ಲಡಾಖ್ ಗಡಿಯಲ್ಲಿ ಭಾರತವನ್ನು ಕೆರಳಿಸಿದ ಚೀನಾ ಸೇನೆ
ನವದೆಹಲಿ, ಆಗಸ್ಟ್.31: ಭಾರತ-ಚೀನಾ ಪೂರ್ವ ಗಡಿ ಪ್ರದೇಶ ಲಡಾಖ್ ನಲ್ಲಿ ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳನ್ನು ಚೀನಾ ಶುರು ಮಾಡುತ್ತಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿದೆ. ಡ್ರ್ಯಾಗನ್ ರಾಷ್ಟ್ರದ ನಡೆಯಿಂದ ಗಡಿಯಲ್ಲಿದ್ದ ಯಥಾಸ್ಥಿತಿಗೆ ಧಕ್ಕೆ ಉಂಟಾಗಿದೆ.
Recommended Video
ಕಳೆದ ಆಗಸ್ಟ್.29 ಮತ್ತು 30ರ ಮಧ್ಯರಾತ್ರಿ ಪ್ಯಾಂಗಾಂಗ್ ತ್ಸೋ ಸರೋವರ ಪ್ರದೇಶದಲ್ಲಿ ಚೀನಾ ಸೇನಾಪಡೆಗಳು ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳನ್ನು ನಡೆಸಿರುವುದು ಗೊತ್ತಾಗಿದೆ. ಕಳೆದ ಜೂನ್.15ರಿಂದಲೂ ಉಭಯ ರಾಷ್ಟ್ರಗಳ ಗಡಿಯಲ್ಲಿ ಸೇನಾಪಡೆಗಳು ಅಲರ್ಟ್ ಆಗಿವೆ.
ದಕ್ಷಿಣ ಚೀನಾ ಸಮುದ್ರಕ್ಕೆ ಲಗ್ಗೆಯಿಟ್ಟ ಭಾರತೀಯ ಯುದ್ಧನೌಕೆ
ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಬ್ಯಾಂಕ್ ಪ್ರದೇಶದಲ್ಲಿ ಭಾರತೀಯ ಸೇನೆಯು ಪೂರ್ವಭಾವಿಯಾಗಿ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಂಡಿದೆ. ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ.
ಗಡಿ ವಿವಾದ ಇತ್ಯರ್ಥಕ್ಕೆ ಶಾಂತಿ ಮಾತುಕತೆ
ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಸೃಷ್ಟಿಯಾಗಿರುವ ಸಂದಿಗ್ಧ ಪರಿಸ್ಥಿತಿ ನಿವಾರಣೆಗೆ ಶಾಂತಿ ಮಾತುಕತೆ ನಡೆಸಲಾಗುತ್ತಿದೆ. ಶಾಂತಿ ಮಾರ್ಗದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಭಾರತವು ಬದ್ಧವಾಗಿದೆ. ಇದರ ಜೊತೆಗೆ ಪ್ರಾದೇಶಿಕ ಸಮಗ್ರತೆ ಕಾಪಾಡಿಕೊಳ್ಳುವುದಕ್ಕೂ ಅಷ್ಟೇ ಪ್ರಾಧಾನ್ಯತೆ ನೀಡಲಾಗುತ್ತದೆ. ಚುಶುಲ್ ಪ್ರದೇಶದಲ್ಲಿ ಬ್ರಿಗೇಟ್ ಕಮಾಂಡರ್ ಹಂತದಲ್ಲಿ ಶಾಂತಿ ಮಾತುಕತೆ ನಡೆಸಲಾಗುತ್ತಿದೆ ಎಂದು ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ.
ಚೀನಾ ಸೇನಾಪಡೆಗಳಿಂದ ಗಡಿ ನಿಯಮ ಉಲ್ಲಂಘನೆ
ಭಾರತ-ಚೀನಾ ಪೂರ್ವ ಭಾಗದ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ಪ್ರದೇಶದಲ್ಲಿ ಚೀನಾ ಸೇನೆಯು ಪದೇ ಪದೆ ಗಡಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ಮುಂದುವರಿಸುತ್ತಿದೆ. ಇದರಿಂದಾಗಿ ಉತ್ತರದ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುತ್ತಿದೆ. ಕಳೆದ ವಾರವಷ್ಟೇ ಲಡಾಖ್ ಪೂರ್ವ ಗಡಿ ಪ್ರದೇಶದಲ್ಲಿ ಭಾರತವು ಸಂಪೂರ್ಣವಾಗಿ ಸೇನಾ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸುವುದಕ್ಕೆ ಸಮ್ಮತಿಸದ್ದು, ಈ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಮಟ್ಟದಲ್ಲಿ ಚರ್ಚೆಯನ್ನು ನಡೆಸಲಾಗಿತ್ತು.
ಪರಸ್ಪರ ಸಮ್ಮತಿ ನಂತರವಷ್ಟೇ ಗಡಿಯಲ್ಲಿ ಸೇನೆ ನಿಷ್ಕ್ರಿಯ
ಎರಡು ರಾಷ್ಟ್ರಗಳು ಸಮ್ಮತಿ ನೀಡಿದ ನಂತರವಷ್ಟೇ ನಿಗದಿತ ಗಡಿ ರೇಖೆಯಲ್ಲಿ ಸೇನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ವಿದೇಶಾಂಗ ವ್ಯವಾಹರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಿಳಿಸಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಸಹಮತ ಮೂಡಿದ ಬಳಿಕವಷ್ಟೇ ಗಡಿಯಲ್ಲಿ ಹೆಚ್ಚುವರಿಯಾಗಿ ನಿಯೋಜಿಸಲ್ಪಟ್ಟ ಸೇನಾಪಡೆಗಳನ್ನು ವಾಪಸ್ ಮೊದಲು ನಿಯೋಜಿಸಲ್ಪಟ್ಟ ಪ್ರದೇಶಗಳಿಗೆ ರವಾನಿಸಲಾಗುತ್ತದೆ ಎಂದು ತಿಳಿಸಿದ್ದರು.
ದೂರವಾಣಿ ಮೂಲಕ 2 ಗಂಟೆ ಮಾತುಕತೆ
ಭಾರತ ಮತ್ತು ಚೀನಾ ಗಡಿಯಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನ ಪರಿಸ್ಥಿತಿ ಬಗೆಹರಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರದ ನಾಯಕರು ಶಾಂತಿ ಮಾತುಕತೆ ನಡೆಸಿದರು. ಕಳೆದ ಜುಲೈ.5ರಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ 2 ಗಂಟೆಗಳ ಕಾಲ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದರು.