ಚೀನಾದ ಗಣಿಗಾರಿಕೆಯಲ್ಲಿ ವಿಷಕಾರಿ ಅನಿಲ ಸೋರಿಕೆಗೆ 16 ಮಂದಿ ಸಾವು
ಬೀಜಿಂಗ್, ಸಪ್ಟೆಂಬರ್.27: ಕಲ್ಲಿದ್ದಲು ಗಣಿಗಾರಿಕೆ ವೇಳೆ ಸಂಭವಿಸಿದ ದುರಂತದಲ್ಲಿ 16 ಕಾರ್ಮಿಕರು ಪ್ರಾಣ ಬಿಟ್ಟಿರುವ ಘಟನೆ ನೈಋತ್ಯ ಚೀನಾದಲ್ಲಿ ನಡೆದಿದೆ. ಒಬ್ಬ ಕಾರ್ಮಿಕನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಭಾನುವಾರ ಬೆಳಗ್ಗೆ ಕನ್ವೆಯರ್ ಸ್ಫೋಟದಲ್ಲಿ ಅಪಾಯಕಾರಿ ಹಂತದ ಕಾರ್ಬನ್ ಮೊನಾಕ್ಸೈಡ್ ಬಿಡುಗಡೆಯಾಗಿದೆ ಎಂದು ಚೀನಾ ಸರ್ಕಾರಿ ಅಧೀನದ ಕ್ಸಿನುವಾ ಸುದ್ದಿಸಂಸ್ಥೆಯು ತಿಳಿಸಿದೆ. ಕಾರ್ಮಿಕರನ್ನು ರಕ್ಷಿಸುವುದಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಿಸಿಟಿವಿ ಸುದ್ದಿ ಸಂಸ್ಥೆ ಹೇಳಿದೆ.
ಲೆಬನಾನ್ನಲ್ಲಿ ಮತ್ತೆ ಮಹಾ ಸ್ಫೋಟ, ಉಗ್ರರ ಕೋಟೆ ಉಡೀಸ್
ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸಂಭವಿಸಿದ ದುರಂತಕ್ಕೆ ಕಾರಣ ಏನು ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕ್ವಿಜಿಯಾಂಗ್ ಜಿಲ್ಲೆಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಚಾಂಗ್ ಕ್ವಿಂಗ್ ನಗರದಿಂದ ಹೊರ ಪ್ರದೇಶದಲ್ಲಿರುವ ಸಾಂಗ್ ಜೋ ಕಲ್ಲಿದ್ದಲು ಗಣಿಕಾರಿಕೆ ನಿಕ್ಷೇಪವು ಚಾಂಗ್ಕಿಂಗ್ ಎನರ್ಜಿ ಎಂಬ ರಾಜ್ಯ ಇಂಧನ ಸಂಸ್ಥೆಗೆ ಸೇರಿದ್ದಾಗಿದೆ.
ಕಲ್ಲಿದ್ದಲು ದುರಂತ ಸರ್ವೇ ಸಾಮಾನ್ಯ:
ಚೀನಾದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಿಕ್ಷೇಪಗಳಲ್ಲಿ ದುರಂತಗಳು ಸಂಭವಿಸುತ್ತಿರುವುದು ಇತ್ತೀಚಿಗೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕೈಗಾರಿಕೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದಾಗ ಮತ್ತು ಸರ್ಕಾರದ ನಿಯಮಗಳನ್ನು ಪಾಲಿಸದ ಸಂದರ್ಭದಲ್ಲಿ ಇಂಥ ದುರಂತಗಳು ಸಂಭವಿಸುತ್ತವೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ನೈಋತ್ಯ ವಿಭಾಗದ ಕ್ವಿಜಾವೋ ಪ್ರದೇಶದಲ್ಲಿ ಸಂಭವಿಸಿದ ಕಲ್ಲಿದ್ದಲು ಅನಿಲ ಸ್ಫೋಟದಲ್ಲಿ ಕನಿಷ್ಠ 14 ಮಂದಿ ಪ್ರಾಣ ಬಿಟ್ಟಿದ್ದರು.
2018ರಲ್ಲಿ ಚಾಂಗ್ ಕ್ವಿಂಗ್ ನಲ್ಲೇ ಸಂಭವಿಸಿದ ದುರಂತದಲ್ಲಿ 7 ಕಾರ್ಮಿಕರು ಸಾವನ್ನಪ್ಪಿದ್ದರು. ಅದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಪೂರ್ವ ಶಾಂನ್ ಡಾಂಗ್ ಪ್ರದೇಶದಲ್ಲಿ 21 ಗಣಿ ಕಾರ್ಮಿಕರು ದುರಂತದಲ್ಲಿ ದುರ್ಮರಣ ಹೊಂದಿದ್ದರು. ಗಣಿಯೊಳಗಿನ ಒತ್ತಡವು ಬಂಡೆಗಳು ಒಡೆಯಲು ಕಾರಣವಾಗಿದ್ದು, ಸುರಂಗವನ್ನು ನಿರ್ಬಂಧಿಸಲ್ಪಟ್ಟ ಕಾರ್ಮಿಕರು ಸಾವಿನ ಮನೆ ಸೇರಿದ್ದರು. ಅಂದು ಒಬ್ಬ ಕಾರ್ಮಿಕ ಮಾತ್ರ ಜೀವಂತವಾಗಿ ಹೊರ ತರಲಾಯಿತು.