ಲಡಾಖ್ ಲಡಾಯಿ; ಭಾರತಕ್ಕೆ ಚೀನಾ ಕೊಟ್ಟ ಎಚ್ಚರಿಕೆ ವೈಖರಿ ಹೇಗಿತ್ತು?
ನವದೆಹಲಿ, ಜೂನ್.06: ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಚೀನಾ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವುದಕ್ಕೆ ಬಯಸುತ್ತದೆ. ಆದರೆ ಅಂತಾರಾಷ್ಟ್ರೀಯ ಗಡಿಯಲ್ಲಿ ಒಂದು ಇಂಚು ಜಾಗವನ್ನೂ ಬಿಟ್ಟುಕೊಡುವುದಕ್ಕೆ ಸಿದ್ಧವಿಲ್ಲ ಎಂದು ಚೀನಾ ಹೇಳಿದೆ.
Recommended Video
ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ದಿನಪತ್ರಿಕೆಯ ಸಂಪಾದಕೀಯದಲ್ಲಿ ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಲಾಗಿದೆ. ಎರಡು ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಬೇಕಾಗಿದೆ. ಭಾರತದ ಜೊತೆಗೆ ಚೀನಾ ಭ್ರಾತೃತ್ವವನ್ನು ಬಯಸುತ್ತದೆಯೇ ವಿನಃ ಯಾವುದೇ ಕಾರಣಕ್ಕೂ ಶತ್ರುತ್ವ ಕಟ್ಟಿಕೊಳ್ಳುವುದಕ್ಕೆ ಬಯಸುವುದಿಲ್ಲ.
ಭಾರತ-ಚೀನಾ ಕಮಾಂಡರ್ಸ್ ಸಭೆ ಬಗ್ಗೆ ಸೇನಾ ವಕ್ತಾರರು ಹೇಳಿದ್ದೇನು?
ಲಡಾಕ್ ಗಡಿ ವಿಚಾರದಲ್ಲಿ ಅಮೆರಿಕಾ ಬೆಂಬಲವಿದೆ ಎಂದು ಭಾರತವು ಎಂದಿಗೂ ನೆಚ್ಚಿಕೊಂಡು ಕೂರಬಾರದು. ಅಮೆರಿಕಾವು ಬೆಂಬಲ ನೀಡುವ ನೆಪದಲ್ಲಿ ಭಾರತವನ್ನು ಮೂರ್ಖರನ್ನಾಗಿ ಮಾಡುವುದಕ್ಕೆ ಹೊರಟಿದೆ ಎಂದು ಗ್ಲೋಬಲ್ ಟೈಮ್ಸ್ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಚೀನಾ ಶತ್ರುತ್ವ ಕಟ್ಟಿಕೊಳ್ಳುವುದಕ್ಕೆ ಬಯಸುವುದಿಲ್ಲ
ಅಂತಾರಾಷ್ಟ್ರೀಯ ಗಡಿ ವಿಚಾರದಲ್ಲಿ ಭಾರತದ ಮೇಲೆ ಬೀಳುವುದಕ್ಕೆ ಚೀನಾ ಬಯಸುವುದಿಲ್ಲ. ಕಳೆದ ಹಲವು ದಶಕಗಳಿಂದಲೂ ನೆರೆಹೊರೆಯ ದೇಶಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದುವುದೇ ಚೀನಾದ ರಾಜನೀತಿಯಾಗಿದೆ. ಗಡಿ ವಿವಾದಗಳು ಎದುರಾದಲ್ಲಿ ಶಾಂತಿಯುತ ಮಾರ್ಗದಲ್ಲಿ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಚೀನಾ ಇಷ್ಟಪಡುತ್ತದೆ. ಇದನ್ನು ಬಿಟ್ಟರೆ ಭಾರತದ ಜೊತೆಗೆ ಶತ್ರುತ್ವ ಬೆಳೆಸಿಕೊಳ್ಳುವುದಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.
ಭಾರತಕ್ಕೆ ಪರೋಕ್ಷ ಎಚ್ಚರಿಕೆ ಸಂದೇಶ ಕೊಟ್ಟಿತಾ ಚೀನಾ?
ಚೀನಾ ಯಾವುದೇ ಕಾರಣಕ್ಕೂ ಒಂದು ಇಂಚು ಜಾಗವನ್ನೂ ಬಿಟ್ಟುಕೊಡುವ ಮಾತಿಲ್ಲ. ಒಮ್ಮೆ ಭಾರತವು ರಾಜತಾಂತ್ರಿಕ ತಪ್ಪು ನಡೆಯನ್ನು ತೋರಿದ್ದಲ್ಲಿ ಚೀನಾ ಅದನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಬಲವಾದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಚೀನಾ ಯಾವುದೇ ಸೇನಾ ಕಾರ್ಯಾಚರಣೆಗಳನ್ನು ನಡೆಸುತ್ತಿಲ್ಲ ಎಂದು ಭಾರತಕ್ಕೆ ಅರಿವಿದೆ ಎಂದು ಭಾವಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ-ಚೀನಾ ನಡುವೆ ಶಾಂತಿಯುತ ಸಹಕಾರವನ್ನು ಭಾರತ ಕೂಡಾ ಬಯಸುತ್ತದೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.
ಬಾಹ್ಯಶಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ ಎಂದ ಚೀನಾ
ಒಂದು ವೇಳೆ ಗಡಿ ವಿಷಯದಲ್ಲಿ ಭಾರತ-ಚೀನಾ ರಾಷ್ಟ್ರಗಳು ಮುಖಾಮುಖಿಯಾದರೆ, ಇಡೀ ಹಿಮಾಲಯನ್ ಪ್ರದೇಶ ಮತ್ತು ಭಾರತೀಯ ಉಪಖಂಡವು ಅಸ್ಥಿರತೆ ಎದುರಿಸಬೇಕಾಗುತ್ತದೆ. ಯಾವುದೇ ಬಾಹ್ಯ ಶಕ್ತಿಯು ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವುದು ಮತ್ತು ಸ್ನೇಹಪರ ಸಹಕಾರವು ಉಭಯ ದೇಶಗಳ ಹಿತಾಸಕ್ತಿಗಳಿಗೆ ಅನುಗುಣವಾಗಿರುತ್ತದೆ "ಎಂದು ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸ್ ನಲ್ಲಿ ಉಲ್ಲೇಖಿಸಲಾಗಿದೆ.
ಸ್ವಾರ್ಥ ಚಿಂತನೆಯಲ್ಲಿರುವ ಅಮೆರಿಕಾವನ್ನು ನೆಚ್ಚಿಕೊಳ್ಳದಿರಿ
ಭಾರತ-ಚೀನಾ ಗಡಿ ವಿಚಾರದಲ್ಲಿ ಅಮೆರಿಕಾವನ್ನು ನೆಚ್ಚಿಕೊಂಡು ಭಾರತವು ಮೂರ್ಖತನ ತೋರಬಾರದು. ಸ್ವಾರ್ಥ ಚಿಂತನೆ ಹೊಂದಿರುವ ಅಮೆರಿಕಾದಿಂದ ಯಾವುದೇ ರೀತಿ ನೆರವು ಸಿಗುವುದಿಲ್ಲ. ಪ್ರತಿಬಾರಿ ಚೀನಾ-ಭಾರತ ನಡುವೆ ಗಡಿ ವಿವಾದ ಸೃಷ್ಟಿಯಾದಾಗ ಭಾರತದ ಬೆಂಬಲಕ್ಕೆ ನಿಲ್ಲುವ ಅಮೆರಿಕಾದಿಂದ ಸಂಘರ್ಷ ಮತ್ತಷ್ಟು ಹೆಚ್ಚಾಗುತ್ತಿದೆ. ಚೀನಾದ ಕಾರ್ಯತಾಂತ್ರಿಕ ಪರಿಸ್ಥಿತಿ ಅಷ್ಟು ಭಯಾನಕವಾಗಿಲ್ಲ. ಅಮೆರಿಕಾದ ಗೊಡ್ಡು ಬೆದರಿಕೆಗೆ ಚೀನಾ ಎಂದಿಗೂ ಹೆದರುವುದಿಲ್ಲ. ಚೀನಾವನ್ನು ಹೆದರಿಸಲು ಅಮೆರಿಕಾದ ಸೇನೆಯನ್ನು ಬಳಸಿಕೊಳ್ಳಲು ಮುಂದಾದರೆ ಅದನ್ನು ಹೇಗೆ ತಾನು ಸಹಿಸಲು ಸಾಧ್ಯವಾಗುತ್ತದೆ ಎಂದು ಗ್ಲೋಬಲ್ ಟೈಮ್ಸ್ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಭಾರತ-ಚೀನಾ ಕಮಾಂಡರ್ ಸಭೆ ಹಿನ್ನೆಲೆ ವಿಶೇಷ ಸಂಪಾದಕೀಯ
ಕಳೆದ 28 ದಿನಗಳಿಂದ ಲಡಾಖ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆ ಚೀನಾದ ದಕ್ಷಿಣ ಕ್ಸಿನ್ ಜಿಯಾಂಗ್ ಜಿಲ್ಲೆಯ ಕಮಾಂಡರ್ ಆಗಿರುವ ಮೇಜರ್ ಜನರಲ್ ಲಿಯು ಲಿನ್ ಅವರು ಭಾರತದ ಕಾರ್ಪ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ನೇತೃತ್ವದ ನಿಯೋಗದ ನಡುವೆ ಶಾಂತಿ ಮಾತುಕತೆ ನಡೆಯಿತು. ಪೂರ್ವ ಲಡಾಖ್ ನ ಚುಶುಲ್ ಸೆಕ್ಟರ್ ನಲ್ಲಿರುವ ಮಾರ್ಡೋ ಪ್ರದೇಶದ ಗಡಿ ಸುರಕ್ಷತಾ ಚರ್ಚೆಯ ಕೇಂದ್ರದಲ್ಲಿ ಉಭಯ ರಾಷ್ಟ್ರಗಳ ಮಿಲಿಟರಿ ಕಮಾಂಡರ್ಸ್ ಶಾಂತಿ ಮಾತುಕತೆ ನಡೆಸಿದರು.