ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..!
ಮಾಡಿದ್ದುಣ್ಣೋ ಮಹರಾಯ ಅಂದಂತೆ, ಚೀನಾ ತಾನು ನೆರೆ ರಾಷ್ಟ್ರಗಳಿಗೆ ಮಾಡುತ್ತಿದ್ದ ಕೇಡಿಗೆ ಸರಿಯಾದ ಶಿಕ್ಷೆಯೇ ಆಗುತ್ತಿದೆ. ಈ ಬಾರಿ ಚೀನಾ ವಿರುದ್ಧ ತಿರುಗಿಬಿದ್ದಿರುವವರು ಬೇರೆ ಯಾರೂ ಅಲ್ಲ, ಸ್ವತಃ ಚೀನಾ ನೆಲದಲ್ಲೇ ಬದುಕುತ್ತಿರುವ ಜನರು.
Recommended Video
ಚೀನಾದಲ್ಲಿ ಕೇವಲ ಚೀನಿಯರು ಮಾತ್ರ ವಾಸಿಸುತ್ತಿಲ್ಲ. ಅಲ್ಲಿ ವಿವಿಧ ಭಾಷಿಗರು ಬದುಕುತ್ತಿದ್ದಾರೆ. ಅದರಲ್ಲೂ ಮಂಗೋಲಿಯನ್ಸ್ ಪ್ರಮಾಣ ತುಸು ಹೆಚ್ಚಾಗಿದೆ. ಅದರೆ ಈಗ ಚೀನಾ ಸರ್ಕಾರ ಒಗ್ಗಟ್ಟಿನ ಹೆಸರಲ್ಲಿ ತಮ್ಮ ಚೀನಿ ಭಾಷೆಯಾದ 'ಮ್ಯಾಂಡರಿನ್' ಹೇರಲು ಕಾನೂನು ಜಾರಿಗೆ ತಂದಿದೆ. ಇದರಿಂದ ಲಕ್ಷಾಂತರ ಮಂಗೋಲಿನ್ನರ ಮಕ್ಕಳ ಭವಿಷ್ಯ ಅತಂತ್ರವಾಗಿದೆ.
ಚೀನಾ ವಿರುದ್ಧ ಮತ್ತೊಂದು ದೇಶದ ಬಂಡಾಯ..!
ತಮ್ಮದಲ್ಲದ ಭಾಷೆಯನ್ನು ಕಲಿಯಬೇಕಾದ ಸ್ಥಿತಿ ಎದುರಾಗಿದೆ. ಇದರ ವಿರುದ್ಧ ರೊಚ್ಚಿಗೆದ್ದಿರುವ ಇನ್ನೆರ್ ಮಂಗೋಲಿಯಾ ಅಥವಾ ಚೀನಾ ಗಡಿಯ ಒಳಗೆ ಬರುವ ಮಂಗೋಲಿಯನ್ಸ್ ವಾಸ ಮಾಡುವ ಜಾಗದಲ್ಲಿ ಬೆಂಕಿ ಹೊತ್ತಿದೆ. ಚೀನಾ ಸರ್ಕಾರದ ವಿರುದ್ಧ ಮಂಗೋಲಿಯಾ ಜನಾಂಗ ಬೀದಿಗೆ ಇಳಿದಿದೆ. ತಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಜೀವ ಕೊಡುವುದಕ್ಕೂ ಸಿದ್ಧರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಮಂಗೋಲಿಯನ್ಸ್.
ಮಂಗೋಲಿಯಾ ಜಾಗವನ್ನು ಕದ್ದಿತ್ತು ಚೀನಾ..!
ಎಲ್ಲರಿಗೂ ಗೊತ್ತಿರುವಂತೆ ಚೀನಾ ಸಾಮ್ರಾಜ್ಯಶಾಹಿ ದೇಶ. ಕಂಡ ಕಂಡ ಪ್ರದೇಶವನ್ನೆಲ್ಲಾ ತನ್ನದು, ತನ್ನದು ಎಂದು ಹೇಳಿಕೊಂಡು ಓಡಾಡುವ ಕುತಂತ್ರಿ. ಇಂತಹ ದೇಶ ಹಲವು ದಶಕಗಳ ಕೆಳಗೆ ಟಿಬೆಟ್, ಉಯಿಘರ್ ಪ್ರಾಂತ್ಯವನ್ನು ವಶಕ್ಕೆ ಪಡೆದಂತೆ, ಮಂಗೋಲಿಯಾಗೆ ಸೇರಿದ್ದ ಜಾಗವನ್ನೂ ಕದ್ದುಬಿಟ್ಟಿತ್ತು. ಹೀಗೆ ಚೀನಾದಿಂದ ತಮ್ಮ ಜಾಗ ಕಳೆದುಕೊಂಡ ಲಕ್ಷಾಂತರ ಮಂಗೋಲಿಯನ್ನರು, ಅನಿವಾರ್ಯವಾಗಿ ಚೀನಾದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಉತ್ತರ ಭಾಗದಲ್ಲಿರುವ ಪ್ರಾಂತ್ಯವನ್ನು ಇನ್ನೆರ್ ಮಂಗೋಲಿಯಾ ಎಂದು ಗುರುತಿಸಲಾಗಿದೆ.
ಮನೆಯವರ ಜೊತೆಯಲ್ಲೇ ‘ಡ್ರ್ಯಾಗನ್’ ಸರಿಯಿಲ್ಲ..!
ಜಗತ್ತಿನಲ್ಲಿ ಹತ್ತಾರು, ನೂರಾರು ಅದೂ ಬಿಡಿ ಭಾರತದಂತೆ ಸಾವಿರಾರು ಭಾಷೆಗಳನ್ನು ಹೊಂದಿರುವ ಹಲವು ದೇಶಗಳು ನೆಮ್ಮದಿಯಾಗಿ ಜೀವನ ಸಾಗಿಸುತ್ತಿವೆ. ಆದರೆ ಚೀನಾದಲ್ಲಿ ಮಾತ್ರ ಅದು ಸಾಧ್ಯವಿಲ್ಲ. ಏಕೆಂದರೆ ಚೀನಾದ ಕಮ್ಯುನಿಸ್ಟ್ ನಾಯಕರಿಗೆ ವಿವಿಧತೆಯಲ್ಲಿ ಏಕತೆ ಬೇಡ, ಕೇವಲ ಚೀನಾ ಉಳಿದರೆ ಸಾಕು. ಇತರ ದೇಶದ ಜಾಗಗಳು ಚೀನಾಗೆ ಬಂದು ಸೇರಿದರೆ ಸಾಕು. ಇದೇ ಕಾರಣಕ್ಕೆ ಚೀನಾ ಹೊಸ ಭಾಷಾ ನೀತಿ ಜಾರಿಗೆ ತಂದು ಮಂಗೋಲಿಯ ಮೂಲದ ಚೀನಿಯರನ್ನು ಹಿಂಸಿಸುತ್ತಿದೆ. ಹೀಗೆ ತನ್ನ ನೆರೆಹೊರೆಯವರ ಮಾತು ಬಿಡಿ, ಸ್ವತಃ ತನ್ನವರ ಜೊತೆಯಲ್ಲೇ ಚೀನಾ ಸರಿಯಾಗಿಲ್ಲ ಎಂದರೆ ಅದರ ಬುದ್ಧಿ ಎಂಥದ್ದು ಎಂಬುದು ತಿಳಿಯುತ್ತದೆ.
ಪ್ರಚೋದನಾಕಾರಿ ವರ್ತನೆಗಾಗಿ ಚೀನಾಕ್ಕೆ ಎಚ್ಚರಿಕೆ ನೀಡಿದ ಭಾರತ
ಟಿಬೆಟ್, ಉಯಿಘರ್ ಮೇಲೆ ದಬ್ಬಾಳಿಕೆ
ಈಗ ಮಂಗೋಲಿಯನ್ಸ್ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಕುತಂತ್ರಿ ಚೀನಾ ಸರ್ಕಾರ ಟಿಬೆಟ್, ಉಯಿಘರ್ ಪ್ರಾಂತ್ಯದ ಜನರನ್ನು ಸುಮ್ಮನೆ ಬಿಟ್ಟಿಲ್ಲ. ಅದರಲ್ಲೂ ಉಯಿಘರ್ ಪ್ರಾಂತ್ಯದಲ್ಲಿ ಲಕ್ಷಾಂತರ ಮುಸ್ಲಿಮರ ಪ್ರಾಣ ತೆಗೆದಿದೆ ಚೀನಾ ಸರ್ಕಾರ. ಟಿಬೆಟ್ ವಿಷಯ ಎಲ್ಲರಿಗೂ ಗೊತ್ತೇ ಇದೆ. ಈಗಿನ ಚೀನಾದ ಅರ್ಧಭಾಗಕ್ಕಿಂತ ಹೆಚ್ಚು ಪ್ರದೇಶ ಟಿಬೆಟ್ಗೆ ಸೇರಿದ್ದು. ಮಾವೋ & ಗ್ಯಾಂಗ್ ಅಟ್ಟಹಾಸದಿಂದ ಟಿಬೆಟ್ನ ಹಲವು ನಾಯಕರು ಕೊಲೆಯಾಗಿ ಹೋದರೆ. ದಲೈ ಲಾಮಾ ಅವರಂತಹ ನಾಯಕರು ದೇಶ ತೊರೆದು ಹೊರಬರಬೇಕಾಯಿತು.
ಚೀನಾ ವಿರುದ್ಧ ನಡೆಯುತ್ತಾ ಯುದ್ಧ..?
ಜಾಗತಿಕವಾಗಿ ಚೀನಾ ವಿರುದ್ಧ ಕಿಚ್ಚು ಹೊತ್ತಿದೆ. ಆ ಕಿಚ್ಚು ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು. ತನ್ನ ನೆರೆ ದೇಶಗಳಾದ ತೈವಾನ್, ಭೂತಾನ್, ಭಾರತ ಸೇರಿದಂತೆ ಹತ್ತಾರು ದೇಶಗಳ ಜೊತೆ ಚೀನಾ ಗಡಿಗಾಗಿ ಕ್ಯಾತೆ ತೆಗೆದಿದೆ. ಇದು ಅಮೆರಿಕದ ಕಣ್ಣು ಕುಕ್ಕುವ ಜೊತೆಗೆ ಇಡೀ ಜಗತ್ತಿನ ಕಣ್ಣು ಕೆಂಪಾಗಿಸಿದೆ. ಅದರಲ್ಲೂ ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಯುತ್ತಿರುವ ಘಟನೆಗಳಿಂದ ಚೀನಾ ಮೇಲೆ ಪ್ರಪಂಚದ ವಕ್ರದೃಷ್ಟಿ ಬಿದ್ದಿದ್ದು, ಭವಿಷ್ಯದಲ್ಲಿ ಚೀನಾ ವಿರುದ್ಧ ಜಗತ್ತು ಒಗ್ಗಟ್ಟಾಗಿ ಯುದ್ಧ ಸಾರಿದರೂ ಅಚ್ಚರಿ ಪಡಬೇಕಿಲ್ಲ.