ಹವಾಮಾನ ವೈಪರಿತ್ಯದಿಂದ ಆಹಾರದ ಕೊರತೆ: ಒಂದನ್ನೊಂದು ಕೊಂದು ತಿನ್ನುತ್ತಿವೆ ಹಿಮಕರಡಿಗಳು
ಪ್ಯಾರಿಸ್, ಫೆಬ್ರವರಿ 29: ಹವಾಮಾನ ವೈಪರೀತ್ಯ ಈಗಾಗಲೇ ನೂರಾರು ಪ್ರಾಣಿ, ಪಕ್ಷಿ ಪ್ರಭೇದಗಳ ಸಂತತಿಗೆ ಕಂಟಕವಾಗಿದೆ. ಬದಲಾಗುತ್ತಿರುವ ಹವಾಮಾನ, ಅಧಿಕ ಉಷ್ಣತೆಯಿಂದಾಗಿ ಲೆಕ್ಕವಿಲ್ಲದಷ್ಟು ಜೀವಿಗಳು ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಅವುಗಳ ಸಾಲಿಗೆ ಅಪರೂಪದ ಹಿಮ ಕರಡಿಗಳೂ (ಪೋಲಾರ್ ಬೇರ್) ಸೇರುವ ಭೀತಿ ಎದುರಾಗಿದೆ.
ನೋಡಲು ಮುದ್ದಾಗಿ ಕಂಡರೂ ಬಹಳ ಆಕ್ರಮಣಕಾರಿಯಾಗಿರುವ ಹಿಮ ಕರಡಿಗಳು ತೀವ್ರ ಹಿಮಾಚ್ಛಾದಿತವಾಗಿರುವ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ. ಆರ್ಕ್ಟಿಕ್ ಪ್ರದೇಶ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡುಬರುವ ಹಿಮಕರಡಿಗಳ ಸಂತತಿ ನಾಶವಾಗುವ ಅಪಾಯಕ್ಕೆ ಸಿಲುಕಿವೆ. ಆರ್ಕ್ಟಿಕ್ ಪ್ರದೇಶಗಳಲ್ಲಿ ಉಷ್ಣತೆ ಹೆಚ್ಚಾಗುತ್ತಿದ್ದು, ಹಿಮ ವ್ಯಾಪಕವಾಗಿ ಕರಗುತ್ತಿವೆ. ಜತೆಗೆ ಇಲ್ಲಿ ಮಾನವ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಅವುಗಳ ಬದುಕಿಗೆ ಮಾರಕವಾಗಿ ಪರಿಣಮಿಸಿದೆ.
ಸಮುದ್ರದ ಉಷ್ಣತೆ ಹೆಚ್ಚಳ 3.6 ಬಿಲಿಯನ್ ಹಿರೋಶಿಮಾ ಬಾಂಬ್ ದಾಳಿಗೆ ಸಮ
ಇದರಿಂದ ಆಹಾರದ ಕೊರತೆ ಉಂಟಾಗಿ ಹಿಮಕರಡಿಗಳು ಪರಸ್ಪರ ಸಂಘರ್ಷ ನಡೆಸಿ ಒಂದನ್ನೊಂದು ಕೊಂದು ತಿನ್ನುವುದನ್ನು ಆರಂಭಿಸಿವೆ. ಕೆಲವು ಹಿಮಕರಡಿಗಳು ತಮ್ಮ ಮರಿಗಳನ್ನೇ ಕೊಂದು ತಿನ್ನುತ್ತಿವೆ ಎಂಬ ಆಘಾತಕಾರಿ ಸಂಗತಿಯನ್ನು ವಿಜ್ಞಾನಿಗಳು ನೀಡಿದ್ದಾರೆ.
ಆಹಾರದ ಕೊರತೆಯಿಂದ ಮರಿಗಳ ಭಕ್ಷಣೆ
ಹಿಮಕರಡಿಗಳು ತಮ್ಮ ವಂಶದ ಪ್ರಾಣಿಗಳನ್ನೇ ಕೊಂದು ತಿನ್ನುವ ನಿದರ್ಶನಗಳು ಹಿಂದೆಯೂ ಇದ್ದವು. ಅವುಗಳ ಸಂಘರ್ಷದಂತಹ ಸಂದರ್ಭಗಳಲ್ಲಿ ಇದು ಕಾಣಿಸುತ್ತಿತ್ತು. ಆದರೆ ಆಹಾರದ ಕೊರತೆಯಿಂದ ಅವು ತಮ್ಮದೇ ಸಂತತಿಗಳನ್ನು ಕೊಂದು ತಿನ್ನುವ ಉದಾಹರಣೆ ಇರಲಿಲ್ಲ. ಈಗ ಅಂತಹ ಭಯಾನಕ ಪರಿಸ್ಥಿತಿ ಸೃಷ್ಟಿಯಾಗಿದೆ. ಮರಿಗಳನ್ನು ತಿನ್ನುವುದು ಹೆಚ್ಚಾಗಿ ಕಂಡುಬರುತ್ತಿವೆ ಎಂದು ರಷ್ಯಾದ ಮಾಸ್ಕೋದಲ್ಲಿನ ವಿಜ್ಞಾನಿ ಮಾರ್ಡ್ವಿನ್ಸ್ಟೆವ್ ತಿಳಿಸಿದ್ದಾರೆ.
ಹೆಣ್ಣು ಕರಡಿಗಳ ಮೇಲೆ ದಾಳಿ
ಹಿಮಕರಡಿಗಳಲ್ಲಿನ ಸ್ವಯಂ ಭಕ್ಷಣಾ ಪ್ರವೃತ್ತಿ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಇದಕ್ಕೆ ಆಹಾರದ ಕೊರತೆಯೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ಅವಧಿಗಳಲ್ಲಿ ಹಿಮ ಪ್ರದೇಶಗಳಲ್ಲಿ ಸಾಕಷ್ಟು ಆಹಾರ ದೊರಕುವುದಿಲ್ಲ. ಆಗ ದೊಡ್ಡ ಗಂಡು ಕರಡಿಗಳು ಮರಿಗಳೊಂದಿಗೆ ಇರುವ ಹೆಣ್ಣು ಕರಡಿಗಳ ಮೇಲೆ ದಾಳಿ ಮಾಡುತ್ತವೆ. ಆರ್ಕ್ಟಿಕ್ನಲ್ಲಿ ಮಾನವ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದಲೇ ಈ ಸಮಸ್ಯೆ ಉಲ್ಬಣವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಹ ಆಯ್ತು, ಮುಂದೆ ಕಾದಿದೆ ಬಿಸಿ ಗಾಳಿಯ ಅಪಾಯ: ಜಾಗತಿಕ ತಾಪಮಾನ ವರದಿ
ಸೀಲ್ಗಳೇ ಮುಖ್ಯ ಆಹಾರ
ಆರ್ಕ್ಟಿಕ್ನಲ್ಲಿ ವಿವಿಧ ಕೈಗಾರಿಕೆ ಹಾಗೂ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಹಿಮಕರಡಿಗಳ ಆಹಾರ ಬೇಟೆಯನ್ನು ಕಂಡಿದ್ದಾರೆ. ಸಾಮಾನ್ಯವಾಗಿ ಹಿಮಕರಡಿಗಳು ಹಿಮ ಸಮುದ್ರದಲ್ಲಿನ ವಾಸಿಸುವ ಸೀಲ್ಗಳನ್ನು ಬೇಟೆಯಾಡಿ ತಿನ್ನುತ್ತವೆ. ಆದರೆ ಹಿಮ ಕರಗಿ ನೀರಾಗುತ್ತಿರುವುದರಿಂದ ಸಮುದ್ರಗಳಲ್ಲಿ ಇಳಿಯಲು ಅವುಗಳಿಗೆ ಸಾಧ್ಯವಾಗುತ್ತಿಲ್ಲ. ಅವು ಅನಿವಾರ್ಯವಾಗಿ ಸಮುದ್ರದ ದಡದಲ್ಲಿಯೇ ಉಳಿಯುವಂತಾಗಿದೆ.
|
ಗಲ್ಫ್ ಆಫ್ ಓಬ್ನಿಂದ ಹಾನಿ
ಹಿಮಕರಡಿಗಳ ಅಸ್ತಿತ್ವಕ್ಕೆ ಮಾನವ ಚಟುವಟಿಕೆಗಳು ದೊಡ್ಡ ಮಟ್ಟದ ಸಂಚಕಾರ ಒಡ್ಡಿವೆ. ಆರ್ಕ್ಟಿಕ್ ಸಮುದ್ರ ತೀರದ ಗಲ್ಫ್ ಆಫ್ ಓಬ್ ಕೊಲ್ಲಿಯಲ್ಲಿ ಆರ್ಕ್ಟಿಕ್ ನೈಸರ್ಗಿಕ ದ್ರವ ಅನಿಲವನ್ನು ಹೊರತೆಗೆಯಲಾಗುತ್ತಿದ್ದು, ಅನೇಕ ಹಡಗುಗಳು ಈ ಮಾರ್ಗದಲ್ಲಿ ಓಡಾಡುತ್ತಿವೆ. ಇದರಿಂದ ಹಿಮಕರಡಿಗಳ ದೈನಂದಿನ ಚಟುವಟಿಕೆ, ಜೀವನಕ್ಕೆ ಅಡ್ಡಿಯಾಗುತ್ತಿದೆ. ಹಿಮಕರಡಿಗಳ ಬದುಕಿನ ಮೇಲೆ ಗಲ್ಫ್ ಆಫ್ ಓಬ್ ತೀವ್ರ ಹೊಡೆತ ನೀಡಿದೆ.
ಆಹಾರ ಸಂಗ್ರಹಿಸುತ್ತಿರುವ ಹಿಮಕರಡಿಗಳು
ಒಮ್ಮೆ ಆಹಾರ ಸಂಪಾದಿಸಿ ತಿಂದಾಗ ಮತ್ತೆ ಅಗತ್ಯಬಿದ್ದಾಗ ತಿನ್ನಲು ಬೇಕಾಗುತ್ತದೆ ಎಂದು ಕಂದು ಕರಡಿಗಳು ಆಹಾರವನ್ನು ಬಚ್ಚಿಡುವ ಅಭ್ಯಾಸ ಹೊಂದಿವೆ. ಆದರೆ ಈ ರೀತಿ ಪ್ರವೃತ್ತಿ ಹಿಮ ಕರಡಿಗಳಲ್ಲಿ ಇರಲಿಲ್ಲ. ಈಗ ಹಿಮ ಕರಡಿಗಳು ಕೂಡ ತಾವು ಕೊಂದು ತಿಂದ ಪ್ರಾಣಿಯ ಆಹಾರವನ್ನು ಹಿಮದ ಅಡಿಯಲ್ಲಿ ಹುದುಗಿಸಿ ಬಳಿಕ ಹಸಿವಾದಾಗ ಮತ್ತೆ ತಿನ್ನಲು ಆರಂಭಿಸಿವೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಿಮ ಕರಡಿಗಳು ಜೀವನಕ್ರಮವನ್ನೇ ಬದಲಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗುತ್ತಿವೆ.
ಕರಗುತ್ತಿರುವ ಹಿಮದಿಂದ ಸಮಸ್ಯೆ
ಹಿಮಕರಡಿಗಳು ದಟ್ಟ ಹಿಮದ ವಾತಾವರಣದ ಹೊರತಾಗಿ ಬೇರೆಡೆ ವಾಸಿಸಲಾರವು. ಆರ್ಕ್ಟಿಕ್ನಲ್ಲಿನ ಹಿಮಕರಡಿಗಳು ಸಮುದ್ರದಲ್ಲಿ ಬೇಟೆಯಾಡುತ್ತವೆ. ಸಮುದ್ರದ ನಡುವೆ ಸಾಗಲು ಹಿಮದ ಸಹಾಯ ಅತ್ಯಗತ್ಯ. ಆದರೆ ಜಾಗತಿಕ ತಾಪಮಾನದಿಂದಾಗಿ ಹಿಮ ಕರಗುತ್ತಿರುವುದರಿಂದ ಅವುಗಳಿಗೆ ಸಮುದ್ರದ ಮಧ್ಯೆ ಹೋಗಿ ಬೇಟೆಯಾಡಲು ಸಾಧ್ಯವಾಗುತ್ತಿಲ್ಲ.
ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ
ಹಿಮಕರಡಿಗಳ ಸಂತಾನೋತ್ಪತ್ತಿ ಪ್ರಮಾಣ ತೀರಾ ಕಡಿಮೆ. ಚಳಿಗಾಲದ ಮಧ್ಯ ಅವಧಿಯಲ್ಲಿ ಹಿಮಕರಡಿಗಳು ಒಂದು ಅಥವಾ ಎರಡು ಮರಿಗಳಿಗೆ ಜನ್ಮ ನೀಡುತ್ತವೆ. ಈ ಮರಿಗಳು ತಾಯಿ ಜತೆಗೆ ಎರಡು ವರ್ಷ ಇರುತ್ತವೆ. ಹೆಣ್ಣು ಕರಡಿಗಳು ಪ್ರತಿ ಮೂರು ವರ್ಷಕ್ಕೆ ಒಮ್ಮೆ ಮಾತ್ರ ಗರ್ಭಧರಿಸುತ್ತವೆ. ಹಾಗೆಯೇ ಇವು ಹುಟ್ಟಿದ ಐದಾರು ವರ್ಷಗಳವರೆಗೆ ಸಂತಾನೋತ್ಪತ್ತಿಯ ಸಾಮರ್ಥ್ಯ ಪಡೆದಿರುವುದಿಲ್ಲ.