ಭಾರತದೊಂದಿಗೆ ಬಡಿದಾಟ: ಚೀನಾ ಬಣ್ಣ ಬಯಲು ಮಾಡುತ್ತೆ ಈ ವರದಿ!
ನವದೆಹಲಿ, ಜೂನ್.18: ಭಾರತ-ಚೀನಾ ಗಡಿಭಾಗದಲ್ಲಿರುವ ಲಡಾಖ್ ಪೂರ್ವಭಾಗದ ಗಾಲ್ವಾನ್ ನದಿ ಕಣಿವೆಯು ಉಭಯ ಸೇನೆಗಳ ನಡುವಿನ ಸಂಘರ್ಷ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. 20 ಯೋಧರು ಹುತಾತ್ಮರಾಗಿರುವ ಬಗ್ಗೆ ಭಾರತೀಯ ಸೇನೆಯು ಸ್ಪಷ್ಟಪಡಿಸಿದೆ.
Recommended Video
ಗಾಲ್ವಾನ್ ನದಿ ಕಣಿವೆ ಬಳಿ ನಡೆದ ಸಂಘರ್ಷದಲ್ಲಿ ಚೀನಾದ 35 ಯೋಧರು ಹತರಾಗಿರುವ ಬಗ್ಗೆ ಅಮೆರಿಕಾದ ಗುಪ್ತಚರ ಇಲಾಖೆ ತಿಳಿಸಿದೆ. ಆದರೆ ಚೀನಾದ ಕಡೆಯಿಂದ ಯಾವುದೇ ರೀತಿ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಕಳೆದ ಮೇ.5ರಂದು ಮೊದಲ ಬಾರಿಗೆ ಉಭಯ ಸೇನೆಗಳು ಮುಖಾಮುಖಿಯಾಗಿದ್ದು, ಅಂದಿನಿಂದ ಇಂದಿನವರೆಗೂ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಾ ವಾತಾವರಣ ನಿರ್ಮಾಣವಾಗಿದೆ.
ಭಾರತ-ಚೀನಾ ಗಡಿ ಉದ್ವಿಗ್ನತೆ ಹಿಂದಿನ ರೋಚಕ ಇತಿಹಾಸ!
ಭಾರತದ ಮೇಲೆ ಎಗರಿ ಬೀಳುತ್ತಿರುವ ಚೀನಾಗೆ ಗಾಲ್ವಾನ್ ನದಿ ಕಣಿವೆಯೊಂದೇ ಗುರಿಯಲ್ಲ. ಡ್ರ್ಯಾಗನ್ ರಾಷ್ಟ್ರವು ಸುತ್ತಮುತ್ತಲಿನ ರಾಷ್ಟ್ರಗಳ ಮೇಲೂ ಹಿಡಿತ ಸಾಧಿಸುವ ಮಸಲತ್ತು ಮಾಡಿದೆ. ಆಕ್ರಮಣಕಾರಿ ಬುದ್ಧಿ ಹೊಂದಿರುವ ಚೀನಾ ಭಾರತದ ಜೊತೆಗೆ ನಾಲ್ಕು ರಾಷ್ಟ್ರಗಳಿಗೆ ಧಮ್ಕಿ ಹಾಕುತ್ತಾ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಅಸಲಿಗೆ ಆ ರಾಷ್ಟ್ರಗಳು ಯಾವುವು, ಆ ರಾಷ್ಟ್ರಗಳ ಮೇಲೆ ಚೀನಾ ಹಿಡಿತ ಸಾಧಿಸಲು ಹವಣಿಸುತ್ತಿರುವುದು ಏಕೆ, ಆ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಿದ್ದಲ್ಲಿ ಚೀನಾಗೆ ಆಗುವ ಲಾಭವೇನು, ಹೀಗೆ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಚೀನಾ ವಕ್ರದೃಷ್ಟಿ ಬೀರಿರುವ ನಾಲ್ಕು ರಾಷ್ಟ್ರಗಳು
ಭಾರತದ ಜೊತೆಗೆ ಗಡಿಯಲ್ಲಿ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿರುವ ಚೀನಾ ಸುತ್ತಮುತ್ತಲಿನ ರಾಷ್ಟ್ರಗಳನ್ನೂ ಬಿಟ್ಟಿಲ್ಲ. ತನ್ನ ರಾಷ್ಟ್ರದ ಗಡಿಗೆ ಹೊಂದಿಕೊಂಡಂತಿರುವ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಚೀನೀಯರು ಸದಾ ಹವಣಿಸುತ್ತಿದ್ದಾರೆ. ಈ ಉದ್ದೇಶದಿಂದಲೇ ಹಾಂಗ್-ಕಾಂಗ್, ತೈವಾನ್, ವಿಯೆಟ್ನಾ ಹಾಗೂ ಜಪಾನ್ ಗಳ ಎದುರಿನಲ್ಲೂ ಚೀನಾ ಆಕ್ರಮಣಕಾರಿ ನಿಲುವು ಪ್ರದರ್ಶಿಸುತ್ತಿದೆ.
ಕೊರೊನಾವೈರಸ್ ಹೊಡೆತಕ್ಕೆ ಚೀನಾ ಆರ್ಥಿಕತೆ ಹೈರಾಣ?
ಚೀನಾದ ಆಕ್ರಮಣಕಾರಿ ನಿಲುವಿನ ನಡುವೆಯೂ ದೇಶದಲ್ಲಿನ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ ಎಂದು ಹೇಳಲಾಗುತ್ತಿದೆ. ಕೊರೊನಾವೈರಸ್ ಸೋಂಕು ಹರಡುವಿಕೆಯಿಂದಾಗಿ ಕಳೆದ 50 ವರ್ಷಗಳಲ್ಲೇ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಆರ್ಥಿಕತೆಯು ಕುಸಿತ ಕಂಡಿದೆ. ಚೈನಿಸ್ಟ್ ಕಮ್ಯುನಿಸ್ಟ್ ಪಾರ್ಟಿಗೆ ದೇಶದಲ್ಲಿನ ಉತ್ಪಾದನೆ ಹೆಚ್ಚಿಸುವುದು ಮತ್ತು ಉದ್ಯೋಗ ಸೃಷ್ಟಿಸುವುದೇ ದೊಡ್ಡ ಸವಾಲಿನ ಕಾರ್ಯವಾಗಿ ಬಿಟ್ಟಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು, ಕೆಲವರು ಖರೀದಿಗೆ ಇದು ಸೂಕ್ತ ಕಾಲವಾಗಿದೆ ಎಂದಿದ್ದಾರೆ. ಚೀನಾದ ಸಂಪತ್ತು ಮತ್ತು ಶಕ್ತಿಯನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರ ಹೆಣೆಯಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಚೀನಾ-ಭಾರತ ಕಮಾಂಡರ್ಸ್ ಸಭೆಯಿಂದ ನೆಲೆಸುತ್ತಾ 'ಶಾಂತಿ'?
ಚೀನಾ ಕೆಣಕುತ್ತಿರುವುದು ಭಾರತವನ್ನಷ್ಟೇ ಅಲ್ಲ
ಲಖಾಡ್ ಪೂರ್ವದ ಗಾಲ್ವಾನ್ ನದಿ ಕಣಿವೆಯು ತಮ್ಮದು ಎಂದು ವಾದಿಸುತ್ತಿರುವ ಚೀನಾ ಭಾರತದ ಜೊತೆಗೆ ಕಾಲ್ಕೆರೆದು ನಿಂತಿದೆ. ಎರಡು ಸೇನೆಗಳು ಮುಖಾಮುಖಿ ಸಂಘರ್ಷವು ಭಾರತೀಯ ಯೋಧರು ವೀರಮರಣ ಅಪ್ಪುವಂತೆ ಮಾಡಿದೆ. ಆದರೆ ಇಲ್ಲಿ ಚೀನಾ, ಭಾರತವನ್ನಷ್ಟೇ ಕೆಣಕುತ್ತಿಲ್ಲ. ಬದಲಿಗೆ ಹಲವು ರಾಷ್ಟ್ರಗಳ ಜೊತೆಗೆ ಡ್ರ್ಯಾಗನ್ ರಾಷ್ಟ್ರವು ಜಗಳಕ್ಕೆ ಹಾತೊರೆಯುತ್ತಿದೆ. ಯುದ್ಧದಾಹಿಯಂತೆ ವರ್ತಿಸುತ್ತಿರುವ ಚೀನಾದ ವರ್ತನೆ ಒಂದೊಂದು ರಾಷ್ಟ್ರಗಳ ಜೊತೆಗೆ ಒಂದೊಂದು ರೀತಿಯಲ್ಲಿದೆ.
ತೈವಾನ್ ವಾಯುಗಡಿ ದಾಟಿದ ಚೀನಾ ಯುದ್ಧವಿಮಾನ
ಡ್ರ್ಯಾಗನ್ ರಾಷ್ಟ್ರವು ತೈವಾನ್ ಜೊತೆಗೂ ಜಗಳಕ್ಕೆ ನಿಂತಿದೆ. ಕಳೆದ ಒಂದು ವಾರದಲ್ಲಿ ಚೀನಾದ ಯುದ್ಧವಿಮಾನಗಳು ತೈವಾನ್ ವಾಯುಗಡಿಯನ್ನು ದಾಟಿ ಸುರಕ್ಷತಾ ವಲಯದಲ್ಲಿ ಹಾರಾಟ ನಡೆಸಿವೆ ಎಂದು ತೈವಾನ್ ರಕ್ಷಣಾ ಸಚಿವಾಲಯವು ಆರೋಪಿಸಿದೆ. ಅದರಲ್ಲಿ ಇತ್ತೀಚಿಗೆ ಜೂನ್.16ರಂದು ತೈವಾನ್ ಏರ್ ಜೆಟ್ಗಳು ಚೀನಾದ ಜೆ -10 ಯುದ್ಧವಿಮಾನ ಹಿಮ್ಮೆಟ್ಟಿಸಿವೆ.
ಚೀನಾ-ಭಾರತ ನಡುವೆ ನಡೆಯುತ್ತಾ ಯುದ್ಧ: ಇಲ್ಲಿದೆ ಅಸಲಿ ಕಾರಣ!
ಚೀನಾದ ವಾಯುಗಡಿ ಪ್ರವೇಶಿಸಿದ Su-30 ಯುದ್ಧವಿಮಾನ
ಜೂನ್.16ಕ್ಕಿಂತ ಮೊದಲು ಅಂದರೆ ಜೂನ್.09ರಂದು ಚೀನಾದ ಸುಖೋಯ್ Su-30 ಯುದ್ಧವಿಮಾನವು ತೈವಾನ್ ವಾಯುಗಡಿಯಲ್ಲಿ ಹಾರಾಟ ನಡೆಸಿದ್ದು, ವಾಪಸ್ ಓಡಿಸಲಾಗಿತ್ತು. ಬಳಿಕ ಜೂನ್.12ರಂದು ತೈವಾನ್ ವಾಯುನೆಲೆಯ ಪ್ರವೇಶಿಸಿದ ಚೀನಾದ Y-8 ವಿಮಾನವನ್ನು ಗಡಿ ದಾಟದಂತೆ ಎಚ್ಚರಿಕೆ ನೀಡಲಾಗಿತ್ತು ಎಂದು ತೈವಾನ್ ರಕ್ಷಣಾ ಸಚಿವಾಲಯವು ತಿಳಿಸಿದೆ.
ಜಪಾನ್ ಜೊತೆಗೂ ಜಗಳ ತೆಗೆದ ಚೀನಾ
ಡ್ರ್ಯಾಗನ್ ರಾಷ್ಟ್ರವು ಜಪಾನ್ ಜೊತೆಗೂ ಜಗಳಕ್ಕಿ ನಿಂತಿತ್ತು. ಕಳೆದ ತಿಂಗಳಷ್ಟೇ ಚೀನಾವು ಲಿಯಾನಿಂಗ್ ನೌಕೆಯನ್ನು ಗಡಿಯಲ್ಲಿರುವ ಮಿಯಾಕೋ ಜಲಸಂಧಿಗೆ ಕಳುಹಿಸಿ ಕೊಟ್ಟಿತು. ಓಕಿನಾವಾ ಮತ್ತು ಮಿಯಾಕೋ ದ್ವೀಪಗಳ ನಡುವೆಯಿರುವ ಈ ಜಲಸಂಧಿಗೆ ಚೀನಾ ನೌಕೆಯನ್ನು ರವಾನಿಸಿದ್ದು, ಚೀನಾ ನಡೆಸುತ್ತಿರುವ ಬೆಳವಣಿಕೆಗಳ ಮೇಲೆ ಜಪಾನ್ ಕೂಡಾ ಒಂದು ಕಣ್ಣು ಇಟ್ಟಿತ್ತು.
ಯುದ್ಧದ ಅನುಮಾನ ಹುಟ್ಟಿಸುತ್ತಿದೆ ಚೀನಾದ ವರ್ತನೆ!
ಕೊರೊನಾವೈರಸ್ ಹರಡುವಿಕೆ ಸಂದಿಗ್ಧ ಪರಿಸ್ಥಿತಿಯಲ್ಲಿ ಚೀನಾ ಯುದ್ಧದಾಹಿ ಆಗುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಏಕೆಂದರೆ ಕಳೆದ ಒಂದು ತಿಂಗಳ ಹಿಂದೆಯೇ ಚೀನಾ ಸೇನೆಯು ಗಡಿಯಲ್ಲಿ ಅಣುಕು ಯುದ್ಧ, ಗುಂಡಿನ ದಾಳಿಯ ತರಬೇತಿ, ಜಲಮಾರ್ಗದಲ್ಲಿ ಯುದ್ಧ ಸಾಮರ್ಥ್ಯ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಸಮರಾಭ್ಯಾಸವನ್ನು ನಡೆಸಲಾಯಿತು. ಚೀನಾದ ನೌಕಾಪಡೆಯು ಪಶ್ಚಿಮ ಕ್ಯಾಪೆಲ್ಲಾದಲ್ಲಿ ಸಶಸ್ತ್ರ ಚೀನಾ ಕೋಸ್ಟ್ ಗಾರ್ಡ್ ಮತ್ತು "ಕಡಲ ಮಿಲಿಟಿಯಾ" ಹಡಗುಗಳನ್ನು ನಿಯೋಜಿಸಿತು.
ವಿಯೆಟ್ನಾಂ ಮೀನುಗಾರಿಕಾ ಬೋಟ್ ಮೇಲೆ ದಾಳಿ
ಪಾರಾಸೆಲ್ ದ್ವೀಪದಲ್ಲಿ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್ ಗಳ ಮೇಲೆ ಚೀನಾದ ಹಡಗುಗಳು ದಾಳಿ ನಡೆಸಿವೆ ಎಂದು ವಿಯೆಟ್ನಾಂನ ವಿದೇಶಾಂಗ ಸಚಿವಾಲಯವು ದೂಷಿಸಿದೆ. ಪಾರಾಸೆಲ್ ಎನ್ನುವುದು ಚೀನಾ ತನ್ನದೇ ಎಂದು ಹೇಳಿಕೊಳ್ಳುವ ದಕ್ಷಿಣ ಚೀನಾ ಸಮುದ್ರದಲ್ಲಿನ ಒಂದು ದ್ವೀಪಸಮೂಹವಾಗಿದೆ. ಆದರೆ ದಕ್ಷಿಣ ಚೀನಾ ಸಮುದ್ರದಲ್ಲಿ ಎರಡು ರಾಷ್ಟ್ರಗಳ ನಡುವಿನ ಸಂಘರ್ಷವು ಇದೇ ಮೊದಲಲ್ಲ ಎಂದು ವಿಯೆಟ್ನಾಂನ ಮೀನುಗಾರಿಕಾ ಸಂಸ್ಥೆಯು ಆರೋಪಿಸಿದೆ. ಹಲವು ಬಾರಿ ದಾಳಿ ನಡೆಸುವ ಚೀನಾದ ಹಠಮಾರಿತನದ ವಿರುದ್ಧ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಬೇಕು. ಆ ಮೂಲಕ ಅಭದ್ರತೆ ಮತ್ತು ಅಸುರಕ್ಷತೆ ಭಯದಲ್ಲಿ ಬದುಕುತ್ತಿರುವ ವಿಯೆಟ್ನಾಂ ಮೀನುಗಾರರ ನೆರವಿಗೆ ಧಾವಿಸಬೇಕು ಎಂದು ಮೀನುಗಾರಿಕಾ ಸಂಸ್ಥೆಯು ತಿಳಿಸಿದೆ.
ಚೀನಾ-ಅಮೆರಿಕಾ ನಡುವೆಯೂ ಹಳಸಿದ ಸಂಬಂಧ
ಸುತ್ತಮುತ್ತಲಿನ ರಾಷ್ಟ್ರಗಳಷ್ಟೇ ಅಲ್ಲ ದೂರದ ಅಮೆರಿಕಾ ಜೊತೆಗೂ ಚೀನಾ ನೆಟ್ಟಗಿಲ್ಲ. ಕೊರೊನಾವೈರಸ್ ಹರಡುವಿಕೆ ಸಂದರ್ಭದಲ್ಲೇ ಅಮೆರಿಕಾ ಹಾಗೂ ಚೀನಾ ನೌಕಾಪಡೆಗಳು ಮುಖಾಮುಖಿಯಾಗಿದ್ದು ಸಾಕಷ್ಟು ಆತಂಕ ಸೃಷ್ಟಿಸಿತ್ತು. ಚೀನಾದ ದಕ್ಷಿಣ ಕರಾವಳಿಯಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಉಭಯ ನೌಕಾಸೇನೆಗಳು ಪರಸ್ಪರ 100 ಮೀಟರ್ ಅಂತರದಲ್ಲಿ ಎದುರುಗೊಂಡಿದ್ದವು. ಜೂನ್.15ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಈ ಕುರಿತು ವಿಶ್ವಸಂಸ್ಥೆಗೆ ಮೌಖಿಕ ಟಪ್ಪಣಿಯನ್ನು ಸಲ್ಲಿಸಿತ್ತು. ದಕ್ಷಿಣ ಚೀನಾ ಸಮುದ್ರವು ಅಂತಾರಾಷ್ಟ್ರೀಯ ಕಾನೂನಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಚೀನಾ ವಾದಿಸಿತ್ತು. ಈ ವಾದವನ್ನು ಅಮೆರಿಕಾ ಪ್ರಶ್ನೆ ಮಾಡಿದ್ದು, ರಾಜತಾಂತ್ರಿಕ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ವಿಶ್ವಸಂಸ್ಥೆಗೆ ದೂರು ನೀಡಿತ್ತು.
ಚೀನಾ ವಿರುದ್ಧ ಕೈಜೋಡಿಸಿದ ಯುಎಸ್ ಮತ್ತು ಫಿಲಿಫೈನ್ಸ್
2020ರ ಆರಂಭದಲ್ಲಿ ಅಮೆರಿಕಾ ಜೊತೆಗೆ ಫಿಲಿಫೈನ್ಸ್ ಮಾಡಿಕೊಂಡಿದ್ದ ಸೇನಾ ಪಡೆ ಭೇಟಿ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು. ಈ ಒಪ್ಪಂದವು ಫಿಲಿಫೈನ್ಸ್ ಸುತ್ತಮುತ್ತಲಿರುವ ಸಮುದ್ರದಲ್ಲಿ ಅಮೆರಿಕಾದ ಸೇನಾ ಚಟುವಟಿಕೆಗಳನ್ನು ನಡೆಸುವುದಕ್ಕೆ ಅನುಮತಿ ನೀಡಿತ್ತು. ವರ್ಷದ ಆರಂಭದಲ್ಲಿ ಈ ಒಪ್ಪಂದವನ್ನು ರದ್ದುಗೊಳಿಸಿದ್ದ ಫಿಲಿಫೈನ್ಸ್ ಜೂನ್.12ರ ರಾಷ್ಟ್ರೀಯ ಸ್ವಾತಂತ್ರ್ಯ ದಿನದಂದು ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡಿತು. ಚೀನಾದ ವಿರುದ್ಧ ಫಿಲಿಫೈನ್ಸ್ ಮತ್ತು ಅಮೆರಿಕಾ ರಾಷ್ಟ್ರಗಳು ಕೈ ಜೋಡಿಸಿದವು.
ಚೀನಾ ಮುಷ್ಠಿಯಿಂದ ಹೊರಬರಲು ಹಾಂಗ್-ಕಾಂಗ್ ಹೋರಾಟ
ಹಾಂಗ್-ಕಾಂಗ್ ಜನತೆಗೆ ಸ್ವಾತಂತ್ರ್ಯ ನೀಡುವಂತಾ ಹೊಸ ಕಾನೂನು ಜಾರಿಗೊಳಿಸುವ ಮೂಲಕ ನ್ಯಾಯವನ್ನು ಒದಗಿಸಲಾಗುತ್ತದೆ ಎಂದು ಚೀನಾ ಸರ್ಕಾರವು ಭರವಸೆಯನ್ನು ನೀಡುತ್ತಲೇ ಇದೆ. ಹಲವು ವರ್ಷಗಳಿಂದ ಇದನ್ನೇ ನೆಚ್ಚಿಕೊಂಡಿದ್ದ ಹಾಂಗ್-ಕಾಂಗ್ ಜನತೆಯ ತಾಳ್ಮೆಯ ಕಟ್ಟೆ ಒಡೆದಿದೆ. ಬೀಜಿಂಗ್ ಮೂಲಗಳ ಪ್ರಕಾರ ರಾಷ್ಟ್ರೀಯ ಭದ್ರತಾ ಕಾನೂನು ಮಂಡಿಸುವಲ್ಲಿ ಹಾಂಗ್-ಕಾಂಗ್ ವಿಫಲವಾಗಿದೆ. ಚೀನಾ ಸರ್ಕಾರದ ವಿರುದ್ಧ ಹಾಂಗ್-ಕಾಂಗ್ ನಲ್ಲಿ ಸ್ವಾತಂತ್ರ್ಯ ಹೋರಾಟದ ಕೂಗು ಮೊಳಗುತ್ತಿದೆ.