ಅದೇ ತಮ್ಮ ಕೊನೆಯ ಪ್ರವಾಸ ಎಂಬ ಸೂಚನೆ ಆ ದಂಪತಿಗೆ ಸಿಕ್ಕೇ ಇರಲಿಲ್ಲ!
'ನನ್ ಹೆಸರು ಮೀನಾಕ್ಷಿ... ಮಿನಾಕ್ಸಿ ಅನ್ನಿ ಸಾಕು! ಪ್ರವಾಸ ಅಂದ್ರೆ ಸತ್ತುಹೋಗೋ ಅಷ್ಟು ಇಷ್ಟ... ನನ್ನೆಲ್ಲಾ ಕನಸನ್ನೂ ನನಸಾಗಿಸುತ್ತಿರೋನು ನನ್ನ ಮುದ್ದಿನ ಗಂಡ ವಿಷ್ಣು... ಪಿಂಕ್ ಕಲರ್ ಅಂದ್ರೆ ನಂಗೆ ಹುಚ್ಚುಪ್ರೀತಿ! ಜೀವನದ ಪ್ರತಿ ಕ್ಷಣಾನೂ ಸಂಭ್ರಮಿಸಬೇಕು ಅನ್ನೋದು ನನ್ನಾಸೆ...' ಎನ್ನುತ್ತ ಜೀವಂತಿಕೆ ಸ್ಫುರಿಸುವ ಕಣ್ಣುಗಳಲ್ಲಿ ಸಂಭ್ರಮ ತುಂಬಿಕೊಂಡು ಹೇಳುತ್ತಿದ್ದ ಮೀನಾಕ್ಷಿ ಈಗಿಲ್ಲ! ಆಕೆಯ ಮುದ್ದಿನ ವಿಷ್ಣುವೂ!
ಇತ್ತೀಚೆಗಷ್ಟೇ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 800 ಅಡಿ ಎತ್ತರದಿಂದ ಬಿದ್ದು ತಮಿಳುನಾಡು ಮೂಲದ ದಂಪತಿ ವಿಷ್ಣು ವಿಶ್ವನಾಥ್(29) ಮತ್ತು ಮೀನಾಕ್ಷಿ ಮೂರ್ತಿ(30) ಕೊನೆಯುಸಿರೆಳೆದರು. ಬದುಕಿನ ಪ್ರತಿಕ್ಷಣವನ್ನೂ ಸಂಭ್ರಮಿಸುತ್ತಿದ್ದ ಈ ದಂಪತಿಯ ಸಾವಿನಿಂದಾಗಿ ಅವರ ತಂದೆ-ತಾಯಿ, ಓದಿದ ಕಾಲೇಜ್, ಸ್ನೇಹಿತರು, ಬಂಧುಗಳ ಮನಸ್ಸಲ್ಲಿ ನಿರ್ವಾತ ಸೃಷ್ಟಿಯಾಗಿದೆ.
ಕ್ಯಾಲಿಫೋರ್ನಿಯಾ: 800 ಅಡಿ ಎತ್ತರದಿಂದ ಬಿದ್ದು ಸಾವಿಗೀಡಾದ ಭಾರತೀಯ ದಂಪತಿ
ಪ್ರವಾಸವೆಂದರೆ ಸಾಕು ಜೀವಬಿಡುತ್ತಿದ್ದ ಈ ದಂಪತಿ ಹಾಲಿಡೇಸ್ ಅಂಡ್ ಹ್ಯಾಪಿ ಎವ್ವರ್ ಆಫ್ಟರ್ಸ್ ಎಂಬ ಬ್ಲಾಗ್ ಆರಂಭಿಸಿ, ತಮ್ಮ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅವರು ಅಗಲಿಕೆಯ ಹೊತ್ತಲ್ಲಿ ಆ ಬರಹಗಳು ದಂಪತಿಯ ಜೀವನ ಪ್ರೀತಿಯ ಅಭಿವ್ಯಕ್ತಿಯಾಗಿ ಕಾಣಿಸುತ್ತವೆ, ಮರೆಯಲ್ಲೇ ತೆಳುವಿಷಾದದ ಭಾವವೊಂದು ಮನಸ್ಸನ್ನು ಆವರಿಸುತ್ತದೆ.
ಬದುಕಿನ ಪ್ರವಾಸವೇ ಮುಗಿದಾಗ...
ಪ್ರವಾಸವನ್ನೇ ಬದುಕು ಎಂದುಕೊಂಡಿದ್ದ ದಂಪತಿಯ ಬದುಕಿನ ಪ್ರವಾಸವೇ ಮುಗಿದಿದೆ! ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಶ್ನಲ್ ಪಾರ್ಕ್ ಗೆ ಪ್ರವಾಸಕ್ಕೆಂದು ತೆರಳಿದ್ದ ದಂಪತಿ 800 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಇದುವರೆಗೂ ಅಲ್ಲಿಂದ ಯಾರೂ ಬಿದ್ದಿರಲಿಲ್ಲ. ಸಾಕಷ್ಟು ಸುರಕ್ಷತಾ ಕಾರ್ಯಕ್ರಮಗಳ ಹೊರತಾಗಿಯೂ ದಂಪತಿ ಮೇಲಿನಿಂದ ಬಿದ್ದಿದ್ದು ಹೇಗೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಒಟ್ಟಿನಲ್ಲಿ ರಜೆ ಸಿಕ್ಕರೆ ಸಾಕು ಸದಾ ಪ್ರವಾಸಕ್ಕೆ ಹೋಗುವುದಕ್ಕೆಂದೇ ಪ್ಲಾನ್ ರೆಡಿ ಮಾಡುತ್ತಿದ್ದ ದಂಪತಿಯ ಬದುಕಿನ ಪ್ರವಾಸವೇ ಮುಗಿದಿದೆ!
ಪಿಂಕ್ ಅಂದ್ರೆ ಪ್ರಾಣ!
ಮೀನಾಕ್ಷಿ(ಮಿನಾಕ್ಸಿ)ಗೆ ಪಿಂಕ್ ಅಂದ್ರೆ ಎಲ್ಲಿಲ್ಲದ ಇಷ್ಟ. ಪಿಂಗ್ ಹೂವುಗಳಿದ್ದಲ್ಲಿ ಮೀನಾಕ್ಷಿಯದೊಂದು ಫೋಟೋ ಬೇಕೇ ಬೇಕು, ಪಿಂಕ್ ಪಿಂಕ್ ಮನೆ, ಪಿಂಗ್ ಡ್ರೆಸ್ ಗಳು... ಎಲ್ಲವೂ ಸಾಲದೆಂಬಂತೆ ತಮ್ಮ ಕೂದಲಿಗೂ ಪಿಂಗ್ ಬಣ್ಣ ಹಾಕಿಸಿಕೊಂಡಿದ್ದರು ಮೀನಾಕ್ಷಿ! ಇಡೀ ಭೂಮಿಯನ್ನೂ ಸುತ್ತಬೇಕು ಅನ್ನೊದು ದಂಪತಿಯ ಇರಾದೆ!
ಪ್ರಣಯ್ ಪ್ರಣಯಕ್ಕೆ 'ಅಮೃತ' ಸಿಂಚನ ನೀಡಿದ ಲವ್ಲಿ ವಿಡಿಯೋ!
ಒಂದೇ ಕಾಲೇಜ್!
ವಿಷ್ಣು ಮತ್ತು ಮೀನಾಕ್ಷಿ ಇಬ್ಬರದೂ ಒಂದೇ ಕಾಲೇಜ್. ಕಾಲೇಜಿನಲ್ಲಿರುವಾಗಲೇ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ಇಂಜಿನಿಯರಿಗ್ ಮುಗಿಸಿ, ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. 2014 ರಲ್ಲಿ ಮದುವೆಯಾಗಿ ಕ್ಯಾಲಿಫೋರ್ನಿಯಾಕ್ಕೆ ತೆರಳಿದ ನಂತರ ವಾರಕ್ಕೊಂದು ಪ್ರವಾಸ! ರಜೆ ಸಿಕ್ಕರೆ ಸಾಕು ಕಾಲು ಮನೆಯಲ್ಲಿ ನಿಲ್ಲುತ್ತಿರಲಿಲ್ಲ. ಬದುಕಿನಲ್ಲಿ ಸಿಗುವ ಸಂಭ್ರಮವನ್ನೆಲ್ಲ ಬೊಗೆಸೆಯಲ್ಲಿ ಹಿಡಿದು ಕುಡಿದುಬಿಡುವ ತವಕ. ಆದರೆ ವಿಧಿ ಬೇರೆಯೇ ಇತ್ತು!
ವಿಧಿಯ ದೃಷ್ಟಿಯೇ ತಗುಲಿತೇನೋ!
ಯಾರದ್ದಾದರೂ ದೃಷ್ಟಿ ತಗುಲಿತೇನೋ ಎಂಬಂಥ ಈ ಜೋಡಿಗೆ ವಿಧಿಯದೇ ದೃಷ್ಟಿ ತಗುಲಿರಬೇಕು! ಮತ್ತೆಂದು ಬಾರದ ಲೋಕಕ್ಕೆ ಇಬ್ಬರೂ ಪಯಣ ಬೆಳೆಸಿದ್ದಾರೆ. ಬ್ಲಾಗ್ ನಲ್ಲಿ, ಫೇಸ್ ಬುಕ್ ನಲ್ಲಿ ಈ ದಂಪತಿಯ ಪ್ರವಾಸದ ಚಿತ್ರಗಳನ್ನೆಲ್ಲ ನೋಡಿದರೆ ಕಣ್ಣೆವೆಗಳಲ್ಲಿ ಅರಿವಿಲ್ಲದೆ ನೀರುಕ್ಕುತ್ತದೆ. ತಮ್ಮ ಪಾಡಿಗೆ ತಾವು ಜೋಡಿಹಕ್ಕಿಯಂತಿದ್ದ ಈ ದಂಪತಿಯ ಬಗ್ಗೆ ವಿಧಿಗೆ ಯಾಕಿಷ್ಟು ಕೋಪವೋ ಎಂದು ಮನ ಪರಿತಪಿಸುತ್ತದೆ.