ಭಾರತದ ಮೇಲೆ ಚೀನಿ ಗ್ಯಾಂಗ್ನ ಸೈಬರ್ ಯುದ್ಧ
ನಿರಂತರವಾಗಿ ಗಡಿಯಲ್ಲಿ ಕಿರುಕುಳ ನೀಡುತ್ತಿರುವ ಕುತಂತ್ರಿ ಚೀನಾ ಈಗ ಭಾರತದ ಮೇಲೆ ಸೈಬರ್ ದಾಳಿ ನಡೆಸಲು ಮುಂದಾಗಿರುವುದು ಬಟಾಬಯಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಭಾರತದ ಸುಮಾರು 10 ಸಾವಿರ ಗಣ್ಯರನ್ನು ಟಾರ್ಗೆಟ್ ಮಾಡಿ ಚೀನಾದ ಸೈಬರ್ ಕಳ್ಳರು ಮಾಹಿತಿ ಕದಿಯುತ್ತಿದ್ದಾರೆ.
'ಝೆನ್ಹುವಾ ಡೇಟಾ ಇನ್ಫಾರ್ಮೇಷನ್ ಟೆಕ್ನಾಲಜಿ ಕಂಪನಿ ಲಿಮಿಟೆಡ್' ಮುಖಾಂತರ ಭಾರತದ ಸುಮಾರು 10 ಸಾವಿರ ಗಣ್ಯರನ್ನು ಟಾರ್ಗೆಟ್ ಮಾಡಲಾಗಿದೆ. ಶೆನ್ಝೆನ್ ಮೂಲದ ಕಂಪನಿ ನಿರಂತರವಾಗಿ ಗೂಢಚಾರಿಕೆ ನಡೆಸುತ್ತಿದ್ದು, ಇತರ ದೇಶಗಳ ಮೇಲೆ ಕಣ್ಣಿಡುವುದೇ ಈ ಕಂಪನಿಯ ಕೆಲಸವಾಗಿದೆ. ಭಾರತದ ಗಣ್ಯರ ಡೇಟಾ ಸಂಗ್ರಹಿಸುತ್ತಿರುವ ಕಂಪನಿ ಅದನ್ನು ಚೀನಾ ಸರ್ಕಾರಕ್ಕೆ ರವಾನಿಸುತ್ತಿತ್ತು.
ಟ್ರೂಕಾಲರ್ನಿಂದ 4 ಕೋಟಿ ಭಾರತೀಯರ ಮಾಹಿತಿ ಸೋರಿಕೆ!
ಕುತಂತ್ರಿ ಚೀನಾ ಕಣ್ಣಿಟ್ಟಿರುವ ಗಣ್ಯರ ಪಟ್ಟಿಯಲ್ಲಿ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಮಾಜಿ ಪ್ರಧಾನಿಗಳು, 24 ಮುಖ್ಯಮಂತ್ರಿಗಳು ಹಾಗೂ 350 ಸಂಸದರು ಮತ್ತು 700 ರಾಷ್ಟ್ರೀಯ ನಾಯಕರು ಕೂಡ ಸೇರಿದ್ದಾರೆ. ಅಲ್ಲದೆ ಗಣ್ಯರ ಸಂಬಂಧಿಗಳ ಮೇಲೂ ನರಿಬುದ್ಧಿ 'ಡ್ರ್ಯಾಗನ್' ಗೂಢಚಾರಿಕೆ ನಡೆಸುತ್ತಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಸಿದ್ಧರಾಮಯ್ಯ, ಉದ್ಧವ್ ಠಾಕ್ರೆ ಕೂಡ ಟಾರ್ಗೆಟ್..!
ಚೀನಿ ಸೈಬರ್ ಗ್ಯಾಂಗ್ ಮಾಹಿತಿ ಕದಿಯುತ್ತಿರುವವರ ಪಟ್ಟಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೆಸರು ಕೂಡ ಇದೆ. ಅಲ್ಲದೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಪಂಜಾಬ್ ಸಿಎಂ ಅಮರೀಂದರ್ ಸಿಂಗ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕೂಡ ಸೈಬರ್ ಖದೀಮರ ಟಾರ್ಗೆಟ್ ಲಿಸ್ಟ್ನಲ್ಲಿ ಇದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಹಾಗೇ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ರವಿ ಶಂಕರ್ ಪ್ರಸಾದ್, ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯಲ್, ಸ್ಮೃತಿ ಇರಾನಿ ಹೆಸರು ಕೂಡ ಚೀನಿ ಸೈಬರ್ ಗ್ಯಾಂಗ್ನ ಟಾರ್ಗೆಟ್ ಲಿಸ್ಟ್ನಲ್ಲಿ ಕಂಡುಬಂದಿದೆ.
ರಾಜಕೀಯ ಅರಾಜಕತೆ ಸೃಷ್ಟಿಸುವ ಉದ್ದೇಶ..?
ಚೀನಾ ಈ ವಿಚಾರದಲ್ಲಿ ಥೇಟ್ ಕ್ರಿಮಿನಲ್ಗಳ ರೀತಿಯೇ ವರ್ತಿಸಿದೆ. ಕೇವಲ ರಾಷ್ಟ್ರೀಯ ನಾಯಕರನ್ನು ಮಾತ್ರವಲ್ಲ, ಸ್ಥಳೀಯ ಮಟ್ಟದಲ್ಲಿ ಹೆಸರು ಮಾಡಿರುವ ಗಣ್ಯರ ಮಾಹಿತಿಯನ್ನೂ ಬೆದಕಿ ಬೆದಕಿ ತೆಗೆಯುತ್ತಿದೆ. ಪ್ರಧಾನಿ, ಮಾಜಿ ಪ್ರಧಾನಿ, ಸಿಎಂ ಮಟ್ಟದಲ್ಲಿ ಮಾತ್ರವಲ್ಲದೆ ಮೇಯರ್, ಉಪಮೇಯರ್ಗಳನ್ನೂ ಟಾರ್ಗೆಟ್ ಮಾಡಲಾಗಿದೆ. ಇದು ಗ್ಯಾಂಗ್ಸ್ಟರ್ಗಳ ಆಪರೇಷನ್ ರೀತಿಯೇ ಇದೆ. ಈಗಾಗಲೇ ಚೀನಿ ಸೈಬರ್ ಗ್ಯಾಂಗ್ ಟಾರ್ಗೆಟ್ ಮಾಡಿರುವ ಗಣ್ಯರಿಂದ ಸಾಕಷ್ಟು ಮಾಹಿತಿ ಕದಿಯಲಾಗಿದೆ. ಜಗತ್ತಿನಲ್ಲೇ ಖತರ್ನಾಕ್ ಸೈಬರ್ ಕಳ್ಳರನ್ನು ಚೀನಾ ಹೊಂದಿದ್ದು, ಇವರನ್ನೆಲ್ಲಾ ತನ್ನ ವಿರೋಧಿಗಳನ್ನು ಕಟ್ಟಿಹಾಕಲು ಚೀನಾ ಬಳಸಿಕೊಳ್ಳುತ್ತಿದೆ.
ಸೇನಾಧಿಕಾರಿ ಮೇಲೂ ನಡೆಯುತ್ತಿದೆ ಗೂಢಚಾರಿಕೆ
ಅಂದಹಾಗೆ ಗಡಿಯಲ್ಲಿ ಮಾತ್ರ ಚೀನಾ ತನ್ನ ಸೇನೆ ಮುಖಾಂತರ ಕಿರಿಕ್ ಮಾಡಿಸುತ್ತಿಲ್ಲ, ಜೊತೆಗೆ ಭಾರತೀಯ ಸೇನಾಧಿಕಾರಿಗಳ ಮೇಲೂ ಕಣ್ಣಿಟ್ಟಿದೆ. ಇವರ ಮಾಹಿತಿಯನ್ನೂ ಚೀನಾ ಕಲೆಹಾಕುತ್ತಿದ್ದು, ಅದನ್ನು ದುರ್ಬಳಕೆ ಮಾಡಿಕೊಳ್ಳಲು ಸ್ಕೆಚ್ ಸಿದ್ಧವಾಗಿತ್ತಂತೆ. ಈಗಾಗಲೇ ಲಡಾಖ್ನ ಗಡಿಯಲ್ಲಿ ಚೀನಾ ಸೇನೆ ಬೀಡುಬಿಟ್ಟಿದ್ದು, ಪಾಂಗಾಂಗ್ ಸರೋವರ ವಶಪಡಿಸಿಕೊಳ್ಳಲು ಸರ್ಕಸ್ ಮಾಡುತ್ತಿದೆ. ಇಂತಹ ಹೊತ್ತಲ್ಲೇ ಸೇನಾಧಿಕಾರಿಗಳ ಮೇಲೆ ಹಿಡಿತ ಸಾಧಿಸುವುದು ಚೀನಿ ಗ್ಯಾಂಗ್ನ ಹುನ್ನಾರವಾಗಿದೆ.
ಚೀನಿಯರ ಬುದ್ಧಿಯೇ ಇಷ್ಟು..!
ಸದಾ ಒಂದಿಲ್ಲೊಂದು ವಿಚಾರಕ್ಕೆ ನೆರೆ ರಾಷ್ಟ್ರಗಳ ಜೊತೆ ಕಿರಿಕ್ ಮಾಡುವ ಚೀನಿಯರ ಬುದ್ಧಿಯೇ ಇಷ್ಟು. ಗಡಿ ವಿಚಾರವಾಗಿ ಅಕ್ಕಪಕ್ಕದ ದೇಶಗಳ ಜೊತೆ ಚೀನಾ ಕಚ್ಚಾಡುತ್ತಿದೆ. ಅದರಲ್ಲೂ ಭಾರತ ಎಂದರೆ ಡ್ಯಾಗನ್ಗೆ ಎಲ್ಲಿಲ್ಲದ ಉರಿ. ಹೀಗಿರುವಾಗಲೇ ಭಾರತದ ಗಣ್ಯರ ಮೇಲೆ ಚೀನಾ ಸೈಬರ್ ದಾಳಿಗೆ ಮುಂದಾಗಿದೆ ಎಂಬ ಕಟುಸತ್ಯ ಹೊರಬಿದ್ದಿರುವುದು ಚೀನಾಗೆ ನುಂಗಲಾರದ ತುತ್ತಾಗಿದೆ. ಈ ಮೂಲಕ ಭಾರತದ ವಿರುದ್ಧ ಖುದ್ದು ಚೀನಾ ಸರ್ಕಾರದಿಂದ ದೊಡ್ಡ ಷಡ್ಯಂತ್ರ ನಡೆದಿತ್ತು ಎಂಬುದು ಬಯಲಾಗಿದೆ. ಭಾರತದ ಗಣ್ಯರನ್ನೇ ಟಾರ್ಗೆಟ್ ಮಾಡಿಕೊಂಡು ಚೀನಾ ಗೂಢಚಾರಿಕೆ ಮಾಡುತ್ತಿರುವ ಶಾಕಿಂಗ್ ಸಂಗತಿ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ.