ಭಾರತದ ಗಡಿಯಲ್ಲಿ ಚೀನಾ ಹಳ್ಳಿ: ಇದು ಬಾಹ್ಯಾಕಾಶದ ಚಿತ್ರ ತೆರೆದಿಟ್ಟ ಸತ್ಯ!
ನವದೆಹಲಿ, ಜನವರಿ.18: ಭಾರತದ ಸಮಗ್ರತೆ, ಏಕತೆ ಮತ್ತು ಸಾರ್ವಭೌಮತ್ವಕ್ಕೆ ಯಾವುದೇ ರೀತಿ ಧಕ್ಕೆ ಬಾರದಂತೆ ಕಾಪಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮೇಲಿಂದ ಮೇಲೆ ಭರವಸೆ ನೀಡುತ್ತಿದೆ. ಇನ್ನೊಂದು ಮಗ್ಗಲಿನಲ್ಲಿ ಗಡಿ ನುಗ್ಗಿರುವ ಚೀನಾ ತನ್ನದೇ ಹೊಸ ಗ್ರಾಮವನ್ನು ಹುಟ್ಟು ಹಾಕಿಕೊಂಡಿದೆ.
ಭಾರತ-ಚೀನಾ ನಡುವಿನ ಗಡಿ ವಿವಾದದ ಮಧ್ಯೆ ಹುಬ್ಬೇರಿಸಿ ನೋಡುವಂತಾ ಘಟನೆಯೊಂದು ನಡೆದು ಹೋಗಿದೆ. ಒಂದು ವರ್ಷದಲ್ಲೇ ಗಡಿಯ ಚಿತ್ರಣ ಸಂಪೂರ್ಣ ಬದಲಾಗಿದೆ. ಚೀನಾ ತೋರಿದ ವಕ್ರಬುದ್ಧಗೆ ಬಾಹ್ಯಾಕಾಶದಲ್ಲಿ ಸೆರೆಯಾದ ಚಿತ್ರಗಳು ಜೀವಂತ ಸಾಕ್ಷಿಯಾಗಿ ನಿಂತಿವೆ.
ಚಿತ್ರಸಾಕ್ಷ್ಯ: ಭಾರತೀಯ ಗಡಿ ಪ್ರದೇಶದಲ್ಲಿ ಚೀನಾ ಆಡಿದ್ದೇ ಆಟ!
ಲಡಾಖ್ ಗಡಿ ಪ್ರದೇಶ ಮತ್ತು ಗಲ್ವಾನ್ ಗಡಿಯಲ್ಲಿ ಜಗಳಕ್ಕೆ ನಿಲ್ಲುತ್ತಿದ್ದ ಚೀನಾ ಸೇನೆಯು ಸದ್ದಿಲ್ಲದೇ ತನ್ನ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿದೆ. ಗಡಿಗೆ ಹೊಂದಿಕೊಂಡಿರುವ ಸುಬನ್ಸಿರಿ ಜಿಲ್ಲೆಯಲ್ಲಿ 60 ರಿಂದ 70 ಕಿಲೋ ಮೀಟರ್ ಪ್ರದೇಶವನ್ನು ಚೀನಾ ಈಗಾಗಲೇ ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ.
ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಹೆಸರಿನಲ್ಲಿ ಚೀನಾ ಮಾಡುತ್ತಿರುವ ಅತಿಕ್ರಮಣದ ಬಗ್ಗೆ ಭಾರತಕ್ಕೆ ಗೊತ್ತಿಲ್ಲವೇ. ಭಾರತದ ವಿದೇಶಾಂಗ ಇಲಾಖೆ ಏನು ಮಾಡುತ್ತಿದೆ. ಈ ಬಗ್ಗೆ ಎಲ್ಲವೂ ಗೊತ್ತಿದ್ದೂ ಕೂಡಾ ಮೌನವಾಗಿ ಕುಳಿತಿದೆಯೇ. ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಇದೊಂದು ವರದಿ ಹುಟ್ಟು ಹಾಕುವಂತಿದೆ. ಗಡಿಯಲ್ಲಿ ಗ್ರಾಮವನ್ನೇ ಕಟ್ಟಿಕೊಂಡ ಚೀನಾದ ಕಾರ್ಯವನ್ನು ಸಾರಿ ಹೇಳುವ ಚಿತ್ರ ಸಹಿತ ವರದಿಗಾಗಿ ಮುಂದೆ ಓದಿ.
ಭಾರತದ ರಾಜ್ಯದಲ್ಲಿ ಗ್ರಾಮವನ್ನೇ ಕಟ್ಟಿದ ಚೀನಾ
ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಚೀನಾ ಹೊಸ ಗ್ರಾಮ ರಚಿಸಿಕೊಂಡಿರುವುದನ್ನು ಬಾಹ್ಯಾಕಾಶದಲ್ಲಿ ಸೆರೆಯಾದ ಚಿತ್ರಗಳು ತೋರುತ್ತಿವೆ. 101ಕ್ಕೂ ಹೆಚ್ಚು ಮನೆಗಳನ್ನು ಈ ಗ್ರಾಮದಲ್ಲಿ ಕಟ್ಟಿಕೊಳ್ಳಲಾಗಿದ್ದು, ನವೆಂಬರ್.01ರ 2020ರಲ್ಲಿ ಇದೇ ಚಿತ್ರಗಳ ಮೇಲೆ ವಿಮರ್ಶೆ ಮಾಡಲಾಗಿತ್ತು. ಅಂದು ಚೀನಾ ಸೇನೆಯು ಭಾರತದ ಗಡಿಗೆ ಸೇರಿದ ಸರಿ ಸುಮಾರು 4.5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಚೀನಾ ಸೇನೆಯು ಪ್ರವೇಶಿಸುತ್ತಿದೆ ಎಂದು ಆರೋಪಿಸಲಾಗಿತ್ತು.
ಭಾರತದ ಗಡಿಯಲ್ಲಿ ಚೀನಾ ಕಟ್ಟಿಕೊಂಡ ಹಳ್ಳಿ!
ಹಿಮಾಲಯದ ಪರ್ವತಗಳ ಪೂರ್ವ ಭಾಗದಲ್ಲಿ ಗಡಿ ವಿಚಾರಕ್ಕೆ ದಶಕಗಳ ಕಾಲದಿಂದಲೂ ಸಂಘರ್ಷ ಮತ್ತು ಹೋರಾಟಗಳು ನಡೆಯುತ್ತಿವೆ. ಇದರ ಮಧ್ಯೆ ಅರುಣಾಚಲ ಪ್ರದೇಶ ಸುಬನ್ಸಿರಿ ಜಿಲ್ಲೆ ಮೇಲ್ಭಾಗದಲ್ಲಿರುವ ಹಾಗೂ ತ್ಸಾರಿ ಚು ನದಿಗೆ ಹೊಂದಿಕೊಂಡಂತೆ ಈ ಗ್ರಾಮವನ್ನು ರಚಿಸಿಕೊಳ್ಳಲಾಗಿದೆ. ಇದೇ ಗಡಿ ಪ್ರದೇಶವು ದಶಕಗಳ ಕಾಲದಿಂದಲೂ ಭಾರತ ಮತ್ತು ಚೀನಾದ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ವಿವಾದ ಇತ್ಯರ್ಥಕ್ಕೂ ಮೊದಲೇ ಚೀನಾ ಅಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿರುವುದು ಗೋಚರಿಸುತ್ತಿದೆ.
ದಕ್ಷಿಣ ಚೀನಾ ಸಮುದ್ರಕ್ಕೆ ಲಗ್ಗೆಯಿಟ್ಟ ಭಾರತೀಯ ಯುದ್ಧನೌಕೆ
ನವೆಂಬರ್.01, 2020 ಮತ್ತು 2019ರ ಆಗಸ್ಟ್.26ರ ಭಾವಚಿತ್ರಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಕಾಣುತ್ತಿವೆ. ಕಳೆದ 2019ರಲ್ಲಿ ಯಾವುದೇ ರೀತಿ ಕಾಮಗಾರಿಯಿಲ್ಲದೇ ಬಣಗುಡುತ್ತಿದ್ದ ಪ್ರದೇಶದ ಚಿತ್ರಣ ಇದೀಗ ಸಂಪೂರ್ಣ ಬದಲಾದಂತಿದೆ. ಅಂದರೆ ಒಂದು ವರ್ಷದಲ್ಲಿಯೇ ಚೀನಾ ಗಡಿಯಲ್ಲಿ ತನ್ನ ಕಾರ್ಯ ಸಾಧನೆ ಮಾಡಿಕೊಂಡಿದೆಯಾ ಎಂಬ ಅನುಮಾನಗಳನ್ನು ಇದೊಂದು ಚಿತ್ರವು ಹುಟ್ಟು ಹಾಕುತ್ತಿದೆ.
ಭಾರತ-ಚೀನಾ ನಡುವೆ ಗಲ್ವಾನ್ ಸಂಘರ್ಷ
2020ರ ಜೂನ್.15 ಮತ್ತು 16ರಂದು ಭಾರತ ಮತ್ತು ಚೀನಾದ ಸೇನೆ ನಡುವೆ ಸಂಘರ್ಷ ನಡೆದಿತ್ತು. ಭಾರತದ 20 ವೀರ ಯೋಧರು ಹುತಾತ್ಮರಾಗಿದ್ದು, 76ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಆದರೆ ಅಂದೂ ಕೂಡಾ ಚೀನಾ ತನ್ನ ಸೇನೆಯಲ್ಲಿ ಎಷ್ಟು ಮಂದಿ ಯೋಧರು ಪ್ರಾಣ ಬಿಟ್ಟಿದ್ದರು ಎಂಬ ಬಗ್ಗೆ ಮಾಹಿತಿಯನ್ನು ನೀಡಿರಲಿಲ್ಲ. ಈ ಬೆಳವಣಿಗೆ ನಂತರದಲ್ಲೂ ಚೀನಾ ಗಡಿಯಲ್ಲಿ ಸಾವಿರಾರು ಯೋಧರನ್ನು ತಂದು ನಿಲ್ಲಿಸಿತು. ಹಿಮಾಲಯದ ತುತ್ತ-ತುದಿಯಲ್ಲಿ ಮೈನಸ್(-) ತಾಪಮಾನದ ಮೈಕೊರೆಯುವ ಚಳಿಯಲ್ಲೂ ದೇಶಕ್ಕಾಗಿ ಭಾರತೀಯ ಯೋಧರು ಮೈಯೊಡ್ಡಿ ನಿಂತಿದ್ದಾರೆ.
ಚೀನಾ ಕಾಮಗಾರಿ ಬಗ್ಗೆ ಭಾರತದ ಸಚಿವಾಲಯ ಹೇಳಿದ್ದೇನು?
ಭಾರತದ ಗಡಿ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಕಾಮಗಾರಿ ಬಗ್ಗೆ ಚಿತ್ರಗಳ ಸಹಿತವಾಗಿ ರಾಷ್ಟ್ರೀಯ ಸುದ್ದಿ ವಾಹಿನಿ ಎನ್ ಡಿ ಟಿವಿ ಕೇಳಿದ ಪ್ರಶ್ನೆಗೆ ದೇಶದ ವಿದೇಶಾಂಗ ಸಚಿವಾಲಯವು ಉತ್ತರ ನೀಡಿತ್ತು. "ಗಡಿ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಕಾಮಗಾರಿಗಳ ಬಗ್ಗೆ ವರದಿಗಳನ್ನು ನೋಡಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಉಭಯ ದೇಶಗಳ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ" ಎಂದು ಉತ್ತರಿಸಿತ್ತು.
Fact Check: ಚೀನಾ ಯೋಧರ ಸಮಾಧಿ ಹಿಂದಿನ ಸತ್ಯವೇನು?
"ಭಾರತ-ಚೀನಾ ಗಡಿಯಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸಂಬಂಧಿಸಂತೆ ರಾಜ್ಯ ಸರ್ಕಾರ ಕೂಡಾ ಹಲವು ರೀತಿ ಕಾಮಗಾರಿಗಳನ್ನು ನಡೆಸುತ್ತಿದೆ. ಗಡಿ ಪ್ರದೇಶದಲ್ಲಿ ರಸ್ತೆ ಮತ್ತು ಸೇತುವೆ ಸೇರಿದಂತೆ ಇತರೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಗಡಿಯಲ್ಲಿನ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವುದಕ್ಕೆ ಸರ್ಕಾರವು ಬದ್ಧವಾಗಿದೆ" ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿತ್ತು.
ಗಡಿಯಲ್ಲಿ ಕಾಮಗಾರಿ ಆರಂಭಕ್ಕೆ ಕಾರಣವಾಗಿದ್ದು ಏನು?
ಕಳೆದ 2020ರ ಅಕ್ಟೋಬರ್ ತಿಂಗಳಿನಲ್ಲಿ ಗಡಿ ಕಾಮಗಾರಿಗಳ ಬಗ್ಗೆ ಚೀನಾದ ವಿದೇಶಾಂಗ ಸಚಿವರೊಬ್ಬರು ಹೇಳಿಕೆ ನೀಡಿದ್ದರು. "ಗಡಿಯಲ್ಲಿ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಭಾರತವು ಹೆಚ್ಚು ಹೆಚ್ಚು ಕಾಮಗಾರಿ ನಡೆಸುತ್ತಿದೆ. ಇದರಿಂದಾಗಿ ಗಡಿಯಲ್ಲಿ ಉಭಯ ಸೇನಾ ಪಡೆಗಳ ಚಟುವಟಿಕೆ ಹೆಚ್ಚಾಯಿತು. ಗಡಿಯು ಬೂದಿ ಮುಚ್ಚಿದ ಕೆಂಡದಂತಾ ಪರಿಸ್ಥಿತಿ ನಿರ್ಮಾಣವಾಗಲು ಇದೇ ಕಾರಣವಾಗಿತ್ತು" ಎಂದು ಚೀನಾದ ವಿದೇಶಾಂಗ ಸಚಿವರು ಹೇಳಿದ್ದಾರೆ. ಇಂದು ಚೀನಾದ ಗ್ರಾಮವು ಕಾಣುತ್ತಿರುವ ಪ್ರದೇಶದಲ್ಲಿ ಅಕ್ಟೋಬರ್ ನಲ್ಲಿ ಭಾರತ ಯಾವುದೇ ರಸ್ತೆ ಕಾಮಗಾರಿಯನ್ನೂ ನಡೆಸಿರಲಿಲ್ಲ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳೂ ನಡೆದಿರಲಿಲ್ಲ. ಇದೀಗ ದಿಢೀರನೇ ಚೀನಾದ ಒಂದು ಹಳ್ಳಿ ಆ ಪ್ರದೇಶದಲ್ಲಿ ರಚನೆಯಾಗಿದೆ.
ಮೊದಲೇ ಎಚ್ಚರಿಕೆ ನೀಡಿದ್ದ ಸ್ಥಳೀಯ ಸಂಸದ
2020ರ ನವೆಂಬರ್ ತಿಂಗಳಿನಲ್ಲೇ ಚೀನಾ ನುಸುಳುವಿಕೆಯನ್ನು ಹೇಳುವ ಚಿತ್ರ ಲಭ್ಯವಾಗಿತ್ತು. ಲೋಕಸಭಾ ಕಲಾಪದಲ್ಲಿ ಅರುಣಾಚಲ ಪ್ರದೇಶದ ಸಂಸದ ತಪಿರ್ ಗಾವೋ ಈ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು. ಮರುದಿನ ಖಾಸಗಿ ವಾಹಿನಿ(ಎನ್ ಡಿ ಟಿವಿ)ಗೆ ಚೀನಾದ ಕಾಮಗಾರಿ ನಡೆಸುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದರು. "ಸುಬನ್ಸರಿ ಜಿಲ್ಲೆಯ ಮೇಲ್ಭಾಗದಲ್ಲಿ ಚೀನಾ ದ್ವಿಮುಖ ರಸ್ತೆಯ ನಿರ್ಮಾಣ ಮಾಡುತ್ತಿದೆ. ಕಾಮಗಾರಿ ಇಂದಿಗೂ ನಡೆಯುತ್ತಿದೆ. ಸುಬನ್ಸಿರಿ ಮೇಲ್ಭಾಗದಲ್ಲಿ 60-70 ಕಿಲೋ ಮೀಟರ್ ಒಳಗೆ ಚೀನಾ ಪ್ರವೇಶಿಸಿದೆ. ಸ್ಥಳೀಯವಾಗಿ "ಲೆನ್ಸಿ" ಎಂದು ಕರೆಯಲ್ಪಡುವ ನದಿಗೆ ಹೊಂದಿಕೊಂಡಂತೆ ರಸ್ತೆ ಕಾಮಗಾರಿ ನಡೆಸಿರುವುದು ಗೊತ್ತಾಗುತ್ತದೆ. ಈ ರಸ್ತೆಯು ಸುಬನ್ಸರಿ ಜಿಲ್ಲೆಯೊಂದಿಗೆ ಸಂಪರ್ಕವನ್ನು ಹೊಂದಿದೆ" ಎಂದು ಹೇಳಿದ್ದರು.
ವಿದೇಶಾಂಗ ಸಚಿವಾಲಯದಿಂದ ಇಲ್ಲ ನೇರ ಉತ್ತರ
ಭಾರತದ ಗಡಿಯಲ್ಲಿ ಚೀನಾ ಗ್ರಾಮವನ್ನು ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ವಿದೇಶಾಂಗ ಸಚಿವಾಲಯವು ಯಾವುದೇ ರೀತಿ ನೇರವಾದ ಉತ್ತರವನ್ನು ನೀಡಲಿಲ್ಲ. ಬದಲಿಗೆ "ಉಭಯ ರಾಷ್ಟ್ರಗಳ ಗಡಿಯಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ದೇಶದ ಭದ್ರತೆ, ಸಮಗ್ರತೆ ಮತ್ತ ಸಾರ್ವಭೌಮತ್ವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದೆ.
ಕೇಂದ್ರ ಸರ್ಕಾರದ ನಕ್ಷೆಯಲ್ಲೇ ಈ ಚಿತ್ರಣ
ಸರ್ವೇಯರ್ ಜನರಲ್ ಆಫ್ ಇಂಡಿಯಾದ ನಕ್ಷೆಯನ್ನು ಭಾರತದ ಸರ್ಕಾರವು ತನ್ನ ಅಧಿಕೃತ ನಕ್ಷೆಯಾಗಿ ಬಳಸಿದೆ. ಈ ನಕ್ಷೆಯಲ್ಲಿ ಚೀನಾವು ಭಾರತದ ಭೂ ಪ್ರದೇಶದಲ್ಲಿ ಗ್ರಾಮವನ್ನು ರಚಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಒಂದು ದಶಕದಲ್ಲಿ ಬದಲಾದ ಗಡಿಯ ಚಿತ್ರಣ
ಪ್ಲಾನೆಟ್ ಲ್ಯಾಬ್ ಐಎನ್ ಸಿ ಸಂಸ್ಥೆಯು ಬಾಹ್ಯಾಕಾಶದಿಂದ ಸೆರೆ ಹಿಡಿದ ಭಾವಚಿತ್ರಗಳನ್ನು ಖಾಸಗಿ ಸುದ್ದಿ ವಾಹಿನಿ(ಎನ್ ಡಿ ಟಿವಿ)ಗೆ ನೀಡಿದೆ. ಗೂಗಲ್ ಅರ್ಥ್ ಮೂಲಕ ಒಂದ ದಶಕದ ಹಿಂದೆ ಅದೇ ಪ್ರದೇಶವು ಹೇಗಿತ್ತು ಎನ್ನುವುದರ ಚಿತ್ರಣವನ್ನು ಮತ್ತೊಂದು ಕಡೆಯಲ್ಲಿ ತೋರಿಸಲಾಗಿದೆ. 10 ವರ್ಷಗಳಲ್ಲಿ ಬದಲಾದ ಚಿತ್ರಣವನ್ನು ಈ ಭಾವಚಿತ್ರಗಳು ತೋರಿಸುತ್ತವೆ.
ಚೀನಾದ ಗ್ರಾಮದ ಬಗ್ಗೆ ತಜ್ಞರ ಅಭಿಪ್ರಾಯವೇನು?
ಭಾರತ-ಚೀನಾ ಅಂತಾರಾಷ್ಟ್ರೀಯ ವ್ಯವಹಾರ ತಜ್ಞರಾದ ಗ್ಲೌಡೆ ಅರ್ಪಿ ಅವರು ಇದೀಗ ತಲೆ ಎತ್ತಿರುವ ಹೊಸ ಗ್ರಾಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತದ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ದಕ್ಷಿಣದ "ಮೆಕ್ ಮೆಹಾನ್"ನಲ್ಲಿ ಈ ಗ್ರಾಮವನ್ನು ರಚಿಸಲಾಗಿದೆ. ಇದೊಂದು ವಿವಾದಿತ ಪ್ರದೇಶವಾಗಿದ್ದು, ಅಸಾಧಾರಣ ಮತ್ತು ಗಂಭೀರ ವಿಷಯವಾಗಿದೆ. ಏಕೆಂದರೆ, ಗಡಿಯಿಂದ ಆಚೆಗೆ ಅನೇಕ ರೀತಿ ಪರಿಣಾಮಗಳನ್ನು ಬೀರಬಲ್ಲ ವಿಚಾರವಾಗಿದೆ" ಎಂದು ಹೇಳಿದ್ದಾರೆ.
"ವಿವಾದಿತ ಪ್ರದೇಶದಲ್ಲಿ ಗ್ರಾಮವನ್ನು ಕಟ್ಟಿಕೊಳ್ಳುವ ಮೂಲಕ ಚೀನಾ ಹಲವು ಒಪ್ಪಂದಗಳನ್ನು ಉಲ್ಲಂಘಿಸಿದೆ. ಉಭಯ ರಾಷ್ಟ್ರಗಳ ಗಡಿ ಪ್ರದೇಶದಲ್ಲಿರುವ ಜನರ ಸುರಕ್ಷತೆ ಕಾಯ್ದುಕೊಳ್ಳಬೇಕಿದೆ. ಹಲವು ರೀತಿಯ ಗಡಿ ವಿವಾದಗಳ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಪರಸ್ಪರ ರಾಷ್ಟ್ರಗಳು ಗೌರವಿಸುವುದು, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಕ್ಕೆ ಬದ್ಧವಾಗಬೇಕಿದೆ" ಎಂದಿದ್ದಾರೆ.
ಚೀನಾ ನಡೆ ಬಗ್ಗೆ ಸೇನಾ ವಿಶ್ಲೇಷಕರು ಹೇಳುವುದೇನು?
ಭಾರತದ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ ಚೀನಾವು ಜನ ವಸತಿಗೆ ಅನುಕೂಲವಾಗುವಂತಾ ಕಾಮಗಾರಿ ನಡೆಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಸೇನಾ ವಿಶ್ಲೇಷಕರಾದ ಸಿಮ್ ಟ್ಯಾಕ್ ತಿಳಿಸಿದ್ದಾರೆ. 2000ರ ವರ್ಷದಿಂದಲೂ ಈ ಪ್ರದೇಶದಲ್ಲಿ ಚೀನಾ ಸ್ವಲ್ಪ ಮುನ್ನಡೆಯನ್ನು ಸಾಧಿಸಿಕೊಳ್ಳುತ್ತಾ ಬರುತ್ತಿದೆ. ಹಲವು ವರ್ಷಗಳಿಂದ ಈ ಕಣಿವೆ ಮೇಲೆ ಚೀನಾ ತನ್ನ ಕಣ್ಣಿಟ್ಟಿತ್ತು. ಅನಿಯಂತ್ರಿತ ಪ್ರದೇಶವನ್ನು ಗುರುತಿಸಿಕೊಂಡ ಚೀನಾ ಅಲ್ಲಿ ಜನವಸತಿಗೆ ಅಗತ್ಯ ಕಾಮಗಾರಿಯನ್ನು ಮಾಡಿಕೊಂಡಿದೆ" ಎಂದು ಸಿಮ್ ಟ್ಯಾಕ್ ಹೇಳಿದ್ದಾರೆ.
ಇತಿಹಾಸವನ್ನು ಹೇಳುತ್ತಾ ತ್ಸಾರಿ ಚು ನದಿ?
ಕಳೆದ 1959ರಿಂದಲೂ ಭಾರತ ಮತ್ತು ಚೀನಾ ನಡುವಿನ ಸಂಘರ್ಷಕ್ಕೆ ಇದೇ ತ್ಸಾರಿ ಚು ನದಿಯು ಕಾರಣವಾಗಿತ್ತು. ಅಂದು ನವದೆಹಲಿಯಿಂದ ಚೀನಾ ರಾಜಧಾನಿ ಬೀಜಿಂಗ್ ಗೆ ಔಪಚಾರಿಕ ಟಿಪ್ಪಣಿಯೊಂದನ್ನು ಕಳುಹಿಸಲಾಗಿತ್ತು. ಅದರಲ್ಲಿ "ಯಾವುದೇ ಸೂಚನೆಗಳಿಲ್ಲದೇ ಚೀನಾದ ಯೋಧರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದರು. ಆ ಪೈಕಿ 12 ಗುಂಡುಗಳು ಪ್ರಬಲವಾಗಿದ್ದು, ಎಂಟು ಮಂದಿ ಭಾರತೀಯ ಯೋಧರು ತಪ್ಪಿಸಿಕೊಂಡಿದ್ದರು" ಎಂದು ಉಲ್ಲೇಖಿಸಲಾಗಿತ್ತು.