ಭಾರತದೊಂದಿಗೆ ಯುದ್ಧ ನಡೆಸಲು ಸನ್ನದ್ಧವಾದ ಚೀನಾ
ಬೀಜಿಂಗ್, ಮೇ 27: ಭಾರತದೊಂದಿಗೆ ಯುದ್ಧ ನಡೆಸಲು ಚೀನಾ ಸನ್ನದ್ಧವಾಗಿದೆ. ಈಗ ಇಡೀ ಜಗತ್ತು ಲಾಕ್ಡೌನ್ ಆಗಿರುವಾಗ ಚೀನಾ ತಂಟೆ ತಕರಾರುಗಳ ಕೆಲಸ ಆರಂಭಿಸಿದೆ.
Recommended Video
ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ತನ್ನ ಸೇನಾಪಡೆಗಳಿಗೆ ಸಮರಕ್ಕೆ ಸನ್ನದ್ಧಗೊಳ್ಳುವಂತೆ ಸೂಚಿಸಿದ್ದಾರೆ. ದೇಶದ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಬದ್ಧರಾಗಬೇಕೆಂದು ತಮ್ಮ ಸೈನಿಕರಿಗೆ ಅಧ್ಯಕ್ಷರು ಸಂದೇಶ ರವಾನಿಸಿದ್ದಾರೆ.
ಉಭಯ ದೇಶಗಳೂ ಲಡಾಖ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಸೇನೆ ನಿಯೋಜನೆ ಹೆಚ್ಚಿಸುವುದರೊಂದಿಗೆ ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ. ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಸೇನಾ ಮುಖಂಡರೊಂದಿಗೆ ಪ್ರತ್ಯೇಕ ತುರ್ತು ಸಭೆಗಳನ್ನು ನಡೆಸಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ.
ಭಾರತದ ಗಡಿಯ ಹತ್ತಿರ ತನ್ನ ವಾಯುನೆಲೆ ವಿಸ್ತರಿಸಿದ ಚೀನಾ
ಹಾಗೆಯೇ, ತೈವಾನ್ ವಿಚಾರಕ್ಕೂ ಚೀನಾ ತಲೆಕೆಡಿಸಿಕೊಂಡಿದೆ. ತೈವಾನ್ ತನ್ನ ಪ್ರಾಂತ್ಯ ಎಂದು ಹೇಳುತ್ತಲೇ ಬಂದಿರುವ ಚೀನಾ, ಅಲ್ಲಿಯೂ ಏನಾದರೂ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲದಿಲ್ಲ.
ಎಂಥ ಪರಿಸ್ಥಿತಿಗೂ ಸಿದ್ಧರಿರಬೇಕು ಸಮರಕ್ಕೆ ತಯಾರಿ ಹಾಗೂ ತರಬೇತಿಯ ತೀವ್ರತೆ ಹೆಚ್ಚಿಸಬೇಕು, ಎಲ್ಲಾ ರೀತಿಯ ಸಂಕೀರ್ಣ ಸಂದರ್ಭಗಳು ಎದುರಾದರೂ ಸಮರ್ಪಕವಾಗಿ ನಿಭಾಯಿಸಿ ದೇಶದ ಸಾರ್ವಭೌಮತ್ವವನ್ನು ರಕ್ಷಿಸಬೇಕು ಎಂದು ಸೇನಾ ಪಡೆಗಳಿಗೆ ಕ್ಸಿ ಜಿನ್ಪಿಂಗ್ ಆದೇಶಿಸಿದ್ದಾರೆ ಎಂದು ಚೀನಾದ ಕ್ಸಿನ್ಹುಆ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತ-ಚೀನಾದ ನಡುವೆ 2 ಬಾರಿ ಮಾರಾಮಾರಿ
ಇತ್ತೀಚೆಗೆ ಗಡಿಯಲ್ಲಿ ಭಾರತ-ಚೀನಾ ಯೋಧರ ನಡುವೆ ಎರಡು ಬಾರಿ ಮಾರಾಮಾರಿ ನಡೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದು 2017ರ ಡೋಕ್ಲಾಮ್ ತಿಕ್ಕಾಟಕ್ಕಿಂತ ದೊಡ್ಡದಾಗುವ ಮತ್ತು ದೀರ್ಘಕಾಲ ಮುಂದುವರಿಯುವ ಮುನ್ಸೂಚನೆಯೂ ಕಂಡು ಬಂದಿದೆ.
ಸಮರ ತಯಾರಿಗೆ ಸೂಚನೆ
ಚೀನಾದ ಸಂಸದೀಯ ಅಧಿವೇಶನದ ವೇಳೆ ಪಿಎಲ್ಎ ಸೇನಾ ಪಡೆ ಹಾಗೂ ಪಿಎಪಿಎಫ್ ಪೊಲೀಸ್ ಪಡೆಯ ನಿಯೋಗದೊಂದಿಗೆ ನಡೆದ ಸಭೆ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಈ ಸಮರ ತಯಾರಿಯ ಸೂಚನೆ ನೀಡಿದ್ದಾರೆ.
ಭಾರತದ ಗಡಿ ಭಾಗಗಳತ್ತ ಎಲ್ಲರ ಚಿತ್ತ
ಚೀನಾದ ಈ ಆಕ್ರಮಣಕಾರಿ ವರ್ತನೆಯಿಂದಾಗಿ ಎಲ್ಲರ ಕಣ್ಣು ಈಗ ಭಾರತದ ಗಡಿಭಾಗಗಳತ್ತ ನೆಟ್ಟಿದೆ. ಸಿಕ್ಕಿಮ್ ಮತ್ತು ಲಡಾಕ್ನಲ್ಲಿ ಗಡಿತಕರಾರು ಮಾಡುತ್ತಿರುವ ಚೀನಾ ಮುಂದೇನು ಹೆಜ್ಜೆ ಇಡುತ್ತದೆ ಯಾರಿಗೂ ಅಂದಾಜು ಮಾಡಲು ಸಾಧ್ಯವಿಲ್ಲ. ಭಾರತವಷ್ಟೇ ಅಲ್ಲ, ಅಮೆರಿಕದೊಂದಿಗೂ ಚೀನಾ ಸಂಘರ್ಷಕ್ಕಿಳಿಯುವ ಸಾಧ್ಯತೆ ಇಲ್ಲದಿಲ್ಲ. ಸೌತ್ ಚೀನಾ ಸಾಗರದಲ್ಲಿ ಅಮೆರಿಕದ ನೌಕಾಪಡೆ ಪಹರೆ ನಡೆಸುತ್ತಿರುವುದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ. ಕೊರೊನಾ ವೈರಸ್ ಸಂಬಂಧ ತಿಕ್ಕಾಟದಲ್ಲಿರುವ ಈ ಎರಡು ದೇಶಗಳು ಸೌತ್ ಚೀನಾ ವಿಚಾರಕ್ಕೆ ಎದುರುಬದುರಾದರೆ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಚೀನಾದ ಅಸಮಧಾನವೇನು?
ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾದ ಬಳಿಕ ಈ ಭಾಗದ ಗಡಿಯಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಭಾರತ ವೇಗ ನೀಡಿರುವುದು ಚೀನಾದ ಅಸಮಾಧಾನಕ್ಕೆ ಮತ್ತೊಂದು ಮುಖ್ಯ ಕಾರಣ. ಚೀನಾದ ನಡೆಗೆ ಭಾರತ ಖಡಕ್ ಪ್ರತ್ಯುತ್ತರ ನೀಡಿದೆ. ಗಡಿಯಲ್ಲಿ ಸಶಸ್ತ್ರ ಪಡೆಗಳಿಗೆ ಯುದ್ಧ ಸಿದ್ಧತೆಯ ಸಂದೇಶ ರವಾನಿಸಿದೆ.