51 ಮಂದಿ ಹತ್ಯೆಗೂ ಮುನ್ನ ಭಾರತಕ್ಕೆ ಬಂದಿದ್ದ ಕೊಲೆ ಪಾತಕಿ ಬ್ರೆಂಟನ್
ನ್ಯೂಜಿಲ್ಯಾಂಡ್ನಲ್ಲಿ ಮಸೀದಿಗೆ ನುಗ್ಗಿ ಮನಸ್ಸಿಗೆ ಬಂದಂತೆ ಗುಂಡು ಹಾರಿಸಿ 51 ಜನರನ್ನು ಹತ್ಯೆಗೈದಿದ್ದ ಉಗ್ರ ಭಾರತಕ್ಕೂ ಭೇಟಿ ನೀಡಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ನ್ಯೂಜಿಲ್ಯಾಂಡ್ನ ಕ್ರೈಸ್ಟ್ಚರ್ಚ್ನಲ್ಲಿ ಬ್ರೆಂಟನ್ ಟ್ಯಾರಂಟ್ 51 ಜನರನ್ನು ಕೊಲೆಗೈದಿದ್ದ. 2019ರ ಮಾರ್ಚ್ 15ರಂದು ಕ್ರೈಸ್ಟ್ಚರ್ಚ್ನ ಮಸೀದಿ ಮೇಲೆ ಬ್ರೆಂಟನ್ ಟ್ಯಾರಂಟ್ ದಾಳಿ ನಡೆಸಿದ್ದ. ಕೈಯಲ್ಲಿ ಸ್ವಯಂ ಚಾಲಿತ ಮಿಲಿಟರಿ ಗನ್ ಹಿಡಿದು ಮಸೀದಿ ಒಳಗೆ ನುಗ್ಗಿದ್ದ ಉಗ್ರ ಟ್ಯಾರಂಟ್, ಮನಸ್ಸಿಗೆ ಬಂದಂತೆ ಗುಂಡು ಹಾರಿಸಿದ್ದ.
ಒಟ್ಟು 2 ಮಸೀದಿಗಳಿಗೆ ನುಗ್ಗಿದ್ದ ಈತ ಮನಸೋಯಿಚ್ಛೆ ಫೈರಿಂಗ್ ಮಾಡಿದ್ದ. ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದವರು ಕುಂತಲ್ಲೇ ಪ್ರಾಣ ಬಿಟ್ಟಿದ್ದರು. ಇಡೀ ಜಗತ್ತು ಬ್ರೆಂಟನ್ ಟ್ಯಾರಂಟ್ ಕೃತ್ಯ ಕಂಡು ಬೆಚ್ಚಿಬಿದ್ದಿತ್ತು. ಬ್ರೆಂಟನ್ ಟ್ಯಾರಂಟ್ ದಾಳಿಗೂ ಮುನ್ನ ಭಾರತಕ್ಕೆ ಬಂದಿದ್ದನಂತೆ. ಮಸೀದಿಗಳ ಮೇಲೆ ಅಟ್ಯಾಕ್ ಮಾಡುವ ಮುನ್ನ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಈತ ಭೇಟಿ ನೀಡಿದ್ದ ಎನ್ನಲಾಗಿದೆ. ಈತ ನಡೆಸಿದ್ದ ದಾಳಿಯಲ್ಲಿ ಐವರು ಭಾರತೀಯರು ಸೇರಿದಂತೆ 51 ಜನರು ಮೃತಪಟ್ಟಿದ್ದರು.
ಸಾಯುವವರೆಗೂ ಜೈಲು ಗ್ಯಾರಂಟಿ..!
ಮಸೀದಿ ಹಂತಕನಿಗೆ ಈಗಾಗಲೇ ಜೀವಿತಾವಧಿ ಶಿಕ್ಷೆಯಾಗಿದೆ. ಉಗ್ರ ಬ್ರೆಂಟನ್ ಟ್ಯಾರಂಟ್ ಸಾಯುವವರೆಗೆ ಜೈಲಿನಲ್ಲೇ ಕೊಳೆಯಬೇಕಿದೆ. ಅಲ್ಲದೆ ಆರೋಪಿಗೆ ಶಿಕ್ಷೆ ಅವಧಿಯಲ್ಲಿ ಕಲ್ಪಿಸುವ ರಜೆ ಸೌಲಭ್ಯವನ್ನೂ ನೀಡದೆ, ಪೇರೋಲ್ ರದ್ದುಗೊಳಿಸಲಾಗಿದೆ. ನ್ಯೂಜಿಲ್ಯಾಂಡ್ನಲ್ಲಿ ಇಷ್ಟು ಕಠಿಣ ಶಿಕ್ಷೆ ಪಡೆಯುತ್ತಿರುವ ಮೊದಲ ವ್ಯಕ್ತಿ ಟ್ಯಾರಂಟ್. ಬ್ರೆಂಟನ್ ಟ್ಯಾರಂಟ್ ಕೃತ್ಯ ಅಮಾನವೀಯ ಎಂದಿದ್ದ ನ್ಯೂಜಿಲ್ಯಾಂಡ್ ಕೋರ್ಟ್ ಹಂತಕನನ್ನು ಸಮಾಜದಲ್ಲಿ ಬದುಕುವ ಅರ್ಹತೆ ಇಲ್ಲದವನು ಎಂದು ತೀರ್ಪು ನೀಡಿತ್ತು. ಹೀಗಾಗಿಯೇ ಅಪರಾಧಿ ಉಗ್ರನಿಗೆ ಅತ್ಯಂತ ಕಠಿಣ ಶಿಕ್ಷೆಯನ್ನ ವಿಧಿಸಲಾಗಿತ್ತು.
51 ಜನರನ್ನು ಕೊಂದವನಿಗೆ ಕಠಿಣಾತಿಕಠಿಣ ಶಿಕ್ಷೆ..!
ಹೇಗೆ ನಡೆದಿತ್ತು ಭೀಕರ ದಾಳಿ..?
ಮಾರ್ಚ್ 15, 2019ರಲ್ಲಿ ಒಟ್ಟು 5 ಗನ್ ಹಿಡಿದು ಕ್ರೈಸ್ಟ್ಚರ್ಚ್ ಮಸೀದಿಗೆ ನುಗ್ಗಿದ ಆಸ್ಟ್ರೆಲೀಯಾ ಮೂಲದ ಹಂತಕ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದ. ಹೀಗೆ ಮಕ್ಕಳು ಮಹಿಳೆಯರು ಸೇರಿ 51 ಜನರನ್ನು ಹತ್ಯೆಗೈದಿದ್ದ. ಅಲ್ಲದೆ ಮಸೀದಿಗೆ ನುಗ್ಗಿ ದಾಳಿ ಮಾಡುತ್ತಿರುವುದನ್ನು ಲೈವ್ ವಿಡಿಯೋ ಮಾಡಿಕೊಂಡಿದ್ದ ಬ್ರೆಂಟನ್. ಜನಾಂಗೀಯ ವಾದದ ವಿಷ ಕಾರುತ್ತಿದ್ದ ಬ್ರೆಂಟನ್ ತನ್ನನ್ನು ಬಿಳಿಯರ ಪರ ಹೋರಾಟಗಾರ ಎಂದು ಕರೆದುಕೊಂಡಿದ್ದ. ದಾಳಿಯನ್ನು ಕಂಡು ಇಡೀ ಜಗತ್ತು ಬೆಚ್ಚಿಬಿದ್ದಿತ್ತು. ಈ ಘಟನೆ ನಂತರ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಅರ್ಡೆರ್ನ್, ಮಿಲಿಟರಿ ವೆಪನ್ಸ್ ಮಾರಾಟವನ್ನ ನಿರ್ಬಂಧಿಸಿದ್ದರು. ಈ ಮೂಲಕ ನ್ಯೂಜಿಲ್ಯಾಂಡ್ನಲ್ಲಿ ಸಾರ್ವಜನಿಕರಿಗೆ ಮಿಲಿಟರಿ ವೆಪನ್ಸ್ ಸಿಗುವುದನ್ನು ತಡೆದಿದ್ದರು.
ನ್ಯೂಜಿಲ್ಯಾಂಡ್ ಪ್ರಧಾನಿ ಹೇಳಿದ್ದೇನು..?
ನ್ಯೂಜಿಲ್ಯಾಂಡ್ನಲ್ಲಿ ಮಸೀದಿಯಲ್ಲಿ ಹತ್ಯೆ ನಡೆದಿದಾಗಿನಿಂದಲೂ ಅದನ್ನ ತೀವ್ರವಾಗಿ ಖಂಡಿಸುತ್ತಾ ಬಂದಿದ್ದ ಜೆಸಿಂಡಾ ಅರ್ಡೆರ್ನ್, ಬ್ರೆಂಟನ್ ಟ್ಯಾರಂಟ್ ವಿರುದ್ಧ ನೀಡಿದ್ದ ತೀರ್ಪನ್ನು ಸ್ವಾಗತಿಸಿದ್ದಾರೆ. ಮುಗ್ಧರನ್ನು ಬಲಿ ಪಡೆದಿರುವ ಕ್ರೂರಿ ಜೈಲು ಕಂಬಿಗಳ ಹಿಂದೆ ಮೌನವಾಗಿ ಹಾಗೂ ಏಕಾಂಗಿಯಾಗಿ ಶಿಕ್ಷೆ ಅನುಭವಿಸಲಿದ್ದಾನೆ ಎನ್ನುವ ಮೂಲಕ ತೀರ್ಪನ್ನು ಸ್ವಾಗತಿಸಿದ್ದರು. ಈ ಘಟನೆ ನಡೆದಾಗಲೂ ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಅರ್ಡೆರ್ನ್ ಜನಾಂಗೀಯ ವಾದವನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ ಹಂತಕನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದರು. ಒಟ್ಟಿನಲ್ಲಿ ನ್ಯೂಜಿಲ್ಯಾಂಡ್ ಇತಿಹಾಸದಲ್ಲೇ ಭೀಕರ ಹತ್ಯಾಕಾಂಡ ನಡೆಸಿದ್ದ ಕ್ರೂರಿಗೆ ಕಠಿಣವಾದ ಶಿಕ್ಷೆಯನ್ನೇ ವಿಧಿಸಲಾಗಿದೆ.
ಮಸೀದಿ ಮೇಲೆ ದಾಳಿ: ಪಾತಕಿಗೆ ಇತಿಹಾಸದ ಹೋರಾಟಗಳೇ ಸ್ಫೂರ್ತಿ
Recommended Video
ಸ್ವಯಂಚಾಲಿತ ಶಸ್ತ್ರಾಸ್ತ್ರ ಬಳಸಿದ್ದ ಉಗ್ರ
ಸ್ವಯಂಚಾಲಿತ ಶಸ್ತ್ರಾಸ್ತ್ರ ಬಳಸಿದ್ದ 28 ವರ್ಷದ ಉಗ್ರ, ವಾರದ ಪ್ರಾರ್ಥನೆಗೆಂದು ಬರುವ ಜನರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ತಯಾರಿ ನಡೆಸಿದ್ದ. ಇತಿಹಾಸದಲ್ಲಿ ಕ್ರೈಸ್ತರು, ಮುಸ್ಲಿಮರ ವಿರುದ್ಧ ನಡೆಸಿದ ಹೋರಾಟಗಳಿಂದ ಆತ ಸ್ಫೂರ್ತಿ ಪಡೆದಿದ್ದ. ಅಲ್ಲದೆ ಅಪ್ಪಟ ಬಲಪಂಥೀಯ ವಿಚಾರಧಾರೆಗಳ ಪ್ರಭಾವಕ್ಕೆ ಒಳಗಾಗಿದ್ದ. ತನ್ನ ದಾಳಿಯ ಗುರಿ ಮತ್ತು ಉದ್ದೇಶಗಳ ಬಗ್ಗೆ 74 ಪುಟಗಳ ಪ್ರಣಾಳಿಕೆಯನ್ನು ಆತ ಸಿದ್ಧಪಡಿಸಿದ್ದ. ಆಸ್ಟ್ರೇಲಿಯಾದ ಉಗ್ರ ಬ್ರೆಂಟನ್ ಟೆರಾಂಟ್ ತನ್ನ ಪರ ವಕೀಲರನ್ನು ವಜಾಗೊಳಿಸಿದ್ದು, ತಾನೇ ಸ್ವತಃ ವಾದ ಮಂಡಿಸಲು ಮುಂದಾಗಿದ್ದ.