ಕೊರೊನಾ ವೈರಸ್ ಮೊದಲು ಪತ್ತೆಹಚ್ಚಿದ ವೈದ್ಯ ವೈರಸ್ನಿಂದ ಸಾವು: ಹೀಗೊಂದು ಆಘಾತಕಾರಿ ಕಥೆ
ಬೀಜಿಂಗ್, ಫೆಬ್ರವರಿ 6: ಕೊರೊನಾ ವೈರಸ್ ಅಪಾಯಕಾರಿಯಾಗಿ ಹರಡುತ್ತಿದೆ ಎಂದು ಚೀನಾದ ಸರ್ಕಾರಕ್ಕೆ ಮೊದಲ ಬಾರಿಗೆ ಎಚ್ಚರಿಕೆ ನೀಡಿದ್ದ ವೈದ್ಯ ವೈರಸ್ನಿಂದ ಮೃತಪಟ್ಟಿದ್ದಾರೆ.
ವುಹಾನ್ನಲ್ಲಿ ಸಾರ್ಸ್ ಸ್ವರೂಪದ ರೋಗವೊಂದು ಹರಡುತ್ತಿದೆ ಎಂದು ವೈದ್ಯ ಲಿ ವೆನ್ಲಿಯಾಂಗ್ ಮೊದಲ ಬಾರಿಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಅವರು ನೀಡಿದ್ದ ಮಾಹಿತಿಯನ್ನು ಚೀನಾ ಸರ್ಕಾರ ಆರಂಭದಲ್ಲಿ ತಿರಸ್ಕರಿಸಿತ್ತು. ಚಿಕಿತ್ಸೆಗೆಂದು ಬಂದಿದ್ದ ರೋಗಿಗಳನ್ನು ತಪಾಸಣೆ ಮಾಡುವಾಗ ವಿಚಿತ್ರ ಲಕ್ಷಣಗಳನ್ನು ಕಂಡಿದ್ದ ವೆನ್ಲಿಂಗ್ ಅವರಿಗೂ ಬಳಿಕ ಸೋಂಕು ತಗುಲಿತ್ತು. ಮಾರಕ ಕೊರೊನಾ ವೈರಸ್ನಿಂದ ಅವರು ಗುರುವಾರ ಮೃತಪಟ್ಟಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಕೊರೊನಾ ವೈರಸ್ ಬಗ್ಗೆ ಮಾಹಿತಿ ಕೊಟ್ಟ ವೈದ್ಯರ ಬಂಧಿಸಿದ್ದ ಚೀನಾ: ಕಾರಣವೇನು?
34 ವರ್ಷದ ವೆನ್ಲಿಯಾಂಗ್ ವುಹಾನ್ ಕೇಂದ್ರ ಆಸ್ಪತ್ರೆಯಲ್ಲಿ ನೇತ್ರವೈದ್ಯರಾಗಿದ್ದರು. ಜಿಲ್ಲೆಯಲ್ಲಿ ಸಾರ್ಸ್ ಮಾದರಿಯ ಮಾರಕ ವೈರಾಣು ಸೋಂಕು ಹರಡುತ್ತಿದೆ ಎಂಬುದನ್ನು ಅವರು ಡಿಸೆಂಬರ್ 30ರಂದೇ ತಮ್ಮ ಸ್ನೇಹಿತರಿಗೆ ಖಾಸಗಿ ಸಂದೇಶಗಳ ಮೂಲಕ ಮಾಹಿತಿ ನೀಡಿದ್ದರು.
ಏಳು ಜನರಲ್ಲಿ ಒಂದ ಸಮಸ್ಯೆ
ಕಳೆದ ವರ್ಷ ಡಿಸೆಂಬರ್ನಲ್ಲಿ ಚೀನಾದ ಕೇಂದ್ರ ಹುಬೆಯಿ ಪ್ರಾಂತ್ಯದ ಪ್ರಾಂತೀಯ ರಾಜಧಾನಿ ವುಹಾನ್ನಲ್ಲಿ ಈ ಸೋಂಕು ಕಾಣಿಸಿದಾಗ ಮೊದಲ ಬಾರಿಗೆ ಅದನ್ನು ಪತ್ತೆಹಚ್ಚಿ ವರದಿ ಮಾಡಿದವರು ವೆನ್ಲಿಯಾಂಗ್.
ತಮ್ಮ ಆಸ್ಪತ್ರೆಗೆ ದಾಖಲಾಗಿರುವ ಏಳು ಮಂದಿ ರೋಗಿಗಳಲ್ಲಿ ಸಾರ್ಸ್ ಮಾದರಿಯ ಲಕ್ಷಣಗಳು ಕಾಣಿಸುತ್ತಿವೆ ಎಂದು ವೆನ್ಲಿಯಾಂಗ್, ಚೀನಾದ ಮೆಸೇಜಿಂಗ್ ಆಪ್, ವಿ ಚಾಟ್ನಲ್ಲಿ ಇತರೆ ವೈದ್ಯರಿಗೆ ಸಂದೇಶದ ಮೂಲಕ ತಿಳಿಸಿದ್ದರು. ಈ ಏಳೂ ರೋಗಿಗಳು ಹುಬೆಯಿದಲ್ಲಿನ ಒಂದೇ ಸೀಫುಡ್ ಮಾರುಕಟ್ಟೆಯಿಂದ ಪ್ರಾಣಿ ಮಾಂಸವನ್ನು ಖರೀದಿಸಿ ತಿಂದಿದ್ದರು ಎಂದೂ ಅವರು ಹೇಳಿದ್ದರು.
ಸಾರ್ಸ್ ಮಾದರಿಯ ವೈರಸ್
ತಾವು ನಡೆಸಿದ ಪರೀಕ್ಷೆಯಲ್ಲಿ ಕಂಡಿರುವಂತೆ ಈ ಕಾಯಿಲೆಯು, 2003ರಲ್ಲಿ ಚೀನಾ ಮತ್ತು ಜಗತ್ತಿನ ಹಲವೆಡೆ ಸುಮಾರು 800 ಮಂದಿಯ ಸಾವಿಗೆ ಕಾರಣವಾಗಿದ್ದ ಸೆವೇರ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಒಳಗೊಂಡಂತೆ ವೈರಸ್ಗಳ ಬೃಹತ್ ಕುಟುಂಬವಾದ ಕೊರೊನಾ ವೈರಸ್ ಆಗಿದೆ ಎಂದು ಅವರು ವಿವರಿಸಿದ್ದರು.
ಇವರೇ.. ಮೊದಲ ಏಳು ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡಿದ್ದು
ತಮ್ಮ ವೈದ್ಯಕೀಯ ಶಾಲಾ ಸ್ನೇಹಿತರು ತಮ್ಮ ಕುಟುಂಬ ಹಾಗೂ ಆಪ್ತರ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಹೊಂದುವಂತೆ ವೆನ್ಲಿಯಾಂಗ್ ಆ ಸಂದೇಶ ಕಳುಹಿಸಿದ್ದರು. ಆದರೆ ಅವರು ಮಾಹಿತಿ ಹೊರಹಾಕಿದ ಕೆಲವೇ ಗಂಟೆಗಳಲ್ಲಿ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಇದು ಕಾಳ್ಗಿಚ್ಚಿನಂತೆ ಹರಡಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
ವೆನ್ಲಿಯಾಂಗ್ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡತೊಡಿತ್ತು. ಇದನ್ನು ಕಂಡು ವೆನ್ಲಿಯಾಂಗ್ ಸ್ವತಃ ದಿಗಿಲುಗೊಂಡಿದ್ದರು. 'ಆನ್ಲೈನ್ನಲ್ಲಿ ನನ್ನ ಸಂದೇಶಗಳು ಹರಿದಾಡುತ್ತಿರುವುದನ್ನು ನೋಡಿದಾಗ ಇದು ನನ್ನ ನಿಯಂತ್ರಣ ತಪ್ಪಿದೆ ಹಾಗೂ ನನ್ನನ್ನು ಶಿಕ್ಷೆಗೆ ಒಳಪಡಿಸಬಹುದು ಎಂದು ಭಯಗೊಂಡಿದ್ದೆ' ಎಂದು ಅವರು ಹೇಳಿಕೊಂಡಿದ್ದರು. ಅದು ಹಾಗೆಯೇ ಆಗಿದ್ದೂ ಹೌದು.
ಕೊರೊನಾ ವೈರಸ್: ಕನ್ನಡಿಗರೇ ವಿದೇಶಕ್ಕೆ ಹೋಗಿದ್ರಾ, 104ಕ್ಕೆ ಕರೆ ಮಾಡಿ!
ಸಮನ್ಸ್ ನೀಡಿದ ಅಧಿಕಾರಿಗಳು
ಗಾಳಿಸುದ್ದಿ ಹರಡುತ್ತಿರುವುದಾಗಿ ವೆನ್ಲಿಯಾಂಗ್ ಮತ್ತು ಇತರೆ ಏಳು ಮಂದಿ ವೈದ್ಯರ ವಿರುದ್ಧ ಚೀನಾದ ಅಧಿಕಾರಿಗಳು ಜ. 3ರಂದು ಸಮನ್ಸ್ ಹೊರಡಿಸಿದರು. ಚೀನಾದಾದ್ಯಂತ ವ್ಯಾಪಕವಾಗಿ ಹರಿದಾಡುತ್ತಿದ್ದ ವದಂತಿಯನ್ನು ತಡೆಯಲು ಕಠಿಣ ತಾಕೀತು ಮಾಡಿದ್ದರು.
ವದಂತಿಗಳನ್ನು ನಂಬಬೇಡಿ, ಗಾಳಿ ಸುದ್ದಿಗಳನ್ನು ಹರಡಬೇಡಿ ಮತ್ತು ಅವುಗಳನ್ನು ನಂಬಬೇಡಿ ಎಂದು ಎಲ್ಲ ನೆಟ್ಟಿಗರಿಗೂ ಪೊಲೀಸರು ಕರೆ ನೀಡಿದ್ದರು.
ತಪ್ಪೊಪ್ಪಿಗೆ ಪತ್ರ ನೀಡಿದ ವೈದ್ಯ!
ಈ ರೀತಿಯ ಸಂದೇಶ ಕಳುಹಿಸುವ ಮೂಲಕ ಅಪರಾಧ ಎಸಗಿದ್ದೇನೆ ಎಂದು ತಪ್ಪೊಪ್ಪಿಗೆಗೆ ವೆನ್ಲಿಯಾಂಗ್ ಪತ್ರಕ್ಕೆ ಸಹಿಹಾಕಬೇಕಾಯಿತು. ಭವಿಷ್ಯದಲ್ಲಿ ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದೂ ಅವರು ಮುಚ್ಚಳಿಕೆ ಬರೆದುಕೊಟ್ಟರು.
ವೆನ್ಲಿಯಾಂಗ್ಗೂ ಬಂತು ವೈರಸ್
ಆದರೆ ಅವರ ಸಂಕಷ್ಟ ಅಷ್ಟಕ್ಕೆ ಮುಗಿಯಲಿಲ್ಲ. ಅವರು ತಮ್ಮ ಕರ್ತವ್ಯಕ್ಕೆ ಕೂಡಲೇ ಮರಳಿದರು. ಕೊರೊನೊ ವೈರಸ್ ತಗುಲಿದ್ದ ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ಅವರಿಗೂ ಸೋಂಕು ವರ್ಗಾವಣೆಯಾಯಿತು. ಕೆಲವು ದಿನಗಳಲ್ಲಿ ಕೆಮ್ಮು ಉಸಿರಾಟದ ಸಮಸ್ಯೆ ಮತ್ತು ಜ್ವರದಂತಹ ಅದೇ ರೀತಿಯ ಲಕ್ಷಣಗಳು ಅವರಲ್ಲಿಯೂ ಕಾಣಿಸಿತು.
ಕೊರೊನಾ ವೈರಸ್: ನಿಮಗೆ ಈ ಮಹತ್ವದ ಅಂಶಗಳು ಗೊತ್ತಿರಲಿ
ಜ. 12ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ದಿನದಿಂದ ದಿನಕ್ಕೆ ಅವರ ದೇಹಾರೋಗ್ಯ ಕ್ಷೀಣಿಸತೊಡಗಿತು. ಅವರನ್ನು ಐಸಿಯುಗೆ ವರ್ಗಾಯಿಸಲಾಯಿತು.
ವೆನ್ಲಿಯಾಂಗ್ ಇನ್ನಿಲ್ಲ
ಜ. 20ರ ವೇಳೆಗೆ ಚೀನಾ ಸರ್ಕಾರಕ್ಕೆ ಪರಿಸ್ಥಿತಿಯ ಗಂಭೀರತೆ ಅರಿವಾಯಿತು. ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸಿತು. ಅದೇ ದಿನ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, 'ಜನರ ಜೀವ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕಿದೆ ಹಾಗೂ ಈ ಮಾರಕ ವೈರಸ್ನ ಹರಡುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಿದೆ' ಎಂದು ಹೇಳಿದ್ದರು.
ವೆನ್ಲಿಯಾಂಗ್ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದ್ದು ಫೆ. 1ರಂದು. ಅದಾಗಿ ಐದು ದಿನಗಳ ಬಳಿಕ ಅವರು ಕೊನೆಯುಸಿರೆಳೆದರು.
ಪೊಲೀಸರ ಮೇಲೆ ಕಿಡಿಕಾರಿದ ಕೋರ್ಟ್
ಮಾರಕ ಕಾಯಿಲೆಯ ಬಗ್ಗೆ ಮಾಹಿತಿ ಹರಿದಾಡುವಾಗ ಅದನ್ನು ವದಂತಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ತಡೆಯೊಡ್ಡುವುದು ತೀರಾ ಕಠಿಣವಾಗಿದೆ. ಇದು ಜನರ ನಂಬಿಕೆಯನ್ನು ಕಡೆಗಣಿಸಿದೆ ಎಂದು ಚೀನಾದ ಸುಪ್ರೀಂಕೋರ್ಟ್, ಪೊಲೀಸರಿಗೆ ಛೀಮಾರಿ ಹಾಕಿದೆ. ಈ ವೈರಸ್ನ ಮಾಹಿತಿಯನ್ನು ಹೊರಹಾಕಿದವರ ವಿಚಾರದಲ್ಲಿ ಪೊಲೀಸರು ಹೆಚ್ಚು ವಿವೇಚನೆಯಿಂದ ವರ್ತಿಸಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡಿದೆ.
ಸಾರ್ವಜನಿಕರು ಈ ವದಂತಿಗಳನ್ನು ನಂಬಿದ್ದರೆ ಅವರು ಮಾಸ್ಕ್ ಧರಿಸುವುದು, ಸೋಂಕು ತಗುಲದಂತೆ ನೋಡಿಕೊಳ್ಳುವುದು ಮತ್ತು ವನ್ಯಜೀವಿ ಮಾರುಕಟ್ಟೆಗಳಿಂದ ದೂರ ಇರುವುದು ಮುಂತಾದವುಗಳನ್ನಷ್ಟೇ ಮಾಡುತ್ತಿದ್ದರು. ಅವುಗಳಿಂದ ಅಂತಹ ಅಪಾಯವೇನೂ ಆಗುತ್ತಿರಲಿಲ್ಲ ಎಂದು ಕೋರ್ಟ್ ಹೇಳಿದೆ.
ಸಾರ್ವಜನಿಕರ ಆಕ್ರೋಶ
ಇದಕ್ಕೆ ಸಾಮಾಜಿಕ ಜಾಲತಾಣ ವೀಬೋದಲ್ಲಿ ಪ್ರತಿಕ್ರಿಯಿಸಿರುವ ಪೊಲೀಸರು, ವೆನ್ಲಿಯಾಂಗ್ ಮತ್ತು ಇತರೆ ಏಳು ಮಂದಿಗೆ ಬುದ್ಧಿಮಾತು ಹೇಳಿದ್ದೇ ಹೊರತು ಎಚ್ಚರಿಕೆ, ದಂಡ ಅಥವಾ ಬಂಧನದಂತಹ ಕಠಿಣ ಶಿಕ್ಷೆಯನ್ನೇನೂ ನೀಡಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ಎದುರಾಗಿದೆ. ತಪ್ಪು ಮಾಡಿ ಕ್ಷಮೆ ಕೇಳಲು ಏಕೆ ಹಿಂಜರಿಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಹಾಗೆಯೇ ಕಳೆದ ವರ್ಷವೇ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಮಾಹಿತಿ ಹೊರಬಿದ್ದಿದ್ದರೂ ಅದನ್ನು ತಡೆ ಹಿಡಿದಿದ್ದ ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.