ಸೆಪ್ಟೆಂಬರ್ 5 ಅನ್ನು 'ಗೌರಿ ಲಂಕೇಶ್ ದಿನ' ಎಂದು ಘೋಷಿಸಿದ ಕೆನಡಾದ ಬರ್ನಾಬಿ ನಗರ
ಕೆನಡಾ, ಸೆಪ್ಟೆಂಬರ್ 03: ಪತ್ರಕರ್ತೆ ಗೌರಿ ಲಂಕೇಶ್ರ ಕೊಲೆಯಾಗಿ ಸೆಪ್ಟೆಂಬರ್ 5 ಕ್ಕೆ ನಾಲ್ಕು ವರುಷವಾಗಲಿದೆ. ಈ ನಡುವೆ ಕೆನಡಾದ ಬರ್ನಾಬಿ ಎಂಬ ನಗರವು ಸೆಪ್ಟೆಂಬರ್ 5 ಅನ್ನು ''ಗೌರಿ ಲಂಕೇಶ್ ದಿನ" ಎಂದು ಘೋಷಣೆ ಮಾಡಿದೆ.
ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಕೊಲೆಯಾದ ದಿನವನ್ನು ಗೌರಿ ಲಂಕೇಶ್ ದಿನ ಎಂದು ಆಚರಿಸಲು ಕೆನಡಾದ ಬರ್ನಾಬಿ ಎಂಬ ನಗರ ನಿರ್ಧಾರ ಮಾಡಿದೆ. 2017 ರ ಸೆಪ್ಟೆಂಬರ್ 5 ರಂದು ದುಷ್ಕರ್ಮಿಗಳು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ತಮ್ಮ ನಿವಾಸದ ಬಳಿಯೇ ಗೌರಿ ಲಂಕೇಶ್ರನ್ನು ಕೊಲೆ ಮಾಡಿದ್ದಾರೆ.
To honour courage & legacy of our pride Gauri Lankesh, Canadian city of Burnaby declares September 5th of every year as ‘Gauri Lankesh Day’
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 29, 2021
We appreciate Canada’s South Asian diaspora for making this possible
Gauri lives on & inspires us to keep fightng for an egalitarian world pic.twitter.com/r6VfMJkJSq
ಆಗಸ್ಟ್ 30 ನಡೆದ ಬರ್ನಾತ್ನ ನಗರ ಕೌನ್ಸಿಲ್ ಸಭೆಯಲ್ಲಿ ಸೆಪ್ಟೆಂಬರ್ 5 ರಂದು ಗೌರಿ ಲಂಕೇಶ್ ದಿನವನ್ನಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರಕ್ಕೆ ನಗರದ ಮೇಯರ್ ಮೈಕ್ ಹರ್ಲೆ ಸಹಿ ಹಾಕಿದ್ದಾರೆ. ಬಳಿಕ ಈ ನಿರ್ಧಾರವನ್ನು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗಿದೆ.
ಕೆನಡಾದ ಬರ್ನಾತ್ ನಗರದ ಅಧಿಕೃತ ವೆಬ್ಸೈಟ್ನಲ್ಲಿ ಭಾರತದ ಪತ್ರಕರ್ತೆ ಗೌರಿ ಲಂಕೇಶ್ರನ್ನು ಶ್ಲಾಘಿಸಲಾಗಿದೆ. ಇನ್ನು ನಿರ್ಧಾರದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ, "ಗೌರಿ ಲಂಕೇಶ್ ತಾನು ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಓದುಗರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳು ಪ್ರೇರಣೆ ನೀಡಿದ್ದಾರೆ. ಧಾರ್ಮಿಕ ಮತಾಂಧತೆ, ಜಾತಿ ತಾರತಮ್ಯವನ್ನು ತಿರಸ್ಕಾರ ಮಾಡುವಂತೆ ಓದುಗರಿಗೆ ಪ್ರೋತ್ಸಾಹ ನೀಡಿದ್ದಾರೆ, " ಎಂದು ತಿಳಿಸಲಾಗಿದೆ. 2020 ರ ಎಪ್ರಿಲ್ನಲ್ಲಿ ಕೆನಡಾದ ಬರ್ನಾತ್ ನಗರವು ಎಪ್ರಿಲ್ 14 ರಂದು ಡಾ. ಬಿ ಆರ್ ಅಂಬೇಡ್ಕರ್ ದಿನವಾಗಿ ಆಚರಣೆ ಮಾಡಲು ನಿರ್ಧಾರ ಕೈಗೊಂಡಿದೆ.
ಗೌರಿ ಹತ್ಯೆ ಪ್ರಕರಣ: ಕವಿತಾ ಲಂಕೇಶ್ ಅರ್ಜಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರಿಂ
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ಅಹಿಂಸಾ, "ನಮ್ಮ ಹೆಮ್ಮೆಯ ಗೌರಿ ಲಂಕೇಶ್ರ ಧೈರ್ಯ ಹಾಗೂ ಪರಂಪರೆಯನ್ನು ಗೌರವಿಸಲು ಕೆನಡಾದ ಬರ್ನಾತ್ ನಗರವು ಸೆಪ್ಟೆಂಬರ್ 5 ಅನ್ನು ''ಗೌರಿ ಲಂಕೇಶ್ ದಿನ' ಎಂದು ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ನಾವು ಕೆನಡಾದ ದಕ್ಷಿಣ ಏಷ್ಯಾದ ವಲಸಿಗರನ್ನು ಪ್ರಶಂಸಿಸುತ್ತೇವೆ. ಗೌರಿ ಬದುಕಿಯೇ ಇದ್ದಾರೆ ಮತ್ತು ಸಮಾನತೆಯ ಪ್ರಪಂಚಕ್ಕಾಗಿ ಹೋರಾಡಲು ನಮಗೆ ಸ್ಫೂರ್ತಿ ನೀಡುತ್ತಾರೆ," ಎಂದು ಹೇಳಿದ್ದಾರೆ.
ಈ ನಡುವೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಒಬ್ಬ ಆರೋಪಿಯ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆ 2000 (ಕೆಸಿಒಸಿಎ) ಅಡಿಯಲ್ಲಿ ಆರೋಪಗಳನ್ನು ಕೈಬಿಡುವುದನ್ನು ಪ್ರಶ್ನಿಸಿ ಕವಿತಾ ಲಂಕೇಶ್ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಮೋಹನ್ ನಾಯಕ್ ವಿರುದ್ಧ ಕೆಸಿಒಸಿಎ ಅಡಿಯಲ್ಲಿ ಆರೋಪಗಳನ್ನು ರದ್ದುಗೊಳಿಸುವ ರಾಜ್ಯ ಹೈಕೋರ್ಟ್ ನಿರ್ಧಾರವನ್ನು ವಿರೋಧ ಮಾಡಿ ಕವಿತಾ ಲಂಕೇಶ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠವು ಕರ್ನಾಟಕಕ್ಕೆ ನೋಟಿಸ್ ನೀಡಿತ್ತು.
ಕವಿತಾ ಲಂಕೇಶ್ ಸಲ್ಲಿಸಿರುವ ಈ ಮನವಿಯಲ್ಲಿ, "ನಾಯಕ್ ಅಪರಾಧಕ್ಕೆ ಮೊದಲು ಮತ್ತು ನಂತರ ಕೊಲೆಗಾರರಿಗೆ ಆಶ್ರಯ ನೀಡುವ ಸಹಾಯ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಹಲವಾರು ಪಿತೂರಿ, ಸಂಚು ರೂಪಿಸುವಲ್ಲಿ ತೊಡಗಿಕೊಂಡಿದ್ದ ಎಂಬುದು ತನಿಖೆ ದೃಢಪಡಿಸಿದೆ," ಎಂದು ಉಲ್ಲೇಖಿಸಲಾಗಿದೆ.
"ಆತ ನಿರಂತರವಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬುವುದು ತನಿಖೆಯಲ್ಲಿ ಖಚಿತವಾಗಿದೆ. ಆತ ಆರಂಭದಿಂದಲೂ ಒಂದನೇ ಆರೋಪಿ ಅಮೋಲ್ ಕಾಳೆ ಜೊತೆ ಹಾಗೂ ಎಂಟನೇ ಆರೋಪಿ ಶಸ್ತ್ರಾಸ್ತ್ರ ತರಬೇತುದಾರ ರಾಜೇಶ್ ಡಿ ಬಂಗೇರ ಜೊತೆ ನಿಕಟ ಸಂಪರ್ಕದಲ್ಲಿದ್ದನು. ಆತ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖಾ ಸಂಸ್ಥೆ ಸಾಕಷ್ಟು ಸಾಕ್ಷ್ಯಗಳನ್ನು ಹೊಂದಿದೆ," ಎಂದು ತಿಳಿಸಲಾಗಿದೆ. ಇನ್ನು ಗೌರಿ ಹತ್ಯೆ ಮಾತ್ರವಲ್ಲದೆ ಅನೇಕ ಸಂಘಟಿತ ಅಪರಾಧಗಳನ್ನು ಎಸಗಿದ ಅಮೋಲ್ ಕಾಳೆ ನೇತೃತ್ವದ ಗುಂಪಿನೊಂದಿಗೆ ಮೋಹನ್ ನಾಯಕ್ ನಂಟು ಹೊಂದಿದ್ದಾನೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.
(ಒನ್ ಇಂಡಿಯಾ ಸುದ್ದಿ)