ಭಾರತದ ಗಡಿಯಲ್ಲಿ ಹಳ್ಳಿಗಳನ್ನು ನಿರ್ಮಿಸುತ್ತಿದೆ ಚೀನಿ ಗ್ಯಾಂಗ್
ನೆರೆ ದೇಶಗಳ ಜೊತೆ ಸದಾ ಆಕ್ರಮಣಕಾರಿ ನಿಲುವು ತೋರುವ ಚೀನಾಗೆ ಅದೆಷ್ಟು ಹೇಳಿದರೂ ಬುದ್ಧಿ ಬರುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಲಡಾಖ್ ಗಡಿಯಲ್ಲಿ ಕಿರಿಕ್ ಮಾಡುತ್ತಿರುವ ಚೀನಾ ಅರುಣಾಚಲ ಬಳಿಯೂ ಇಂತಹದ್ದೇ ಕಿತಾಪತಿಗೆ ಮುಂದಾಗಿದೆ. ಆದರೆ ಲಡಾಖ್ ರೀತಿ ನೇರವಾಗಿ ಕಾಲು ಕೆರೆದು ಜಗಳಕ್ಕೆ ಬಾರದೆ, ಕುತಂತ್ರ ಬುದ್ಧಿ ಉಪಯೋಗಿಸಿ ಭಾರತದ ಜೊತೆ ಗಡಿ ಕಿರಿಕ್ಗೆ ಚೀನಾ ಷಡ್ಯಂತ್ರ ರೂಪಿಸಿದೆ.
ಅರುಣಾಚಲದ ಪಶ್ಚಿಮಭಾಗದಲ್ಲಿನ ಬುಮ್ಲಾ ಕಣಿವೆ ಬಳಿ ಚೀನಾ 3 ಗ್ರಾಮಗಳನ್ನು ನಿರ್ಮಾಣ ಮಾಡಿದ್ದು, ಈ ಹಳ್ಳಿಗಳಲ್ಲಿ ಚೀನಾದ ಇತರ ಭಾಗಗಳಿಂದ ಚೀನಿಯರನ್ನ ಕರೆತಂದು ಬಿಟ್ಟಿರುವ ಬಗ್ಗೆ ಉಪಗ್ರಹಗಳಿಂದ ಸಾಕ್ಷಿ ಲಭ್ಯವಾಗಿದೆ ಎಂದು ಚೀನಾ ವಿಷಯ ಪರಿಣತರಾದ ಡಾ. ಬ್ರಹ್ಮ ಚೆಲ್ಲಾನೆ ಹೇಳಿದ್ದಾರೆ ಎಂದದು ಎನ್ಡಿಟಿವಿ ವರದಿ ಮಾಡಿದೆ.
ಭೂತಾನ್ ಒಳಗೆ ಹಳ್ಳಿ ನಿರ್ಮಿಸಿದ ಚೀನಾ?: ಅಧಿಕಾರಿಗಳ ನಿರಾಕರಣೆ
ಭಾರತ, ಚೀನಾ, ಭೂತಾನ್ ದೇಶದ ಗಡಿರೇಖೆಗಳು ಸಂಧಿಸುವ ಸ್ಥಳಕ್ಕೆ ಸಮೀಪದಲ್ಲೇ ಹೊಸ ಗ್ರಾಮಗಳು ತಲೆ ಎತ್ತಿವೆ. ಇಲ್ಲಿ ಹಾನ್ ಸಮುದಾಯ ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷದ ಟಿಬೆಟಿಯನ್ ಸದಸ್ಯರನ್ನು ತಂದು ಬಿಡಲಾಗಿದೆ. ಮೂಲಸೌಲಭ್ಯ ನೀಡಿ, ಸುಸಜ್ಜಿತ ಮನೆಗಳನ್ನು ಚೀನಿ ಗ್ಯಾಂಗ್ ನಿರ್ಮಾಣ ಮಾಡಿಕೊಟ್ಟಿದೆ. ಈ ಮೂಲಕ ತನ್ನ ಪ್ರಾದೇಶಿಕ ಹಕ್ಕಿನ ಪ್ರತಿಪಾದನೆಗೆ ಪುಷ್ಟಿ ತುಂಬಲು ಮತ್ತು ಗಡಿನುಸುಳುವಿಕೆಯನ್ನು ಹೆಚ್ಚಿಸುವ ಕಾರ್ಯತಂತ್ರವನ್ನು ಖತರ್ನಾಕ್ ಚೀನಾ ರೂಪಿಸಿದೆ. ಭಾರತಕ್ಕೆ ಇದು ಮತ್ತೊಂದಿಷ್ಟು ಗಂಡಾಂತರ ಎದುರಾಗುವಂತೆ ಮಾಡಿದೆ.
‘ಈ ಜಾಗ ನನ್ನದು’ ಎನ್ನಬಹುದು..!
ಚೀನಾ ಹೀಗೆ ಭಾರತದ ಗಡಿಯಲ್ಲಿ ಹಳ್ಳಿಗಳನ್ನು ನಿರ್ಮಿಸುವುದರಿಂದ ಅಕ್ಕಪಕ್ಕದ ಜಾಗವನ್ನೂ ಕಬಳಿಸುವುದು ಸುಲಭವಾಗಲಿದೆ. ಈಗಾಗಲೇ ನೇಪಾಳ ಹಾಗೂ ಭೂತಾನ್ ದೇಶಗಳ ಜಾಗವನ್ನೂ ಚೀನಾ ಇದೇ ಕುತಂತ್ರ ಬುದ್ಧಿಯಿಂದ ವಶಕ್ಕೆ ಪಡೆದಿದೆ. ಇದೀಗ ಭಾರತದ ಗಡಿಯಲ್ಲೂ ಹಳ್ಳಿಗಳನ್ನ ನಿರ್ಮಾಣ ಮಾಡಿ, ಭಾರತದ ಜಾಗ ಕಬಳಿಸಲು ಚೀನಿ ಗ್ಯಾಂಗ್ ಸ್ಕೆಚ್ ಹಾಕಿದೆ. ಹಾನ್ ಸಮುದಾಯ ಹಾಗೂ ಚೀನಾ ಕಮ್ಯುನಿಸ್ಟ್ ಪಕ್ಷದ ಟಿಬೆಟಿಯನ್ ಸದಸ್ಯರು ಮಾತ್ರವಲ್ಲದೆ ಇನ್ನೂ ಅನೇಕರನ್ನು ಈ ಹಳ್ಳಿಗಳಿಗೆ ಕರೆತಂದು ಚೀನಾ ಬಿಟ್ಟಿದೆ. ಅಲ್ಲಿ ಸಕಲ ಸೌಲಭ್ಯ ನೀಡಿದೆ ಚೀನಾ. ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಮೀನುಗಾರರನ್ನು ಬಳಸಿಕೊಂಡಿರುವ ರೀತಿ ಇದೀಗ ಇಲ್ಲಿ ದನಗಾಹಿ ಹಾಗೂ ಕುರಿ ಮೇಯಿಸುವವರನ್ನು ಬಳಸಿಕೊಳ್ಳುತ್ತಿದೆ ಚೀನಾ. ಈ ಮೂಲಕ ಭಾರತೀಯ ಪಡೆಗಳು ಗಸ್ತು ತಿರುಗುತ್ತಿರುವ ಹಿಮಾಲಯದ ಒಳಗೆ ನುಸುಳಿಸುವ ತಂತ್ರಗಾರಿಕೆ ಚೀನಾದ್ದಾಗಿದೆ ಎಂದು ಚೀನಾ ವಿಷಯ ಪರಿಣತರಾದ ಡಾ. ಬ್ರಹ್ಮ ಚೆಲ್ಲಾನೆ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಗಡಿ ಇನ್ನೂ ನಿರ್ಧಾರವಾಗಿಲ್ಲ ಅಂತೆ..!
''ಮದುವೆ ಆಗೋ ಬ್ರಹ್ಮಾಚಾರಿ ಅಂದ್ರೆ, ನೀನೆ ನನ್ನ ಹೆಂಡ್ತಿ'' ಅಂದಂತೆ ಚೀನಾಗೆ ಭೂಮಿ ಮೇಲಿರುವ ಜಾಗವೆಲ್ಲಾ ಬೇಕಿದೆ. ಸಾಮ್ರಾಜ್ಯಶಾಹಿ ವಿಷ ತುಂಬಿಕೊಂಡಿರುವ ಚೀನಾ ನಾಯಕರಿಗೆ ಭಾರತದ ಭೂಮಿಯನ್ನ ಇಂಚಿಂಚು ಕಬಳಿಸುವ ಹುನ್ನಾರವಿದೆ. ಇದೇ ಕಾರಣಕ್ಕೆ ಅರುಣಾಚಲ ಪ್ರದೇಶದ ವಲಯದಲ್ಲಿ ಪದೇ ಪದೆ ಚೀನಾ ಕಿರಿಕ್ ಮಾಡುತ್ತಲೇ ಬಂದಿದೆ. ಅರುಣಾಚಲ ಪ್ರದೇಶದಲ್ಲಿ ಭಾರತದ ಜೊತೆ ಗಡಿ ನಿರ್ಧರಿಸಿಲ್ಲ ಎನ್ನುತ್ತಿರುವ ಚೀನಾ, ಈ ಮೂಲಕ ತನ್ನ ಹಕ್ಕನ್ನು ಪ್ರತಿಪಾದಿಸಲು ನಾಟಕ ಮಾಡುತ್ತಿದೆ. ಹೊಸ ಹೊಸ ಗ್ರಾಮಗಳನ್ನು ನಿರ್ಮಾಣ ಮಾಡುವುದು, ನಂತರ ಅರುಣಾಚಲ ಪ್ರದೇಶದ ಗಡಿರೇಖೆಯುದ್ದಕ್ಕೂ ಪ್ರಾದೇಶಿಕ ಹಕ್ಕನ್ನು ತೋರಿಸುವುದೇ ಚೀನಾದ ಉದ್ದೇಶ ಎನ್ನುತ್ತಾರೆ ಪರಿಣತರು. ಇನ್ನು ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಮೇ ತಿಂಗಳಲ್ಲಿ ಭಾರತ ಹಾಗೂ ಚೀನಾ ಮಧ್ಯೆ ಘರ್ಷಣೆ ಜೋರಾಗಿತ್ತು. ಇದೇ ಸಂದರ್ಭವನ್ನ ಉಪಯೋಗಿಸಿಕೊಂಡ ಚೀನಿ ಗ್ಯಾಂಗ್, ಈ ಭಾಗದಲ್ಲಿ ಹಳ್ಳಿಗಳ ನಿರ್ಮಾಣ ಕಾರ್ಯವನ್ನ ವೇಗವಾಗಿ ನಡೆಸಿದೆ ಎನ್ನಲಾಗುತ್ತಿದೆ.
ಗ್ರಾಮಗಳಲ್ಲೂ ಹೈಫೈ ಸೌಲಭ್ಯ..!
ಅಂದಹಾಗೆ 2020ರ ಫೆಬ್ರವರಿ 17ರ ವೇಳೆಗೆ ಈ ಪ್ರದೇಶದಲ್ಲಿ ಮೊದಲ ಗ್ರಾಮವನ್ನು ಚೀನಾ ನಿರ್ಮಿಸಿದೆ. ಆ ಬಳಿಕ ಗ್ರಾಮದಲ್ಲಿ 20ಕ್ಕೂ ಹೆಚ್ಚಿನ ಮನೆಗಳಿದ್ದವು ಎನ್ನಲಾಗಿದೆ. ಉಪಗ್ರಹ ತೆಗೆದ ಚಿತ್ರದ ಆಧಾರದಲ್ಲಿ ಮನೆ ಛಾವಣಿ ಕೆಂಪು ಬಣ್ಣದಿಂದ ಕೂಡಿದ್ದಾಗಿತ್ತು, ಮರಗಳಿಂದ ನಿರ್ಮಿಸಲಾಗಿತ್ತು. 2020ರ ನವೆಂಬರ್ 28ರಂದು ಉಪಗ್ರಹ ರವಾನಿಸಿದ ಫೋಟೋದಲ್ಲಿ ಮತ್ತೆರಡು ಗ್ರಾಮಗಳ ಮಾಹಿತಿ ಲಭಿಸಿದೆ. ಈ ಗ್ರಾಮಗಳಲ್ಲಿ ಚೀನಾ 4 ಕಾಲನಿಗಳನ್ನು ವಿಭಾಗಿಸಿ ಸುಮಾರು 60 ಮನೆಗಳನ್ನು ನಿರ್ಮಿಸಿದೆ ಎನ್ನಲಾಗಿದೆ. ಈ ಹೊಸ ಮನೆಗಳಿಗೆ ನೀರು, ವಿದ್ಯುತ್ ವ್ಯವಸ್ಥೆ ಹಾಗೂ ಇಂಟರ್ನೆಟ್ ಸಂಪರ್ಕವನ್ನೂ ಚೀನಿ ಗ್ಯಾಂಗ್ ಒದಗಿಸಿದೆ.
ಅರುಣಾಚಲದ ಬಗ್ಗೆ ಚೀನಾ ಕಿರಿಕ್
ಅಂಗೈ ಅಗಲ ಭೂಮಿ ಇಟ್ಟುಕೊಂಡಿದ್ದ ಚೀನಾ ಸಾಮ್ರಾಜ್ಯ ಅಕ್ಕಪಕ್ಕದ ದೇಶಗಳನ್ನು ನುಂಗಿ, ನೀರು ಕುಡಿದು ಈಗ ಬೃಹತ್ ದೇಶವಾಗಿ ಬೆಳೆದಿದೆ. ನೋಡ ನೋಡುತ್ತಿದ್ದಂತೆ ಟಿಬೆಟ್ ದೇಶವನ್ನು ತನ್ನ ಸುಪರ್ದಿಗೆ ಚೀನಾ ತೆಗೆದುಕೊಂಡಿದ್ದು ಇತಿಹಾಸ. ಇದೇ ರೀತಿ ಅರುಣಾಚಲ ಪ್ರದೇಶದ ಗಡಿಯ ಕಾನೂನು ಮಾನ್ಯತೆಯನ್ನ ಚೀನಿ ನಾಯಕರು ಪ್ರಶ್ನೆ ಮಾಡುತ್ತಲೇ ಬಂದಿದ್ದಾರೆ. ಅರುಣಾಚಲದ ದಕ್ಷಿಣದ 65,000 ಚದರ ಕಿ.ಮೀ ಪ್ರದೇಶ ತನ್ನ ವ್ಯಾಪ್ತಿಗೆ ಸೇರಿದ್ದು, ಇದು ದಕ್ಷಿಣ ಟಿಬೆಟ್ ವಲಯ ಎಂದು ಚೀನಾ ನಕ್ಷೆಯಲ್ಲಿ ಇಂದಿಗೂ ತೋರಿಸಲಾಗುತ್ತೆ. ಚೀನಾದ ಈ ಪೊಳ್ಳು ವಾದಕ್ಕೆ ಭಾರತ ಸರಿಯಾಗಿ ತಿರುಗೇಟು ನೀಡುತ್ತಾ ಬಂದಿದೆ. ಅಷ್ಟಕ್ಕೂ ಭಾರತ ಹಾಗೂ ಬ್ರಿಟನ್ ಆಡಳಿತಗಾರ ಹೆನ್ರಿ ಮೆಕ್ಮೋಹನ್ 1914ರ ಸಿಮ್ಲಾ ಒಡಂಬಡಿಕೆ ವೇಳೆ ಪ್ರಸ್ತಾಪಿಸಿರುವ ಚಾರಿತ್ರಿಕ 'ಮೆಕ್ಮೋಹನ್ ರೇಖೆ'ಯೇ ಭಾರತ ಹಾಗೂ ಚೀನಾ ನಡುವಿನ ಗಡಿರೇಖೆಯಾಗಿದೆ ಎಂಬುದು ಭಾರತದ ವಾದ. ಆದರೆ ಸತ್ಯ ಒಪ್ಪಲು ಕುತಂತ್ರಿ ಚೀನಾ ಸಿದ್ಧವಿಲ್ಲ, ಇದನ್ನೇ ನೆಪವಾಗಿಸಿಕೊಂಡು ಕಿರಿಕ್ ಮಾಡುತ್ತಿದೆ.
|
ಒಂದು ಪರ್ವತದಷ್ಟು ದೂರದಲ್ಲಿ ಶತ್ರು
ಚೀನಾ ಅದೆಷ್ಟು ಖತರ್ನಾಕ್ ಎಂದರೆ ಗಡಿಯಲ್ಲಿ ಈಗ ಹಳ್ಳಿಗಳನ್ನು ಸೃಷ್ಟಿಸಿರುವುದು ದುರ್ಬಲ ನಿಯಂತ್ರಿತ ಪ್ರದೇಶಗಳ ರಕ್ಷಣೆಗೆ ಅಂತೆ. ಹೀಗಂತಾ ಚೀನಾ ಸರ್ಕಾರದ ಸಾಕು ಪ್ರಾಣಿ 'ಗ್ಲೋಬಲ್ ಟೈಮ್ಸ್' ರಿಪೋರ್ಟ್ ಮಾಡಿದೆ. ಗಡಿಯ ದುರ್ಬಲ ನಿಯಂತ್ರಿತ ಪ್ರದೇಶಗಳಿಗೆ 960 ಕುಟುಂಬದ 3,222 ಜನರನ್ನ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಚೀನಾದ ಶನ್ನಾನ್ ಪ್ರಾಂತ್ಯದ ಮುಖ್ಯಸ್ಥ ಹೇಳಿರುವುದಾಗಿ ಗ್ಲೋಬಲ್ ಟೈಮ್ಸ್ ಬರೆದುಕೊಂಡಿದೆ. ಭಾರತದ ನಿಯಂತ್ರಣದಲ್ಲಿರುವ ಪ್ರದೇಶ ಈಗ ಕೇವಲ 1 ಪರ್ವತದಷ್ಟು ದೂರದಲ್ಲಿದೆ ಎಂದು ತಿಳಿಸಲಾಗಿದೆ. ಭಾರತವು ಶನ್ನಾನ್ ಪ್ರಾಂತ್ಯದ ಜೊತೆ ಸುಮಾರು 213 ಕಿ.ಮೀ. ಗಡಿ ಹಂಚಿಕೊಂಡಿದೆ.