ನನಗೆ ವಕೀಲರು ಬೇಡ, ನಾನೇ ವಾದ ಮಾಡ್ತೀನಿ ಎಂದ ಉಗ್ರ
ರೈಸ್ಟ್ಚರ್ಚ್, ಮಾರ್ಚ್ 18: ನ್ಯೂಜಿಲೆಂಡ್ನಲ್ಲಿ ಮಸೀದಿ ಮೇಲೆ ಗುಂಡಿನ ದಾಳಿ ನಡೆಸಿ ಸುಮಾರು 50 ಮಂದಿಯನ್ನು ಹತ್ಯೆ ಮಾಡಿದ ಆಸ್ಟ್ರೇಲಿಯಾದ ಉಗ್ರ ಬ್ರೆಂಟನ್ ಟೆರಾಂಟ್ ತನ್ನ ಪರ ವಕೀಲರನ್ನು ವಜಾಗೊಳಿಸಿದ್ದು, ತಾನೇ ಸ್ವತಃ ವಾದ ಮಂಡಿಸಲು ಮುಂದಾಗಿದ್ದಾನೆ.
ನ್ಯೂಜಿಲೆಂಡ್ ಶೂಟೌಟ್ : ಹತ್ಯೆಯಾದ 50 ಜನರಲ್ಲಿ ಐವರು ಭಾರತೀಯರು
ಇದರಿಂದ ಆತ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತನ್ನ ಉಗ್ರ ದೃಷ್ಟಿಕೋನ, ಚಿಂತನೆಗಳ ಬಗ್ಗೆ ಹೇಳಿಕೊಳ್ಳುವ ಆತಂಕ ಆವರಿಸಿದೆ.
'ಆ ಅಪರಿಚಿತ ರಕ್ಷಣೆಗೆ ಮುಂದಾಗದಿದ್ದರೆ ಇನ್ನಷ್ಟು ಸಾವು-ನೋವಾಗ್ತಿತ್ತು'
ಕ್ರೈಸ್ಟ್ಚರ್ಚ್ನ ನ್ಯಾಯಾಲಯದಲ್ಲಿ ಶನಿವಾರ ಟೆರಾಂಟ್ನನ್ನು ಪ್ರತಿನಿಧಿಸಿದ್ದ ರಿಚರ್ಡ್ ಪೀಟರ್ಸ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಟೆರಾಂಟ್ ತನ್ನ ನಡೆಯ ಬಗ್ಗೆ ಸ್ಪಷ್ಟವಾಗಿರುವಂತೆ ಕಾಣಿಸುತ್ತಿದ್ದು, ಆತ ಮಾನಸಿಕವಾಗಿ ಸ್ಥಿರವಾಗಿದ್ದಾನೆ ಎಂದು ತಿಳಿಸಿದ್ದಾರೆ.
ಆರೋಪಿಯು ನ್ಯಾಯಾಲಯದಲ್ಲಿ ಸ್ವತಃ ವಾದ ಮಂಡಿಸಲು ಹಠ ಹಿಡಿದಿದ್ದಾನೆ. ಹೀಗಾಗಿ ತಮ್ಮ ಕೆಲಸ ಶನಿವಾರದ ವಿಚಾರಣೆಯೊಂದಿಗೆ ಮುಕ್ತಾಯಗೊಂಡಿದೆ ಎಂದು ಪೀಟರ್ಸ್ ತಿಳಿಸಿದ್ದಾರೆ.
ಟೆರಾಂಟ್ ನಿವಾಸಗಳಲ್ಲಿ ಶೋಧ
ಕೊಲೆ ಆರೋಪದಲ್ಲಿ ನ್ಯಾಯಾಲಯಕ್ಕೆ ಶನಿವಾರ ಹಾಜರಾಗಿದ್ದ ಟೆರಾಂಟ್ನನ್ನು ಏಪ್ರಿಲ್ 5ರವರೆಗೂ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಆತನಿಗೆ ಸಂಬಂಧಿಸಿದ ನ್ಯೂಸೌಥ್ವೇಲ್ಸ್ನ ಎರಡು ಮನೆಗಳಲ್ಲಿ ಆಸ್ಟ್ರೇಲಿಯಾ ಪೊಲೀಸರು ಸೋಮವಾರ ಶೋಧ ನಡೆಸಿದ್ದಾರೆ.
ಸ್ಯಾಂಡಿ ಬೀಚ್ ಪಟ್ಟಣದಲ್ಲಿರುವ ಟೆರಾಂಟ್ನ ಸಹೋದರಿಯ ಮನೆಯಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 8.30ರ ಸಮಯಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಬಳಿಕ ಲಾರೆನ್ಸ್ ಪಟ್ಟಣದ ಎರಡನೆಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಸಂಗ್ರಹಿಸಿದ ಮಾಹಿತಿಗಳು ನ್ಯೂಜಿಲೆಂಡ್ ಪೊಲೀಸರ ತನಿಖೆಗೆ ನೆರವು ನೀಡಬಹುದು ಎಂದು ಆಸ್ಟ್ರೇಲಿಯಾ ಫೆಡರಲ್ ಪೊಲೀಸ್ ಮತ್ತು ನ್ಯೂ ಸೌಥ್ ವೇಲ್ಸ್ ಪೊಲೀಸರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಾಳಿಯ ಹಿನ್ನೆಲೆಯಲ್ಲಿ ಈ ಮನೆಗಳಲ್ಲಿದ್ದ ಉಗ್ರನ ತಾಯಿ ಮತ್ತು ಸಹೋದರಿಯನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ನ್ಯೂಜಿಲೆಂಡ್ ನಲ್ಲಿ ಕರಾಳ ಶುಕ್ರವಾರ : ಮಸೀದಿಯಲ್ಲಿ ರಕ್ತದೋಕುಳಿ
ನೇರ ಪ್ರಸಾರ ಮಾಡಿದ್ದ
ಶುಕ್ರವಾರ ಪ್ರಾರ್ಥನೆಗೆಂದು ಅಪಾರ ಸಂಖ್ಯೆಯಲ್ಲಿ ಮಸೀದಿಗಳಲ್ಲಿ ಸೇರಿದ್ದ ಮುಸ್ಲಿಮರ ಮೇಲೆ ಆಸ್ಟ್ರೇಲಿಯಾ ಮೂಲದ ಟೆರಾಂಟ್ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದ. ಎರಡು ಮಸೀದಿಗಳ ಮೇಲೆ ಸುಮಾರು 36 ನಿಮಿಷ ದಾಳಿ ನಡೆಸಿದ್ದ ಆತ 50 ಮಂದಿಯನ್ನು ಹತ್ಯೆ ಮಾಡಿದ್ದ. ಅಲ್ಲದೆ, ಈ ಘಟನೆಯನ್ನು 17 ನಿಮಿಷಗಳ ಕಾಲ ಫೇಸ್ಬುಕ್ನಲ್ಲಿ ನೇರ ಪ್ರಸಾರ ಮಾಡಿದ್ದ.
ಯೋಜಿತ ದಾಳಿ ನಡೆಸಿದ್ದ ಉಗ್ರ
ಸ್ವಯಂಚಾಲಿತ ಶಸ್ತ್ರಾಸ್ತ್ರ ಬಳಸಿದ್ದ 28 ವರ್ಷದ ಉಗ್ರ, ವಾರದ ಪ್ರಾರ್ಥನೆಗೆಂದು ಬರುವ ಜನರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ತಯಾರಿ ನಡೆಸಿದ್ದ. ಇತಿಹಾಸದಲ್ಲಿ ಕ್ರೈಸ್ತರು, ಮುಸ್ಲಿಮರ ವಿರುದ್ಧ ನಡೆಸಿದ ಹೋರಾಟಗಳಿಂದ ಆತ ಸ್ಫೂರ್ತಿ ಪಡೆದಿದ್ದ. ಅಲ್ಲದೆ ಅಪ್ಪಟ ಬಲಪಂಥೀಯ ವಿಚಾರಧಾರೆಗಳ ಪ್ರಭಾವಕ್ಕೆ ಒಳಗಾಗಿದ್ದ. ತನ್ನ ದಾಳಿಯ ಗುರಿ ಮತ್ತು ಉದ್ದೇಶಗಳ ಬಗ್ಗೆ 74 ಪುಟಗಳ ಪ್ರಣಾಳಿಕೆಯನ್ನು ಆತ ಸಿದ್ಧಪಡಿಸಿದ್ದ.
ದ್ವೇಷ ಭಾವನೆ: ನಾಲ್ವರ ಬಂಧನ
ಉಗ್ರರ ದಾಳಿಯ ಬಳಿಕ ದ್ವೇಷ ಭಾವನೆ ಕೆರಳಿಸುವ ಸಂಗತಿಗಳನ್ನು ಹರಡುತ್ತಿದ್ದ ನಾಲ್ವರನ್ನು ಲಂಡನ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕ್ರೈಸ್ಟ್ಚರ್ಚ್ನಲ್ಲಿ ನಡೆದ ದಾಳಿಯ ನಂತರ ಕೆಲವರು ಜನಾಂಗೀಯ ದ್ವೇಷದ ಭಾವನೆ ಬಿತ್ತಲಾಗುತ್ತಿದೆ. ಟ್ಯಾಕ್ಸಿ ಚಾಲಕನೊಬ್ಬನನ್ನು ನಿಂದಿಸಿ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನನ್ನು ಕ್ವೀನ್ಸ್ವೇನಲ್ಲಿ ಬಂಧಿಸಲಾಗಿದೆ. ದ್ವೇಷಪೂರಿತ ಹೇಳಿಕೆ ನೀಡಿದ ಆರೋಪದಲ್ಲಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಬರಹ ಪ್ರಕಟಿಸಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಉಗ್ರನಿಗೆ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.