ಅರುಣಾಚಲ ಪ್ರದೇಶ ಬ್ರಹ್ಮಪುತ್ರ ಕಣಿವೆ ಬಳಿ ಚೀನಾ ಹೆದ್ದಾರಿ ನಿರ್ಮಾಣ
ನವದೆಹಲಿ, ಮೇ 21: ಭಾರತ ಮತ್ತು ಚೀನಾ ನಡುವಿನ ವಿವಾದಿತ ಗಡಿ ಪ್ರದೇಶದಲ್ಲಿ ಹೆದ್ದಾರಿ ನಿರ್ಮಾಣವನ್ನು ಚೀನಾ ಪೂರ್ಣಗೊಳಿಸಿದೆ. ಅರುಣಾಚಲ ಪ್ರದೇಶದ ಬಳಿ ಬ್ರಹ್ಮಪುತ್ರ ನದಿಯುದ್ದಕ್ಕೂ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಜಗತ್ತಿನ ಅತ್ಯಂತ ಆಳವಾದ ಕಣಿವೆ ಇದಾಗಿದೆ.
ಗಡಿಯಲ್ಲಿ ನಿರ್ಮಿಸಲಾಗಿರುವ ಹೆದ್ದಾರಿ ಕುರಿತು ಚೀನಾದ ಅಧಿಕೃತ ಮಾಧ್ಯಮಗಳು ಈ ವಾರದಲ್ಲಿ ವರದಿ ಮಾಡಿವೆ. ಟಿಬೆಟ್ನಲ್ಲಿ ಯಾರ್ಲುಂಗ್ ಜಾಂಗ್ಬೊ ಎಂದು ಕರೆಯಲ್ಪಡುವ ಬ್ರಹ್ಮಪುತ್ರ ನದಿ ಸಮೀಪದ ದೊಡ್ಡ ಕಣಿವೆಯಲ್ಲಿ ಹೆದ್ದಾರಿ ನಿರ್ಮಿಸಲು ಏಳು ವರ್ಷಗಳೇ ಕಳೆದಿವೆ ಎಂದು ಕ್ಸಿನುವಾ ಸುದ್ದಿ ವಾಹಿನಿ ತಿಳಿಸಿದೆ.
ಭಾರತ-ಚೀನಾ ನಡುವೆ ಯುದ್ಧ ನಡೆಯುವುದಿಲ್ಲ ಎಂಬ ನಂಬಿಕೆ ಇದೆ: ಅಮೆರಿಕ
ನಿಯಿಂಗ್ಚಿ ಮತ್ತು ಮೆಡೋಗ್ ಕೌಂಟಿಯ ಪ್ಯಾಡ್ ಟೌನ್ ಶಿಪ್ ನಡುವೆ ಈ ಹೆದ್ದಾರಿ ಸಂಪರ್ಕ ಕಲ್ಪಿಸಲಿದೆ. ಚೀನಾದ ಹೂವಾನೆಂಗ್ ಗ್ರೂಪ್ ಹೆದ್ದಾರಿ ನಿರ್ಮಾಣದ ಯೋಜನೆಗಾಗಿ 310 ಮಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಿದೆ. ಈ ಹೆದ್ದಾರಿಯಿಂದ 8 ಗಂಟೆಗಳ ಪ್ರಯಾಣ ಅವಧಿ ಕಡಿಮೆಯಾಗಿದ್ದು, ನಡುವಿನ ಅಂತರ 346 ಕಿಲೋ ಮೀಟರ್ ನಿಂದ 180 ಕಿಲೋ ಮೀಟರ್ ಕಡಿಮೆಯಾಗಿದೆ.
ಗಡಿಯಲ್ಲಿ ಹೆದ್ದಾರಿ ಕಾಮಗಾರಿ ನಿರ್ಮಾಣ ಆರಂಭ
ಕಳೆದ 2014ರಲ್ಲಿ ಟಿಬೆಟ್ ಗಡಿ ಪ್ರದೇಶದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಯಿತು. ಅದೇ ವರ್ಷ ನವೆಂಬರ್ ತಿಂಗಳಿನಲ್ಲಿ ಅತಿಮುಖ್ಯವಾದ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರ ಆರಂಭವಾಯಿತು. ಇದು ಟಿಬೆಟ್ ಜೊತೆ ಸಂಪರ್ಕ ಸಾಧಿಸಿದ ಎರಡನೇ ಪ್ರಮುಖ ರೈಲ್ವೆ ಸೇವೆಯಾಗಿತ್ತು. ಈ ಮೊದಲು 2006ರಲ್ಲಿ ಕ್ವಿಂಗೈ ಮತ್ತು ಟಿಬೆಟ್ ನಡುವೆ ಮೊದಲ ರೈಲು ಸಂಚಾರ ಆರಂಭವಾಗಿತ್ತು.
ಪಾಶ್ಚಿಮಾತ್ಯ ಪ್ರದೇಶದಲ್ಲಿ ಚೀನಾ ಕಾರ್ಯತಂತ್ರ
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಈ ಹೆದ್ದಾರಿಗೆ ಅಧಿಕೃತವಾಗಿ ಚಾಲನೆ ನೀಡುವುದೊಂದೇ ಬಾಕಿ ಉಳಿದಿದೆ. ರಾಷ್ಟ್ರೀಯ ಏಕತೆಯನ್ನು ಕಾಪಾಡುವುದು ಮತ್ತು ಪಾಶ್ಚಿಮಾತ್ಯ ಪ್ರದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆ ಎಂದಿದ್ದಾರೆ. ಸಿಚುವಾನ್ ಪ್ರದೇಶದಲ್ಲಿ ಹಲವು ರಸ್ತೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಚೆಂಗ್ದು ಪ್ರದೇಶದಿಂದ ಯಾನ್ ವರೆಗಿನ ರಸ್ತೆ ಕಾಮಗಾರಿ ಕಳೆದ 2018ರಲ್ಲಿ ಪೂರ್ಣಗೊಂಡಿತ್ತು. ಪ್ರಸ್ತುತ ಯಾನ್ ನಿಂದ ನಿಯಾಂಗ್ಚಿವರೆಗಿನ 1,011 ಕಿಲೋ ಮೀಟರ್ ದೂರದ ರಸ್ತೆ ಕಾಮರಾಗಿ 2030ರ ಹೊತ್ತಿಗೆ ಪೂರ್ಣಗೊಳ್ಳಲಿದೆ.
ಚೀನಾದಿಂದ ಗಡಿ ಪ್ರದೇಶಗಳಲ್ಲಿ ನಾಗರಿಕ ಒಪ್ಪಂದ
ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಒಂದು ಕಡೆಯಾದರೆ ಇನ್ನೊಂದು ಭಾಗದಲ್ಲಿ ಚೀನಾ ವಿವಾದಿತ ಗಡಿ ಪ್ರದೇಶಗಳಲ್ಲಿ ನಾಗರಿಕ ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ. ಭಾರತ ಮತ್ತು ಭೂತಾನ್ ಗಡಿಯಲ್ಲಿ ಕೆಲವು ಪ್ರದೇಶವನ್ನು ನಾಗರಿಕ ಒಪ್ಪಂದದ ಮೂಲಕ ಚೀನಾ ತನ್ನ ಹಕ್ಕು ಸಾಧಿಸುತ್ತಿದೆ. ಕಳೆದ 2017ರಲ್ಲಿ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಮೊದಲ ಮತ್ತು ಎರಡನೇ ಹಂತದ ಉತ್ತಮ ಗ್ರಾಮಗಳನ್ನು ನಿರ್ಮಾಣ ಮಾಡಲು ಸರ್ಕಾರ ಘೋಷಿಸಿತು. ಭಾರತ, ಭೂತಾನ್ ಮತ್ತು ನೇಪಾಳದೊಂದಿಗಿನ ಚೀನಾದ ಗಡಿಯುದ್ದಕ್ಕೂ ನ್ಗರಿ, ಶಿಗಾತ್ಸೆ, ಶನ್ನಾನ್ ಮತ್ತು ನಿಯಾಂಗ್ಚಿಯಲ್ಲಿ ಗ್ರಾಮಗಳ ಅಭಿವೃದ್ಧಿ ಮಂತ್ರ ಜಪಿಸಲಾಯಿತು.
30,000 ಕೋಟಿ ರೂಪಾಯಿ ಯೋಜನೆ ಘೋಷಣೆ
ಚೀನಾದ ಗಡಿಯಲ್ಲಿ ಉತ್ತಮ ಹಳ್ಳಿಗಳ ನಿರ್ಮಾಣ ಯೋಜನೆಗಾಗಿ ಪ್ರತಿವರ್ಷ 30,000 ಕೋಟಿ ರೂಪಾಯಿ (30.1 ಬಿಲಿಯನ್ ಯುವಾನ್) ಹಣವನ್ನು ಘೋಷಣೆ ಮಾಡಲಾಗುತ್ತಿದೆ. ಈ ಯೋಜನೆಯಡಿ 62,160 ಕುಟುಂಬದ 2.4 ಲಕ್ಷ ಜನರಿಗೆ ಪುನರ್ ವಸತಿ ನಿರ್ಮಿಸಿ ಕೊಡಲಾಗಿದೆ. ಕಳೆದ ವರ್ಷ ಚೀನಾ ಪಂಗ್ದಾ ಬಳಿ ನಿರ್ಮಿಸಿದ 2 ರಿಂದ 3 ಕಿ.ಮೀ ವ್ಯಾಪ್ತಿಯ ಗ್ರಾಮದಲ್ಲಿ ಭೂತಾನ್ ಪ್ರದೇಶವೂ ಸೇರಿಕೊಂಡಿರುವುದು ಸ್ಯಾಟ್ ಲೈಟ್ ಭಾವಚಿತ್ರಗಳಲ್ಲಿ ಕಂಡು ಬಂದಿತ್ತು. ಈ ವರ್ಷ ಚೀನಾ ನಿರ್ಮಿಸಿದ 4-5 ಕಿ.ಮೀ ವ್ಯಾಪ್ತಿ ಗ್ರಾಮದಲ್ಲಿ ಅರುಣಾಚಲದ ಪ್ರದೇಶವನ್ನು ಅತಿಕ್ರಮಿಸಿಕೊಂಡಿರುವ ಬಗ್ಗೆ ಸ್ಯಾಟ್ ಲೈಟ್ ಭಾವಚಿತ್ರಗಳಲ್ಲಿ ತೋರುತ್ತಿತ್ತು.