ಸೌದಿಯಲ್ಲಿ "ಸಾರೆ ಜಂಹಾಸೆ ಅಚ್ಛಾ ಹಿಂದೂಸ್ಥಾನ್ ಹಮಾರ"
ಇದು ಚಿಣ್ಣರಿಂದ ಚಿಣ್ಣರಿಗಾಗಿ ಆಯೋಜಿಸಿದ ಸಂತಸದ ಸಮಾರಂಭ. "ಅವೈಲ್ ಅಲ್ ಮಮಲಕಾ" ಗ್ರೂಪ್ ಒಂದೇ ಸೂರಿನಡಿ ಆಯೋಜಿಸಿದ ವಿವಿಧ ದೇಶಗಳ ಸಂಸ್ಕೃತಿಗಳ ಸಮಾಗಮ. ಅವೈಲ್ ಎನ್ನುವುದು ಶಿಕ್ಷಣ ಸಂಸ್ಥೆಗಳ ಗ್ರೂಪ್. ಸೌದಿ ಅರೇಬಿಯಾದ ಹಲವು ನಗರಗಳಲ್ಲಿ ಬ್ರಿಟಿಷ್ ಶಿಕ್ಷಣವನ್ನು ಮಕ್ಕಳಿಗೆ ಈ ಸಂಸ್ಥೆ ಒದಗಿಸಿದೆ.
"ಅಬೇದ್ ಸಮಾರ" ಅವೈಲ್ ಶಿಕ್ಷಣ ಸಂಸ್ಥೆಯ ಪ್ರಮುಖ ಸದಸ್ಯರಲ್ಲೊಬ್ಬರು. ಇವರು ಜೋರ್ಡನ್ ಮೂಲದವರಾಗಿದ್ದು, 24 ವರ್ಷಗಳಿಂದ ಸೌದಿಯಲ್ಲಿ ನೆಲೆಸಿದ್ದಾರೆ. ಹೈಲ್ ನಗರದಲ್ಲಿ ನಡೆದ ಈ ಚಿಣ್ಣರ ಕಾರ್ಯಕ್ರಮವನ್ನು ಇದೇ ಮಾರ್ಚ 5 ರಂದು ಇವರು ಉದ್ಘಾಟಿಸಿದ್ದರು.
ಹೈಲ್ ವಿಶ್ವವಿದ್ಯಾಲಯದ, ದಂತ ವೈದ್ಯಕೀಯ ವಿಭಾಗದಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸಂದೀಪ್ ಭಾಗ್ವತ್ ಅವರನ್ನು ಬ್ರಿಟಿಷ್ ಕೌನ್ಸಿಲ್ ಮತ್ತು ಅಬೆದ್ ಸಮಾರ ಅವರು ವಿವಿಧ ದೇಶಗಳ ಸಂಸ್ಕೃತಿ ಸಮಾಗಮದ ಆಯೋಜನಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದರು.
ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಚಿಣ್ಣರ ಕಾರ್ಯಕ್ರಮಕ್ಕೆ ನಗರದ ಗಣ್ಯರು, ಶಿಕ್ಷಣ ಇಲಾಖೆಯ ಸಿಬ್ಬಂದಿಗಳು, ನಗರದ ಪ್ರಜೆಗಳು ಆಗಮಿಸಿದ್ದರು. ಮಕ್ಕಳಿಂದಲೇ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಯಾವುದೇ ಭಾಷಣವಿಲ್ಲದೆ 13 ದೇಶಗಳ ಪ್ರತಿನಿಧಿಗಳಿಂದ ಅವರವರ ದೇಶದ ರಾಷ್ಟ್ರಗೀತೆ, ಸಂಸ್ಕೃತಿಯ ಬಗ್ಗೆ ವಿವರಿಸಿ ಕಾರ್ಯಕ್ರಮ ಪ್ರಾಂಭವಾಗಲೆಂದು ಚಿಣ್ಣರು ಸಂಘಟಕರಲ್ಲಿ ಮನವಿ ಮಾಡಿಕೊಂಡಿದ್ದರು.
ಭಾರತದ ಪ್ರತಿನಿಧಿಗಳಾಗಿ, ಕನ್ನಡದ ಕುವರಿಯರಾದ ಕು.ದಾಮಿನಿ ಭಾಗ್ವತ ಮತ್ತು ಕು. ಧೃತಿ ಭಾಗ್ವತ ಕಾರ್ಯಕ್ರಮ ನಿರೂಪಿಸಿದರು. ಈ ಕನ್ನಡದ ಕುವರಿಯರು ಡಾ. ಸಂದೀಪ್ ಭಾಗ್ವತ್ ಮತ್ತು ಡಾ. ವಾಣಿ ಭಾಗ್ವತರ ಪುತ್ರಿಯರು.
ಮಕ್ಕಳಿಬ್ಬರು ಭಾರತದ ರಾಷ್ಟ್ರಗೀತೆ ಹಾಡಿ, ಭಾರತ ಒಟ್ಟು 29 ರಾಜ್ಯ ಮತ್ತು 7 ಕೇಂದ್ರಾಡಳಿತ ಪ್ರದೇಶವನ್ನು ಹೊಂದಿದೆ, ವಿವಿಧ ಭಾಷೆಗಳಿವೆ. ಹಲವು ಧರ್ಮದ ಜನರು ಒಂದೇ ಸೂರಿನಡಿ ಜೀವನ ನಡೆಸುತ್ತಾರೆ, ವಿವಿಧತೆಯಲ್ಲಿ ಏಕತೆ ಸಾರುವ ದೇಶ ಭಾರತ ಎಂದು ವರ್ಣಿಸಿದರು.
ಹಿಮಪಾತ ಮರುಭೂಮಿ, ಪರ್ವತ ಶ್ರೇಣಿ, ನಿತ್ಯಹರಿದ್ವರ್ಣದ ಕಾಡುಗಳು, ಸಮುದ್ರ ತಟ ಹೊಂದಿರುವ ಸುಂದರ ದೇಶ ಭಾರತವೆಂದು ಬಣ್ಣಿಸಿದ ಕು. ದಾಮಿನಿ, "ಸಾರೆ ಜಂಹಾಸೆ ಅಚ್ಛಾ ಹಿಂದೂಸ್ಥಾನ್ ಹಮಾರ" ಹಾಡನ್ನು ಹಾಡಿದರು.
ನೆರೆದಿದ್ದ ಜನಸ್ತೋಮಕ್ಕೆ ಕಡಲೆ ಹಿಟ್ಟಿನ ಲಾಡು (ಉಂಡೆ), ಪಾಯಸ, ಗುಲಾಬ್ ಜಾಮೂನ್, ಬೇಲ್ ಪುರಿ, ಬಿರಿಯಾನಿ-ರೈತಾ, ಮದ್ದೂರ ವಡೆ ಇನ್ನಿತರ ತಿನಿಸುಗಳನ್ನು 'ಹಾದ ಫಿ ಹಿಂದ್, ಹಾದ ಫಿ ಹಿಂದ್' (ಇದು ಭಾರತೀಯರು ಎನ್ನುವ ಅರ್ಥ) ಎನ್ನುತ್ತಾ ವಿತರಿಸಿದರು.
ಕೈಗೆ ಮೆಹಂದಿಯ ಚಿತ್ತಾರ ಬಿಡಿಸಿದರು. ಭಾರತೀಯ ತಿಂಡಿಯನ್ನು ಎಲ್ಲರೂ ಸವಿದರು. ಎಲ್ಲಕ್ಕಿಂತ ಮೇಲಾಗಿ ಕಡಲೆ ಹಿಟ್ಟಿನ ಲಾಡು ಮೇಲುಗೈ ಸಾಧಿಸಿ , ಎರಡು ತಾಸಿನಲ್ಲಿ 150 ಲಾಡುಗಳು ಮುಗಿದು ಬಿಟ್ಟವು. ಕೊನೆ ಕೊನೆಯಲ್ಲಿ ತಿಂಡಿಗಳನ್ನು ವಿತರಿಸಲೇ ಇಲ್ಲ, ಜನರೆಲ್ಲ ತಾವಾಗಿಯೇ ಹಾದ್ ಹಿಂದ್, Indian food is very tasty ಎನ್ನುತ್ತ ತಾವಾಗಿಯೇ ತಿಂಡಿಗಳನ್ನು ಮುಗಿಸಿದರು.
ಭಾರತೀಯ ಉಡಿಗೆ ತೊಟ್ಟ ಮಕ್ಕಳ ಜೊತೆಗೆ ಹಲವು ಜನರು ಫೋಟೊ ತೆಗೆಸಿಕೊಂಡರೆ, ಈಜಿಪ್ಟ್, ಸೌತ್ ಆಫ್ರಿಕಾ, ಮತ್ತು ಸ್ವೀಡನ್ ಮಹಿಳೆಯರು ತಮ್ಮೆಲ್ಲರಿಗೂ ಚೂಡಿದಾರ್ ತಂದುಕೊಡಿರೆಂದು ಕೇಳಿಕೊಂಡರು. ಒಟ್ಟಿನಲ್ಲಿ ಭಾರತದ ತಿಂಡಿ ತಿನಿಸು, ಭಾರತೀಯ ಉಡಿಗೆ ಜನಪ್ರಿಯವೆಂದು ಸಾಬೀತಾಯಿತು.
ಭಾರತ, ಪಾಕಿಸ್ತಾನ, ಬಾಂಗ್ಲಾ, ಜೊರ್ಡಾನ್, ಈಜಿಪ್ಟ್, ಸೌದಿ ಅರೇಬಿಯಾ, ಸ್ವೀಡನ್, ಯೆಮನ್, ಸಿರಿಯಾ, ಫಿಲಿಫೇನ್ಸ್, ಅಮೆರಿಕಾ, ಸೌತ್ ಆಫ್ರಿಕಾ ದೇಶಗಳ ಮಕ್ಕಳು ತಮ್ಮ ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಿ ಅತ್ಯುತ್ತಮ ಪ್ರದರ್ಶನ ನೀಡಿದರು. ಚಿಕ್ಕ ವಯಸ್ಸಿನಲ್ಲಿ ತಮ್ಮ ದೇಶದ ರಾಯಭಾರಿಗಳಾದ ಚಿಣ್ಣರಿಗೊಂದು ಸಲಾಮ್ !!