ಮತ್ತೆ ಶುರುವಾಯಿತಾ ಮಹಾಯುದ್ಧ..? 2 ದೇಶಕ್ಕಾಗಿ ಜಗತ್ತು ಇಬ್ಭಾಗ..?
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ಭೀಕರ ಯುದ್ಧಕ್ಕೆ ಕಾರಣವಾಗಿದ್ದ ನಗೊರ್ನೊ-ಕರಬಾಖ್ ಪ್ರದೇಶದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಸುಮಾರು 2 ತಿಂಗಳ ಕಾಲ ಒಬ್ಬರನ್ನೊಬ್ಬರು ಸರ್ವನಾಶ ಮಾಡುವಂತೆ ಕಿತ್ತಾಡಿದ್ದ ಅರ್ಮೇನಿಯ ಮತ್ತು ಅಜೆರ್ಬೈಜಾನ್ ನಡುವೆ ಇದೀಗ ಮತ್ತೊಮ್ಮೆ ಮಹಾ ಯುದ್ಧ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಎರಡೂ ರಾಷ್ಟ್ರಗಳ ನಡುವೆ ಹೊತ್ತಿದ್ದ ಯುದ್ಧದ ಕಿಚ್ಚು, ಮಧ್ಯಸ್ಥಿಕೆಯಿಂದ ಆರಿದೆ. ಆದರೆ ಯುದ್ಧದ ಗಾಯ ಮಾತ್ರ ವಾಸಿಯಾಗಿಲ್ಲ. ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವ ಸಂದರ್ಭದಲ್ಲೇ ಕದನ ವಿರಾಮ ಉಲ್ಲಂಘನೆ ಆಗಿರುವ ಬಗ್ಗೆ ವರದಿಯಾಗಿದೆ. ಖುದ್ದು ಅಜೆರ್ಬೈಜಾನ್ ರಕ್ಷಣಾ ಸಚಿವರೇ ಈ ಆರೋಪ ಮಾಡಿದ್ದಾರೆ.
ಯುದ್ಧ ಮುಗಿದ ನಂತರ ನಿಲ್ಲಲು ಸೂರು ಇಲ್ಲ, ತಿನ್ನಲು ಅನ್ನವಿಲ್ಲ
ನಗೊರ್ನೊ-ಕರಬಾಖ್ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಬಂದಿದ್ದು, ಕೃತ್ಯವನ್ನ ಅರ್ಮೇನಿಯದ ಅನಧಿಕೃತ ಬಂಧೂಕುದಾರಿಗಳು ನಡೆಸಿದ್ದಾರೆ ಎಂದು ಅಜೆರ್ಬೈಜಾನ್ ಆರೋಪ ಮಾಡಿದೆ. ಹೀಗೆ ಯುದ್ಧ ಮುಗಿಯಿತು ಅಂತಾ ನೆಮ್ಮದಿಯಾಗಿದ್ದ ಲಕ್ಷಾಂತರ ಜನರ ಶಾಂತಿಗೆ ಕಿಚ್ಚು ಹಚ್ಚಿದೆ. ಮತ್ತೆಲ್ಲಿ ಎರಡೂ ದೇಶಗಳ ನಡುವೆ ರಣಭೀಕರ ಕಾಳಗ ನಡೆಯುತ್ತದೋ ಎಂಬ ಆತಂಕ ಶುರುವಾಗಿದೆ.
ಭೀಕರ ಯುದ್ಧದ ನಂತರ ಪ್ರಧಾನಿ ರಾಜೀನಾಮೆಗೆ ಪಟ್ಟು
ರಕ್ಷಣಾ ಸಚಿವನ ಆರೋಪ ಸುಳ್ಳು..?
ನಗೊರ್ನೊ-ಕರಬಾಖ್ ಪ್ರದೇಶದಲ್ಲಿ ಭೀಕರ ಕಾಳಗ ಏರ್ಪಟ್ಟ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ವಿಶೇಷವಾದ ಗಮನ ಇಡಲು ರಷ್ಯಾ ನೇತೃತ್ವದಲ್ಲಿ ಸೇನೆ ಸನ್ನದ್ಧವಾಗಿದೆ. ಅಲ್ಲಿ ರಷ್ಯಾ, ಅರ್ಮೇನಿಯ, ಅಜೆರ್ಬೈಜಾನ್ನ ನೇತೃತ್ವದಲ್ಲಿ ಸಂಯುಕ್ತ ಸೇನೆ ನಿಯೋಜನೆಗೊಂಡಿದೆ. ಹೆಜ್ಜೆ, ಹೆಜ್ಜೆಗೂ ಕಣ್ಣಿಟ್ಟು ನಗೊರ್ನೊ-ಕರಬಾಖ್ನ ಜಾಗ ಕಾಯುತ್ತಿದೆ ರಷ್ಯಾ. ಆದರೆ ಇದೀಗ ಅಜೆರ್ಬೈಜಾನ್ ರಕ್ಷಣಾ ಸಚಿವ ಮಾಡಿರುವ ಕದನ ವಿರಾಮ ಉಲ್ಲಂಘನೆ ಆರೋಪವನ್ನು ನಗೊರ್ನೊ-ಕರಬಾಖ್ ಪ್ರದೇಶದ ಸಂಯುಕ್ತ ಸೇನೆ ನಿರಾಕರಿಸಿದೆ. ಫೈರಿಂಗ್ ನಡೆದಿದೆ ಅನ್ನೋ ಆರೋಪವೇ ಸುಳ್ಳು ಎಂದಿದೆ.
ಅರ್ಮೇನಿಯ ಒಳಗೆ ನುಗ್ಗಿತ್ತು ರಷ್ಯಾ ಸೇನೆ..!
ಈ ಹಿಂದೆಯೇ ರಷ್ಯಾ ಸೇನೆ ಕಾರ್ಯಾಚರಣೆ ಬಗ್ಗೆ ಹಿಂಟ್ ಸಿಕ್ಕಿತ್ತು. ತನ್ನ ಮಾತನ್ನು ಕೇಳದ ಅರ್ಮೇನಿಯ, ಅಜೆರ್ಬೈಜಾನ್ಗೆ ಪಾಠ ಕಲಿಸಲು ರಷ್ಯಾ ಪ್ಲಾನ್ ಮಾಡಿತ್ತು. ಪ್ಲಾನ್ ಪ್ರಕಾರ ರಷ್ಯಾ ಸೇನೆ ಅರ್ಮೇನಿಯ ಒಳಗೆ ನುಗ್ಗಿತ್ತು. ಅರ್ಮೇನಿಯ ಪರಿಸ್ಥಿತಿ ಹತೋಟಿಗೆ ತರುವ ನೆಪದಲ್ಲಿ ಅರ್ಮೇನಿಯದ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿತ್ತು. ಬಳಿಕ ಅರ್ಮೇನಿಯ ನಾಯಕರು ಹೆದರಿಕೊಂಡು ಕದನವಿರಾಮ ಘೋಷಿಸಿದ್ದರು. ಅಷ್ಟಕ್ಕೂ 3 ದಶಕಗಳ ಹಿಂದೆ ಅರ್ಮೇನಿಯ-ಅಜೆರ್ಬೈಜಾನ್ ರಷ್ಯಾ ಭಾಗವಾಗಿದ್ದ ದೇಶಗಳು. ಸೋವಿಯತ್ ಒಕ್ಕೂಟದ ಪ್ರಾಂತ್ಯಗಳಾಗಿದ್ದ ಅರ್ಮೇನಿಯ-ಅಜೆರ್ಬೈಜಾನ್ ಸೋವಿಯತ್ ವಿಭಜನೆ ಬಳಿಕ ಬೇರೆ ಬೇರೆ ದೇಶಗಳಾದವು. ಹೀಗಾಗಿ ರಷ್ಯಾ ಈ ಎರಡೂ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಬಯಸುತ್ತಿದೆ ಎಂಬುದು ವಿರೋಧಿಗಳ ಆರೋಪವಾಗಿದೆ.
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿದ್ದವು. ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. 2020ರಲ್ಲಿ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿತ್ತು. ಎರಡೂ ದೇಶಗಳ ನಾಯಕರ ದುರಾಸೆಗೆ ಹತ್ತಾರು ಸಾವಿರ ಜೀವಗಳು ಬಲಿಯಾಗಿವೆ.
1994ರಲ್ಲಿ 30 ಸಾವಿರ ಜನರ ಸಾವು
ಸದ್ಯದಮಟ್ಟಿಗೆ ಹೇಳುವುದಾದರೆ ಈಗಿನ ಸಾವು-ನೋವುಗಳು 1990ರ ದಶಕಕ್ಕೆ ಹೋಲಿಕೆ ಮಾಡಿದರೆ ತೀರಾ ಕಡಿಮೆ. ಏಕೆಂದರೆ 1994ರ ಆಸುಪಾಸಿನಲ್ಲಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ಹೀಗೆ ಮೆಲ್ಲಗೆ ಯುದ್ಧ ಆರಂಭವಾಗಿ ಸುಮಾರು 30 ಸಾವಿರ ಜನರನ್ನು ಬಲಿಪಡೆದಿತ್ತು. 2020ರಲ್ಲೂ ಆ ಹಿಂಸಾಚಾರ ಮತ್ತೆ ಮರುಕಳಿಸಬಹುದು ಎಂಬ ಆತಂಕಕ್ಕೆ ರಷ್ಯಾ ಬ್ರೇಕ್ ಹಾಕಿದೆ. ಅದೆಷ್ಟು ಹೇಳಿದರೂ ಮಾತು ಕೇಳದ ಎರಡೂ ದೇಶಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕಠಿಣ ಸಂದೇಶ ರವಾನಿಸಿದ್ದರು. ಪುಟಿನ್ ಆದೇಶಕ್ಕೆ ಬೆಚ್ಚಿಬಿದ್ದು ಯುದ್ಧ ನಿಲ್ಲಿಸುವ ನಿರ್ಧಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಒಪ್ಪಿದ್ದವು.
ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳು..!
ಅರ್ಮೇನಿಯ-ಅಜೆರ್ಬೈಜಾನ್ ಗಡಿಯಲ್ಲಿ ಕಳೆದ 2 ತಿಂಗಳುಗಳ ಕಾಲ ಪರಿಸ್ಥಿತಿ ಹೇಗಿತ್ತು ಎಂದರೆ, ದಿನವೂ ದೀಪಾವಳಿ ನಡೆದಿತ್ತು. ಒಮ್ಮೆ ಅರ್ಮೇನಿಯ ಸೈನಿಕರು ಬಾಂಬ್ ಎಸೆದರೆ, ಮರುಕ್ಷಣವೇ ಅಜೆರ್ಬೈಜಾನ್ ಪಡೆಗಳು ಪ್ರತಿದಾಳಿ ಮಾಡುತ್ತಿದ್ದವು. ಅಕಸ್ಮಾತ್ ಅಜೆರ್ಬೈಜಾನ್ ಮೊದಲು ದಾಳಿ ಮಾಡಿದರೆ ತಕ್ಷಣವೇ ಅರ್ಮೇನಿಯ ದಾಳಿ ನಡೆಸುತ್ತಿತ್ತು. ಹೀಗೆ ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳಿಗೆ ಸಾವಿರಾರು ಮನೆಗಳು ನಾಶವಾಗಿ ಹೋಗಿವೆ. ಲಕ್ಷ ಲಕ್ಷ ಜನರು ಬೀದಿಪಾಲಾಗಿದ್ದಾರೆ. ಹಾಗೇ ಸಾವಿರಾರು ಜನರ ಪ್ರಾಣಪಕ್ಷಿಯೂ ಹಾರಿಹೋಗಿದೆ. ಇಷ್ಟೆಲ್ಲಾ ನಡೆದರೂ ಯುದ್ಧ ನಿಲ್ಲಿಸಲು 2 ತಿಂಗಳು ಬೇಕಾಯಿತು.