ಹಾಂಕಾಂಗ್ ಪ್ರಜೆಗಳ ಮೇಲೆ ‘ಚೀನಿ’ ದೌರ್ಜನ್ಯ..?
ಹಾಂಕಾಂಗ್, ಜುಲೈ 30: ಹಾಂಕಾಂಗ್ನಲ್ಲಿ ನಾಗರಿಕರ ಮೇಲೆ ಚೀನಾ ಪ್ರೇರೇಪಿತ ದೌರ್ಜನ್ಯ ಮುಂದುವರಿದಿದೆ. ನೂತನ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ತನ್ನದಲ್ಲದ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಕುತಂತ್ರಿ ಚೀನಾ ಹೆಣೆದಿರುವ ತಂತ್ರಕ್ಕೆ ಹಾಂಕಾಂಗ್ ಬಲಿಯಾಗುತ್ತಿದೆ. ಹಾಂಕಾಂಗ್ನಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಲು, ಹೋರಾಟಗಾರರ ಬಂಧನಕ್ಕೆ ಹೊಸ ಕಾನೂನು ರೂಪಿಸಲಾಗಿತ್ತು.
ಡ್ರ್ಯಾಗನ್ ರಾಷ್ಟ್ರದ ಶಾಸನದಿಂದ ಹೌ ಹಾರಿದರಾ ಹಾಂಗ್ ಕಾಂಗ್ ಜನ?
ಈ ಕಾನೂನು ರಚನೆ ಹಿಂದೆ ಚೀನಾದ ಕೈವಾಡವಿದ್ದು, ಅಲ್ಲಿನ ಪ್ರಜೆಗಳನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ. ಕಳೆದ ವರ್ಷದ ಆಂತರಿಕ ಗಲಭೆಗಳ ಬಳಿಕ ಚೀನಾ ಪ್ರೇರೇಪಣೆಯಿಂದ ಹಾಂಕಾಂಗ್ ಸರ್ಕಾರ ನೂತನ ರಾಷ್ಟ್ರೀಯ ಭದ್ರತಾ ಕಾಯಿದೆ ಸಿದ್ಧಗೊಳಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಇದ್ದರೂ ಕಾಯಿದೆಯನ್ನು ಜುಲೈ 7ರಿಂದ ಜಾರಿಗೆ ತರಲಾಗಿದೆ.
ಈಗ ನಾಲ್ವರು ವಿದ್ಯಾರ್ಥಿಗಳ ಬಂಧನಕ್ಕೂ ಇದೇ ಕಾನೂನನ್ನು ಬಳಸಿಕೊಂಡಿದೆ ಹಾಂಕಾಂಗ್ ಸರ್ಕಾರ. ಬಂಧಿತ ವಿದ್ಯಾರ್ಥಿಗಳಲ್ಲಿ 16 ವರ್ಷದ ಬಾಲಕನೂ ಸೇರಿದ್ದಾನೆ. ಮಫ್ತಿಯಲ್ಲಿದ್ದ ಹಾಂಕಾಂಗ್ ಪೊಲೀಸ್ ಪಡೆ ದಿಢೀರ್ ದಾಳಿ ನಡೆಸಿ ನಾಲ್ವರು ವಿದ್ಯಾರ್ಥಿಗಳನ್ನ ತಮ್ಮ ವಶಕ್ಕೆ ಪಡೆದಿದೆ.
ಚೀನಾ ಅಯೋಮಯ: ಹಾಂಗ್ ಕಾಂಗ್ ತೊರೆದವರಿಗೆ ತೈವಾನ್ ನಲ್ಲಿ ಆಶ್ರಯ!
ಪ್ರಜಾಪ್ರಭುತ್ವ ಅಲ್ಲ ಪೊಲೀಸ್ ರಾಜ್ಯ..!
ಆಂತರಿಕ ಬಂಡಾಯದ ಭೀತಿಯಿಂದ ಹಾಂಕಾಂಗ್ ಸರ್ಕಾರ ಪೊಲೀಸರಿಗೆ ಸರ್ವಾಧಿಕಾರ ನೀಡಿದೆ. ವಾರಂಟ್ ಇಲ್ಲದೆ ಶೋಧ ನಡೆಸಲು, ಶಂಕಿತರನ್ನು ದೇಶ ಬಿಡದಂತೆ ತಡೆಯಲು ಹಾಗೂ ಫೋನ್ ಕಾಲ್ ಕದ್ದಾಲಿಸಲು ಹಾಂಕಾಂಗ್ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಬಂಡಾಯದ ಬಗ್ಗೆ ದಾಖಲೆ ಸಿಕ್ಕರೆ ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಹೊಸ ಕಾಯಿದೆಗೆ ಇದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಂದೇಶ, ಸೋಷಿಯಲ್ ಮೀಡಿಯಾ ಪೋಸ್ಟ್ಗಳನ್ನು ತೆಗೆದು ಹಾಕುವಂತೆ ಟೆಲಿಕಾಂ ಸಂಸ್ಥೆಗಳಿಗೆ ಆದೇಶ ನೀಡಲಾಗಿದೆ. ಈಗ ಬಂಧನಕ್ಕೆ ಒಳಗಾಗಿರುವ ವಿದ್ಯಾರ್ಥಿಗಳ ವಿರುದ್ಧ ಇಂತಹದ್ದೇ ಗಂಭೀರ ಆರೋಪ ಮಾಡಲಾಗಿದೆ. ಇವರು ಹಾಂಕಾಂಗ್ ರಾಷ್ಟ್ರೀಯತೆಗೆ ಧಕ್ಕೆ ತರಲು ಹೊಂಚು ಹಾಕಿದ್ದರು, ಈ ಕಾರಣಕ್ಕೆ ಬಂಧಿಸಿದ್ದೇವೆ ಅಂತಾ ಹಾಂಕಾಂಗ್ ಪೊಲೀಸರು ಹೇಳಿದ್ದಾರೆ.
ಮತ್ತೊಮ್ಮೆ ಹೊತ್ತಿದೆ ಸ್ವಾತಂತ್ರ್ಯದ ಕಿಚ್ಚು..!
ಹಾಂಕಾಂಗ್ನಲ್ಲಿ ಏನು ನಡೆಯಬಾರದಿತ್ತೋ ಅದೇ ನಡೆಯುತ್ತಿದೆ. ಆಂಗ್ಲರಿಂದ ಪಡೆದ ಸ್ವಾತಂತ್ರ್ಯ ಚೀನಿಯರಿಂದ ನಾಶವಾಗುತ್ತಿದೆ. ದಿನದಿಂದ ದಿನಕ್ಕೆ ಹಾಂಕಾಂಗ್ ಮೇಲೆ ಚೀನಾ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದೆ. ಈ ಮೊದಲು ಬ್ರಿಟನ್ ಅಧೀನದಲ್ಲಿದ್ದ ಹಾಂಕಾಂಗ್, ಸ್ವತಂತ್ರಗೊಂಡ ನಂತರ ಚೀನಾ ದೌರ್ಜನ್ಯಕ್ಕೆ ಒಳಗಾಗುತ್ತಿದೆ. ಇದು ನಮ್ಮ ನೆಲ ಅಂತಾ ಚೀನಿಯರು ಹಾಂಕಾಂಗ್ನಲ್ಲಿ ತಮ್ಮ ದಬ್ಬಾಳಿಕೆ ಮುಂದುವರಿಸಿದ್ದಾರೆ. ಹಾಂಕಾಂಗ್ ಸರ್ಕಾರವೂ ಅಷ್ಟೇ ಚೀನಾ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಆದರೆ ಇದು ಹಾಂಕಾಂಗ್ ಜನರಿಗೆ ಬಿಲ್ಕುಲ್ ಇಷ್ಟವಿಲ್ಲ. ಹೀಗಾಗಿ ಅಲ್ಲಿ ಮತ್ತೊಮ್ಮೆ ಸ್ವಾತಂತ್ರ್ಯದ ಕಿಚ್ಚು ಹೊತ್ತಿದೆ. ಹಾಂಕಾಂಗ್ ಜನ ಬರೋಬ್ಬರಿ 1 ವರ್ಷದಿಂದ ಬೀದಿಗಿಳಿದಿದ್ದಾರೆ. ಈ ಹೋರಾಟ ಹತ್ತಿಕ್ಕುವ ಉದ್ದೇಶದಿಂದಲೇ ನೂತನ ರಾಷ್ಟ್ರೀಯ ಭದ್ರತಾ ಕಾಯಿದೆ ಜಾರಿಗೆ ತರಲಾಗಿದೆ.