ಯುದ್ಧಕ್ಕೆ ಸಿದ್ಧರಾಗುವಂತೆ ಯೋಧರಿಗೆ ಕರೆ ಕೊಟ್ಟಿತಾ ಚೀನಾ?
ನವದೆಹಲಿ, ಅಕ್ಟೋಬರ್.14: ಭಾರತ ಚೀನಾ ಗಡಿಯ ಪೂರ್ವ ಲಡಾಖ್ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದೆ. ಉಭಯ ರಾಷ್ಟ್ರಗಳ ಸೇನೆಗಳ ನಡುವಿನ ಮುಖಾಮುಖಿಯಾಗುತ್ತಿರುವ ಈ ಸಂದರ್ಭದಲ್ಲಿ ತಮ್ಮ ಸೈನಿಕರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಂದೇಶವೊಂದನ್ನು ರವಾನಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ಯುದ್ಧಕ್ಕೆ ಸಿದ್ಧರಾಗಿ ಇರುವಂತೆ ಯೋಧರಿಗೆ ಚೀನಾ ಸೂಚನೆ ನೀಡಿದ್ದಾರೆ. ಚೀನಾದ ಯೋಧರು ದೇಶಕ್ಕೆ ಸಂಪೂರ್ಣ ನಿಷ್ಠಾವಂತರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಹಾಂಕಾಂಗ್ ಜಾಗಕ್ಕಾಗಿ ಬಡಿದಾಟ: ಚೀನಾ ವಿರುದ್ಧ ಅಮೆರಿಕ ಯುದ್ಧ..?
ಸಿಎನ್ಎನ್ ವರದಿ ಪ್ರಕಾರ, ಕಳೆದ ಮಂಗಳವಾರ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗೂಂಗ್ ದಾಂಗ್ ಸೇನಾ ನೆಲೆಗೆ ಭೇಟಿ ನೀಡಿದ್ದರು ಎಂದಿದೆ. ಅಲ್ಲದೇ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೀಡಿರುವ ಈ ಹೇಳಿಕೆಗಳ ಬಗ್ಗೆ ಚೀನಾ ರಾಜ್ಯ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ ಎಂದು ಉಲ್ಲೇಖಿಸಿದೆ.
ಸೇನೆ ಹುರಿದುಂಬಿಸಿದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್
"ಚೀನಾ ಸೇನಾ ಯೋಧರಲ್ಲಿ ಆತ್ಮಸ್ಥೈರ್ಯ ಮತ್ತು ಯುದ್ಧದ ಪರಿಕಲ್ಪನೆಯನ್ನು ಹುಟ್ಟು ಹಾಕುವ ದೃಷ್ಟಿಯಿಂದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿಕೆ ನೀಡಿದ್ದಾರೆ. ನಾವು ಯಾವಾಗ ಬೇಕಿದ್ದರೂ ಸೂಚನೆ ನೀಡಬಹುದು. ಅಂದು ಯುದ್ಧಕ್ಕೆ ಸಿದ್ಧರಾಗಿರಬೇಕು ಎಂದಿದ್ದಾರೆ. ಪೀಪಲ್ಸ್ ಲಿಬರೇಶನ್ ಆರ್ಮಿ ಮೆರೈನ್ ಕಾರ್ಪ್ಸ್ನಲ್ಲಿ ಅವರು ಮಾಡಿದ ಭಾಷಣದಲ್ಲಿ, ಕ್ಸಿ ಜಿನ್ ಪಿಂಗ್ ಅವರು "ಸಂಪೂರ್ಣ ನಿಷ್ಠಾವಂತ, ಸಂಪೂರ್ಣವಾಗಿ ಶುದ್ಧ ಮತ್ತು ಸಂಪೂರ್ಣವಾಗಿ ವಿಶ್ವಾಸಾರ್ಹರು" ಎಂದು ಹೇಳಿದ್ದಾರೆ. ಇದರ ಜೊತೆಗೆ ಹೆಚ್ಚಿನ ಎಚ್ಚರಿಕೆ ಸ್ಥಿತಿ ಕಾಪಾಡಿಕೊಳ್ಳಲು ಸೈನಿಕರನ್ನು ಕೇಳಿದ್ದಾರೆ ಎಂದು ಕ್ಸಿನುವಾ ವರದಿ ಮಾಡಿದೆ.
ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿಕೆ ಹಿಂದಿನ ಉದ್ದೇಶ?
ಚೀನಾ ಯೋಧರು ಎಂಥಾ ಸ್ಥಿತಿಯಲ್ಲೂ ಯುದ್ಧಕ್ಕೆ ಸನ್ನದ್ಧರಾಗಿ ಇರಬೇಕು ಎನ್ನುವಂತಾ ಎಚ್ಚರಿಕೆ ಮತ್ತು ಹೇಳಿಕೆ ಹಿಂದಿನ ಉದ್ದೇಶ ಏನು ಎಂಬುದರ ಬಗ್ಗೆ ಇಂದಿಗೂ ಸ್ಪಷ್ಟತೆ ಸಿಕ್ಕಿಲ್ಲ. ಭಾರತವನ್ನು ಉದ್ದೇಶಿಸಿ ಈ ಹೇಳಿಕೆ ನೀಡಿದ್ದಾರೋ ಅಥವಾ ಅಮೆರಿಕಾವನ್ನು ಉದ್ದೇಶಿಸಿ ಈ ಎಚ್ಚರಿಕೆ ನೀಡುತ್ತಾರೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಏಕೆಂದರೆ ಲಡಾಖ್ ಗಡಿ ಭಾರತ ಚೀನಾ ನಡುವೆ ಸಂಘರ್ಷ ನಡೆಯುತ್ತಿದ್ದರೆ, ದಕ್ಷಿಣ ಚೀನಾ ಸಮುದ್ರದ ಗಡಿಯಲ್ಲಿ ಅಮೆರಿಕಾ ಮತ್ತು ಚೀನಾ ನಡುವೆ ತಿಕ್ಕಾಟ ನಡೆಯುತ್ತಿದೆ.
ಚೀನಾದ ಸೇನಾ ನೆಲೆ ಭೇಟಿಗೆ ಕಾರಣವೇನು?
ಕ್ಸಿ ಜಿನ್ ಪಿಂಗ್ ಅವರು ಪಕ್ಷದ ನಾಯಕತ್ವವನ್ನು ಎತ್ತಿಹಿಡಿಯುವ ಅವಶ್ಯಕತೆಯಿದೆ. ಪಕ್ಷದಲ್ಲಿ ಸಮಗ್ರ ಮತ್ತು ಕಟ್ಟುನಿಟ್ಟಾದ ಆಡಳಿತ ನಡೆಸಲು ಸಂಪೂರ್ಣ ನಿಷ್ಠಾವಂತ, ಸಂಪೂರ್ಣ ಶುದ್ಧ ಮತ್ತು ಸಂಪೂರ್ಣ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ. ಇದರ ಜೊತೆಗೆ "ರೂಪಾಂತರ ಮತ್ತು ನಿರ್ಮಾಣ ವೇಗ ಹೆಚ್ಚಿಸುವುದು. ಯುದ್ಧ ಸಾಮರ್ಥ್ಯ ಸುಧಾರಣೆ, ಅನೇಕ ಸಾಮರ್ಥ್ಯ ವೃದ್ಧಿಸುವುದಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಕ್ಸಿನುವಾ ವರದಿ ಮಾಡಿದೆ.
ಚೀನಾ ಮತ್ತು ಭಾರತದ ನಡುವೆ ಶಾಂತಿ ಮಾತುಕತೆ
ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ ಗಡಿಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಹಲವು ಸುತ್ತಿನ ಶಾಂತಿ ಮಾತುಕತೆಯನ್ನು ನಡೆಸಲಾಗಿದೆ. ಮಂಗಳವಾರವಷ್ಟೇ ಭಾರತ ಚೀನಾ ಸೇನಾ ಕಮಾಂಡರ್ ಹಂತದ 7ನೇ ಸಭೆ ನಡೆಸಲಾಗಿತ್ತು. ಈಗಾಗಲೇ ವಿದೇಶಾಂಗ ಸಚಿವರು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಯಭಾರಿಗಳ ನಡುವೆ ಚರ್ಚೆ ನಡೆಸಿದ್ದರೂ ಕೂಡಾ ಯುವುದೇ ಒಮ್ಮತದ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ವಿವಾದಿತ ಗಡಿ ಪ್ರದೇಶಗಳಲ್ಲಿ ಎರಡೂ ಕಡೆಗಳಿಂದ ಸೇನಾ ಪ್ರಮಾಣವು ಹೆಚ್ಚಾಗುತ್ತಲಿದ್ದು, ಗಡಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿದೆ.