ಬ್ರೆಕ್ಸಿಟ್ ಒಪ್ಪಂದ ಅನುಷ್ಠಾನಕ್ಕೆ ಜನವರಿ 31ರ ಡೆಡ್ಲೈನ್
ಲಂಡನ್, ಡಿಸೆಂಬರ್ 14: ಐರೋಪ್ಯ ಒಕ್ಕೂಟದಿಂದ ಹೊರಬರಲು ನಿರ್ಧರಿಸಲಾಗಿರುವ ಬ್ರೆಕ್ಸಿಟ್ ಒಪ್ಪಂದವನ್ನು ಜ.31ರೊಳಗೆ ಅನುಷ್ಠಾನ ಮಾಡುವ ಹೊಸ ಕಾಲಮಿತಿಯನ್ನು ಬ್ರಿಟನ್ ನಿಗದಿಮಾಡಿಕೊಂಡಿದೆ.
ಅಭೂತಪೂರ್ವ ಚುನಾವಣಾ ಗೆಲುವಿನ ಬಳಿಕ ಪ್ರಧಾನಿ ಬೊರಿಸ್ ಜಾನ್ಸನ್ ಈ ಘೋಷಣೆ ಮಾಡಿದ್ದಾರೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷವು 650 ಸದಸ್ಯ ಬಲದ ಸಂಸತ್ತಿನಲ್ಲಿ 365 ಸೀಟುಗಳನ್ನು ಗೆದ್ದು ಬೀಗಿದೆ.
ಹೀಗಾಗಿ ಬ್ರೆಕ್ಸಿಟ್ಗೆ ಈಗ ಯಾವುದೇ ತೊಡಕಿಲ್ಲ. ಬಹುಮತ ಹೊಂದಿರುವ ಕನ್ಸರ್ವೇಇಟವ್ ಪಕ್ಷವು ನಿರಾಯಾಸವಾಗಿ ಬ್ರೆಕ್ಸಿಟ್ ಜಾರಿ ಮಾಡಬಹುದಾಗಿದೆ.
ಅಷ್ಟಕ್ಕೂ ಈ ಚುನಾವಣೆಯಲ್ಲಿ ಬ್ರೆಕ್ಸಿಟ್ ಹೆಸರಲ್ಲೇ ಮತ ಕೇಳಲಾಗಿದೆ. ಪ್ರಸಕ್ತ ಚುನಾವಣೆಯ ಫಲಿತಾಂಶವು ಬ್ರೆಕ್ಸಿಟ್ಗೆ ನೀಡಿದ ಜನಾಭಿಪ್ರಾಯ ಎಂದೇ ಬೊರಿಸ್ ಜಾನ್ಸನ್ ಬಣ್ಣಿಸುತ್ತಿದ್ದಾರೆ.
ಈ ಹಿಂದೆ ಕನ್ಸರ್ವೇಟಿವ್ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತವಿರಲಿಲ್ಲ. ಹೀಗಾಗಿ ಬ್ರೆಕ್ಸಿಟ್ ಅನುಷ್ಠಾನ ಮಾಡಲಾಗಿರಲಿಲ್ಲ. ಇದರಿಂದ ಅನಿವಾರ್ಯವಾಗಿ ಬ್ರಿಟನ್ ಮಧ್ಯಂತರ ಚುನಾವಣೆ ಎದುರಿಸಬೇಕಾಯಿತು.
ಸೋಲೊಪ್ಪಿ ನಾಯಕತ್ವ ತ್ಯಜಿಸಲು ಮುಂದಾದ ಕಾರ್ಬಿನ್ : ಲೇಬರ್ ಪಕ್ಷವು ಎರಡೂವರೆ ದಶಕಗಳ ಹೀನಾಯ ಸೋಲು ಅನುಭವಿಸಿದೆ. 1993ರ ಬಳಿಕ ಇದೇ ಮೊದಲ ಬಾರಿಗೆ ಲೇಬರ್ ಪಕ್ಷದ ಸಂಸದರ ಸಂಖ್ಯೆ 203ಕ್ಕೆ ಕುಸಿದಿದೆ.
ಹೀಗಾಗಿ ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಚುನಾವಣೆ ಫಲಿತಾಂಶ ನನ್ನ ಪಾಲಿಗೆ ಮರೆಯಲಾಗದ ದಿನ. ಸೋಲಿಗೆ ನಾನು ಹೊಣೆ ಹೊರುತ್ತೇನೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷ ಮುನ್ನಡೆಸದಿರಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಸಂವಿಧಾನದ ವಿಧಿ 370ರ ಕುರಿತು ಭಾರತ ಟೀಕಿಸಿದ್ದ ಲೇಬರ್ ಪಕ್ಷ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಳ್ಳಲು ಸಂವಿಧಾನದ ವಿಧಿ 370ನ್ನು ರದ್ದುಪಡಿಸಿದ್ದ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಲೇಬರ್ ಪಕ್ಷ ಟೀಕಿಸಿತ್ತು.
ಎಡಪಂಥೀಯ ಚಿಂತನೆ ಹೊಂದಿರುವ ಲೇಬರ್ ಪಕ್ಷ, ಭಾರತದ ನಿಲುವು ಅಸಮರ್ಥನೀಯ. ಜಮ್ಮು-ಕಾಶ್ಮೀರದಲ್ಲಿ ನರಕ ಸೃಷ್ಟಿಸಲಾಗುತ್ತಿದೆ ಎಂದಿದ್ದರು.
ಈ ಹೇಳಿಕೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎನ್ನುವ ಆರೋಪಗಳು ಕೂಡ ಇತ್ತು. ಈಗ ಆ ಪಕ್ಷದ ಚಿಂತನೆಯನ್ನು ಬ್ರಿಟನ್ ಮತದಾರರು ಕೂಡ ಒಪ್ಪಿಕೊಂಡಿಲ್ಲ. ಬ್ರೆಕ್ಸಿಟ್ ಸೇರಿ ಕೆಲ ವಿಚಾರಗಳ ಬಗ್ಗೆ ಲೇಬರ್ ಪಕ್ಷದ ನಿಲುವೇ ಸೋಲಿಗೆ ಪ್ರಮುಖ ಕಾರಣವಾಗಿದೆ.