'World Economic Forum'ನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ...
ದಾವೊಸ್, ಜನವರಿ 23: ಸ್ವಿಟ್ಜರ್ಲ್ಯಾಂಡ್ನ ದಾವೊಸ್ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಗುರುವಾರ 'Strategic outlook: India' ಎಂಬ ಗೋಷ್ಠಿಯಲ್ಲಿ ಗಮನ ಸೆಳೆದರು. ಈ ಗೋಷ್ಠಿಯನ್ನು ಕೇಂದ್ರ ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಮಂಡಿಸಿದರು.
ಸಂವಾದ ಕಾರ್ಯಕ್ರಮದ ಅಂತ್ಯದಲ್ಲಿ ದೇಶದ ಬೆಳವಣಿಗೆಯಲ್ಲಿ ರಾಜ್ಯಗಳ ಪಾತ್ರದ ಕುರಿತು ಮಾತನಾಡಿದ ಯಡಿಯೂರಪ್ಪ ಅವರು, "ಎಲ್ಲ ಆರ್ಥಿಕ ಚಟುವಟಿಕೆಗಳೂ ರಾಜ್ಯಗಳಲ್ಲಿ ನಡೆಯುವುದರಿಂದ, ದೇಶದ ಆರ್ಥಿಕತೆಯ ಬೆಳವಣಿಗೆಗೆ ರಾಜ್ಯಗಳ ಬೆಳವಣಿಗೆ ಅತಿ ಮುಖ್ಯ. ಪ್ರಧಾನಿ ನರೇಂದ್ರ ಮೋದಿಯವರ 5 ಟ್ರಿಲಿಯನ್ ಆರ್ಥಿಕತೆಯ ಕನಸನ್ನು ಸಾಕಾರಗೊಳಿಸಲು ರಾಜ್ಯಗಳು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ತೀವ್ರಗೊಳಿಸಬೇಕು'' ಎಂದು ತಿಳಿಸಿದರು.
ಸ್ವಿಟ್ಜರ್ಲೆಂಡ್ ನಲ್ಲಿ ಮಿಂಚಿನ ಸಂಚಾರ ನಡೆಸಿದ ಸಿಎಂ ಯಡಿಯೂರಪ್ಪ
"ನನ್ನ ರಾಜ್ಯ ಕರ್ನಾಟಕ 250 ಬಿಲಿಯನ್ ಡಾಲರ್ ಜಿಡಿಪಿಯನ್ನು ಹೊಂದಿದ್ದು, ಶೇ. 9 ರ ಬೆಳವಣಿಗೆ ದರ ಹೊಂದಿದೆ. ಈ ಸಮಾವೇಶದಲ್ಲಿ ನಾವು ಹೂಡಿಕೆದಾರರು ಮತ್ತು ಉದ್ಯಮಿಗಳನ್ನು ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದೇವೆ. ಇದಕ್ಕೆ ಉತ್ತಮ ಸ್ಪಂದನೆ ದೊರೆಯುವ ವಿಶ್ವಾಸವಿದೆ" ಎಂದು ತಿಳಿಸಿದರು.
ಹೂಡಿಕೆದಾರರೂ ಸಹ ಪ್ರಧಾನಿ ನರೇಂದ್ರ ಮೋದಿಯವರ 5 ಟ್ರಿಲಿಯನ್ ಆರ್ಥಿಕತೆಯ ಆಶಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅಭಿಪ್ರಾಯಪಟ್ಟ ಅವರು, ಸಂವಾದದ ಕುರಿತು ಅಭಿಪ್ರಾಯ ತಿಳಿಸಲು ಅವಕಾಶ ದೊರೆತುದಕ್ಕಾಗಿ ಹರ್ಷ ವ್ಯಕ್ತಪಡಿಸಿದರು. ಶುಕ್ರವಾರ ಕರ್ನಾಟಕಕ್ಕೆ ಸಿಎಂ ವಾಪಸ್ ಆಗಲಿದ್ದಾರೆ.