ಭೂಮಿ, ಮಾನವನ ಉಳಿವಿಗಾಗಿ ವೈರತ್ವ ಮರೆತು ಒಂದಾದ ಅಮೆರಿಕ-ಚೀನಾ..!
ಹಲವು ದಶಕಗಳ ಕಾಲ ಬದ್ಧ ವೈರಿಗಳಂತೆ ಕಾದಾಡಿ, ಯುದ್ಧದ ಸ್ಥಿತಿಯನ್ನೂ ತಲುಪಿದ್ದ ರಾಷ್ಟ್ರಗಳ ನಡುವೆ ಈಗ ಸ್ನೇಹ ಮೂಡಿದೆ. ಅದು ಮಾನವನ ಉಳಿವಿಗಾಗಿ, ಭೂಮಿಯ ಭವಿಷ್ಯಕ್ಕಾಗಿ. ನಾವು ಹೇಳುತ್ತಿರುವುದು ಅಮೆರಿಕ ಹಾಗೂ ಚೀನಾ ಕಥೆಯನ್ನ. ಜಾಗತಿಕ ವಾತಾವರಣ ಬದಲಾವಣೆ ಹಾಗೂ ತಾಪಮಾನ ಏರಿಕೆಗೆ ಪರಿಹಾರ ಕಂಡುಕೊಳ್ಳಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಎರಡೂ ರಾಷ್ಟ್ರಗಳು ನಿರ್ಧರಿಸಿವೆ.
ಅಮೆರಿಕ ಮತ್ತು ಚೀನಾ ಮಧ್ಯೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಧಿಕಾರಿಗಳು ಈ ತೀರ್ಮಾನ ಕೈಗೊಂಡಿದ್ದಾರೆ. ದಿನದಿಂದ ದಿನಕ್ಕೆ ಭೂಮಿ ಬರಡಾಗುತ್ತಿದೆ. ಭೂಮಿ ಮೇಲಿನ ಜೀವ ಸಂಕುಲಕ್ಕೆ ಅಪಾಯ ಎದುರಾಗುತ್ತಿದೆ. ವಾತಾವರಣ ಬದಲಾವಣೆ ಇದಕ್ಕೆಲ್ಲಾ ಕಾರಣವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಬಲಾಢ್ಯ ರಾಷ್ಟ್ರಗಳ ಬೆಂಬಲ ಅಗತ್ಯವಾಗಿದೆ.
ಅಭಿವೃದ್ಧಿಯಲ್ಲಿ ಚೀನಾ ಮೀರಿಸುವವರೇ ಇಲ್ಲ..! 'ಜಿಡಿಪಿ' ವಿಚಾರದಲ್ಲಿ ಹೊಸ ದಾಖಲೆ..!
ಇದೀಗ ಚೀನಾ ಹಾಗೂ ಅಮೆರಿಕ ಒಗ್ಗಟ್ಟಿನಿಂದ ವಾತಾವರಣ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಡಲು ಮುಂದಾಗಿವೆ. ಹಾಗೇ ಇತರ ರಾಷ್ಟ್ರಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಹಾಗೂ ತಂತ್ರಜ್ಞಾನ ಹಂಚಿಕೊಳ್ಳಲು ತೀರ್ಮಾನಿಸಿವೆ. ಹಲವು ದಶಕಗಳ ಆಶಯ ಈ ಮೂಲಕ ಈಡೇರಿದೆ.
ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ..!
ಭೂಮಿ ಮೇಲೆ ತಾಪಮಾನ ಏರಿಕೆ ಹಾಗೂ ವಾತಾವರಣ ಬದಲಾವಣೆ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿದೆ. ವಿಜ್ಞಾನಿಗಳು ಅದೆಷ್ಟು ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಾಯಕನ ಸ್ಥಾನದಲ್ಲಿ ನಿಂತು, ಈ ಸಮಸ್ಯೆ ಬಗೆಹರಿಸಲು ಬಲಾಢ್ಯ ರಾಷ್ಟ್ರಗಳು ಮುಂದಾಗಬೇಕಿದೆ. ಅದರಲ್ಲೂ ಜಾಗತಿಕ ಶಕ್ತಿಗಳು ಎಂದೇ ಗುರುತಿಸಿಕೊಂಡಿರುವ ಅಮೆರಿಕ-ಚೀನಾ ಭೂಮಿ ತಾಪಮಾನ ನಿಯಂತ್ರಣಕ್ಕೆ ತರುವ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕಿದೆ. ಆದರೆ ಇಷ್ಟು ದಿನ ಅದು ಸಾಧ್ಯವಾಗಿರಲಿಲ್ಲ. ಈಗ ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.
ಚೀನಾ ಸಾಧನೆ ಜಗತ್ತಿಗೆ ಮಾದರಿ
10-15 ವರ್ಷದ ಹಿಂದೆ ಚೀನಾ ಎಂದರೆ ಮಾಲಿನ್ಯ, ಮಾಲಿನ್ಯ ಅಂದ್ರೆ ಚೀನಾ ಎಂದು ಜಗತ್ತು ಜರಿಯುತ್ತಿತ್ತು. ಆದರೆ ಈಗ ಇದೇ ಚೀನಾ ಪ್ರಕೃತಿ ಸೊಬಗಿನ ತವರಾಗಿದೆ. ಅದರಲ್ಲೂ ಚೀನಾ ರಾಜಧಾನಿ ಬೀಜಿಂಗ್ ಎಷ್ಟು ಸುಧಾರಿಸಿದೆ ಎಂದರೆ, ಕೆಲವೇ ವರ್ಷಗಳಲ್ಲಿ ಸಂಪೂರ್ಣ ವಾಯು ಮಾಲಿನ್ಯವನ್ನು ಸರ್ಕಾರ ಕಂಟ್ರೋಲ್ಗೆ ತಂದಿದೆ. ಮಾಲಿನ್ಯ ನಿಯಂತ್ರಣದ ಹಿಂದೆ ಹಲವು ಕಠಿಣ ಕ್ರಮಗಳು ಕೂಡ ಪ್ರಭಾವ ಬೀರಿವೆ. ಅದರಲ್ಲೂ ಕಾರ್ಬನ್ ಮತ್ತು ಸಿಎಫ್ಸಿ ಅನಿಲ ಹೊರಸೂಸುವ ಯಂತ್ರ, ಮತ್ತಿತರ ವಸ್ತುಗಳಿಗೆ ನಿಷೇಧ ಹೇರಿದ್ದು ಫಲ ನೀಡಿದೆ. ಇನ್ನು ಕೈಗಾರಿಕೆಗಳಿಗೆ ನೀಡಿದ ಖಡಕ್ ವಾರ್ನಿಂಗ್ ಕೂಡ ಚೀನಾದ ಮಾಲಿನ್ಯ ನಿಯಂತ್ರಿಸಿದೆ.
2044ರ ವೇಳೆಗೆ ಭೂಮಿ ಮುಳುಗಿ ಹೋಗುತ್ತಾ..? ವಿಜ್ಞಾನಿಗಳು ಕೊಟ್ಟಿದ್ದಾರೆ ವಾರ್ನಿಂಗ್..!
ಕ್ಲೈಮೆಟ್ ಚೇಂಜ್ ಎಫೆಕ್ಟ್
ಮಳೆಗಾಲದಲ್ಲಿ ವಿಪರೀತ ಬಿಸಿಲು, ಚಳಿಗಾಲದಲ್ಲಿ ಮಳೆ, ಇನ್ನು ಬೇಸಿಗೆಯಲ್ಲೂ ವರುಣನ ಅಬ್ಬರ. ಹೀಗೆ ಭೂ ವಾತಾವರಣ ವಿಪರೀತ ಬದಲಾಗುತ್ತಿದೆ. ಮಾನವನ ದುರಾಸೆಯಿಂದಾಗಿ ಮಾಲಿನ್ಯ ಸೃಷ್ಟಿಯಾಗಿದೆ. ಮಾಲಿನ್ಯದ ಪರಿಣಾಮ ಭೂಮಿ ಮೇಲಿನ ವಾತಾವರಣ ನಾಶವಾಗುತ್ತಿದೆ. ಯಾವ ಸಮಯದಲ್ಲಿ ಏನಾಗಬೇಕೋ ಅದೆಲ್ಲಾ ಉಲ್ಟಾ ಆಗುತ್ತಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ರೈತರ ಬೆಳೆ ನಾಶವಾಗುವ ಜೊತೆಗೆ ಇದು ಆಹಾರ ಭದ್ರತೆಗೂ ಕಂಟಕ ಎದುರಾಗುವಂತೆ ಮಾಡಿದೆ. ಅಕಾಲಿಕ ಮಳೆ ನೂರಾರು ಅವಾಂತರ ಸೃಷ್ಟಿಸುತ್ತಿದೆ.
ಹಿಮ ಪದರ ಕರಗುವ ಆತಂಕ
2020ರ ಬಗ್ಗೆ ಬೆಚ್ಚಿಬೀಳುವ ಸಂಗತಿಯೊಂದನ್ನು ವಿಜ್ಞಾನಿಗಳು ಬಿಚ್ಚಿಟ್ಟಿದ್ದಾರೆ. ಮಾನವ ಬದುಕಿನ ಇತಿಹಾಸದಲ್ಲಿ 2020 3ನೇ ಅತಿಹೆಚ್ಚು ತಾಪಮಾನ ತೋರಿದ ವರ್ಷವಾಗಿದೆ. 2016, 2019ರ ನಂತರ 2020 ಅತಿ ಹೆಚ್ಚಾದ ತಾಪಮಾನ ಹೊಂದಿರುವ ವರ್ಷವಾಗಿದೆ. ತಾಪಮಾನ ಏರಿಕೆ ಕಡಿವಾಣಕ್ಕೆ ಎಷ್ಟೇ ಮುತುವರ್ಜಿ ವಹಿಸಿದರೂ ಪ್ರಯೋಜನವಾಗುತ್ತಿಲ್ಲ. ತಾಪಮಾನ ಏರಿಕೆ ತಡೆಯಲು ಪ್ಯಾರಿಸ್ ಒಪ್ಪಂದಂತಹ ಪ್ರಯತ್ನ ವಿಫಲವಾಗಿದೆ. 2020ರಲ್ಲಿ ತಾಪಮಾನ 1.2 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ರೆ ರಷ್ಯಾದ ಸೈಬೀರಿಯಾ ಪ್ರಾಂತ್ಯದಲ್ಲಿ ಅತಿಹೆಚ್ಚು ತಾಪಮಾನ ಏರಿಕೆಯಾಗಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಭೂಮಿ ಮೇಲೆ ತಾಪಮಾನ ನಿಯಂತ್ರಣ ತುರ್ತು ಅಗತ್ಯವಾಗಿದೆ. ಇಲ್ಲವಾದರೆ ಭವಿಷ್ಯವೇ ಬರಡಾಗುವ ಅಪಾಯವಿದೆ.