೂಸ್ಟರ್ ಡೋಸ್ಗಳಿಗೆ ಈ ವರ್ಷಾಂತ್ಯದವರೆಗೂ ತಡೆ ನೀಡಲು ಕೋರಲಾಗಿದೆ. ಜೊತೆಗೆ ಈ ವರ್ಷದ ಕೊನೆಗೆ ಪ್ರತಿ ದೇಶದ ಕನಿಷ್ಠ 40% ಜನರು ಲಸಿಕೆ ಪಡೆದರೆ ಸೋಂಕಿನ ವಿರುದ್ಧ ಸಮರ್ಥವಾಗಿ ಹೋರಾಡಬಹುದಾಗಿದೆ. ಪ್ರತಿಯೊಬ್ಬರೂ ಸುರಕ್ಷಿತವಾಗುವವರೆಗೂ ಯಾರೊಬ್ಬರೂ ಸುರಕ್ಷಿತರಲ್ಲ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಲಸಿಕೆಯೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಆದರೆ ಲಸಿಕೆಯಿಂದ ಮರಣ ಪ್ರಮಾಣವನ್ನು ಹಾಗೂ ಸೋಂಕು ತೀವ್ರ ಸ್ವರೂಪ ಪಡೆಯುವುದನ್ನು ತಪ್ಪಿಸಬಹುದಾಗಿದೆ. ಇದಾಗ್ಯೂ ಕೆಲವು ಜನರಿಗೆ ಭವಿಷ್ಯದಲ್ಲಿ ಬೂಸ್ಟರ್ ಡೋಸ್ಗಳ ಅವಶ್ಯಕತೆ ಖಂಡಿತ ಬರಲಿದೆ. ಈ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿದ್ದಾರೆ.
ಸಾಮಾನ್ಯ ಜನರಿಗೆ ಬೂಸ್ಟರ್ ಡೋಸ್ಗಳ ಬಳಕೆಗೆ ಶಿಫಾರಸು ಮಾಡಲು ಸೂಕ್ತ ಸಮಯ, ಸುರಕ್ಷತೆ ಹಾಗೂ ಬೂಸ್ಟರ್ ಡೋಸೇಜ್ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದೆ. ದೇಹದಲ್ಲಿ ಬೂಸ್ಟರ್ ಡೋಸ್ ಪರಿಣಾಮದ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ ಎಂದರು.
ಸದ್ಯಕ್ಕೆ ಸೋಂಕಿನ ನಿರ್ಮೂಲನೆ ಅಸಂಭವವಾಗಿದೆ. ಆದರೆ ಈ ಸಾಂಕ್ರಾಮಿಕದಿಂದ ಮರಣ ಸಂಭವಿಸುವುದನ್ನು, ಆಸ್ಪತ್ರೆಗೆ ದಾಖಲಾಗುವುದನ್ನು ತಪಪ್ಪಿಸಬಹುದಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯ ನಷ್ಟವನ್ನು ತಗ್ಗಿಸಬಹುದಾಗಿದೆ ಎಂದು ತಿಳಿಸಿದರು.