ಗಲ್ವಾನ್ ಗುದ್ದಾಟ: ಭಾರತ ಕೊಟ್ಟ ಪೆಟ್ಟಿನಿಂದ 45 ಸೈನಿಕರನ್ನು ಕಳೆದುಕೊಂಡ ಚೀನಾ?
ನವದೆಹಲಿ, ಫೆಬ್ರವರಿ.11: ಭಾರತ-ಚೀನಾ ಗಡಿಭಾಗದ ಲಡಾಖ್ ಪೂರ್ವಭಾಗದಲ್ಲಿರುವ ಗಾಲ್ವಾನ್ ನದಿ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಚೀನಾದ 45 ಯೋಧರು ಪ್ರಾಣ ಬಿಟ್ಟಿದ್ದಾರೆ ಎಂದು ರಷ್ಯಾದ ಟಿಎಎಸ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ಮೇ ಮತ್ತು ಜೂನ್ ತಿಂಗಳಿನಲ್ಲಿ ಗಲ್ವಾನ್ ಗಡಿ ಪ್ರದೇಶದಲ್ಲಿ ಭಾರತ-ಚೀನಾ ಯೋಧರು ಮುಖಾಮುಖಾಯಾಗಿದ್ದು, ಈ ವೇಳೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾದ 45 ಯೋಧರು ಮೃತಪಟ್ಟಿದ್ದಾರೆ ಎಂದು ರಷ್ಯಾ ಸುದ್ದಿ ಸಂಸ್ಥೆಯು ತಿಳಿಸಿದೆ.
ಚಿತ್ರಸಾಕ್ಷ್ಯ: ಭಾರತೀಯ ಗಡಿ ಪ್ರದೇಶದಲ್ಲಿ ಚೀನಾ ಆಡಿದ್ದೇ ಆಟ!
ಭಾರತ-ಚೀನಾ ಯೋಧರ ಘರ್ಷಣೆ ಬೆನ್ನಲ್ಲೇ ಉಭಯ ರಾಷ್ಟ್ರಗಳು ಈ ಪ್ರದೇಶದಲ್ಲಿ 50,000 ಹೆಚ್ಚುವರಿ ಸೇನೆಯನ್ನು ನಿಯೋಜನೆ ಮಾಡಿದ್ದವು. ಏಷ್ಯಾ ಖಂಡದ ಎರಡು ಪರಮಾಣು ಸಾಮರ್ಥ್ಯ ಹೊಂದಿರುವ ಎರಡು ದೈತ್ಯ ರಾಷ್ಟ್ರಗಳು ಈ ಮೊದಲಿನ ಒಪ್ಪಂದದಂತೆ ಪ್ಯಾಂಗಾಂಗ್ ತ್ಸೋ ಗಡಿ ಪ್ರದೇಶದಿಂದ ತಮ್ಮ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಕುರಿತು ರಷ್ಯಾದ ಸುದ್ದಿ ಸಂಸ್ಥೆ ಟಿಎಎಸ್ಎಸ್ ವರದಿ ಮಾಡಿದೆ.
ಗಡಿಯಿಂದ ಜಾಗ ಖಾಲಿ ಮಾಡಿದ ಚೀನಾದ ಸೇನೆ
ಭಾರತ ಮತ್ತು ಚೀನಾದ ಕಮಾಂಡರ್ಗಳ ಮಟ್ಟದಲ್ಲಿ 9 ನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ಈ ಮೊದಲೇ ಮಾಡಿಕೊಂಡಿರುವ ಜಾಗತಿಕ ಒಪ್ಪಂದಗಳಿಗೆ ಅನುಗುಣವಾಗಿ ಏಕಕಾಲದಲ್ಲಿ ಗಡಿಯಿಂದ ಉಭಯ ರಾಷ್ಟ್ರಗಳು ತಮ್ಮ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳಲಿವೆ ಎಂದು ಚೀನಾದ ರಕ್ಷಣಾ ಸಚಿವಾಲಯವು ಬುಧವಾರ ತಿಳಿಸಿದೆ. "ಚೀನಾ ಮತ್ತು ಭಾರತದ ನಡುವಿನ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆಯ 9 ನೇ ಸುತ್ತಿನ ಒಮ್ಮತದ ಪ್ರಕಾರ, ಪ್ಯಾಂಗೊಂಗ್ ಹುನಾನ್ ಮತ್ತು ಉತ್ತರ ಕರಾವಳಿಯಲ್ಲಿನ ಚೀನಾ ಮತ್ತು ಭಾರತೀಯ ಸಶಸ್ತ್ರ ಪಡೆಗಳನ್ನು ಫೆಬ್ರವರಿ.10ರಂದು ಏಕಕಾಲದಲ್ಲಿ ವಾಪಸ್ ಪಡೆಯುವುದಕ್ಕೆ ಪ್ರಾರಂಭಿಸಲಿವೆ" ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ವು ಕ್ಯೂವಾನ್ ಹೇಳಿದ್ದಾರೆ.
ಭಾರತ-ಚೀನಾ ನಡುವಿನ ಗಡಿಯಲ್ಲಿ ಉದ್ವಿಗ್ನತೆ
ಕಳೆದ 2020ರ ಮೇ ತಿಂಗಳಿನಿಂದ ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಗಳಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಉದ್ವಿಗ್ನಗೊಂಡಿತ್ತು. ಪ್ಯಾಂಗಾಂಗ್ ತ್ಸೋ ಕೆರೆ, ಲಡಾಖ್ ಗಡಿ ಮತ್ತು ಟಿಬೆಟ್ ಸ್ವಾಯತ್ತ ನಿಗದಿತ ಗಡಿ ಪ್ರದೇಶದಲ್ಲಿ ಹೆಚ್ಚುವರಿ ಸೇನಾಪಡೆಯನ್ನು ನಿಯೋಜನೆ ಮಾಡಲಾಗಿತ್ತು.
ಭಾರತದ 20 ಯೋಧರು ಹುತಾತ್ಮ, 76 ಸೈನಿಕರಿಗೆ ಗಾಯ
ಕಳೆದ ಮೇ.5ರಂದು ಮೊದಲ ಬಾರಿಗೆ ಭಾರತ-ಚೀನಾ ಸೇನೆಗಳು ಲಡಾಖ್ ಗಡಿ ಪ್ರದೇಶದಲ್ಲಿ ಮುಖಾಮುಖಿಯಾಗಿದ್ದವು. ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿದ್ದರು. ಇದೊಂದು ಘಟನೆಯಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಲಡಾಖ್ ಗಡಿಯು ಬೂದಿ ಮುಚ್ಚಿದ ಕೆಂಡದಂತೆ ಆಗಿದೆ.
ದೇಶದ ಸೈನಿಕರ ಸಾವಿನ ಮಾಹಿತಿ ಮುಚ್ಚಿಟ್ಟ ಚೀನಾ
ಚೀನಾ ಸೈನಿಕರು ತೋರಿದ ಕ್ರೌರ್ಯಕ್ಕೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, 76 ಯೋಧರು ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆಯು ಬಹಿರಂಗವಾಗಿ ಸ್ಪಷ್ಟನೆ ನೀಡಿತ್ತು. ಆದರೆ ಚೀನಾ ಸೇನೆಯಾಗಲಿ ಅಥವಾ ಸರ್ಕಾರವಾಗಲಿ ತಮ್ಮ ಸೈನಿಕರ ಸಾವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಲಿಲ್ಲ. ತಮ್ಮ ಸೈನಿಕರ ಸಾವು-ನೋವಿನ ಕುರಿತು ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ. ಚೀನಾದ ಕಡೆಯಲ್ಲಿ ಯಾವುದೇ ಸೈನಿಕರಿಗೂ ಪ್ರಾಣಹಾನಿಯಾಗಿಲ್ಲ ಎಂತಲೇ ವಾದಿಸುತ್ತಾ ಬಂದಿತ್ತು. ಇದೀಗ ರಷ್ಯಾದ ಟಿಎಎಸ್ಎಸ್ ಸುದ್ದಿ ಸಂಸ್ಥೆಯು ಚೀನಾದ ಸೈನಿಕರೂ ಸಹ ಪ್ರಾಣ ಕಳೆದುಕೊಂಡಿದ್ದರು. ಈ ಹಿಂದಿನ ಸಂಘರ್ಷದಲ್ಲಿ ಬೀಜಿಂಗ್ ತನ್ನ 45 ಯೋಧರನ್ನು ಕಳೆದುಕೊಂಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಿದೆ.