ಪಿಎನ್ ಬಿ ವಂಚನೆ ಪ್ರಕರಣ: ಭಾರತಕ್ಕೆ ಆರೋಪಿ ಮೆಹುಲ್ ಚೋಕ್ಸಿ ಗಡಿಪಾರು
ನವದೆಹಲಿ, ಜೂನ್ 03: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಬಹು ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಅನ್ನು ಭಾರತಕ್ಕೆ ಗಡೀಪಾರು ಮಾಡಬೇಕಾಗಿದೆ ಎಂದು ಡೊಮಿನಿಕಾ ಸರ್ಕಾರವು ಹೈಕೋರ್ಟ್ ಗೆ ತಿಳಿಸಿದೆ.
ಭಾರತದ ಬ್ಯಾಂಕಿಗೆ ವಂಚಿಸಿರುವ 62 ವರ್ಷದ ಆರೋಪಿ ಸಲ್ಲಿಸಿರುವ ಅರ್ಜಿ ಸಮರ್ಥನೀಯಲ್ಲ. ನ್ಯಾಯಾಲಯವು ಈ ಅರ್ಜಿಯನ್ನು ವಿಚಾರಣೆಗೊಳಪಡಿಸಬಾರದು ಎಂದು ಡೊಮಿನಿಕಾ ಪಬ್ಲಿಕ್ ಪ್ರಾಸಿಕ್ಯೂಷನ್ ವಾದ ಮಂಡಿಸಿದೆ.
ಉದ್ಯಮಿ ಮೆಹುಲ್ ಚೋಕ್ಸಿ ಬಂಧನದ ಹಿಂದೆ ಪ್ರಣಯ ಪ್ರವಾಸದ ಕಥೆ!
ಭಾರತವು ಈಗಾಗಲೇ ಅವರನ್ನು ಗಡೀಪಾರು ಮಾಡುವಂತೆ ಕೋರಿದ್ದು, ಮೆಹುಲ್ ಚೋಕ್ಸಿ ಭಾರತೀಯ ಪ್ರಜೆಯಾಗಿ ಮುಂದುವರಿಯಲಿದ್ದಾರೆ ಎಂದು ಡೊಮಿನಿಕಾ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಮೆಹುಲ್ ಚೋಕ್ಸಿಗೆ ಚಿಕಿತ್ಸೆ
ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಕಳೆದ ವಾರ ಡೊಮಿನಿಕಾದಿಂದ ಕ್ಯೂಬಾಗೆ ತೆರಳಲು ಪ್ರಯತ್ನಿಸಿದ ಆರೋಪಿ ಮೆಹುಲ್ ಚೋಕ್ಸಿ ಅನ್ನು ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಆಂಟಿಗಾದಿಂದ ಅಪಹರಿಸಿ ಕರೆ ತರುವ ಸಂದರ್ಭದಲ್ಲಿ ಅವರಿಗೆ ಮೈ ಮೇಲೆ ಗಾಯಗಳಾಗಿದ್ದವು ಎಂದು ಚೋಕ್ಸಿ ಪರ ವಕೀಲರು ವಾದ ಮಂಡಿಸಿದ್ದಾರೆ.
ಆಂಟಿಗಾಗೆ ವಾಪಸ್ ಕಳುಹಿಸುವ ಬಗ್ಗೆ ವಾದ
ಉದ್ಯಮಿ ಮೆಹುಲ್ ಚೋಕ್ಸಿ ಅನ್ನು ಅಪಹರಿಸಿ ಡೊಮಿನಿಕಾಗೆ ಕರೆದುಕೊಂಡು ಬರಲಾಗಿದೆ ಎಂದು ಆರೋಪಿ ಪರ ವಕೀಲ ಕ್ವೀನ್ಸ್ ಕೌನ್ಸೆಲ್ಸ್ ಜಸ್ಟೀನ್ ಸಿಮೋನ್ ಮತ್ತು ಜಾನ್ ಕ್ಯಾರಿಂಗ್ ಟನ್ ವಾದ ಮಂಡಿಸಿದ್ದಾರೆ. ತಮ್ಮ ವಾದವನ್ನು ಒಪ್ಪುವುದಾದರೆ ಆಂಟಿಗಾಗೆ ವಾಪಸ್ ಕಳುಹಿಸಲಾಗುವುದು. ಭಾರತದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗುವ ಮೊದಲೇ ಆಂಟಿಗಾದಲ್ಲಿ ಮೆಹುಲ್ ಚೋಕ್ಸಿ ಪೌರತ್ವವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಹಾಜರುಪಡಿಸಿ ಎಂದ ಕೋರ್ಟ್
ಉದ್ಯಮಿ ಮೆಹುಲ್ ಚೋಕ್ಸಿ ಅನ್ನು ಅಕ್ರಮವನ್ನು ಬಂಧಿಸಲಾಗಿದ್ದು, ಅದಾಗಿ 72 ಗಂಟೆಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರಿಗೆ ಹಾಜರುಪಡಿಸಬೇಕಿತ್ತು. ಆದರೆ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿಲ್ಲ ಎನ್ನುವುದು ದೃಢಪಟ್ಟಿದೆ ಎಂದು ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್ ತಿಳಿಸಿದ್ದಾರೆ. ಇದರ ಜೊತೆಗೆ ಸ್ಥಳೀಯ ಸಮಯ 4 ಗಂಟೆಯೊಳಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸುವಂತೆ ನೀಡಿರುವ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ. ಭಾರತೀಯ ಸರ್ಕಾರ ಹಾಗೂ ಗಡೀಪಾರು ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆದಿಲ್ಲ ಎನ್ನುವ ಬಗ್ಗೆ ಹಲವು ಸ್ಥಳೀಯ ಮಾಧ್ಯಮಗಳ ವರದಿಗಳ ಬಗ್ಗೆ ಅವರು ಮಾತನಾಡಿದ್ದಾರೆ.
ಉದ್ಯಮಿ ಚೋಕ್ಸಿ ವಿರುದ್ಧ ಹೇಬಿಯಸ್ ಕಾರ್ಪಸ್ ಪ್ರಕರಣ
ಅಕ್ರಮವಾಗಿ ಡೊಮಿನಿಕಾ ಪ್ರವೇಶಕ್ಕೆ ಪ್ರಯತ್ನಿಸಿದ ಮೆಹುಲ್ ಚೋಕ್ಸಿ ವಿರುದ್ಧದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ಎದೆರು ನೋಡಲಾಗುತ್ತಿದೆ. ಇದರ ಬೆನ್ನಲ್ಲೇ ಗುರುವಾರು ಮೆಹುಲ್ ಚೋಕ್ಸಿ ವಿರುದ್ಧ ಹೇಬಿಯಸ್ ಕಾರ್ಪಸ್ ಪ್ರಕರಣವನ್ನು ದಾಖಲಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಇದರ ಮಧ್ಯೆ ಭಾರತದ ಕೇಂದ್ರ ತನಿಖಾ ತಂಡ ಹಾಗೂ ಜಾರಿ ನಿರ್ದೇಶನಾಲಯ ಸೇರಿದಂತೆ ಎಂಟು ಸದಸ್ಯರ ತಂಡವು ಮೆಹುಲ್ ಚೋಕ್ಸಿ ಹಸ್ತಾಂತರಕ್ಕಾಗಿ ಡೊಮಿನಿಕಾಗೆ ತೆರಳಿದೆ.