ನನ್ನ ಕೊಲೆಗೆ ಸಂಚು ರೂಪಿಸಲಾಗುತ್ತಿದೆ: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪ
ಇಸ್ಲಾಮಾಬಾದ್ ಮೇ 15: ತನ್ನ ಕೊಲೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ಕೋಟ್ನಲ್ಲಿ ಶನಿವಾರ ನಡೆದ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಒಂದು ವೇಳೆ ನನ್ನ ಕೊಲೆಯಾದರೆ ಅದರ ಅಪರಾಧಿಗಳು ಯಾರು ಎಂಬುದನ್ನು ವಿಡಿಯೊ ಮಾಡಿ ರಹಸ್ಯ ಸ್ಥಳದಲ್ಲಿ ಬಚ್ಚಿಟ್ಟಿದ್ದೇನೆ. ನನ್ನ ಸಾವಿನ ನಂತರ ಅದು ಬಿಡುಗಡೆಯಾಗಿ, ಜನರಿಗೆ ಸತ್ಯ ತಿಳಿಯಲಿದೆ,'' ಎಂದು ಆತಂಕ ವ್ಯಕ್ತಪಡಿಸಿದರು.
ಕಳ್ಳರಿಗೆ ಅಧಿಕಾರ ಕೊಡುವ ಬದಲು ಅಣುಬಾಂಬ್ ಎಸೆಯುವುದು ಉತ್ತಮ: ಇಮ್ರಾನ್ ಖಾನ್
"ನನಗೆ ಗೊತ್ತಿದೆ ಪಾಕಿಸ್ತಾನದ ಒಳಗೆ ಮತ್ತು ಹೊರಗೆ ಇರುವವರು ನನ್ನ ಕೊಲೆ ಯೋಜನೆ ರೂಪಿಸುತ್ತಿದ್ದಾರೆ. ನನ್ನ ವಿರುದ್ಧದ ಕೊಲೆಯ ಸಂಚಿನಲ್ಲಿ ಭಾಗಿಯಾಗಿರುವ ಎಲ್ಲರ ಹೆಸರನ್ನು ಉಲ್ಲೇಖಿಸಿ ಸಂಪೂರ್ಣ ವಿಡಿಯೊ ಮಾಡಿ, ಅದನ್ನು ರಹಸ್ಯ ಸ್ಥಳದಲ್ಲಿ ಇಟ್ಟಿದ್ದೇನೆ,'' ಎಂದು ತಿಳಿಸಿದರು.
ಆದರೆ ಭಾಷಣದಲ್ಲಿ ಎಲ್ಲೂ ಕೂಡ ಇಮ್ರಾನ್ ಖಾನ್ ಕೊಲೆಗೆ ಸಂಚು ರೂಪಿಸುತ್ತಿರುವವರು ಯಾರು ಎಂದು ಎಲ್ಲೂ ಹೆಸರುಗಳನ್ನು ಉಲ್ಲೇಖಿಸಲಿಲ್ಲ. ಪಾಕಿಸ್ತಾನದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು, "ದೇಶದ ಚುಕ್ಕಾಣಿಯನ್ನು ಅಪರಾಧಿಗಳ ಕೈಗೆ ನೀಡುವ ಬದಲು ಅಣು ಬಾಂಬ್ ಹಾಕುವುದು ಉತ್ತಮ,'' ಎಂದು ಹೇಳಿದ್ದರು.
"ಅಧಿಕಾರಕ್ಕೆ ಬಂದ ಕಳ್ಳರು ದೇಶದ ಪ್ರತಿಯೊಂದು ಸಂಸ್ಥೆಯನ್ನು ಹಾಳುಗೆಡವಿದರು. ನ್ಯಾಯಾಂಗ ಇಲಾಖೆಯನ್ನು ಕೂಡ ಅವರು ಬಿಡಲಿಲ್ಲ. ಹೀಗಿರುವಾಗ ಅಂಥವರ ವಿರುದ್ಧ ಯಾವ ಸರಕಾರಿ ಅಧಿಕಾರಿ ತನಿಖೆ ನಡೆಸಲು ಸಾಧ್ಯ,'' ಎಂದು ಇಮ್ರಾನ್ ಖಾನ್ ಪ್ರಶ್ನಿಸಿದರು.
"ತಮ್ಮ ಭಾಷಣಗಳ ಮೂಲಕ ಪಾಕಿಸ್ತಾನದ ಜನರ ಮನಸ್ಸಿನಲ್ಲಿ ವಿಷವನ್ನು ಇಮ್ರಾನ್ ಖಾನ್ ಬಿತ್ತುತ್ತಿದ್ದಾರೆ,'' ಎಂದು ಪಾಕಿಸ್ತಾನದ ಹಾಲಿ ಪ್ರಧಾನಿ ಶಹಬಾಜ್ ಶರೀಫ್ ದೂರಿದ್ದಾರೆ.