ಪ್ರತಿಭಟನೆಗಳ ನಡುವೆ ಕೆನಡಾ ಪ್ರಧಾನಿ, ಕುಟುಂಬ ರಹಸ್ಯ ಸ್ಥಳಕ್ಕೆ ಸ್ಥಳಾಂತರ
ಟೊರಾಂಟೋ, ಜನವರಿ 30: ಕೊರೊನಾ ವೈರಸ್ ಸೋಂಕಿನ ವಿರುದ್ಧವಾಗಿ ಕೋವಿಡ್ ಲಸಿಕೆಯನ್ನು ಕಡ್ಡಾಯ ಮಾಡಿದ್ದನ್ನು ವಿರೋಧ ಮಾಡಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆಯಿಂದಾಗಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಕುಟುಂಬವು ದೇಶದ ರಾಜಧಾನಿಯಲ್ಲಿರುವ ತಮ್ಮ ಮನೆಯನ್ನು ತೊರೆದು ರಹಸ್ಯ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯು ಹೇಳಿದೆ.
ಗಡಿಯಾಚೆಗಿನ ಟ್ರಕ್ ಚಾಲಕರಿಗೆ ಕೋವಿಡ್ ಲಸಿಕೆ ಕಡ್ಡಾಯದ ವಿರುದ್ಧ 'ಫ್ರೀಡಮ್ ಕಾನ್ವಾಯ್' ಎಂಬ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆಯು ಈಗ ಜಸ್ಟಿನ್ ಟ್ರುಡೊ ಸರ್ಕಾರದ ಕೊರೊನಾ ವೈರಸ್ ನಿಯಮಗಳ ವಿರುದ್ಧದ ದೊಡ್ಡ ಹೋರಾಟವಾಗಿ ಮಾರ್ಪಟ್ಟಿದೆ. ಕೊರೊನಾ ಲಸಿಕೆ ಕಡ್ಡಾಯ ಹಾಗೂ ಇತರ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ತೆಗೆದು ಹಾಕಲು ಆದೇಶ ನೀಡುವಂತೆ ಒತ್ತಾಯ ಮಾಡಿ ಶನಿವಾರ ರಾಜಧಾನಿಯಲ್ಲಿ ಸಾವಿರಾರು ಟ್ರಕ್ ಚಾಲಕರು ಹಾಗೂ ಇತರ ಸಾವಿರಾರು ಮಂದಿ ಜೊತೆಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕೆನಡಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.
ಹವಾಮಾನ ಬದಲಾವಣೆ ದುಷ್ಪರಿಣಾಮಕ್ಕೆ ತುತ್ತಾದ ವಿಶ್ವದ ಮೊದಲ ರೋಗಿ ಪತ್ತೆ
ಇನ್ನು ಈ ಪ್ರತಿಭಟನಾಕಾರರಲ್ಲಿ ತಮ್ಮ ಮಕ್ಕಳ ಸಮೇತ ಕೆಲವು ಕುಟುಂಬವೇ ಸೇರಿದೆ. ಹಾಗೆಯೇ ವೃದ್ಧರು ಮತ್ತು ಅಂಗವಿಕಲರು ಕೂಡಾ ಇದ್ದಾರೆ. ಕೆನಡಾದ ಪ್ರಧಾನ ಮಂತ್ರಿಯ ವಿರುದ್ಧವಾಗಿ ಈ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ದ ಗ್ಲೋಬ್ ಅಂಡ್ ಮೇಲ್ ಪತ್ರಿಕೆ ಉಲ್ಲೇಖ ಮಾಡಿದೆ.
ಕೆಲವು ಪ್ರತಿಭಟನಾಕಾರರು ಪ್ರಮುಖ ಯುದ್ಧ ಸ್ಮಾರಕದ ಮೇಲೆ ನೃತ್ಯ ಮಾಡುತ್ತಿರುವುದು ಕೂಡಾ ಕಂಡುಬಂದಿದೆ. ಕೆನಡಾದ ಉನ್ನತ ಸೈನಿಕ ಜನರಲ್ ವೇಯ್ನ್ ಐರ್ ಮತ್ತು ಕೆನಡಾದ ರಕ್ಷಣಾ ಸಚಿವೆ ಅನಿತಾ ಆನಂದ್ ಇದನ್ನು ಖಂಡನೆ ಮಾಡಿದ್ದಾರೆ. ಪ್ರತಿಭಟನಾಕಾರರಿಗೆ ಎಚ್ಚರಿಕೆಯನ್ನು ನೀಡಲಾಗಿದ್ದರೂ ನೂರಾರು ಪ್ರತಿಭಟನಾಕಾರರು ಸಂಸತ್ತಿನ ಆವರಣಕ್ಕೆ ನುಗ್ಗಿದ್ದು ಈ ಹಿನ್ನೆಲೆ ಹಿಂಸಾಚಾರ ಹೆಚ್ಚಾಗುವ ನಿಟ್ಟಿನಲ್ಲಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಪ್ರತಿಭಟನೆ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ.
ಸ್ಮಾರಕದ ಮೇಲೆ ಪ್ರತಿಭಟನಕಾರರ ನೃತ್ಯದ ವಿರುದ್ಧ ಆಕ್ರೋಶ
"ಪ್ರತಿಭಟನಕಾರರು ಅಜ್ಞಾತ ಸೈನಿಕನ ಸಮಾಧಿಯ ಮೇಲೆ ನೃತ್ಯ ಮಾಡುವುದನ್ನು ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಅಪವಿತ್ರಗೊಳಿಸುವುದನ್ನು ನೋಡಿ ನಾನು ಬೇಸರಗೊಂಡಿದ್ದೇನೆ. ಕೆನಡಿಯನ್ನರು ನಮ್ಮ ಹಕ್ಕುಗಳಿಗಾಗಿ ಹೋರಾಡಿದ್ದಾರೆ ಮತ್ತು ಪ್ರಾಣ ತ್ಯಾಗ ಮಾಡಿದ್ದಾರೆ. ಇದರಲ್ಲಿ ಸ್ವಾತಂತ್ರ್ಯ ಹೋರಾಟವು ಸೇರಿದೆ. ಆದರೆ ಈ ಹೋರಾಟ ಅಂತಹದ್ದು ಅಲ್ಲ. ಇದರಲ್ಲಿ ಭಾಗಿಯಾಗಿರುವವರು ನಾಚಿಕೆಯಿಂದ ತಲೆ ಬಾಗಬೇಕಾಗಿದೆ," ಎಂದು ಜನರಲ್ ವೇಯ್ನ್ ಐರ್ ಟ್ವೀಟ್ ಮಾಡಿದ್ದಾರೆ.
ಕೆನಡಾ ರಕ್ಷಣಾ ಸಚಿವರಾದ ಭಾರತ ಮೂಲದ ಅನಿತಾ ಆನಂದ್ ಕೂಡಾ ಈ ಘಟನೆಯನ್ನು ಖಂಡಿಸಿದ್ದಾರೆ. "ನಾವು ಇಂದು ನೋಡುತ್ತಿರುವ ಜನರ ಈ ನಡವಳಿಕೆಯು ಖಂಡನೀಯವಾಗಿದೆ," ಎಂದು ಹೇಳಿದ್ದಾರೆ. "ಸೈನಿಕರ ಸಮಾಧಿ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಗಳು ನಮ್ಮ ದೇಶಕ್ಕೆ ಪವಿತ್ರ ಸ್ಥಳಗಳಾಗಿವೆ. ಕೆನಡಾಕ್ಕಾಗಿ ಹೋರಾಡಿದ ಮತ್ತು ಮಡಿದವರಿಗೆ ಗೌರವದಿಂದ ಹಾಗೂ ಗಂಭೀರವಾಗಿ ಪರಿಗಣಿಸಲು ನಾನು ಎಲ್ಲಾ ಕೆನಡಿಯನ್ನರನ್ನು ಕೋರುತ್ತೇನೆ," ಎಂದು ತಿಳಿಸಿದ್ದಾರೆ.
10,000 ಜನರು ಆಗಮಿಸುವ ನಿರೀಕ್ಷೆ
ದಿನದ ಅಂತ್ಯದ ವೇಳೆಗೆ ಸುಮಾರು 10,000 ಜನರು ಆಗಮಿಸುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಧ್ಯಮ ವರದಿಗಳು ಶನಿವಾರ ಸಂಜೆಯ ವೇಳೆಗೆ ಜನರ ಹೆಚ್ಚಳದ ಬಗ್ಗೆ ಯಾವುದೇ ಅಂದಾಜು ಕೂಡಾ ಇಲ್ಲ ಎಂದು ವರದಿ ಮಾಡಿದೆ. ಶುಕ್ರವಾರ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರತಿಭಟನೆಯು ಹಿಂಸಾತ್ಮಕವಾಗಿ ತಿರುಗುತ್ತದೆ ಎಂದು ಕಳವಳಗೊಂಡಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು. "ಈ ಪ್ರತಿಭಟನೆಯು ಒಂದು ಸಣ್ಣ ಗುಂಪಿನ ಅಭಿಪ್ರಾಯದ ಭಾಗವಾಗಿದೆಯೇ ಹೊರತು ಕೆನಡಿಯನ್ನರ ಅಭಿಪ್ರಾಯದ ಭಾಗವಾಗಿ ಇಲ್ಲ," ಎಂದಿದ್ದಾರೆ. ಆದರೆ ಈ ನಡುವೆ ಪ್ರತಿಭಟನೆ ಕಾವೇರುತ್ತಿದ್ದಂತೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹಾಗೂ ಅವರ ಕುಟುಂಬ ರಹಸ್ಯ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ. (ಒನ್ಇಂಡಿಯಾ ಸುದ್ದಿ)